ಸೋಮವಾರ ೧೨ ಅಕ್ಟೋಬರ್ ೨೦೦೯

ಸಬ್ಕೋ ಸನ್ಮತಿ ದೇ ಭಗವಾನ್(ಕತೆ)

(ಕಳೆದ ಫೆಬ್ರವರಿಯಲ್ಲಿ ಬರೆದ ಕತೆಯಿದು...ಕತೆ ಎನ್ನುವುದಕ್ಕಿಂತ ಇದು ನನ್ನ ಸುತ್ತಲಿನ ಪರಿಸರದ ಸ್ವಗತವೆಂದರೆ ತಪ್ಪಾಗಲಾರದು)

"ನಾನಿನ್ನು ದೇವರ ಪೂಜೆ ಮಾಡಬಾರದು"- ಹಾಗಂತ ಅಂದುಕೊಂಡರು ಗೋವಿಂದ ಭಟ್ಟರು.

ಅವರದ್ದು ಹತ್ತು ಖಂಡಿ ಅಡಿಕೆಯ ಮನೆತನ. ಜೊತೆಗೆ ಪರಂಪರಾಗತವಾಗಿ ಬಂದ ದೇವರಪೂಜೆ. ನಾಗ, ಸಾಲಿಗ್ರಾಮ, ಭೂತ, ಆಶ್ವತ್ಥ ಎಲ್ಲದಕ್ಕೂ ಅವರ ಅಪ್ಪ, ಅಜ್ಜ ಪೂಜೆ ಮಾಡಿಕೊಂಡು ಬಂದಿದ್ದರು. ಪ್ರತಿದಿನ ಒಂದು ಕಾಯಿ ಗಣ ಹೋಮ ನಡೆಯುತ್ತಿತ್ತು. ಚಿಕ್ಕಂದಿನಲ್ಲೇ ಮನೆಗೋಸ್ಕರ ಓದು ಅರ್ಧಕ್ಕೆ ಬಿಟ್ಟ ಗೋವಿಂದ ಭಟ್ಟರಿಗೆ ಆಸ್ತಿ ಜೊತೆ ಬಳುವಳಿಯಾಗಿ ಬಂದಿದ್ದೇ ದೇವರ ಪೂಜೆ.

ಅವರಿಗೆ ಹತ್ತು ವರ್ಷವಿದ್ದಾಗಲೇ ಪೂಜೆ ಮಾಡುವ ಕಾರ್ಯಕ್ರಮ ಶುರು ಮಾಡಿದ್ದರು. ಎಡಕೈಯಲ್ಲಿ ಸ್ಟೀಲಿನ ಬಾಲ್ದಿ, ಅದರಲ್ಲಿ ಹಳದಿ, ಬಿಳಿ ಹೂವು. ಬಾಲ್ದಿಯ ಒಂದು ಬದಿಯಲ್ಲಿ ಅರೆದು ತೆಗೆದ ಗಂಧ, ಜೊತೆಗೆ ಅರಶಿನ. ಮತ್ತೊಂದು ಕೈಯಲ್ಲಿ ಅರ್ಧ ಲೋಟೆ ದನದ ಹಾಲು. ಇಷ್ಟನ್ನು ಹಿಡಿದುಕೊಂಡು ಬೆಳಿಗ್ಗೆ ಏಳರ ಹೊತ್ತಿಗೆ ಸಂಧ್ಯಾವಂದನೆ ಮಾಡಿ ಕೆಂಪು ಮಡಿ ಉಟ್ಟುಕೊಂಡು ಹಟ್ಟಿ ದಾಟಿ, ಪಾಪಿನ ಪಾಚಿಯ ಮೇಲೆ ಜಾರದಂತೆ ನಡೆಯುತ್ತಾ, ತಮ್ಮನ್ನು ತಾವೇ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ ಬುಡ ಬಿಡಿಸಿದ ಅಡಿಕೆ ಮರಗಳ ಮಧ್ಯೆ ಬಿಳಿ ಹಾಳೆಗಳಲ್ಲಿ ನಿಂತ ನೀರು, ಬೆಳೆಯುತ್ತಿರುವ ಸೊಳ್ಳೆಗಳನ್ನು ಗಮನಿಸುತ್ತಾ ನಾಗನ ಕಟ್ಟೆ ತಲುಪುವುದೆಂದರೇನೇ ಬಾಲಕ ಗೋವಿಂದ ಭಟ್ಟರಿಗೆ ಅದೆಂತಹುದೋ ಹುರುಪು.

ತನ್ನ ಪುಟ್ಟ ಕೈಗಳಿಂದ ನಿನ್ನೆ ತಾನೇ ನಾಗನ ಹೆಡೆಯ ಮೇಲೆ ಅಲಂಕಾರ ಮಾಡಿದ ಹೂವುಗಳನ್ನು ತೆಗೆದು, ಅಲ್ಲೇ ಪಕ್ಕದ ಕೆರೆಯಿಂದ ನೀರು ತಂದು, ಹೆಡೆಗೆ ಅಂಟಿಕೊಂಡಿದ್ದ ನಿನ್ನೆಯ ಗಂಧವನ್ನು ತೊಳೆದು ಹೆಡೆಯ ಮೇಲೆ ಹಾಲು ಹೊಯ್ಯುತ್ತಿದ್ದರು. ಪಕ್ಕನೆ ಅದೇ ಖಾಲಿಯಾದ ಲೋಟೆಯನ್ನು ನಾಗನ ಹೆಡೆಯ ಕೆಳಗೆ ಹಿಡಿದು ಅಭಿಷೇಕವಾದ ಹಾಲನ್ನು ತೀರ್ಥರೂಪದಲ್ಲಿ ಹಿಡಿಯಲು ಹರಸಾಹಸ ಪಡುತ್ತಿದ್ದರು. ನಂತರ ನೀರು ಹಾಕಿ ಹೆಡೆ ಸ್ವಚ್ಛ ಮಾಡಿ, ಅರಶಿನ ಮಿಶ್ರಿತ ಗಂಧವನ್ನು ಹೆಡೆಗೆ ಪೂರ್ತಿ ಹಚ್ಚುತ್ತಿದ್ದರು. ತಲೆಯ ಮೇಲೆ ಹಳದಿ ಶಂಖಪುಷ್ಪ ಇಟ್ಟು, ಬಾಳೆಹಣ್ಣು ನೈವೇದ್ಯ ಮಾಡುತ್ತಾ "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ", "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಎಂಟ್ಹತ್ತು ಸರ್ತಿ ಹೇಳುವಾಗ ಪೂಜೆ ಮುಗಿಯುತ್ತಿತ್ತು. ಅರಶಿನ ಮಿಶ್ರಿತ ನಾಗನನ್ನು ನೋಡಿದಾಗ ಕುಕ್ಕೇ ಸುಬ್ರಹ್ಮಣ್ಯದ ಗರ್ಭಗುಡಿಯಲ್ಲಿ ಕಂಡ ನಾಗ ದೇವರು ನೆನಪಾಗುತ್ತಿದ್ದರು. ತೋಟಕ್ಕೆ ಸಂಜೆ ಕಾಕನ ಜೊತೆ ಹೋಗುವಾಗ ಅಪರೂಪಕ್ಕೊಮ್ಮೆ ನಾಗರಹಾವು ಸರಸರ ಹಾದುಹೋಗುವಾಗ "ನಾಗರಹಾವು" ಎಂದು ಉದ್ಗಾರ ತೆಗೆಯುತ್ತಾ ಮತ್ತೆ ಪಟಕ್ಕನೆ ನಾಲಿಗೆ ಕಚ್ಚಿ " ಒಳ್ಳೇ ಹಾವು" ಎಂದು ಹೇಳುತ್ತಾ "ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಬಡಬಡಿಸುತ್ತಿದ್ದರು ಬಾಲಕ ಗೋವಿಂದ ಭಟ್ಟರು.

ಎಂಟನೇ ವಯಸ್ಸಿಗೇ ಗೋವಿಂದ ಭಟ್ಟರಿಗೆ ಉಪನಯನ ಮಾಡಿದ್ದರಿಂದ ಇದೆಲ್ಲಾ ಪ್ರಾರಂಭವಾಗಿತ್ತು. ಹತ್ತರಿಂದ ಹದಿನೈದು ವರ್ಷದೊಳಗೆ ಕಾಕನ ಜೊತೆ ಕೂತು ದೇವರ ಪೂಜೆ ಮಾಡಿಕೊಳ್ಳುವುದು ಹೇಗೆ, ನೈವೇದ್ಯಕ್ಕೆ ತುಳಸಿ ಎಷ್ಟು ಹಾಕಬೇಕು, ಎಲ್ಲೆಲ್ಲಿ ಯಾವಾಗ್ಯಾವಾಗ ಆಚಮನ್ಯ ಮಾಡಿಕೊಳ್ಳಬೇಕು ಎನ್ನುವ ವಿಷಯಗಳನ್ನೆಲ್ಲಾ ಮನದಟ್ಟು ಮಾಡಿಕೊಂಡರು.

ಹತ್ತನೇ ಕ್ಲಾಸು ತಲುಪುವ ಹೊತ್ತಿಗೆ ಗಣಹೋಮ ಮಾಡುವ ಉಪದೇಶವೂ ಸಿಕ್ಕಿತು. ಅದೇ ಸಮಯಕ್ಕೆ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಯಾರೂ ದಿಕ್ಕಿಲ್ಲದ್ದರಿಂದ, ಗೋವಿಂದ ಭಟ್ಟರ ಅಮ್ಮನಿಗೂ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದರಿಂದ ತಮ್ಮಂದಿರ, ತಂಗಿಯಂದಿರ ಪ್ರಾಥಮಿಕ ಓದು, ಪ್ರೌಢ ಓದು, ಮದುವೆ, ಹೈಯರ್ ಎಜುಕೇಶನ್ನುಗಳ ಜವಾಬ್ದಾರಿಯೆಲ್ಲ ಗೋವಿಂದ ಭಟ್ಟರ ಹೆಗಲಿಗೇ ಬಿತ್ತು. ಇದೆಲ್ಲದರ ಜೊತೆಗೆ ಪ್ರತಿನಿತ್ಯ ಒಂದೂವರೆ ಗಂಟೆಗಳ ದೇವರ ಪೂಜೆ, ಗಣ ಹೋಮ, ನಾಗನ ಪೂಜೆ, ಶನಿವಾರದ ಅಶ್ವತ್ಥಪೂಜೆ ಚಾಚೂ ತಪ್ಪದೇ ನಡೆಯುತ್ತಿತ್ತು.

ತಮ್ಮಂದಿರು ಒಳ್ಳೆಯ ಕೆಲಸ ಹುಡುಕಿಕೊಂಡರು. ತಂಗಿಯಂದಿರಿಗೆ ಮುದ್ದಾದ ಮಕ್ಕಳಾದವು. ಎಲ್ಲರ ಸಂಸಾರ ಸುಖಮಯವಾಗಿದೆ ಎನ್ನುವ ಹೊತ್ತಿಗೆ ಗೋವಿಂದ ಭಟ್ಟರ ಜಗತ್ತಿನೊಳಗೆ ಅಲ್ಲೋಲ ಕಲ್ಲೋಲ ಶುರುವಾಯಿತು.

ಈಚೀಚೆಗೆ "ಶುಕ್ಲಾಂಭರದರಂ.... "ಎನ್ನುತ್ತಾ ಶುರು ಮಾಡುತ್ತಿದ್ದ ಶ್ಲೋಕ ಮಧ್ಯದಲ್ಲೆಲ್ಲೋ ತಲುಪುವ ಹೊತ್ತಿಗೆ ಮರೆತು ಹೋಗುತ್ತಿತ್ತು. ಯಾವ ಭಾಗದ ಶ್ಲೋಕವನ್ನು ಮುಂದುವರಿಸಬೇಕೆಂಬ ಗೊಂದಲ ಕಾಡುತ್ತಿತ್ತು. ದಟ್ಟ ಅರಣ್ಯವನ್ನು ಹೊಕ್ಕಿ ಮಧ್ಯೆ ಒಂಟಿಯಾಗಿ ಹೋದ ಅನುಭವವಾಗುತ್ತಿತ್ತು. ಸಾಲಿಗ್ರಾಮಗಳ ನೈಸಾದ ಮೇಲ್ಮೈಯನ್ನು ತೊಳೆದು ಅದಕ್ಕೆ ಹಾಲಿನ ಅಭಿಷೇಕ ಮಾಡಿ ಗಂಧ ಹಚ್ಚಿ ಪೆಟ್ಟಿಗೆಯೊಳಗೆ ಇಡುವಾಗ ರೋಮಾಂಚನವಾಗುತ್ತಿರಲಿಲ್ಲ. ಹಚ್ಚಿ ಬಿಟ್ಟ ಆರತಿಗೂ, ಕರೆಂಟು ಹೋದಾಗ ಹಚ್ಚುವ ಚಿಮಿಣಿ ಎಣ್ಣೆ ದೀಪಕ್ಕೂ ವ್ಯತ್ಯಾಸವೇ ಇಲ್ಲವಲ್ಲ ಅಂತನ್ನಿಸಲು ಶುರುವಾಯಿತು.

ತನಗೆ ಕಷ್ಟಗಳು, ಗೊಂದಲಗಳು ಮಾತ್ರ ಜಾಸ್ತಿ ಆದಾಗ ದೇವರ ಮೇಲೆ ಪ್ರೀತಿ ಉಕ್ಕುತ್ತದೆ. ಉಳಿದ ಸಂದರ್ಭಗಳಲ್ಲಿ ದೇವರು, ದೇವರ ಪೂಜೆ ಬಾಲ್ಯದಲ್ಲಿ ಹುಟ್ಟುಹಾಕುತ್ತಿದ್ದ ಮುಗ್ಧ ಪ್ರೀತಿ, ತನ್ಮಯತೆ, ಖುಷಿ ಈಗ ಸಿಗುತ್ತಿಲ್ಲ ಎನಿಸಲು ಶುರುವಾಯಿತು. ತನ್ನ ತಮ್ಮ ರಾಮಚಂದ್ರನ ಮಗ ಅಕ್ಷಯ ಬೆಂಗ್ಳೂರಲ್ಲಿ ಬೆಳಿಗ್ಗೆ ಎದ್ದು ಕಂಪ್ಯೂಟರು ಕುಟ್ಟುತ್ತಾನಲ್ಲ, ಪ್ರತೀ ದಿನವೂ ತನ್ನದೂ ಸಹ ಹಾಗೇ ತಾನೇ ಅಂದುಕೊಂಡರು. ತನ್ನದು ಹಾಗಿರುವ ಬದುಕಲ್ಲ ಎಂದು ಗಟ್ಟಿ ನಿರ್ಧಾರ ಮಾಡಿಕೊಳ್ಳಲು ಅವರಿಗೆ ಯಾವುದೇ ಉತ್ತರಗಳು ಸಿಗಲಿಲ್ಲ.

ತಾತ ಮಾಡಿದ್ದಕ್ಕೆ ಅಪ್ಪ ಪೂಜೆ ಮಾಡಿದರು. ಅವರು ಮಾಡಿದರು ಅನ್ನೋ ಕಾರಣಕ್ಕೆ ತಾನೂ ಮಾಡಿದೆ. ಹಾಗಾದರೆ ಯಾರೂ ತಮಗೋಸ್ಕರ ಪೂಜೆ ಮಾಡಲಿಲ್ಲವೇ? ಮಾಡಬೇಕು ಅನಿವಾರ್ಯ ಅನ್ನೋದೇ ಎಲ್ಲರಿಗೂ ಮುಖ್ಯವಾಗಿತ್ತು ಎನ್ನುವ ವಿಷಯಕ್ಕೆ ಅವರಿಗೆ ಸಾವಿರ ಕಾರಣಗಳು ಹೊಳೆದವು.

ಪೂಜೆಗೆ ಕುಳಿತಾಗ ದೇವರಂತಹ ದೇವರು ಕಾಣುತ್ತಾನೆಯೇ ಹೊರತು ತನಗೆ ತಾನು ಕಾಣುವುದಿಲ್ಲವಲ್ಲ ಎನ್ನುವ ವಿಷಯ ಅವರನ್ನು ಗಾಢವಾಗಿ ಕಾಡತೊಡಗಿತು.

ಮರುದಿನ ಬೆಳಿಗ್ಗೆ ರಾಮಚಂದ್ರರ ಹೆಂಡತಿ ಸುಶೀಲಮ್ಮ ಸ್ನಾನ ಮಾಡಿ ದೇವರ ಕೋಣೆಗೆ ನಮಸ್ಕಾರ ಮಾಡಲು ಹೊರಟಾಗ ಸಾಲಿಗ್ರಾಮಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು, ಸ್ವಾಮಿಗಳು ಕೊಟ್ಟ ಶ್ರೀ ಚಕ್ರ,, ದಾಸವಾಳದ ಹೂವು ಹರಿವಾಣದಿಂದ ಕೆಳಕ್ಕೆ ಬಿದ್ದಿದ್ದವು.

ಮಂಟಪದ ಮೇಲೆ ಪದ್ಮಾಸನ ಹಾಕಿ ಗೋವಿಂದ ಭಟ್ಟರು ಕುಳಿತಿದ್ದರು!!!

ಬುಧವಾರ ೩೦ ಸಪ್ಟೆಂಬರ್ ೨೦೦೯

ಮನಸಾರೆ ಪರವಾಗಿಲ್ಲ : ಭಟ್ಟರ ನಿಜವಾದ ಸಿನಿಮಾ ಇನ್ನೂ ಬಂದಿಲ್ಲ !

ಹೊರಗಿರುವ ಜಗತ್ತಿಗಿಂತ ಜೈಲಿನ ಒಳಗಿರುವ ಜಗತ್ತೇ ಉಲ್ಲಾಸದಾಯಕವಾಗಿದೆ ಅಂತನ್ನಿಸುತ್ತದೆ ಆತನಿಗೆ.

ಸದ್ಯಕ್ಕಿರುವ ಜಗತ್ತಿನ ವೇಗಕ್ಕೆ ತನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮನವರಿಕೆಯ ನಡುವೆ ತಾನು ಜೈಲಿನಿಂದ ಹೊರಬಂದು ಕಳೆದುಕೊಂಡಿರುವ ಸ್ವಾತಂತ್ರ್ಯದ ಮನವರಿಕೆಯಾಗುತ್ತದೆ. ಜೀವಮಾನದ ಬಹುತೇಕ ವರ್ಷಗಳನ್ನು ಜೈಲಿನಲ್ಲಿ ಕಳೆದ ಆ ಸುಕ್ಕು ಮುಖದ ಮುದುಕನಿಗೆ ಹಾಗನ್ನಿಸುವುದರ ಹಿಂದೆ ಬದುಕಿನ ಆಧ್ಯಾತ್ಮವಿದೆ. ತಾನೇ ಕಂಡುಕೊಂಡ ತಾತ್ವಿಕತೆಯಿದೆ. ಜೈಲಿನ ಒಳಗೊಂದು ಆಪ್ತ ವಾತಾವರಣವನ್ನು ಸೃಷ್ಥಿಸಿಕೊಂಡ ಆತನಿಗೆ ಹೊರಜಗತ್ತು ಉಸಿರು ಕಟ್ಟಿಸುತ್ತದೆ. ಅಸ್ವಸ್ಥನಾಗುವಂತೆ ಮಾಡುತ್ತದೆ.ಅದಕ್ಕೇ ಇರಬೇಕು ಆ ಸುಕ್ಕು ಮುಖದ ಮುಸ್ಸಂಜೆಯ ಮುದುಕ, ಹೊರ ಜಗತ್ತಿನಲ್ಲಿ ತಾನು ವಾಸಿಸುವ ಕೋಣೆಯಲ್ಲೇ ನೇಣು ಹಾಕಿಕೊಳ್ಳುತ್ತಾನೆ..

ಆತನ ಹೆಸರು ಬ್ರೂಕ್.


ರೆಡ್ಡಿಂಗ್ನದ್ದೂ ಇದೇ ಸ್ಥಿತಿ. ಆತ ಬಿಡುಗಡೆಯಾಗಿ ಜೈಲಿನಿಂದ ಹೊರಕ್ಕೆ ಬಂದಾಗಲೂ ಆತನಿಗೆ ಹೊರಜಗತ್ತಿನಲ್ಲಿ ವಾಸಿಸಲು ಸಿಗುವುದು ಅದೇ ಬ್ರೂಕ್ ವಾಸ
ಕ್ಕಿದ್ದ ರೂಮು. ಆತನಿಗೂ ಹೊರಜಗತ್ತಿನ ಸತ್ತುಹೋದ ಸುದೀರ್ಘ ಹಗಲುಗಳು ಅಕ್ಷರಶಃ ನರಳಾಡಿಸುತ್ತವೆ.

1994ರಲ್ಲಿ ತೆರೆಕಂಡ "ಶ್ವಶಾಂಕ್ ರಿಡಂಪ್ಶನ್" ಸಿನಿಮಾದಲ್ಲಿ ಬರುವ ಅತಿ ಮುಖ್ಯ ಎಳೆಯಿದು.

"ಮನಸಾರೆ" ನೋಡಿದಾಗ ಇದೇ ಎಳೆ ಭಿನ್ನ ಹಿನ್ನೆಲೆ ಪರಿಸರದೊಂದಿಗೆ ಶಂಕ್ರ
ಪ್ಪ, ಡಾಲರ್ ಹಾಗೂ ನಾಯಕ ಮನೋಹರನ ಮೂಲಕ ಹೆಣೆದಂತೆ ಕಾಣುತ್ತದೆ. ನೇರಾ ನೇರ ಅದೇ ಸಿನಿಮಾದ ಸನ್ನಿವೇಶಗಳಿಲ್ಲದಿದ್ದರೂ, ಯೋಚನಾ ಲಹರಿ "ಶ್ವಶಾಂಕ್ ರಿಡಂಪ್ಶನ್"ನೊಂದಿಗೆ ತಾಳೆಯಾಗುತ್ತದೆ. ಇಷ್ಟಕ್ಕೂ ಮನಸಾರೆ ಆ ಸಿನಿಮಾದ ರಿಮೇಕೂ ಅಲ್ಲ, ಭಟ್ಟಿ ಇಳಿಸುವಿಕೆಯೂ ಅಲ್ಲ.(ಆಂಟೆನ್ ಚೆಕಾಫ್ ನ ವಾರ್ಡ್ ನಂ.6 ಕತೆ ಮನಸಾರೆಗೆ ಪ್ರೇರಣೆ ಎಂದು ಭಟ್ಟರು ಹಿಂದೆಲ್ಲೋ ಹೇಳಿದ ನೆನಪು.)

ಯೋಗರಾಜ ಭಟ್ಟರ ಸಿನಿಮಾ ಅಂದರೆ ಸಾಕು ಸದ್ಯಕ್ಕಂತೂ ಎಲ್ಲರದ್ದೂ ಕಾತರದ ಕಣ್ಣು. ಮನಸಾರೆಯನ್ನು ಮಾಮೂಲಿ ಪ್ರೇಮ ಕತೆಯೇ. ಅದರ ಜೊತೆಗೆ "ಯಾರ ತಲೆ ರಿಪೇರಿ ಮಾಡಕ್ಕಗಲ್ವೋ ಅವ್ರು ಹೊರಗಿರ್ತಾರೆ..ರಿಪೇರಿಯಾಗೋ ಮಂದಿ ಈ ಹುಚ್ಚಾಸ್ಪತ್ರೇಲಿ ಇರ್ತಾರೆ" ಎನ್ನುವ ಶಂಕ್ರಪ್ಪನ ಮಾತಿದೆ. ಅದೇ ಸಿನಿಮಾದ ಮೂಲ. ಮುಂಗಾರು ಮಳೆ, ಗಾಳಿಪಟದಂತೆ ಇಲ್ಲೂ ನಾಯಕ ಪಟಪಟ ಮಾತಾಡುತ್ತಾನೆ. ಅವನ ಮಾತಿಗೆ ಮರುಳಾಗುವ ನಾಯಕಿ ಇದ್ದಾಳೆ. ಚೆಂದದ ಸಾಹಿತ್ಯವಿರುವ ಹಾಡುಗಳಿವೆ. ಸತ್ಯ ಹೆಗಡೆಯ ಕ್ಯಾಮೆರಾ ಕಣ್ಣಿದೆ. ಒಂದು ಯಶಸ್ವಿ ವ್ಯಾಪಾರಿ ಸಿನಿಮಾಕ್ಕೆ ಬೇಕಾದ ಎಲ್ಲಾ ಅಂಶಗಳು ಇಲ್ಲಿವೆ.


ಆದರೂ ಭಟ್ಟರು "ಮನಸಾರೆ"ಯಲ್ಲಿ ಮುಂಗಾರು ಮಳೆ, ಗಾಳಿಪಟದ ಏಕತಾನತೆಯನ್ನು ಮೀರುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೇಮ ಕತೆಯೊಳಗೇ " ಕಿತ್ತೋಗಿರೋ ಹವಾಯಿ ಚಪ್ಪಲಿ ತರಹಾ ಆಗೋಯ್ತು, ಬದುಕು" ಎನ್ನುತ್ತಾ ಅಂತರ್ಮುಖಿಯಾಗುತ್ತಾರೆ...ಈ ಅಂತರ್ಮುಖಿ ನಡೆ ಅವರ ಹಿಂದಿನ ಸಿನಿಮಾಗಳಲ್ಲಿ ಬದುಕಿನ ಅಸಾಧ್ಯ ಹುಚ್ಚುತನಗಳನ್ನು ತೋರಿಸುವ ಭರದಲ್ಲಿ ಮರೆಯಲ್ಲಿತ್ತು...ಬದುಕಿನ ಸಾಮಾನ್ಯ ಅಂಶಗಳಲ್ಲೂ ಮನೆಮಾಡಿರುವ ತಾತ್ವಿಕತೆ ಬಗ್ಗೆ ಅವರಿಗೆ ಹೆಚ್ಚು ಮೋಹ. ಇದೇ ಮೋಹ ಅವರನ್ನು ಅಂತರ್ಮುಖಿಯಾಗುವಂತೆ ಮಾಡುತ್ತದೆ..

ಯೋಗರಾಜ್ ಭಟ್ ನಿರ್ದೇಶನದ ಒಳ್ಳೆಯ ಚಿತ್ರ ಯಾವುದು?....ಸದ್ಯಕ್ಕೆ ನನ್ನ ಉತ್ತರ ಒಂದೇ-"ಮಣಿ". ತನ್ನ ಮೊದಲ ಪ್ರಯತ್ನದಲ್ಲಿ ಅವರು ಕತೆಯನ್ನು ನಿಭಾಯಿಸಿದ ರೀತಿ, ಪಾತ್ರಗಳನ್ನು ತೆರೆಯ ಮೇಲೆ ತೋರಿಸಿದ ರೀತಿ ಎಲ್ಲವೂ ಗಮನ ಸೆಳೆದಿದ್ದವು. ಮಣಿಯ ನಾಯಕನಿಗೆ ನಮ್ಮೊಂದಿಗೆ ಅನೇಕ ಸಾಮ್ಯತೆಗಳಿದ್ದವು. ಮುಂಗಾರು ಮಳೆಯ ಪ್ರೀತುನಂತೆ, ಗಾಳಿಪಟದ ಗಣಿಯಂತೆ, ರಂಗ ಎಸ್ಸೆಸ್ಸೆಲ್ಸಿಯ ರಂಗನಂತೆ ಆತನಿಗೆ ವಿಪರೀತ ಮಾತಿನ ಚಟವಿರಲಿಲ್ಲ. ಸೈಕಲ್ ಜೊತೆಗೆ ನಡೆಯೋದು, ಸಮುದ್ರದ ದಂಡೆಯಲ್ಲಿ ಪರಿತಪಿಸಿದವನಂತೆ ಓಡುವುದರಲ್ಲೇ ಅವನಿಗೆ ಸುಖ. ಪ್ರೀತಿಯ ನಿವೇದನೆ ಆತನಿಗೆ ನಿಜಕ್ಕೂ ಬಿಸಿ ಕೆಂಡ. ಭಟ್ಟರ ಉಳಿದ ಸಿನಿಮಾಗಳ ನಾಯಕನಂತೆ "ನಿಮ್ಮೇಲೆ ಯದ್ವಾ-ತದ್ವಾ ಲವ್ವಾಗ್ಬಿಟ್ಟಿದೆ" ಅಂತ ಭೇಟಿಯಾದ ಕೆಲವೇ ದಿನಗಳಲ್ಲಿ ಉಸುರುತ್ತಿರಲಿಲ್ಲ ಆತ. ನಾಯಕನ ಮೌನವೇ ಪ್ರೇಕ್ಷಕನನ್ನು ಅಸಾಧ್ಯವಾಗಿ ಕಾಡಿಸುವ ಶಕ್ತಿ ಹೊಂದಿತ್ತು. ಮನೆಮಂದಿ ಕೂತು ನೋಡುವಾಗ ಮುಜುಗರವಾಗುವ ಕೆಲವಾರು ಡೈಲಾಗ್ಗಳಿವೆ ಅನ್ನುವುದನ್ನು ಬಿಟ್ಟರೆ ಸಿನಿಮಾವೇನೋ ಚೆನ್ನಾಗಿತ್ತು. ಅವತ್ತು "ಮಣಿ" ಯಶಸ್ವಿಯಾಗಿದ್ದರೆ "ಮುಂಗಾರು ಮಳೆ" ಖಂಡಿತಾ ಬರುತ್ತಿರಲಿಲ್ಲ. ಆ ಸಿನಿಮಾ ಗೆದ್ದಿದ್ದರೆ ಭಟ್ಟರು ಯಾವ ರೀತಿಯ ಸಿನಿಮಾ ಮಾಡುತ್ತಿದ್ದರು ಎನ್ನುವ ಕೂತೂಹಲ ನನಗಿವತ್ತಿಗೂ ಇದೆ.

ನಿರ್ದೇಶನನೊಬ್ಬನ ಸಿನಿಮಾವೊಂದರ ಯಶಸ್ಸು, ಆತನ ಮುಂದಿನ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರವನ್ನು ಹುಟ್ಟುಹಾಕುತ್ತದೆ. ಜೊತೆಗೆ ಆತ ಪ್ರತೀ ಚಿತ್ರದಲ್ಲೂ ಬೆಳೆಯುತ್ತಾ ಹೋಗುವ ಪ್ರಕ್ರಿಯೆಯನ್ನು ನಾವು ಕಾಣಬಹುದು. ಅದು ಕತೆ ಹೇಳುವ ಶೈಲಿ ಇರಬಹುದು, ಸನ್ನಿವೇಶಗಳಿಗೆ ಬಳಸುವ ಚಿತ್ರಿಕೆಗಳು, ಅವುಗಳ ವಿನ್ಯಾಸ, ಸನ್ನಿವೇಶವನ್ನು ದೃಶ್ಯವಾಗಿ ಕಟ್ಟುವ ಬಗೆ ಹೀಗೆ ಎಲ್ಲಾ ಹಂತದಲ್ಲೂ ಬೆಳವಣಿಗೆಯನ್ನು ಪ್ರೇಕ್ಷಕ ಕಂಡುಕೊಳ್ಳುತ್ತಾನೆ...."ಮುಂಗಾರು ಮಳೆ"ಯ ಯಶಸ್ಸಿನ ನಂತರ "ಗಾಳಿಪಟ" ಬಂದಾಗ ಭಟ್ಟರು ತಮ್ಮದೇ ಫಾರ್ಮುಲಾಗಳನ್ನು ಮೀರಿ ಬೆಳೆಯುತ್ತಿಲ್ಲ ಅಂತ ಅನ್ನಿಸಿದ್ದಂತೂ ನಿಜ. ಅದಾಗಲೇ ಭಟ್ಟರು ಸಿನಿಮಾ ನಿರ್ಮಾಣ ಪ್ರಕ್ರಿಯೆಯಲ್ಲಿ ತಮ್ಮದೇ ಆದ "ಕಂಫರ್ಟ್ ಜೋನ್" ಒಂದನ್ನು ನಿರ್ಮಿಸಿಕೊಂಡಂತಿತ್ತು. ಅದನ್ನು ಮೀರುವ ಹಂತದ ಪ್ರಾರಂಭವಾಗಿ "ಮನಸಾರೆ" ಕಾಣಿಸುತ್ತದೆ.


ಅವರ ಹಿಂದಿನ ಸಿನಿಮಾಗಳಲ್ಲಿ ನಾಯಕನೊಂದಿಗೆ ಪೈಪೋಟಿಗೆ ಬಿದ್ದು ವಟಗುಟ್ಟುತ್ತಿದ್ದ ನಾಯಕಿ ಇಲ್ಲಿಲ್ಲ. ಸಿನಿಮಾದ ಮೊದಲಾರ್ಧದಲ್ಲಿ ಆಕೆಯ ಪ್ರವೇಶವೇ ಬಹಳ ತಡವಾಗಿ ಆಗುತ್ತದೆ. ಜೊತೆಗೆ ಆಕೆ ಮಾತನಾಡುವ ಮಾತುಗಳು ಸಹ ಎಣಿಸಬಹುದಷ್ಟಿವೆ. ಶಂಕರಪ್ಪನ ಮೂಲಕ ಧಾರವಾಡ ಕನ್ನಡವನ್ನು ಸತ್ವಪೂರ್ಣವಾಗಿ ಹೇಳಿಸಿದ್ದಾರೆ ಯೋಗರಾಜ್ ಭಟ್. ಬಹುತೇಕ ವ್ಯಾಪಾರಿ ಚಿತ್ರಗಳಲ್ಲಿ ಮಂಗ್ಳೂರು, ಉತ್ತರ ಕರ್ನಾಟಕದ ಕನ್ನಡ ಗೇಲಿ ಮಾಡಲು ಬಳಕೆಯಾದದ್ದೇ ಹೆಚ್ಚು. "ಎಂಥದು ಮಾರ್ರೆ", "ಲೇ ಮಂಗ್ಯಾ" ಗಿಂತ ಮುಂದೆ ಮುಂದೆ ಹೋದ ಉದಾಹರಣೆ ಇಲ್ಲ.
"ಹಾಳಾಗ್ ಹೋಗು. ನಡುರಾತ್ರೀಲಿ ದೆವ್ ಡ್ಯಾನ್ಸ್ ಮಾಡೂ ವೇಳೆ ಈ ಮಂಗ್ಯಾನಾ ಲವ್ ಸ್ಟೋರಿ ಕೇಳಿ ಬರೂ ಉಚ್ವಿ ಬರ್ಲಂಗದಾತು. ಈ ಕಡೀ ಸಲೀಮ. ಆ ಕಡೀ ಅನಾರ್ಕಲಿ. ಮುಘಲೇ ಆಜಂ ಸೆಕೆಂಡ್ ಶೋ ಇಂಟರ್ವಲ್ ಬಿಟ್ಟಂಗಾತು" ಎಂದು ಶಂಕ್ರಪ್ಪ ಪಾತ್ರಧಾರಿ ರಾಜು ತಾಳಿಕೋಟೆ ಸಂ
ಭಾಷಣೆ ಹೇಳುವಾಗ ಥಿಯೇಟರ್ ಭರ್ತಿ ಸೀಟಿ. ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ವಿಪರೀತವೆಂಬಷ್ಟು ಒಂದೇ ಶೇಡ್ ಇರುವ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಪ್ರತಿಭಾವಂತ ಪೋಷಕ ನಟ ರಂಗಾಯಣ ರಘು ಅವರನ್ನು ನೋಡಿ ಸುಸ್ತಾಗಿರುವವರಿಗೆ ರಾಜು ತಾಳಿಕೋಟೆ ಧಾರವಾಡ ಪೇಡಾದಷ್ಟೇ ಸಿಹಿ. ಸಂಭಾಷಣೆಯಲ್ಲಿ ಭಟ್ಟರಿಗೆ ಫುಲ್ ಮಾರ್ಕ್ಸ್. ಅದೇ ಕಾಲೆಳೆತ, ಚ್ಯಾಷ್ಟಿ ಎಲ್ಲವೂ ಇದೆ.

ಬಟ್ಟೆ ಕಂಡ್ರೆ ಮಾರುದೂರ ಓಡುವ ಪಾತ್ರವೊಂದಿದೆ. ಅವನ ಒದ್ದಾಟ, ಗುದ್ದಾಟನ್ನು ತೆರೆ ಮೇಲೆ ನೋಡಿಯೇ ಆನಂದಿಸಬೇಕು.. ಆತ "ಬಟ್ಟೆ ಬೇಡ" ಎನ್ನುತ್ತಾ ಓಡಾಡುತ್ತಿದ್ದರೆ ನಗು ನಡೆಯುವುದಿಲ್ಲ. ನಾಯಕನ ಚಿರವಿರಹಿ ಗೆಳೆಯನ ಪಾತ್ರಕ್ಕೆ "ಅಯ್ಯೋ...ಅಯ್ಯೋ" ಎನ್ನುವ ಕೋರಸ್ ಕೊಡುತ್ತಾ ಭರಪೂರ್ತಿ ನಗಿಸುತ್ತಾರೆ ಭಟ್ಟರು.

ಸತ್ಯ ಹೆಗಡೆಯ ಕ್ಯಾಮರಾ ಕಣ್ಣಿಗೊಂದು ನಮಸ್ಕಾರ ಹೇಳಲೇಬೇಕು. "ದುನಿಯಾ", "ಇಂತಿ ನಿನ್ನ ಪ್ರೀತಿಯ.." ಸಿನಿಮಾದ ಚಿತ್ರಿಕೆಗಳಲ್ಲಿ ಬೆಳಕಿನ ಬಳಕೆಯ ಪ್ರಮಾಣ, ಅದನ್ನು ಕಾರ್ಯಗತಗೊಳಿಸುವಲ್ಲಿ ಅವರ ಚಾಕಚಕ್ಯತೆ ಎದ್ದುಕಾಣುತ್ತಿತ್ತು. "ಮನಸಾರೆ"ಯಲ್ಲೂ ಕೆಲವೊಂದು ಕಡೆ, ವಿಶೇಷವಾಗಿ ಹಾಡುಗಳಲ್ಲಿ ಸತ್ಯ ಹೆಗಡೆಯ ಕ್ರಿಯಾಶೀಲ ಮನಸ್ಸು ಹೆಚ್ಚಿದೆ. ಪವನ್ ಕುಮಾರ್ ಬರೆದ ಚಿತ್ರಕತೆ ದ್ವಿತೀಯಾರ್ಧದಲ್ಲಿ ಮತ್ತಷ್ಟು ಬಿಗಿಯಾಗಬೇಕಿತ್ತು.


ದಿಗಂತ್ ಅಭಿನಯ ಸುಮಾರು. ಮೊದಲ ಬಾರಿಗೆ ಸೋಲೋ ಹೀರೋ ಆಗುತ್ತಿರುವ ಆತಂಕ ಅವರ ಮುಖದಲ್ಲಿ ಕಾಣುತ್ತದೆ!!! ದ್ವಿತೀಯಾರ್ಧದಲ್ಲಿ ತನ್ನ ಅಭಿನಯದ ಮೂಲಕ ಇಡೀ ಕಥೆಯ ಗಂಭೀರತೆಯನ್ನು ಮುಟ್ಟಿಸುವ ಜವಾಬ್ದಾರಿಯನ್ನು ಆತ ಸರಿಯಾಗಿ ನಿರ್ವಹಿಸುವುದಿಲ್ಲ. ಕತ್ರಿನಾ ಕೈಫ್ ಅಭಿನಯಿಸಬೇಕು ಎಂದು ಹೇಳುವುದು ಹಳಸಲು ಸ್ಟೇಟ್ಮೆಂಟು. ಐಂದ್ರಿತಾ ರೇಗೂ ಇದು ಅನ್ವಯವಾಗುತ್ತದೆ..ತೆರೆ ಮೇಲಿರುವ ಮುದ್ದಾದ ದಸರಾ ಗೊಂಬೆಗಳವು...ನೋಡೋದಕ್ಕಷ್ಟೇ ಚೆಂದ!

ಜಯಂತ್ ಕಾಯ್ಕಿಣಿ ಪ್ರೇಮ ನಿವೇದನೆಗಳನ್ನೇ ಬರೆದು ಬರೆದು ಬರಿದಾಗುತ್ತಿರುವುದಕ್ಕೆ ಸ್ಷಷ್ಟ ಸೂಚನೆ ಸೋನು ನಿಗಂ ಹಾಡಿರುವ ಆಲ್ಬಂ "ನೀನೇ ನೀನೇ". ಅದರ ಮುಂದುವರಿದ ಭಾಗ "ಮನಸಾರೆ. ಅದೇ ಮಳೆ, ಅದೇ ಮೌನ, ಅದೇ ಮಾತು, ಅದೇ ಒಲವು......"ಮುಂಗಾರು ಮಳೆ" ಸಮಯದಲ್ಲಿ ಜನಸಾಮಾನ್ಯನಿಗೆ ರೋಮಾಂಚನ ಹುಟ್ಟಿಸಿದ್ದ ಶಬ್ದಗಳೆಲ್ಲ ಇವತ್ತು ಹಳೆ ಪಾತ್ರೆ, ಹಳೆ ಕಬ್ಬಿಣದಂತಾಗಿವೆ. ಸದ್ಯಕ್ಕೆ ಕಾಯ್ಕಿಣಿಗೊಂದು ಬ್ರೇಕ್ ಬೇಕಾಗಿದೆ. ಯೋಗರಾಜ್ ಭಟ್ ಬರೆದಿರುವ " ನಾ ನಗುವ ಮೊದಲೇನೇ", "ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ" ಕಿವಿಗಿಂಪು, ಸಾಹಿತ್ಯದ ಕಂಪು. ತಮ್ಮದೇ ಹಳೆಯ ಹಾಡುಗಳನ್ನು ಮತ್ತೆ ಬಳಸಿಕೊಂಡಂತೆ ಅನಿಸುತ್ತದೆ ಎನ್ನುವುದು ಮನೋಮೂರ್ತಿ ಮೇಲಿರುವ ಹಳೆಯ ಆರೋಪ. ಮೆಲೋಡಿಯ ಏಕತಾನತೆಯನ್ನು ಅವರಿಲ್ಲಿ ಯಶಸ್ವಿಯಾಗಿ ಮುಂದುವರಿಸುತ್ತಾರೆ .

ಮಳೆಯ ಸುದ್ದಿಗೆ ಹೋಗದೆ ಉತ್ತರ ಕರ್ನಾಟಕದ ಬಿಸಿಲನ್ನು ತಬ್ಬಿಕೊಂಡಿದ್ದಾರೆ ಭಟ್ಟರು...
ಅದಕ್ಕೇ ಇರಬೇಕು ಕಾಯ್ಕಿಣಿ ಬರೆದದ್ದು- "ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ"...

ಪ್ರೀತಿಯೆಂಬ ಕೆನೆ, ಹುಚ್ಚುನತವೆಂಬ ಕಾಫಿ ಕುಡಿಯಬೇಕಿದ್ದರೆ "ಮನಸಾರೆ" ನೋಡಬೇಕಿರುವುದು ಸದ್ಯಕ್ಕಿರುವ ಅಗತ್ಯ...!!!!

ಗುರುವಾರ ೧೦ ಸಪ್ಟೆಂಬರ್ ೨೦೦೯

ದ.ರಾ. ಬೇಂದ್ರೆ ಕವನ ವಾಚಿಸುತ್ತಾರೆ ಕೇಳಿ

.ರಾ.ಬೇಂದ್ರೆ ಕುರಿತು ಗಿರೀಶ್ ಕಾರ್ನಾಡ್ ನಿರ್ಮಿಸಿದ ಸಾಕ್ಷ್ಯಚಿತ್ರ ಇವತ್ತಿಗೂ ನೆನಪಾದಾಗ ಪುಳಕವಾಗುತ್ತದೆ..

ಸಾಕ್ಷ್ಯಚಿತ್ರವೊಂದನ್ನು ಅದೆಷ್ಟು ಆತ್ಮೀಯವಾಗಿ ತೆರೆಯ ಮೇಲೆ ತೆರೆದಿಡಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ ಅವರ
ಪ್ರಯತ್ನ. ಕಪ್ಪು-ಬಿಳುಪಿನ ಬಣ್ಣಗಳಲ್ಲಿ ಕವಿಯ ಅತೀ ಚಿಕ್ಕ ವಿವರವನ್ನೂ ಕೂಡಾ ಅವರು ದಾಖಲಿಸುತ್ತಾರೆ (ಉದಾ:.ರಾ. ಬೇಂದ್ರೆ ಯಾವಾಗಲೂ ತಮ್ಮ ಕೋಣೆಯಲ್ಲಿ ಪುಸ್ತಕಗಳನ್ನು ಹರಡಿಕೊಂಡಿರುತ್ತಿದ್ದದ್ದು).

ಧಾರವಾಡದ
ಹಾದಿಗಳಲ್ಲಿ ಬೇಂದ್ರೆ ಸಾಗುತ್ತಿದ್ದರೆ
ನೋಡುಗನಿಗೆ ರೋಮಾಂಚನ. ವರ ನಡಿಗೆ, ಕೊಡೆ, ಮಳೆ, ಹಣ್ಣು ಮಾರುವವರ ಜೊತೆ ಒಡನಾಡುವ ರೀತಿ ಎಲ್ಲವನ್ನು ಯಾವುದೇ ಕ್ರತ್ರಿಮತೆ ಇಲ್ಲದೆ ಗಿರೀಶ್ ಕಾರ್ನಾಡ್ ದ್ರಶ್ಯದಲ್ಲಿ ದಾಖಲು ಮಾಡುತ್ತಾರೆ. ಸಾಕ್ಶ್ಯಚಿತ್ರದಲ್ಲಿರುವ ಕೆಲವೊಂದು ಶಾಟ್ ಗಳು ವಾರೆವ್ವಾ ಎನ್ನುವಂತಿವೆ. ಸಾಕ್ಶ್ಯಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇರುವವರು ಇದನ್ನು ತಪ್ಪದೇ ನೋಡಬೇಕು..



ಇದೆಲ್ಲಕ್ಕಿಂತ ಹೆಚ್ಚಾಗಿ ಸಾಕ್ಷ್ಯಚಿತ್ರದಲ್ಲಿ ನಮ್ಮೆಲ್ಲರನ್ನು ಪುಳಕಿತರನ್ನಾಗಿ ಮಾಡುವ ಅಂಶವೊಂದಿದೆ. ಸ್ವತಃ .ರಾ. ಬೇಂದ್ರೆ ಇಲ್ಲಿ ತಮ್ಮ " ವಿಶ್ವಮಾತೆಯ ಗರ್ಭ ಕಮಲಜಾತ..." ಕವನವನ್ನು ವಾಚನ ಮಾಡಿದ್ದಾರೆ.

ಈಗಂತೂ ಕವನ ವಾಚನವೇ ಅಪರೂಪ. ಇಂತಹ ಸಂದರ್ಭದಲ್ಲಿ ಬೇಂದ್ರೆಯಂತಹ ಕವಿಯ ಸಾಲುಗಳನ್ನು ಅವರ ಬಾಯಲ್ಲಿ ಕೇಳಿ
ಪಡೆದುಕೊಳ್ಳುವ ಸುಖಕ್ಕೆ ಸಾಟಿ ಯಾವುದಿದೆ ನೀವೇ ಹೇಳಿ.

ಕವನ ವಾಚನದ ದ್ರಶ್ಯ ತುಣುಕು ನಿಮಗಾಗಿ....(ಕೆಳಗಿನ ಕೊಂಡಿ ಕ್ಲಿಕ್ ಮಾಡಿ)

// ವಿಶ್ವಮಾತೆಯ
ಗರ್ಭ ಕಮಲಜಾತ ಪರಾಗ ಪರಮಾಣು ಕೀರ್ತಿ ನಾನು //



ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು |
ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು !


ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು !
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು !

ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು !
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು !

http://www.darabendre.org/ ನಲ್ಲಿ ಸಿಕ್ಕ ದ್ರಶ್ಯ ತುಣುಕಿದು.

ಮಂಗಳವಾರ ೮ ಸಪ್ಟೆಂಬರ್ ೨೦೦೯

ಕನ್ನಡದ ಗುಲಾಬಿಗೆ ರಾಷ್ಟ್ರಪ್ರಶಸ್ತಿ

|| ನಿನ್ನೆಯಷ್ಟೇ 2007ನೇ ಸಾಲಿನ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ. ಉಮಾಶ್ರೀ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಕಾಸರವಳ್ಳಿಯವರ "ಗುಲಾಬಿ ಟಾಕೀಸು" ಅತ್ಯುತ್ತಮ ಕನ್ನಡ ಚಿತ್ರವೆಂದು ಆಯ್ಕೆಯಾಗಿದೆ. ಕಾಂಚೀವರಂನಲ್ಲಿನ ಅಭಿನಯಕ್ಕೆ ಪ್ರಕಾಶ್ ರೈ ಅತ್ಯುತ್ತಮ ನಟ ಎಂದು ಪುರಸ್ಕ್ರತರಾಗಿದ್ದಾರೆ. ಮೂವರಿಗೂ ಅಭಿನಂದನೆಗಳು. ||


ವಳು ಕನಸಿನ ಗುಲಾಬಿ. ಪ್ರತೀ ದಿನ ಸಾಯಂಕಾಲ ಸಿನಿಮಾ ನೋಡುವ ಹುಚ್ಚು. ಮೂಲಕ ಹೊಸ ಕನಸುಗಳನ್ನು ಕಾಣುವ
ಬಯಕೆ ಆಕೆಗೆ. ಕನಸುಗಳ ಮೂಲಕ ತನ್ನ ಸೀಮಿತ ಪರಿಧಿಯನ್ನು ಮೀರಿ ಮುನ್ನಡೆಯುವ ಆಸೆ. ಬಹುಷಃ ಅಂಶವೇ ಆಕೆಯನ್ನು ಪ್ರಫುಲ್ಲವಾಗಿಡುವುದು.

ಆಕೆ ನೋಡುವ ಸಿನಿಮಾದ ಬಿಡಿಬಿಡಿ ಚಿತ್ರಗಳಂತೆ ಬದುಕೂ ಹರಿದು ಹಂಚಿಹೋಗಿದೆ, ಹೋಗುತ್ತಿದೆ. ಹೆರಿಗೆ ಮಾಡಿಸಿದ ಸಲುವಾಗಿ
ಬರುವ ಟಿವಿ ಪ್ರಾರಂಭದಲ್ಲಿ ಅವಳಲ್ಲೊಂದು ಅಪೂರ್ವ ಘಳಿಗೆಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಪಲ್ಲಟಗಳ ನಡುವೆ ಪಟಪಟಿಸುತ್ತದೆ. ಇದು ಗುಲಾಬಿ ಎಂಬ ಸೂಲಗಿತ್ತಿಯ "ಗುಲಾಬಿ ಟಾಕೀಸು"....

ಕನ್ನಡ ಸಿನಿಮಾದ ಗುಲಾಬಿ ಉಮಾಶ್ರೀಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗುಲಾಬಿ ಟಾಕೀಸು" ವೈದೇಹಿ ಅವರ ಕಥೆ ಆಧಾರಿತ ಸಿನಿಮಾ(ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಇಲ್ಲಿ ಕತೆ ಮಾರ್ಪಾಡಾಗಿದೆ). ಅದರಲ್ಲಿನ
ಮುಖ್ಯಪಾತ್ರವೇ ಗುಲಾಬಿಯದ್ದು.
ಉಮಾಶ್ರೀಯ ವೃತ್ತಿ ಜೀವನದ ಮೈಲಿಗಲ್ಲು ಗುಲಾಬಿ ಪಾತ್ರ. ಪಾತ್ರದ ಆಳ-ಅಗಲಗಳನ್ನು ತನ್ನ ಅಭಿನಯದಿಂದಲೇ ಹಿಗ್ಗಿಸಿದ್ದಾರೆ
ಆಕೆ. ಉಮಾಶ್ರೀಯದ್ದು ರಂಗಭೂಮಿಯ ಹಿನ್ನೆಲೆ. ಸಿನಿಮಾ ರಂಗಭೂಮಿ ಎರಡೂ ಭಿನ್ನ ಗುಣಗಳನ್ನು ಹೊಂದಿರುವ ಮಾಧ್ಯಮಗಳು.

ಬಹುಷಃ ರಂಗಭೂಮಿ ಉಮಾಶ್ರೀಯನ್ನು ಬಳಸಿಕೊಂಡಷ್ಟು ಸಶಕ್ತವಾಗಿ ಕನ್ನಡ ಸಿನಿಮಾ ತನ್ನ ಮಾಧ್ಯಮದಲ್ಲಿ ಬಳಸಿಕೊಂಡಿರಲಿಲ್ಲ. ಒಡಲಾಳ, ಹರಕೆಯ ಕುರಿ ನಾಟಕಗಳು ಆಕೆಯ ರಂಗಭೂಮಿಯ ಸಶಕ್ತ ಅಭಿವ್ಯಕ್ತಿಗಳು. ಕನ್ನಡ ಸಿನಿಮಾದಲ್ಲಿ ಉಮಾಶ್ರೀ ಅಂದರೆ
ಸಾಕು ಎನ್ನೆಸ್ ರಾವ್ ಕಾಂಬಿನೇಶನ್ನಿನ ಕಿಲಕಿಲದಂತಹ ಪಾತ್ರದ ಜೊತೆಗೆ ಜೋತು ಬೀಳುವ ಪಾತ್ರಗಳಂತಹವೇ ಹೆಚ್ಚು ಕಾಣುವುದು. ಇದೇ ಅತಿರೇಕದ ನಟನೆಗೆ ಉಮಾಶ್ರೀ ಮುಂದಿನ ದಿನಗಳಲ್ಲಿ ಬ್ರ್ಯಾಂಡ್ ಆಗಿದ್ದೂ ಉಂಟು. ಸಂಗ್ಯಾಬಾಳ್ಯ, ಮಣಿ ಸಿನಿಮಾಗಳಂತಹ ಬೆರಳೆಣಿಕೆಯ ಸಿನಿಮಾಗಳಷ್ಟೇ ಆಕೆಗೆ ವೈವಿಧ್ಯಮಯವಾದ ಪಾತ್ರಗಳನ್ನು ನೀಡಿದ್ದು. ಉಮಾಶ್ರೀಯ ಒಳಗಿದ್ದ ನಟಿ ಸಿನಿಮಾದಲ್ಲಿ ಪ್ರಖರವಾಗಿ ಕಾಣಿಸಿಕೊಂಡದ್ದು- ಕಾಸರವಳ್ಳಿಯವರ ಗುಲಾಬಿ ಟಾಕೀಸಿನಲ್ಲಿಯೇ.

ಗುಲಾಬಿಯ ಪಾತ್ರ ಸಿನಿಮಾದ ವಿವಿಧ ಹಂತಗಳಲ್ಲಿ ಸಂಕೀರ್ಣವಾಗುತ್ತಾ ಹೋಗುವ ಪರಿ ಪ್ರೇಕ್ಷಕನಿಗೆ ದಕ್ಕುವುದಕ್ಕೆ
ಸಾಧ್ಯವಾಗುವುದು ಉಮಾಶ್ರೀಯ ಅಭಿನಯದಲ್ಲಿ. ಅವಳಲ್ಲಿರುವ ಸ್ವಗತಗಳು, ಗಂಡನ ಎರಡನೇ ಹೆಂಡತಿಯ ಮಗ ಅದ್ದುವಿನೆಡೆಗಿರುವ ಪ್ರೀತಿ, ನೇತ್ರುವಿನ ಜೊತೆಗಿನ ಗೆಳೆತನ, ಟಿವಿ ಬಂದ ನಂತರ ಬದಲಾಗುವ ಸಂಬಂಧಗಳ ವ್ಯಾಪ್ತಿಯನ್ನು ಆಕೆ ಅರ್ಥೈಸಿಕೊಳ್ಳುವಲ್ಲಿ ಆಕೆ ಪಡುವ ಪಾಡನ್ನು, ಗುಲಾಬಿಯ ಸಂದಿಗ್ಧವನ್ನು ಉಮಾಶ್ರೀ ತೆರೆಮೇಲೆ ಬಿಚ್ಚಿಡುತ್ತಾರೆ. "ಮೊದಲಾದರೆ ವಾರಗಟ್ಟಲೆ ಸಿನಿಮಾ ನೋಡುತ್ತಿದ್ದೆ. ಬೇರೆ ಬೇರೆ ಕನಸುಗಳು ಬೀಳುತ್ತಿದ್ದವು. ಮನೆಯಲ್ಲೀಗ ಟಿವಿಯಿದೆ. ದಿನವೂ ಬೇರೆ ಬೇರೆ ಸಿನಿಮಾ ನೋಡುತ್ತೇನೆ. ಆದರೆ ಬೀಳುತ್ತಿರುವುದು ಒಂದೇ ಕನಸು" ಎನ್ನುವಾಗ ಉಮಾಶ್ರೀಯ ಮುಖದಲ್ಲಿನ ಒತ್ತಡ, ಕಣ್ಣಲ್ಲಿ ಕರಗುತ್ತಿರುವ ನೋವು ಪ್ರೇಕ್ಷಕನಿಗೆ ದಾಟುತ್ತದೆ.

ಉಮಾಶ್ರೀಯ ನಟನೆಯ ತೀವ್ರತೆಯ ಸನ್ನಿವೇಶಗಳು "ಗುಲಾಬಿ ಟಾಕೀಸು" ಸಿನಿಮಾದ ಹಲವೆಡೆ ಕಾಣುತ್ತದೆ. ಉಮಾಶ್ರೀಯ
ಅಭಿನಯಕ್ಕೊಂದು ಸಲಾಮು ಹೇಳಲು ಗುಲಾಬಿಯನ್ನು ಮನೆಯಿಂದ ಹೊರಕ್ಕೆ ಹಾಕುವ ಸನ್ನಿವೇಶವೊಂದೇ ಸಾಕು. ಸನ್ನಿವೇಶದಲ್ಲಿ ಗುಲಾಬಿಯ ಪ್ರತಿಭಟನೆಯ ಪರಿಯನ್ನೊಮ್ಮೆ ನೀವು ನೋಡಬೇಕು. ಪಾತ್ರೆಗಳನ್ನು ಮನೆಯಿಂದ ಹೊರಹಾಕುತ್ತಿರುವಾಗ ಅದನ್ನೆಲ್ಲಾ ಹೆಕ್ಕಿ ಮತ್ತೆ ಒಳಗಿಡಲು ಪ್ರಯತ್ನಿಸುವುದು, ಕಬ್ಬಿಣದ ಪೆಟ್ಟಿಗೆಯ ಮೇಲೆ ಜಗ್ಗದಂತೆ ಕೂರುವ ಪರಿಯನ್ನು ನೋಡಿದಾಗ ಉಮಾಶ್ರಿಯೊಳಗಿರುವ ಗುಲಾಬಿ ಅರ್ಥವಾಗುತ್ತಾ ಹೋಗುತ್ತಾಳೆ.


ಗುಲಾಬಿಯಂತಹ ಪಾತ್ರವನ್ನು ಉಮಾಶ್ರೀಯ ಮೂಲಕ ತೆರೆಗೆ ತಂದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು
ಸಲ್ಲಲೇಬೇಕು.....

ಮತ್ತಷ್ಟು ಒಳ್ಳೆಯ ಗುಲಾಬಿಗಳನ್ನು ಉಮಾಶ್ರೀ ಮುಂದೆಯೂ ಕಟ್ಟಿಕೊಡಲಿ.

||ಕಾಂಚೀವರಂ ಸಿನಿಮಾ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೊಮ್ಮೆ ಬರೆದಿದ್ದೆ.
ಓದಿಲ್ಲವಾದಲ್ಲಿ
ಕೆಳಗಿನ ಕೊಂಡಿ ಕ್ಲಿಕ್ ಮಾಡಿ. ||

ಗುರುವಾರ ೨೭ ಆಗಸ್ಟ್ ೨೦೦೯

ಬೇಯುವ ವಿಷಾದಗಳ ಹೊಸ್ತಿಲಲ್ಲಿ ಸ್ವಗತವೆಂಬ ಮೌನರಾಗ


ಳೆದು ಹೋಗುವುದನ್ನು ಹುಡುಕುವ ಸಿನಿಮಾಗಳು ವಿಶ್ವದ ಹಲವು ಭಾಷೆಗಳಲ್ಲಿ ಬಂದಿವೆ
. ಕಳೆದು ಹೋದ ಪ್ರೇಮಿ, ಗೆಳೆಯ, ಅಮ್ಮ, ಶೂ...ಹೀಗೆ ಪಟ್ಟಿ ಬೆಳೆಯುತ್ತದೆ.ಆದರೆ ಮನುಷ್ಯನೊಬ್ಬ ತನ್ನನ್ನೇ ದಿನ ನಿತ್ಯದಲ್ಲಿ ಕಳೆದುಕೊಂಡರೆ? ಕಳೆದು ಹೋಗಿದ್ದೇನೆ ಎಂದು ಅರಿವಾಗದೆ ಬದುಕುತ್ತಿದ್ದರೆ??--40 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ "ದಿ ಬ್ಯಾಂಡ್ಸ್ ವಿಸಿಟ್" ಎನ್ನುವ ಇಸ್ರೇಲಿ ಸಿನಿಮಾ ಚರ್ಚಿಸುವುದು ಇದೇ ವಿಷಯವನ್ನೇ.



ಈಜಿಪ್ಟಿನ ಅಲೆಗ್ಸಾಂಡ್ರಿಯಾ ಸೆರೆಮೋನಿಯಲ್ ಪೋಲಿಸ್ ಆರ್ಕೆಸ್ಟ್ರಾ, ಇಸ್ರೇಲಿನ ಅರಬ್ ಕಲ್ಚರ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡಲು ಬಂದಿಳಿಯುತ್ತದೆ. ಆದರೆ ವಿಳಾಸ ತಪ್ಪಿ ಅನಾಮಿಕ ಊರಿನಲ್ಲಿ ನಿಂತುಬಿಡುತ್ತದೆ. ದಿಕ್ಕು ತೋಚದೆ ಪಕ್ಕದ ರೆಸ್ಟೋರೆಂಟಿನಲ್ಲಿ ಆಶ್ರಯ ಬೇಡುತ್ತದೆ.ಅಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಬಸ್ಸಿಗೆ ಹೊರಡುತ್ತದೆ. ಇದು ಕತೆ. ಹೀಗೆ ಆರ್ಕೆಸ್ಟ್ರಾ ಗುಂಪಿನ 8 ಮಂದಿ,ಅತಿ ಮುಖ್ಯವಾಗಿ ತೌಫೀಕ್ ಪರಿಚಯವೇ ಇಲ್ಲದ ಊರೊಳಗೆ ತನ್ನನ್ನು ಕಂಡುಕೊಳ್ಳುವ ಕತೆಯಿದು.


ಇರಾನ್ ಕೊಲಿರಿನ್ ನಿರ್ದೇಶನದ ಮೊದಲ ಸಿನಿಮಾ. ಕತೆಯೂ ಈತನದ್ದೇ. 2007ರಲ್ಲಿ ಈ ಸಿನಿಮಾ ನಿರ್ಮಾಣವಾಯಿತು. ಮೌನವನ್ನು ಬಳಸಿ ವ್ಯಕ್ತಿಯ ಮನವನ್ನು ತೆರೆದಿಡುವ ತಂತ್ರ ಇಲ್ಲಿದೆ. ಹಾಸ್ಯಪ್ರಜ್ಞೆಯನ್ನು ಜೊತೆಗಿಟ್ಟುಕೊಂಡು ಕತೆ ಹೇಳುತ್ತಾನೆ ಕೊಲಿರಿನ್.




ಆರ್ಕೆಸ್ಟ್ರಾದ ನಾಯಕ ತೌಫೀಕ್ ನ ಒಳಗೊಂದು ನೋವಿನ ಕಡಲಿದೆ. ಸಾವಿರ ಸ್ವಗತಗಳಿವೆ. ತನ್ನ ಮಗನ ಬಗ್ಗೆ ಕಠೋರವಾಗಿದ್ದರಿಂದ ಹೆಂಡತಿ ಕೊರಗಿ ಸತ್ತಳು ಎಂಬ ಪಾಪಪ್ರಜ್ಞೆಯಿದೆ. ಸಾಂಪ್ರದಾಯಿಕ ಸಂಗೀತ ಯುವಜನರಿಂದ ಕಡೆಗಣಿಸಲ್ಪಡುತ್ತಿರುವುದಕ್ಕೆ ಬೇಜಾರಿದೆ. ಇದೆಲ್ಲವನ್ನು ಮರೆಮಾಚಲು ಆತನಿಗೆ ಬ್ಯಾಂಡ್ ಟ್ರೂಪ್ ಬೇಕೇ ಬೇಕು. ಪ್ರಯಾಣ, ಏಕಾಂತ ಎಲ್ಲದರೊಳಗೆ ಬೇಯುತ್ತಾನೆ ಆತ. ಇವರಿಗೆ ಆಶ್ರಯ ನೀಡುವ ರೆಸ್ಟೋರೆಂಟಿನ ಮಾಲಕಿ "ದಿನಾ"ಳದ್ದು ಇದೇ ತರಹದ ಕತೆ. ಜೊತೆಗಿದ್ದ ಪ್ರಿಯತಮ ಈಗಿಲ್ಲ. ರೆಸ್ಟೋರೆಂಟಿನ ಎದುರಿನ ಲೈಟು ಕಂಬಗಳ ಸುಂದರ ರಸ್ತೆಯಂತೆ ಆಕೆಯದ್ದೂ ಒಂದು ಬದುಕು. ಆದರೆ ಆ ರಸ್ತೆ ಯಾವಾಗಲೂ ನಿರ್ಜನ, ನಿರ್ಜೀವ.



ಈ ಸಿನಿಮಾ ಹೇಗೆ ಹುಟ್ಟಿಕೊಂಡಿತು, ಇಂತಹದೊಂದು ಸರಳ, ಪರಿಣಾಮಕಾರಿ ಸಿನಿಮಾದ ವಸ್ತು ಹೇಗೆ ಸಾಧ್ಯವಾಯಿತು ಅನ್ನುವುದನ್ನು ನಿರ್ದೇಶಕ ಕೊಲಿರಿನ್ ಮಾತಲ್ಲೇ ಕೇಳಬೇಕು.



"ಇಸ್ರೇಲಿನಲ್ಲಿ 80ರ ದಶಕದಲ್ಲಿ ಈಜಿಪ್ಟ್ ಸಿನಿಮಾಗಳ ಕ್ರೇಜ್ದ್ದ ಕಾಲ..ಆಗ ನಾನಿನ್ನೂ ಬಾಲಕ. ನನ್ನಂತೆ ಬಹುತೇಕರಿಗೆ ಒಮರ್ ಶರೀಫ್ ಸಿನಿಮಾಗಳೆಂದರೆ ಪಂಚಪ್ರಾಣ. ಇದ್ದಿದ್ದು ಒಂದೇ ಟಿವಿ ಚಾನೆಲ್. ಪ್ರತೀ ಶುಕ್ರವಾರ ಸಂಜೆಯ ಹೊತ್ತಿಗೆ ಅದೇ ಮನರಂಜನೆ. ಸಿನಿಮಾ ಮುಗಿದ ಮೇಲೆ ಕೆಲವೊಮ್ಮೆ ಅರ್ಧಗಂಟೆ "ಇಸ್ರೇಲ್ ಬ್ರಾಡ್ಕಾಸ್ಟಿಂಗ್ ಆರ್ಕೆಸ್ಟ್ರಾ"(ಐಬಿಎ)ದ ಸಂಗೀತ ಕಾರ್ಯಕ್ರಮವಿರುತ್ತಿತ್ತು. ಶಾಸ್ತ್ರೀಯ ಅರೇಬಿಕ್ ಸಂಗೀತವದು. ಟಿವಿ ಖಾಸಗೀಕರಣಕ್ಕೆ ತುತ್ತಾದ ಮೇಲೆ ನಮ್ಮಲ್ಲಿ ನೂರಾರು ಚಾನೆಲ್ ಗಳು ಬಂದವು. ಎಂ ಟಿವಿ ಬಂತು. ಬಿಬಿಸಿ ಬಂತು. 30 ಸೆಕೆಂಡಿನ ಜಾಹೀರಾತುಗಳು ರಾರಾಜಿಸಿದವು. ಇದರ ಮಧ್ಯೆ ಶಾಶ್ವತವಾಗಿ ಕಳೆದು ಹೋದದ್ದು ಮಾತ್ರ ಶಾಸ್ತ್ರೀಯ ಅರೇಬಿಕ್ ಸಂಗೀತ ನುಡಿಸುತ್ತಿದ್ದ ಆರ್ಕೆಸ್ಟ್ರಾ.



ಇರಾನ್ ಕೊಲಿರಿನ್



ಆದರೆ ಇವತ್ತು....

ಇವತ್ತು ನನ್ನ ಮತ್ತು ಗೆಳೆಯನ ಮಗ ಜಗಮಗಿಸುವ ಮೆಕ್ಡೊನಾಲ್ಡ್ ಬೋರ್ಡುಗಳ ಕೆಳಗೆ ಭೇಟಿಯಾಗುತ್ತಾರೆ. ಅದು ಅವರಿಗೆ "ಕಂರ್ಟ್" ಕೊಡುತ್ತಿದೆ" ಎಂದು ಬದಲಾದ ಮನಸ್ಥಿತಿಯೊಳಗೆ ಕಳೆದು ಹೋದದ್ದನ್ನು, ತನ್ನ ಮಕ್ಕಳು ಕಳೆದುಕೊಂಡ ಅಪೂರ್ವ ಕ್ಷಣಗಳನ್ನು ನೆನೆಸಿಕೊಳ್ಳುತ್ತಾನೆ ಕೊಲಿರಿನ್. ಇದೇ ಬೇಗುದಿ ಸಿನಿಮಾದಲ್ಲಿರುವ ತೌಫೀಕ್ ಗೂ ಇದೆ. ಅತೀ ವೇಗದ ಸಾಂಸ್ಕ್ರತಿಕ ಪಲ್ಲಟದ ಬಗ್ಗೆ ಗಾಬರಿಯಿದೆ. ದಿನಾ ಜೊತೆ ಹೋಟೆಲಿನಲ್ಲಿ ಕುಳಿತಾಗ ಆತ ಹಂಚಿಕೊಳ್ಳುವುದು ಇದನ್ನೇ. ಅದಕ್ಕೇ ಆತನಿಗೆ ಖಾಲಿದ್ ಅಧಃಪತನಕ್ಕಿಳಿದ, ಶಿಸ್ತಿಲ್ಲದ ವ್ಯಕ್ತಿಯಂತೆ ಕಾಣುತ್ತಾನೆ. ಟಿವಿ ಖಾಸಗಿಕರಣಕ್ಕೆ ಒಳಗಾದ ಮೇಲೆ ಇಸ್ರೇಲಿನಲ್ಲಿ ಹುಟ್ಟಿಕೊಂಡ ಯುವಜನತೆಯ ಪ್ರತಿನಿಧಿ ಆತ..



ಆದರೆ ಇದೆಲ್ಲದರ ಮಧ್ಯೆ ತೌಫೀಕ್ ವೇಗವಾದ ಸಾಂಸ್ಕ್ರತಿಕ ಪಲ್ಲಟಕ್ಕೆ ಹೊಂದಿಕೊಲ್ಲುವುದು ಅಸಾಧ್ಯವಾಗುತ್ತದೆ. ಗೊಂದಲ, ಅಸಹಾಯಕತೆ ಮಧ್ಯೆ ತನ್ನನ್ನು ಕಂಡುಕೊಳ್ಳುವಲ್ಲಿ ಆತ ಸೋಲುತ್ತಾನೆ. ದಿನಾ ಜೊತೆಗೊಂದು ಸಂವಾದ ಸಾಧ್ಯವಾದ ಮೇಲಷ್ಟೇ ಆತನಿಗೆ ಖಾಲಿದ್(ಅಂದರೆ ಹೊಸ ತಲೆಮಾರು)ಅರ್ಥವಾಗುತ್ತಾನೆ. ದಿನಾ, ತೌಫೀಕ್ ರ ಪರಿಚಯ ಇಬ್ಬರ ವಾಸ್ತವವನ್ನು ಬದಲಾಯಿಸುತ್ತದೆ. ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದ ವಿಷಾದ ರಾಗಗಳನ್ನು ಬಿಚ್ಚಿಡುತ್ತಾರೆ.ಎಲ್ಲೋ ಒಂದೆಡೆ ದುಖಃವನ್ನು ಬಸಿದು ನಿರಾಳವಾಗುವ ಹಾಗೆ. ಬಹುಷಃ ಈ ನಿರಾಳತೆಯೇ ತೌಫೀಕ್ ನಿಗೆ ಚೈತನ್ಯಪೂರ್ಣವಾಗಿ ಸುತ್ತಲಿನ ಜನರನ್ನು ನೋಡಲು ಕಲಿಸುತ್ತದೆ. ತಾನು ಬ್ಯಾಂಡ್ ಟ್ರೂಪಿನಿಂದ ಗೇಟ್ ಪಾಸ್ ಕೊಡಬೇಕಿದ್ದ ಚೆಲ್ಲು ಹುಡುಗ ಖಾಲಿದ್ ಇಷ್ಟವಾಗಲು ಶುರುವಾಗುತ್ತಾನೆ. ಖಾಲಿದ್ ಕೇವಲ "ಮಗನಷ್ಟೇ ಅಲ್ಲ.. ಬದಲಾಗಿ ತನ್ನ ಹಾಗು ಯುವ ತಲೆಮಾರಿನ ಸೇತುವೆಗೆ ಕೊಂಡಿಯಾಗುತ್ತಾನೆ. . ಬದುಕಿನ ಲಯವನ್ನು ಆತ ಮತ್ತೆ ಪತ್ತೆ ಹಚ್ಚಿದ್ದಾನೆ. ಅದೇ ಕಾರಣಕ್ಕೆ ಆತ ಕೊನೆಯಲ್ಲಿ ಖಾಲಿದ್ ವಯೋಲಿನ್ ನುಡಿಸುವಾಗ ತನ್ಮಯತೆಯಿಂದ ಆನಂದಿಸುತ್ತಾನೆ.



ಇವರ ನಡುವೆ ಸಿನಿಮಾದಲ್ಲೊಂದು ಪುಟ್ಟ ಪಾತ್ರವಿದೆ. ಆತ ಯುವಕ. ಹಗಲು-ರಾತ್ರಿ ಎಡೆಬಿಡದೆ ತನ್ನ ಪ್ರಿಯತಮೆಯ ಫೋನಿಗೆ ಬೂತಿನ ಬುಡದಲ್ಲೇ ಕಾಯುತ್ತಿರುತ್ತಾನೆ. ಬೇರೆ ಯಾರಾದರು ಅಲ್ಲಿ ಫೋನು ಮಾಡಲು ಬಂದರೆ ಆತನಿಗೆ ಕಿರಿಕಿರಿ. ಆಕೆ ಫೋನು ಮಾಡಿಯೇ ಮಾಡುತ್ತಾಳೆ ಅನ್ನುವ ಕಾತರ, ಇನ್ನೂ ಮಾಡಿಲ್ಲವಲ್ಲ ಎನ್ನುವ ಸುಮಧುರ ವೇದನೆ ಅವನಲ್ಲಿದೆ.





ಇಡೀ ಚಿತ್ರವನ್ನು ಸಂಯಮದಿಂದ, ನಿಶ್ಯಬ್ದದ ಜೊತೆಗೆ ಹೆಣೆಯುತ್ತಾ ಹೋಗುತ್ತಾನೆ ನಿರ್ದೇಶಕ. ತೌಫಿಕ್ ಪಾತ್ರದ ಸಸನ್ ಗಬಾಯ್ ಅಭಿನಯವನ್ನು ಮಿಡ್ ಶಾಟ್ ಗಳಲ್ಲಿ ನೋಡುವುದೇ ಅಪೂರ್ವ ಘಳಿಗೆ. ಮಿಡ್ ಶಾಟ್ ಗಳನ್ನು ಬಳಸಿ ತೌಫೀಕ್ ನ ನೋವನ್ನು ನಮಗೆ ದಾಟಿಸುವಲ್ಲಿ ಕೊಲಿರಿನ್ ಸಫಲನಾಗುತ್ತಾನೆ. ಮುಖದ ನೆರಿಗೆ, ಹುಬ್ಬಿನ ಚಲನೆ, ಕಣ್ಣು ಬತ್ತುವುದು, ಮತ್ತೆ ಅರಳುವುದು-ಇದೆಲ್ಲ ಸಿನಿಮಾಕ್ಕೆ ಶಕ್ತಿ. ಉಳಿದ ಬ್ಯಾಂಡಿನ ಮಂದಿ ಕೂಡಾ ಅಭಿನಯದಲ್ಲಿ ಪೈಪೋಟಿ ನೀಡುತ್ತಿರುತ್ತಾರೆ. ದಿನಾ ಪಾತ್ರದಲ್ಲಿ ರೊನಿತ್ ಎಲ್ಕಾಬೆಟ್ಸ್ ಳನ್ನು ಮರೆಯಲು ಸಾಧ್ಯವಾಗುವುದಿಲ್ಲ.



ಮೌನವನ್ನು ಸ್ವಗತದ ಜಾಗದಲ್ಲಿ ಬಳಸುತ್ತಾ ಬದುಕನ್ನು ಪುನರ್ ಕಟ್ಟಿಕೊಳ್ಳುವ ತಂತ್ರ ಚಿತ್ರಕತೆಯ ಮುಖ್ಯ ಭಾಗ. ನಿರ್ಜನವಾಗಿ ಬಿದ್ದುಕೊಂಡಿರುವ ರಸ್ತೆ, ರೆಸ್ಟೋರೆಂಟ್, ರಾತ್ರಿಯ ಜೊತೆಗೊಂದು ನಡಿಗೆ, ಬೋಳು ಬೆಂಚು ಇದೆಲ್ಲಾ ದ್ರಶ್ಯದ ಮೂಲಕ ಸಿನಿಮಾದಲ್ಲಿ ಕಾಣುವಾಗ ಕತೆಗೊಂದು ಅನುಭೂತಿ ಸಿದ್ಧಿಸುತ್ತದೆ.



ರಾತ್ರಿಯ ನೀರವತೆಯಲ್ಲಿ ಬೆಂಚೊಂದರ ಮೇಲೆ ಕುಳಿತು ದಿನಾ-ತೌಫೀಕ್ ಮಾತನಾಡುವ ದ್ರಶ್ಯ ವಿನ್ಯಾಸ ಆಪ್ತ. ಪರಸ್ಪರರನ್ನು ಅರಿಯುವ ಪ್ರಯತ್ನದಲ್ಲಿ ತೌಫೀಕ್ ಗೆ ಸಂಗೀತದಷ್ಟೇ ಖುಷಿ ಸಿಗುತ್ತದೆ. ಅದನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳಲು ದಿನಾ ಕೂಡಾ ಪ್ರಯತ್ನಿಸುತ್ತಾಳೆ.



ಹರಳುಗಟ್ಟಿದ ವಿಷಾದಗಳನ್ನು ಒಡೆಯುತ್ತಾ ಕಣವಾಗಿ ಕರಗಿಸಿ ಸಿನಿಮಾ ಕೊನೆಯಾಗುವಾಗ, ತಾವು ಕಳೆದುಕೊಂಡಿದ್ದೇನು ಎನ್ನುವ ಪ್ರಜ್ಞೆ ಮತ್ತು ಅದನ್ನು ಪುನರ್ ತುಂಬಿಕೊಳ್ಳುವ ಅವಕಾಶ ತೌಫೀಕ್, ದಿನಾಳಿಗೆ ಪ್ರಾಪ್ತವಾಗುತ್ತದೆ.

ಕಾಯುತ್ತಿರುವ ಪ್ರೇಮಿಗೆ ಕೊನೆಗೂ ಪ್ರಿಯತಮೆಯಿಂದ ಕರೆ ಬರುತ್ತದೆ...


----------------------------------------------------------------------------------------

2007ರಲ್ಲಿ ಇಸ್ರೇಲ್ ನಿಂದ ಸಿನಿಮಾ ಆಸ್ಕರ್ ಅತ್ಯುತ್ತಮ ವಿದೇಶಿ ವಿಭಾಗಕ್ಕೆ ಸ್ಪರ್ಧಿಸಲು ಪೈಪೋಟಿ ನಡೆಸಿತ್ತು. ಆದರೆ ಶೇ.50ರಷ್ಟು ಸಂಭಾಷಣೆ ಇಂಗ್ಲೀಷಿನಲ್ಲಿದ್ದುದರಿಂದ "Beaufort" ಸಿನಿಮಾ ಆಯ್ಕೆಯಾಯಿತು. ಇರಾನ್ ಕೊಲಿರಿನ್ ಈಗ "ದಿ ಪಾತ್ ವೇಸ್ ಇನ್ ಡೆಸರ್ಟ್" ಸಿನಿಮಾ ತಯಾರಿಯಲ್ಲಿ ನಿರತನಾಗಿದ್ದಾನೆ.
----------------------------------------------------------------------------------------

ಶನಿವಾರ ೧೫ ಆಗಸ್ಟ್ ೨೦೦೯

ಮತ್ತೆ ಬಾಗಿಲು ತೆರೆದಿದೆ: ಸದ್ಯಕ್ಕೆ ನಾಗಮಂಡಲ ಪೋಸ್ಟರು



ತುಂಬಾ ದಿನಗಳಿಂದ ಬ್ಲಾಗಿಗೆ ಬೀಗ ಹಾಕಿ ಹೋಗಿದ್ದೆ.
ಮತ್ತೆ ಬಾಗಿಲು ತೆರೆಯುವ ಮನಸ್ಸಾಗಿದೆ.
ಒಂಟಿ ನಡಿಗೆ, ಮನೆಯಲ್ಲಿ ಮನ ತುಂಬಿಕೊಂಡ ಮಳೆ ಜೊತೆಗಿದೆ.


ಹಂಚಿಕೊಳ್ಳಲು ವಿಷಯಗಳು ಹಲವಿವೆ.
ಮೇ ತಿಂಗಳಲ್ಲಿ "ನಾಗಮಂಡಲ" ಕುರಿತು ಪುಟ್ಟ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದೆ. ದೆಹಲಿಯಲ್ಲಿ ನಡೆದ ಸಾಕ್ಷ್ಯಚಿತ್ರೋತ್ಸವಸ್ಪರ್ಧೆಯಲ್ಲಿ ಕೂಡಾ ಭಾಗವಿಹಿಸಿತ್ತು.
ಅದಕ್ಕಾಗಿ ಡಿವಿಡಿ ಕವರ್ ವಿನ್ಯಾಸ ಮಾಡಿ ಕೊಡಲು
ಅಪಾರ ಅವರಲ್ಲಿ ಕೇಳಿಕೊಂಡಿದ್ದೆ. ಬಿಡುವು ಮಾಡಿಕೊಂಡು ಪ್ರೀತಿಯಿಂದ ಮುದ್ದಾದ ವಿನ್ಯಾಸ ಮಾಡಿಕೊಟ್ಟಿದ್ದರು.

ವಿನ್ಯಾಸಗಳು ಇಲ್ಲಿವೆ. ನಿಮಗೆ ಹೇಗನ್ನಿಸಿತು?
ಪ್ರತಿಕ್ರಿಯಿಸಿ(ಅಪಾರ ಸಿಕ್ಕರೆ ಖುದ್ದು ಅವರಿಗೇ ಹೇಳಿ).

ಮತ್ತೊಂದು ಮುಖ್ಯವಾದ ವಿಷಯ
"ಅಪೊಕೊಲಿಪ್ಟೊ" ಸಿನಿಮಾದ ನಾಯಕನನ್ನು ನೆನಪಿಗೆ ತರುವ ನಾಗ ಪಾತ್ರಿಯ ಆಕರ್ಷಕ ಫೋಟೊ ಸೆರೆ ಹಿಡಿದದ್ದು ದುರ್ಗಾಪ್ರಸಾದ್ ಹೆಗಡೆ. ವ್ರತ್ತಿಯಿಂದ ಡಾಕ್ಟರ್. ಮಂಗಳೂರಿನವರು.





(ಫೋಟೋ ಮೇಲೆ ಕ್ಲಿಕ್ ಮಾಡಿರೆ ಗಾತ್ರ ದೊಡ್ಡದಾಗುತ್ತದೆ.)

ಬುಧವಾರ ೨೨ ಎಪ್ರಿಲ್ ೨೦೦೯

ಇರಾನಿನಲ್ಲಿ ಸಿನಿಮಾ ಸುಲಭದ ಮಾತಲ್ಲ


ಧಾರ್ಮಿಕತೆಯ ಹಿಡಿತ ಇರಾನಿನಲ್ಲಿ ಚಿತ್ರಗಳನ್ನೂ ಬಿಟ್ಟಿಲ್ಲ. ಪಾಶ್ಚಾತ್ಯ ಸಿನಿಮಾಗಳು ಇಲ್ಲಿ ಯಾವತ್ತಿಗೂ ಬ್ಯಾನ್.
ಕುಡಿತ, ಪ್ರೇಮಿಗಳ ಸರಸ-ಸಲ್ಲಾಪ, ಕಡಿಮೆ ಬಟ್ಟೆ ಧರಿಸಿದ ಮಹಿಳೆ ಎಲ್ಲದಕ್ಕೂ ಇಲ್ಲಿ ಕತ್ತರಿ. ಪ್ರದರ್ಶನಕ್ಕೆ ಅಯೋಗ್ಯ.

ವರ್ಷದಲ್ಲಿ 8ರಿಂದ 10 ಹಾಲಿವುಡ್ ಸಿನಿಮಾಗಳು ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡರೇನೇ ಹೆಚ್ಚು. ಇಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಆಡಿಸಿದ ಸಮಕಾಲೀನ ಹಾಲಿವುಡ್ ಕ್ಲಾಸಿಕ್ ಸಿನಿಮಾಗಳು ಮಾತ್ರ ಟಿವಿಯಲ್ಲಿ ಪ್ರದರ್ಶನ ಕಾಣುತ್ತವೆ. 

ಬಹುತೇಕ ಭಾರತದಂತೆಯೇ ಅಲ್ಲಿ ಕೂಡಾ ಕಮರ್ಷಿಯಲ್ ಮತ್ತು ಕಲಾತ್ಮಕ ಎನ್ನುವ ಎರಡು ಪಂಗಡಗಳಿವೆ. ಸರ್ಕಾರ ಸಿನಿಮಾ ನಿರ್ಮಾಣದ ಮೇಲೆ ಕಣ್ಣಿಟ್ಟೇ ಇರುತ್ತದೆ.

ಇರಾನಿನ 53 ಮಿಲಿಯನ್ ಜನರ ಭಾಷೆ ಪರ್ಶಿಯನ್. ಹಾಗಾಗಿ ಇದೇ ಅಧಿಕ ಭಾಷೆಯಲ್ಲಿ ಚಿತ್ರಗಳು ತಯಾರಾಗುತ್ತವೆ.

ವರ್ಷಕ್ಕೆ ಹೆಚ್ಚುಕಮ್ಮಿ 130 ಚಿತ್ರಗಳು ತಯಾರಾಗುತ್ತವೆ. ಕಾಮಿಡಿ, ರೊಮ್ಯಾಂಟಿಕ್ ಮೆಲೋಡ್ರಾಮಾ ಮತ್ತು ಕೌಟುಂಬಿಕ ಕಾಮಿಡಿ ಚಿತ್ರಗಳೇ ಹೆಚ್ಚು.

ಕಮರ್ಶಿಯಲ್ ಸಿನಿಮಾಗಳಿಗೆ 25 ವರ್ಷದೊಳಗಿನವರು ಮುಖ್ಯ ಟಾರ್ಗೆಟ್. ಸ್ಥಳೀಯ ಪ್ರೇಕ್ಷಕರೇ ಆಧಾರ. ಮೊಹಮ್ಮದ್ ಅಲಿ ಫರ್ದೀನ್ ಅಲ್ಲಿನ ಪ್ರಸಿದ್ಧ ಕಮರ್ಶಿಯಲ್ ಹೀರೋ ಆಗಿದ್ದಾತ.

ಕಲಾತ್ಮಕ ಸಿನಿಮಾಗಳು ಹೆಚ್ಚಾಗಿ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಆದರೆ ಕೆಲವಾರು ಸಿನಿಮಾಗಳು ಹೌಸ್ಫುಲ್ ಪ್ರದರ್ಶನ ಕಂಡ ಉದಾಹರಣೆಗಳಿವೆ.

ನಮ್ಮಲ್ಲಿರುವಂತೆ ಅಲ್ಲಿಯೂ ಪೈರಸಿ ಹುಲುಸಾಗಿಯೇ ಬೆಳೆದಿದೆ. ಆದ್ದರಿಂದ ಕಲಾತ್ಮಕ ಸಿನಿಮಾಗಳ ಪೈರೇಟೆಡ್ ಡಿವಿಡಿಗಳು ಸುಲಭಾಗಿ ಸಿಗುತ್ತವೆ.

ಅರಬ್ ಮತ್ತು ಭಾರತೀಯ ಸಿನಿಮಾಗಳೆಡೆಗೆ ಇರಾನಿಯರಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ ಈ ಎರಡೂ ದೇಶಗಳ ಒಂದೇ ಒಂದು ಸಿನಿಮಾ ಕೂಡಾ ಪ್ರದರ್ಶನ ಕಂಡಿಲ್ಲ.


ಇರಾನಿಗೆ ಸಿನಿಮಾ ಬಂದದ್ದು:

ಪರ್ಶಿಯನ್ನರ ದೃಶ್ಯ ಮಾಧ್ಯಮಕ್ಕೆ ಸುದೀರ್ಫ ಇತಿಹಾಸವಿದೆ. ಕ್ರಿ.ಪೂ 500ರಿಂದ ದೃಶ್ಯ ಅಭಿವ್ಯಕ್ತಿ ಪ್ರಾರಂಭವಾಯಿತು ಎನ್ನುವುದಕ್ಕೆ ದಾಖಲೆಗಳಿವೆ. ದೃಶ್ಯ ಕಲೆ, ಆಲಂಕಾರಿಕ ಕಲೆ, ಸಾಹಿತ್ಯ, ಕಟ್ಟಡ ನಿರ್ಮಾಣ, ನೃತ್ಯ, ಸಂಗೀತ ಎಲ್ಲದರಲ್ಲೂ ಪರ್ಶಿಯನ್ನರು ಛಾಪು 
ಮೂಡಿಸಿದವರು.

20ನೇ ಶತಮಾನದಲ್ಲಿ ಸಿನಿಮಾ ಪರ್ಶಿಯನ್ನರಿಗೆ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತ ದಾರಿಯಾಗಿ ಕಂಡಿತು.
ಪಲ್ಹವಿ ಸಾಮ್ರಾಜ್ಯಕ್ಕಿಂತ ಮೊದಲು ಪರ್ಶಿಯಾವನ್ನು ಆಳಿದ್ದ ಮುಜಫರ್ ಅಲ್ ದಿನ್ ಶಾ 1900ರಲ್ಲಿ ಪ್ಯಾರೀಸ್ಗೆ ಭೇಟಿಕೊಟ್ಟಾಗ ಕ್ಯಾಮರಾವೊಂದನ್ನು ತಂದರು. ಇದೇ ಇರಾನಿನ ಸಿನಿಮಾ ನಿರ್ಮಾಣಕ್ಕೆ ಪ್ರಾರಂಭಿಕ ಹೆಜ್ಜೆಯಾಯಿತು. 2001ರಲ್ಲಿ ಇರಾನ್ ಸಿನಿಮಾ ನೂರು ವರ್ಷಗಳ ಸಂಭ್ರಮವನ್ನು ಆಚರಿಸಿತು.

ಚೀನಾ ಮತ್ತು ಇರಾನ್ ತೊಂಭತ್ತರ ದಶಕದಿಂದೀಚೆಗೆ ವಿಶ್ವ ಕಂಡ "ಮಾನವೀಯ ಸ್ಪಂದನೆಗಳ ಚಿತ್ರಗಳ ಗೂಡು" ಎನ್ನುತ್ತಾರೆ ಹಲವಾರು ಚಿತ್ರ ವಿಮರ್ಶಕರು.

  © Blogger template 'iNY' by Ourblogtemplates.com 2008

Back to TOP