ಶುಕ್ರವಾರ, ಫೆಬ್ರವರಿ 26, 2010

ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ

ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.
ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.

ಒಂದು ಕತೆಯೋ, ಪುಸ್ತಕವೋ ಓದಿದ ಕ್ಷಣಕ್ಕೆ ಕವಿ, ಕತೆಗಾರನ ವಿಳಾಸವೋ, ನಂಬರೋ ಈಗಂತೂ ಸುಲಭಕ್ಕೆ ಸಿಕ್ಕುಬಿಡುತ್ತದೆ. ಅಲ್ಲಿಗೆ ಓದುಗ ಹೊಗಳುಭಟನಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಅನಿವಾರ್ಯವಾಗಿ ಶುರುವಾಗುತ್ತದೆ. ಅಥವಾ ಲೇಖಕ ಅಂತಹದೊಂದು ಅನಿವಾರ್ಯತೆಯನ್ನು ಇವತ್ತಿನ ದಿನಮಾನದಲ್ಲಿ ಖಡಾಖಂಡಿತವಾಗಿ ನಿರೀಕ್ಷಿಸುತ್ತಿದ್ದಾನೆಯೇ? ಬೆಂಗಳೂರಿನಲ್ಲಿರುವ ಈ ಒಂದೂವರೆ ವರ್ಷದಲ್ಲಿ ಹಾಗನ್ನಿಸುತ್ತಿದೆ. ಯಾಕೋ..???

ನಮ್ಮಿಷ್ಟದ ಲೇಖಕ, ಕವಿ, ಕತೆಗಾರನ ಪರಿಚಯ ಮಾಡಿಕೊಳ್ಳಲೇಬಾರದು, ಪರಿಚಯವಿದ್ದರೂ ಆದಷ್ಟು ದೂರದಲ್ಲಿದ್ದು ಬಿಡಬೇಕು ಅಂತನ್ನಿಸುತ್ತದೆ. ಆತ ಭವಿಷ್ಯದಲ್ಲಿ ಸೊಗಸಾದ ಪದ್ಯ ಬರೆಯುತ್ತಾನೆ, ನನ್ನ ಬಾಲ್ಯವನ್ನು ಮತ್ತೆ ಹೆಣೆಯಲು, ನೆನೆಯಲು ಪೂರಕವಾಗುವಂತೆ ಅವನ ಬಾಲ್ಯವನ್ನು ಕಟ್ಟಿಕೊಡುವ ಕತೆಯೊಂದನ್ನು, ಅಥವಾ ನನಗೆ ಪರಿಚಯವಿರದ ವಾತಾವರಣವನ್ನು ಪರಿಚಯಿಸಿ ಕೊಡುತ್ತಾನೆ ಅಂತ ಕಾಯುತ್ತಾ ಕೂರಬೇಕು. ಮಳೆ, ವಿರಹ, ಪ್ರಿಯತಮೆಯ ಸಲ್ಲಾಪ, ಸಂಗೀತದಲ್ಲೇ ಕಳೆದು ಹೋಗಿರುವ ಜಯಂತ್ ಕಾಯ್ಕಿಣಿಯ ಹೊಸ ಕತೆಗೆ ಓದುಗ ಕಾದುಕೂತಂತೆ ಸನ್ನಿವೇಶ ಸೃಷ್ಟಿಯಾಗಿಬಿಡಬೇಕು. ದೇಶಕಾಲದಲ್ಲಿ ಪ್ರಿಂಟಾಗಿದ್ದ ಜಯಂತರ "ಚಾರ್ಮಿನಾರು" ನಂತರ ಹೊಸದ್ಯಾವ ಕತೆ ತೆರೆದುಕೊಳ್ಳುತ್ತದೆ ಎಂದು ವರ್ಷಗಳಿಂದ ಕಾದುಕುಳಿತಿದ್ದೇವಲ್ಲ ಹಾಗೇ ಇರಬೇಕು ಓದುಗ. ಅದೇ ಚಡಪಡಿಕೆ, ಅದೇ ಕಾತರ, ಅದೇ ನಿರೀಕ್ಷೆ. ಪರಿಚಯವಾಗಿಬಿಟ್ಟರೆ ಬಿಟ್ಟರೆ ಮುಗೀತು ಬಿಡಿ. ಹೊಸ ಕಥೆ ಯಾವಾಗ ಎಂದು ಜಯಂತ್ ಸಿಕ್ಕಾಗಲೆಲ್ಲಾ ಕೇಳಿ ಪ್ರಾಣ ತಿನ್ನುತ್ತೇವೆ. ಜೊತೆಗೆ ಹೊಸ ಕತೆ ಬರೆದಿಲ್ಲವಲ್ಲ ಎನ್ನುವ ಪಾಪಪ್ರಜ್ಙೆಯನ್ನೋ, ಧಿಡೀರ್ ಎಚ್ಚರವನ್ನೋ ಲೇಖಕಕನಲ್ಲಿ ಹುಟ್ಟುಹಾಕಿ ಭಯಂಕರ ಓದುಗರಾಗಿಬಿಡುತ್ತೇವೆ. ಅಲ್ಲಿಗೆ ನಮಗೂ ಸೋನಿ ಚಾನೆಲ್ಲಿನಲ್ಲಿ ಪ್ರಸಾರವಾಗುವ ಸಿಐಡಿ ಧಾರಾವಾಹಿಗೂ ಹೆಚ್ಚಿನ ವ್ಯತ್ಯಾಸ ಉಳಿದಿರುವುದಿಲ್ಲ.

ಲೇಖಕ ಓದುಗನಿಗೆ ಅಚಾನಕ್ಕಾಗಿ ಸಿಕ್ಕಿಬಿಡಬೇಕು, ಪ್ರತ್ಯಕ್ಷವಾಗಿಬಿಡಬೇಕು ದೇವರಂತೆ ಎನ್ನುವುದೇ ಇಲ್ಲಿನ ವಾದ. ಕತೆಯ ಮಧ್ಯದಲ್ಲೆಲ್ಲೋ ಅನಿರೀಕ್ಷಿತ ತಿರುವು ಗೋಚರಿಸಿದಾಗ "ಓ...ಮುಂದಿನ ಓದು ಇನ್ನೂ ಮಜಾ ಇದೆ" ಎಂದು ಆಸ್ಥೆಯಿಂದ ಉಳಿದ ಪುಟಗಳನ್ನು ಓದುತ್ತಾ ಕೂರುವಂತಹ ಕುತೂಹಲದಂತಿರಬೇಕು ಲೇಖಕನ ಅಚಾನಕ್ ಭೇಟಿ.

ಗಡಿಬಿಡಿಯ ಒಂಭತ್ತು ಗಂಟೆಯ ಹೊತ್ತಲ್ಲಿ ರಶ್ಶಾದ ಬಿಎಂಟಿಸಿಯಲ್ಲಿ ಒಂದೂವರೆ ಕಾಲಲ್ಲಿ ನಿಲ್ಲುತ್ತಾ ಮೆಜೆಸ್ಟಿಕ್ ಕಡೆಗೆ ಹೋಗಬೇಕಾದರೆ, ಬಸವನಗುಡಿ ಪೋಲೀಸ್ ಸ್ಟೇಶನ್ನಿಂದ ಗಾಂಧೀಬಜಾರಿನ ಕಡೆಗೆ ಹೋಗುವ ರಿಕ್ಷಾದ ಒಳಗಿರುವ ವ್ಯಕ್ತಿಯ ಕಂಡ ಕೂಡಲೇ "ಹೇ ಅದು ಕಿ.ರಂ ಅಲ್ವಾ" ಎಂದು ಮನಸ್ಸು ಗಟ್ಟಿಯಾಗಿ ಹೇಳಬೇಕು. ವಿಮರ್ಶೆ ನೆನಪಾಗಬೇಕು. ಕಾವ್ಯದ ಕುರಿತ ಅವರ ಮಾತುಗಳು ಥಟ್ ಅಂತ ಕಣ್ಣೆದುರು ಬಂದು ನಿಲ್ಲಬೇಕು.

ಎಸ್.ದಿವಾಕರ್ ಹೊಸ ಮಯೂರ ತಿರುವಿ ಹಾಕುತ್ತಾ ಸುಚಿತ್ರಾದ ಎದುರಿನ ಟೀ ಅಂಗಡಿ ಹತ್ರ ನಿಂತಿರಬೇಕಾದರೆ ಅವರನ್ನು ದೂರದಲ್ಲೇ ನಿಂತು ನೋಡಬೇಕು. ಅವರ ಒಂದಷ್ಟು ಉತ್ತಮ ಅನುವಾದಗಳು, ಕತೆಗಳು ನೆನಪಾಗುತ್ತಾ, ಮರೆತ ಮತ್ತೊಂದಷ್ಟನ್ನು ನೆನಪಿಸಬೇಕು. ಮರೆತು ಹೋದ ಅವರ ಕತೆಯೊಂದನ್ನು ಅದೇ ದಿನ ರೂಮಿಗೆ ಹೋದಾಗ ಹುಡುಕುತ್ತಾ ನಿದ್ದೆಯಿಲ್ಲದೇ ಕಳೆಯಬೇಕು. ಸಿಕ್ಕರೆ ಮತ್ತೊಮ್ಮೆ ಓದಿ ಖುಷಿಯಾಗಬೇಕು.

ಚಿಕ್ಕಲಸಂದ್ರ- ಉತ್ತರಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟರ ಹೊತ್ತಿಗೆ ಬಸ್ಸಿಳಿದು ರೂಂ ಕಡೆ ಹೊರಟಾಗ ಚಂದ್ರಶೇಖರ ಆಲೂರು ಟ್ರ್ಯಾಕ್ ಪ್ಯಾಂಟು ಹಾಕಿಕೊಂಡು ನಮ್ಮೆದುರೇ ಹಾದುಹೋದ ಹೊತ್ತಿನಲ್ಲಿ ನಮ್ಮೊಳಗೆ ಹುಟ್ಟುವ ಪುಳಕಕ್ಕೆ ಅಕ್ಷರಗಳ ಹಂಗಿಲ್ಲ. ಮಾತಿನ ಹಂಗಿಲ್ಲ. ಸ್ಮೃತಿಪಟಲದಲ್ಲಿ ವೆರೋನಿಕಾಳದ್ದೇ ಒಲಿದಂತೆ ಹಾಡುವ ಚಿತ್ರ.

ಈಗಂತೂ ಎಲ್ಲೆಡೆಯೂ ಲೇಖಕ ಸುಲಭಕ್ಕೆ ಸಿಕ್ಕುಬಿಡುತ್ತಾನೆ ಬಿಡಿ. ಬೆಂಗಳೂರಿನ ಪ್ರಶಸ್ತಿ, ಗೋಷ್ಠಿ, ಸೆಮಿನಾರು, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆಯ ನಿತ್ಯ ಗೊಂದಲಪುರಕ್ಕಿಂತ ಹೀಗೇ ಬೆಂಗಳೂರಿನ ಫುಟ್ಪಾತು, ಅನಾಮಿಕ ಅಂಗಡಿಯ ಮುಂಭಾಗ, ಯಾವುದೋ ನಾಟಕದ ಪ್ರದರ್ಶನದ ವೇಳೆ ಪ್ರೇಕ್ಷಕರ ನಡುವೆ ನಮ್ಮ ಪ್ರೀತಿಯ ಲೇಖಕ ಕಣ್ಣಿಗೆ ಕಾಣಿಸಿಕೊಂಡರೆ, ಓದುಗನಿಗೆ ಪ್ರಿಯತಮೆಯನ್ನೇ ಕಂಡಷ್ಟು ಪುಳಕವಾಗುತ್ತದೆ. ಆತನನ್ನು ಆ ಫಳಿಗೆಗಳಲ್ಲಿ ಓಡಿಹೋಗಿ ಮಾತಾಡಿಸೋಣ ಎನ್ನುವುದಕ್ಕಿಂತ ಸುಮ್ಮನೆ ನಿಂತು ನೋಡುವುದು, ಆತನ ಬರಹಗಳ ಮಳೆಯ ನೆನಪಲ್ಲಿ ನೆನೆಯುವುದೇ ಖುಷಿ. ಹಾಗೆ ಓದುಗ ಸುಮ್ಮನೆ ನಿಂತು ನೋಡುವ ಕ್ಷಣಗಳಲ್ಲೇ ಲೇಖಕನೊಬ್ಬನ ಬರಹದ ಶಕ್ತಿಯ ಸಾರ್ಥಕತೆಯೂ ಅಡಗಿದೆಯೇನೋ...ಯಾರಿಗೆ ಗೊತ್ತು. ಅದಕ್ಕೇ ಇರಬೇಕು ಅಕ್ಷರವೆಂಬ ಬಣ್ಣದ ಹುಡಿ ಒಮ್ಮೆ ಕೈ ತಾಕಿದರೆ ಸಾಕು, ಮೈಮನ ರಂಗೋಲಿಯಾಗುತ್ತದೆ.

ಕತೆಗಾರ ವ್ಯಾಸರು ಹೇಳುತ್ತಿದ್ದ ಥೇಟಾನುಥೇಟ್ "ಬೆಂಗಳೂರಿಗರ" ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಕಂಡುಬರುವ ಅದದೇ ರಿಪೀಟೆಡ್ ಹೊಗಳಿಕೆ, ಉತ್ತಮ, ಅತ್ಯುತ್ತಮ ಎಂದು ಹೇಳಲೇ ಬೇಕಾದ ಅನಿವಾರ್ಯತೆ ಹಾಗೂ ಪ್ರೇಕ್ಷಕನಾಗಿ ಹೋದರೆ ಇಂಥದ್ದನ್ನೆಲ್ಲಾ ಕೇಳಲೇಬೇಕಾದ ರಿಯಾಲಿಟಿ ಶೋಗಳ ಫಾರ್ಮ್ಯಾಟ್ ಗಿಂತ ಓದುಗನಿಗೆ ದಾರಿ ಮಧ್ಯೆ ಅಚಾನಕ್ಕಾಗಿ ಪ್ರತ್ಯಕ್ಷನಾಗಿ ಕಣ್ಮರೆಯಾಗುವ ಲೇಖಕನೇ ವಾಸಿ. ಕಡೇ ಪಕ್ಷ ಆತನ ಕತೆಯ, ಕವಿತೆಯ ಪುನರ್ ಮನನ, ಪುನರ್ ಓದು ಓದುಗನಿಗೆ ಸಾಧ್ಯ.

ಅಂತಹ ಅನಾಮಿಕ ಭೇಟಿಗಳನ್ನು, ಪ್ರತ್ಯಕ್ಷಗಳನ್ನು ಸಾಧ್ಯವಾಗಿಸುವ ಬೆಂಗಳೂರಿನ ಟ್ರಾಫಿಕ್ಕು, ಬಿಎಂಟಿಸಿ, ಫುಟ್ಪಾತು, ಅಂಗಡಿ ಮುಂಭಾಗ ಇತ್ಯಾದಿಗಳಿಗೆ ಮನದುಂಬಿ ನಮಸ್ಕಾರ.

ಮಂಗಳವಾರ, ಫೆಬ್ರವರಿ 16, 2010

ರಾಧೆಯ ಪ್ರೀತಿಯ ಕೃಷ್ಣನೂ ಜೊತೆಗೊಂದಿಷ್ಟು ಪ್ರಶ್ನೆಗಳೂ...

ಕೊಳಲ ತೊರೆದು ಹೋದ-ರಾಧೇ
ಮುರಳೀಧರ ಗೋಪಾಲಕೃಷ್ಣ
ಎಲ್ಲಿ ಇದ್ದೆಯೇ
ಎತ್ತ ಪೋದೆಯೇ
ಸಮಯದಿ ಕೃಷ್ಣನ ತಡೆಯದೇ ರಾಧೇ

ಎಂದು ದುಃಖಿಸುತ್ತಾ ನುಡಿಯುತ್ತಾರೆ ಸಖಿಯರು. ಕುಸಿದು ಕುಳಿತುಕೊಳ್ಳುತ್ತಾಳೆ ರಾಧೆ. ಕೃಷ್ಣನ ಈಗಿನ ಸುದೀರ್ಘ ಪಯಣ ತನ್ನನ್ನು ಆತನೊಂದಿಗೆ ಒಂದುಗೂಡಿಸುವುದಿಲ್ಲ ಎನ್ನುವುದು ರಾಧೆಗೆ ಬಹುಷಃ ಅರ್ಥವಾಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊಳಲ ತೊರೆದು ಹೋದ ರಾಧಾ ಮಾಧವ ಆಕೆಯಲ್ಲೊಂದು ವಿಷಾದ ವಾಸ್ತವಗಳನ್ನು ಸೃಷ್ಟಿಸುತ್ತಾನೆ. ಕೃಷ್ಣ ಯಾಕೆ ರಾಧೆಯ ಅನುಪಸ್ಥಿತಿಯಲ್ಲಿ ಆಕೆಯನ್ನು ತೊರೆದು, ಆಕೆಗೆ ಯಾವುದೇ ಸೂಚನೆಗಳನ್ನು, ಸಮಾಧಾನಗಳನ್ನು ನೀಡದೇ ಹೊರಟ. ಅಕ್ರೂರ ಬಂದು "ಬನ್ನಿ ಮಧುರೆಗೆ ಬಿಲ್ಲ ಹಬ್ಬಕೆ ಹೋಗುವಾ" ಎನ್ನುವಾಗ ರಾಧೆ ಕೃಷ್ಣನ ಎದುರಿದ್ದರೆ ಆತ ಅಕ್ರೂರನ ಆಹ್ವಾನವನ್ನು ತಿರಸ್ಕರಿಸುತ್ತಿದ್ದನೇ? ಪ್ರೀತಿಯ ಎದುರು ಆಹ್ವಾನ ಕರ್ತವ್ಯವಾಗಿ ಬದಲಾಗುವುದು ತಪ್ಪುತ್ತಿತ್ತೇ?

ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ರಾಧೆಯ ಉಪಸ್ಥಿತಿ ತನ್ನನ್ನು ತಾನೇ ಮರೆಯುವಂತೆ ಮಾಡುತ್ತದೆ. ಮಗುವಿನಂತೆ ನಲಿಯುವುದನ್ನು ಕಲಿಸುತ್ತದೆ. ಸಡಗರ, ಸಂಭ್ರಮದ ವಾಸ್ತವದಲ್ಲಿ ಬದುಕುತ್ತಾ ಇರುವಂತೆ ಮಾಡುತ್ತದೆ.ನಿತ್ಯದಲ್ಲಿ ಆಕೆ ಕಾಣದೇ ಹೋದರೆ ಆತನಿಗೆ ಅದೆಂತಹುದೋ ಚಡಪಡಿಕೆ. ತನ್ನೊಳಗೆ ತುಂಬಿಕೊಂಡ ರಾಧೆಯ ಬಿಂಬ ಸ್ಪಷ್ಟ-ಅಸ್ಪಷ್ಟಗಳ ಅಲುಗಿನ ಮೇಲೆ ತೂಗುತ್ತಿರಬೇಕಾದರೆ ಕೃಷ್ಣನಿಗೆ ರಾಧೆಯನ್ನು ಭೇಟಿಯಾಗಿ ಕಣ್ತುಂಬಿಕೊಳ್ಳಬೇಕು. ಆ ಭೇಟಿಯಲ್ಲೇ ಕಳೆದು ಹೋಗಬೇಕು.

ಸಖಿರಿಗೆಲ್ಲ ಕೃಷ್ಣ ದೇವರಾಗಿ ಕಾಣುತ್ತಾನೆ. ಅವನ ದೈವತ್ವ ಕಾಣುತ್ತದೆ. ಆದರೆ ರಾಧೆಗೆ ಆತ ಕೇವಲ ಪ್ರೇಮಿ. ತನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವ ಗೆಳೆಯ. ಸಾದಾ ಸೀದಾ ನಮ್ಮಂತೆಯೇ ಇರುವ ಮನುಷ್ಯ. ಆದ್ದರಿಂದ ಆಕೆಗೆ ಕೃಷ್ಣನಲ್ಲಿರುವ ದೈವತ್ವ ಮುಖ್ಯವಾಗುವುದಿಲ್ಲ. ಆತ ಮುಖ್ಯವಾಗುತ್ತಾನೆ. ಆತನೊಳಗಿರುವ ಪ್ರೇಮಿ ಮುಖ್ಯವಾಗುತ್ತಾನೆ. ಅದೇ ಕಾರಣಕ್ಕೆ ಆಕೆಗೆ ಆತನ ಪಿಸುದನಿ ರೋಮಾಂಚನವನ್ನುಂಟು ಮಾಡುತ್ತದೆ. ಆತನಿಲ್ಲದೆ ವಾಸ್ತವ ವಿರಹವಾಗುತ್ತದೆ.

**************************************
ಮಾತೆತ್ತಿದರೆ ರಾಮ ದೈವತ್ವಕ್ಕಿಂತ ಹೆಚ್ಚು ಮಾನವೀಯ ವ್ಯಕ್ತಿತ್ವ ಎನ್ನುತ್ತೇವೆ. ಕೃಷ್ಣನಿಗೆ ಹೆಚ್ಚು ದೈವತ್ವದ ಅಂಶಗಳನ್ನು ಆರೋಪಿಸುತ್ತೇವೆ. ಕಪಟ ನಾಟಕ ಸೂತ್ರಧಾರಿ ಎಂದು ಲೇಬಲ್ ಅಂಟಿಸಿಬಿಡುತ್ತೇವೆ. ರಾಧೆಯ ವಿರಹ ದೊಡ್ಡದು ಎಂದು ಮರುಗುತ್ತೇವೆ, ಕೊಂಡಾಡುತ್ತೇವೆ. ಆದರೆ ರಾಧೆಯನ್ನು ಬಿಟ್ಟು ಮಧುರೆಯ ದಾರಿ ಹಿಡಿದ ಕೃಷ್ಣನ ಒಳಗಿನ ನೋವುಗಳನ್ನು ನಾವೆಂದಾದರೂ ಆಲೋಚಿಸಿದ್ದೇವೆಯೇ? ರಾಧೆಗಾಗಿ ತನ್ನ ಕೊಳಲನ್ನೇನೋ ಬಿಟ್ಟ. ಆತನ ಒಳಗೆ ಹುಟ್ಟಿಕೊಂಡ ರಾಧೆಯ ವಿರಹದ ಕಣ್ಣೀರನ್ನು ಯಾವಾಗ ಒರೆಸಿಕೊಂಡ? ಅದೆಷ್ಟು ನಿಟ್ಟುಸಿರುಗಳಿತ್ತೋ ಎನೋ ಅವನಲ್ಲಿ......ಆ ನೋವುಗಳನ್ನು ಆತ ರಾಮನಂತೆ ಎಲ್ಲೂ ಪ್ರದರ್ಶನಕ್ಕಿಡುವುದಿಲ್ಲ. ಅಥವಾ ಆತನ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ನೋವನ್ನು ಏಕಾಂತದ ಹಾಡನ್ನಾಗಿ ಮಾಡಿಕೊಳ್ಳುತ್ತಾನೆ, ತನಗೆ ಮಾತ್ರ ಕೇಳಿಸಿಕೊಳ್ಳುವಂತೆ. ಪಾಂಡವರಿಗೆ ಬೇಕಾದವನಾಗುತ್ತಾ, ದೇವರಾಗುತ್ತಾ, ಕೌರವರಲ್ಲಿ ಅಸಹನೆ, ಭಯ ಎರಡನ್ನೂ ಹುಟ್ಟಿಸುತ್ತಾ ತನ್ನ ಖಾಸಗಿ ಮಾತುಗಳನ್ನು, ಮೌನವನ್ನು ಪ್ರೇಮಿಯಾಗಿ ಆತ ತನ್ನಲ್ಲೇ ಬಚ್ಚಿಡುತ್ತಾನೆ. ಅವನ ಅಕ್ಕ ಪಕ್ಕದಲ್ಲಿರುವ ಬಲರಾಮ, ಪಾಂಡವರು, ಕೌರವರು ಇವರ್ಯಾರಿಗೂ ಅದು ಮುಖ್ಯವಲ್ಲ.....ಕೆಲವೊಂದು ವಿಷಯಗಳು ಜಗತ್ತಿಗೆ ಅಮುಖ್ಯವಾಗುವ ಮೂಲಕವೇ ಏಕಾಂತಕ್ಕೆ ಹತ್ತಿರವಾಗುತ್ತವೆ ಎನ್ನುವುದರಲ್ಲಿ ಕೃಷ್ಣನ ವಿರಹದ ಪ್ರಕ್ರಿಯೆ ಇದೆ.

ಕೃಷ್ಣನೀಗ ಹೋಗಲೇಬೇಕಿದೆ. ಕುರುಕ್ಷೇತ್ರ ಯುದ್ಧಕ್ಕೊಂದು ವೇದಿಕೆ ಸಿದ್ಧ ಮಾಡಬೇಕಿದೆ. ಆತನಿಗೆ ಗೊತ್ತು. ಕೊಳಲು ಜೊತೆಗಿದ್ದರೆ ನೆನಪುಗಳ ಮೆರವಣಿಗೆ ಒತ್ತರಿಸಿಕೊಂಡು ಬರುತ್ತದೆ. ರಾಧೆಯೊಳಗೆ ಕಳೆದು ಹೋಗುತ್ತೇನೆ. ಅದಕ್ಕೇ ಆತ "ಹೊಳಲಿಗೆ ಕೊಳಲಿದು ತರವಲ್ಲ/ ಮಧುರೆಗೆ ಸವಿ ಸಲ್ಲ" ಎನ್ನುತ್ತಾ ತಾನು ಬಿಸುಟಿದ ವೃಂದಾವನದೊಳಗಿರುವ ಕೊಳಲನ್ನು ದಿಟ್ಟಿಸುತ್ತಾ ದೂರವಾಗುತ್ತಾನೆ."ಪೋಗದಿರಯ್ಯ ಪೋಗದಿರೈ ಮಾರಸುಂದರ/ ಗಿರಿಧರ ನೀ ಪೋಗದಿರಯ್ಯ" ಎನ್ನುವ ಗೋಪಿಕೆಯರ ವಿನಂತಿ, ಬಿನ್ನಹ ಎಲ್ಲವೂ ಅಕ್ರೂರ, ಬಲರಾಮರ ಜೊತೆಗೆ ಹೊರಟವನಿಗೆ ಕೇಳದೇ ಹೋಯಿತೇಕೇ? ಅಥವಾ ಕೇಳಿಯೂ ಕೇಳಿಸದಂತೆ ನಟಿಸಿದನೇ ಆತ. "ಪೋಗದಿರಯ್ಯಾ" ಎನ್ನುವ ಮಾತು ರಾಧೆಯ ಬಾಯಿಂದ ಹೊರಬಂದಿದ್ದರೆ ಕೃಷ್ಣ ಗೋಕುಲದಿಂದ ನಿರ್ಗಮಿಸದೇ ಉಳಿಯುತ್ತಿದ್ದನೇ? ಪಾಂಚಜನ್ಯ ಹಿಡಿಯುವ ಪ್ರಸಂಗ ಬರುತ್ತಿರಲಿಲ್ಲವೇ? ಅರ್ಜುನನಿಗೆ ವಿಶ್ವರೂಪ ದರ್ಶನದ ಅವಕಾಶ, ಮಾರ್ಗದರ್ಶನ ದಕ್ಕದೇ ಹೋಗುತ್ತಿತ್ತೇನೋ.

"ಎನ್ನೀ ಕೊಳಲಿದು ಕಾಡಿನ ಬಿದಿರು/ ಈ ಹುಲುಕಡ್ಡಿಗೆ ಎನಿತೋ ಚದುರು!" ಎಂದು ಪ್ರೀತಿಯಿಂದ ಪ್ರತೀ ಬಾರಿ ಕೊಳಲಿನ ಮೈದಡವಿ ಹರ್ಷಗೊಂಡಿದ್ದ ಕೃಷ್ಣನಿಗೇ ಸದ್ಯಕ್ಕೆ ಕೊಳಲು ಬೇಡ. ಕೊಳಲು ಹುಟ್ಟಿಸುವ ನೆನಪುಗಳು ಬೇಡ. ನೆನಪುಗಳ ಮೂಲಕ ತೆರೆದುಕೊಳ್ಳುವ ಬೃಂದಾವನವೂ ಬೇಡ. ಹಾಗಿದ್ದರೆ ಕೃಷ್ಣನಿಗೆ ರಾಧೆಯ ನೆನಪೂ ಬೇಡವಾಯಿತೇ?

"ಪೋ ರಾಧೆ ಬೇಗ ಪೋ ರಾಧೆ" ಎಂದು ಸಖಿಯರು ಅವಸರಿಸಿದರೂ ರಾಧೆಗೆ ಬಿಟ್ಟು ಹೋದ ಸಖನ ಬೆನ್ನತ್ತುವುದು ಬೇಕಿಲ್ಲ. ಆತನ ಪಯಣ ನಿಲ್ಲಿಸಿ ಗೋಗರೆದು ಕರೆ ತರಬೇಕೆನ್ನುವ ಬಯಕೆಯಿಲ್ಲ. " ಹಾ ತೊರೆದನೇ-ಕೊಳಲ ತೊರೆದನೇ" ಎನ್ನುವಲ್ಲಿ ಆಕೆಗೆ ಕೃಷ್ಣ ತನ್ನ ಸರ್ವಸ್ವವೇ ಆದ ಕೊಳಲನ್ನೂ, ತನ್ನನ್ನೂ ಬಿಟ್ಟುಹೋದ ದುಃಖವಿದೆ. ಅದರಿಂದ ಹೊರ ಹೊಮ್ಮದ ತನ್ನ-ಆತನ ಪ್ರೇಮದ ಉಸಿರಿನ ವೇದನೆಯ ಆತಂಕ ಅರ್ಥವಾದಂತಿದೆ. ಕೃಷ್ಣನಿಲ್ಲದ ರಾಧೆ ಪೂರ್ಣವಲ್ಲ ಎನ್ನುವ ಸತ್ಯ ಕೃಷ್ಣನಿಗೂ ಗೊತ್ತಿದೆ. ಅದಕ್ಕವನು ಕೊಳಲನ್ನೂ ಬಿಟ್ಟು ನಡೆದಿದ್ದಾನೆ. ಕೊಳಲೇ ಕೃಷ್ಣನಾಗುತ್ತಾ, ಕೃಷ್ಣನ ಜೊತೆ ನಲಿನಲಿದ, ಅಪ್ಪುಗೆಯಲಿ ಪರವಶವಾದ ದಿನಗಳನ್ನು ನೆನಪಿಸುತ್ತಾ ಕೃಷ್ಣನಂತೆಯೇ ರಾಧೆಯ ಬೊಗಸೆ ತುಂಬಿಕೊಳ್ಳುತ್ತದೆ. ರಾಧೆಯನ್ನೂ, ಕೊಳಲನ್ನೂ ಬಿಟ್ಟು ನಡೆದಿರುವುದರಿಂದ ಕೃಷ್ಣನೆಂಬ ನಿಷ್ಕಲ್ಮಶ ಪ್ರೇಮಿಯೂ ಒಂಟಿಯಾಗಿದ್ದಾನೆ. ಅಪೂರ್ಣವಾಗಿಯೇ ಉಳಿದುಕೊಳ್ಳುತ್ತಾನೆ. ಹಾಗೆ ಉಳಿದುಕೊಳ್ಳುವುದರಲ್ಲೇ ಆತನಿಗೆ ಹೆಚ್ಚು ಸುಖವಿದ್ದಂತೆ ತೋರುತ್ತದೆ. ಇಲ್ಲಿ ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ಪ್ರೀತಿ ದೊಡ್ಡದೇ ಅಥವಾ ಕೊಳಲನ್ನು ಬಿಟ್ಟು ಹೋಗುವ ಮೂಲಕ ರಾಧೆಗೆ ಸಮಾಧಾನ ಹೇಳಲು ಹೊರಟ ಕೃಷ್ಣನ ಪ್ರೀತಿಯ ಕಾಳಜಿ ಹೆಚ್ಚೇ?

ಆತ ಬಿಟ್ಟು ಹೋದ ಕೊಳಲೊಳಗಿರುವ ಆತನ ಉಸಿರಿನ ಬೆಚ್ಚನೆಯನ್ನು ತುಟಿಯ ಪ್ರಾಣರಸದಿಂದ ಹೀರುತ್ತಾ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ. ಕೊಳಲ ತೊರೆದು ಹೋದ ಎಂದು ಗೊತ್ತಾದ ಮರುಕ್ಷಣದಲ್ಲೇ ಆಕೆಯಲ್ಲಿ ಉಳಿಯುವುದು ಖಚಿತವಾಗಿ ಎರಡು ಪ್ರಶ್ನೆಗಳು

ನೆನೆದನೇ...ಎನ್ನ ನೆನೆದನೇ
ಮರಳನೇ....ಇನ್ನು ಮರಳನೇ

ಈ ಪ್ರಶ್ನೆಗಳಿಗೆ ಎರಡು ರೀತಿಯ ಉತ್ತರಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ...ಅದೆಲ್ಲಕ್ಕಿಂತ ಹೆಚ್ಚಾಗಿ ಮೌನವಾಗಿರುವುದಕ್ಕೂ ಅವಕಾಶವಿದೆ. ಅದಕ್ಕೇ ಇರಬೇಕು ರಾಧೆಗೆ ಸುದೀರ್ಘ ಮೌನವೂ ಪ್ರೀತಿಯಂತಹ ಸಹಜ ಭಾವ ಎಂದೆನಿಸುತ್ತದೆ.

ಯಾಕೆಂದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಅಂತಿಮವಲ್ಲ ಎನ್ನುವುದು ರಾಧೆಗೂ ಗೊತ್ತಿದೆ...!!