ಸಿನಿಮಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿನಿಮಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 2, 2010

ಸಂತೆಯಲಿ ನಿಂತಂತೆ, ಪ್ರೀತಿ ಕತೆಯಲ್ಲೊಂದು ಗೊಂದಲಾಪುರ

(ಸೆಪ್ಟೆಂಬರ್ ತಿಂಗಳ "ರೂಪತಾರಾ"ದ ಸಂವಾದ ವಿಭಾಗದಲ್ಲಿ ಪ್ರಕಟವಾದ ಬರಹ)

ಹೆಸರೇ ಹೇಳುವಂತೆ ಇದು ಕೃಷ್ಣನ್ ಲವ್ ಸ್ಟೋರಿ..ಒಂದು ಪ್ರೀತಿಯ ಕತೆಗೆ ಬೇಕಾದ ಎಲ್ಲವೂ ಇಲ್ಲಿದೆ. ನಾಯಕಿಯ ಪ್ರೀತಿಯ ಮೋಡಿಗೆ ಒಳಗಾಗುವ ನಾಯಕ, ಬಡತನದಲ್ಲಿದ್ದೂ ಮಹಾತ್ವಾಕಾಂಕ್ಷೆಯ ಮೆಟ್ಟಿಲು ಹತ್ತಲು ರೆಡಿಯಾಗಿ ನಿಂತಿರುವ ಘಾಟಿ ನಾಯಕಿ, ಕುಡುಕ ಅಣ್ಣ, ಪ್ರೀತಿಯ ಅಪ್ಪ ಹೀಗೆ ಎಲ್ಲರಿಗೂ ಅವರದ್ದೇ ಆದ ವಿಸ್ತಾರವಿದೆ, ಮಿತಿಯಿದೆ..ಒಂದು ಪ್ರೇಮಕತೆಯ ಚಿತ್ರದಲ್ಲಿ ಏನೆಲ್ಲಾ ಇರಬಹುದು ಎಂದು ನಾವೆಲ್ಲಾ ನಿರೀಕ್ಷಿಸಬಹುದೋ ಅದೆಲ್ಲಾ ಇದೆ...ಅದಕ್ಕಿಂತ ಹೊರತಾಗಿ ಹದಿಹರೆಯದ ಹುಡುಗರ ಭಾಷೆಯಲ್ಲಿ ಹೇಳಬಹುದಾದ ಫುಲ್ ಫೀಲಿಂಗಿದೆ!....ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನಿರ್ದೇಶಕನೆಂಬ ನಿಜವಾದ ನಾಯಕನಿದ್ದಾನೆ.



ಉತ್ತಮವಾದ ಪ್ರತೀ ದೃಶ್ಯಕ್ಕೂ ಒಂದು ಆರಂಭ, ಮಧ್ಯಂತರ ಹಾಗೂ ಕೊನೆ ಇದ್ದೇ ಇರುತ್ತದೆ. ನಾಯಕ ನಾಯಕಿಯೆದುರು ಪ್ರೀತಿ ನಿವೇದನೆ ಮಾಡುವ  ದೃಶ್ಯವೇ ಇರಲಿ, ಅಥವಾ ನಾಯಕಿ ನಾಯಕನನ್ನು ತಿರಸ್ಕರಿಸುವ ದೃಶ್ಯವೇ ಇರಲಿ, ಮೇಲೆ ಹೇಳಿದ 3 ಹಂತಗಳು ಇದ್ದೇ ಇರುತ್ತವೆ. ಇದೆಲ್ಲಾ ಪರಿಣಾಮಕಾರಿಯಾಗಿದ್ದಾಗ ಮಾತ್ರ ದೃಶ್ಯವೊಂದರ ತೀವ್ರತೆಯನ್ನು, ಆದ್ರತೆಯನ್ನು, ನಲಿವನ್ನು ಕಟ್ಟಿಕೊಡಲು ಸಾಧ್ಯ. ಯೋಗರಾಜ್ ಭಟ್ಟರ ಮುಂಗಾರು ಮಳೆ ಗೆಲ್ಲಲು, ಜನಸಾಮಾನ್ಯನಲ್ಲಿ ನೆಲೆ ನಿಲ್ಲಲು ಚಿತ್ರಕತೆಯಲ್ಲಿ ಬರುವ ಇಂತಹ ಅಂಶಗಳ ಯಶಸ್ವಿ ಅಳವಡಿಕೆಯೇ ಕಾರಣ. ಈ ಸಿನಿಮಾಕ್ಕೆ ಶಶಾಂಕ್ ಆಯ್ದುಕೊಂಡ ಕತೆ ತುಂಬಾ ಸರಳವಾದದ್ದು. ಆದರೆ ಅದನ್ನು ಒಂದು ಚಿತ್ರವಾಗಿ ತೆರೆ ಮೇಲೆ ನಿರೂಪಿಸುವ ರೀತಿಯಿಂದ ಗಮನ ಸೆಳೆಯುತ್ತದೆ. ಚಿತ್ರಕ್ಕಿರುವ ಸಮಸ್ಯೆ ಪ್ರಥಮಾರ್ಧ. ಆರ್ಡಿನರಿ ಅಂತನ್ನಿಸುವ ವಿಷಯವನ್ನು ಆಪ್ತವಾಗಿ ಚಿತ್ರಿಸುವಂತೆ ಮಾಡುವ ಶಕ್ತಿ ಪ್ರತೀ ದೃಶ್ಯಕ್ಕಿದೆ. ಆದರೆ ಕೃಷ್ಣನ ಲವ್ ಸ್ಟೋರಿಯ ಪ್ರಥಮಾರ್ಧ ದೃಶ್ಯದ ಮಿಸ್ ಮ್ಯಾನೇಜ್ಮೆಂಟಿನಲ್ಲೇ ಬೋರ್ ಹೊಡೆಸುತ್ತದೆ. ಚಿತ್ರ ಶುರುವಾಗುವಾಗಲೇ ಚಿತ್ರಕತೆಗೆ ಧಾವಂತವಿದೆ. ಎಲ್ಲಾ ಪಾತ್ರಗಳನ್ನು ಆದಷ್ಟು ಬೇಗ ಎಸ್ಟಾಬ್ಲಿಶ್ ಮಾಡಿಬಿಡಬೇಕೆಂಬ ಅವಸರ ಯಾಕೋ ನೋಡುಗನಲ್ಲಿ ಅಸಹನೆ ಹೆಚ್ಚಿಸುತ್ತದೆ. ಇಂತಹ ಧಾವಂತದಿಂದಾಗಿಯೇ ಅರ್ಧಕ್ಕೇ ಕಟ್ಟಾಗುವ ದೃಶ್ಯದ ಫ್ಲೋ ಲೆವೆಲ್ನಿಂದ ಕಿರಿಕಿರಿ ಮತ್ತಷ್ಟು ಹೆಚ್ಚುತ್ತದೆ. ಸಂಕಲನದ ಸಂದರ್ಭದಲ್ಲಿ ಕತ್ತರಿಯಾಡಿಸುವಾಗ ಎಡವಟ್ಟಾಗಿದೆಯಾ ಎನ್ನುವ ಅನುಮಾನ ಬರುತ್ತದೆ. ಗಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ದೃಶ್ಯಗಳಲ್ಲಿ ಇವೆಲ್ಲಾ ಎದ್ದು ಕಾಣುತ್ತದೆ.  

ಇಂಟರ್ವಲ್ನ ನಂತರದ ದ್ವಿತೀಯಾರ್ಥ ಸರಾಗವಾಗಿದೆ. ಕತೆಯ ಜೀವಾಳವಿರುವುದು ದ್ವಿತೀಯಾರ್ಧವನ್ನು ಶಶಾಂಕ್ ನಿಭಾಯಿಸುವ ರೀತಿಯಲ್ಲಿ. ಒಂದು ವಾದವಾಗುವ ಎಲ್ಲಾ ಅಪಾಯಗಳಿದ್ದ ದೃಷ್ಟಿಕೋನವನ್ನು ದೃಶ್ಯವಾಗಿ ಸೆರೆಹಿಡಿಯುವಲ್ಲಿ ಅವರ ಜಾಣ್ಮೆ ಕೆಲಸ ಮಾಡಿದೆ. ನಾಯಕಿಯ ದೃಷ್ಟಿಕೋನದಲ್ಲಿ ಕತೆಯನ್ನು ಬೆಳೆಸುವ, ನೋಡುವ ಶಶಾಂಕ್ ಶೈಲಿ ಕನ್ನಡಕ್ಕೆ ಹೊಸತೇನೂ ಅಲ್ಲದಿದ್ದರೂ ಇವತ್ತಿನ ಕಮರ್ಶಿಯಲ್ ಅಂಶಗಳ ನಡುವೆ ಅದನ್ನವರು ನಿಭಾಯಿಸುವ ರೀತಿ ಖುಷಿ ಕೊಡುತ್ತದೆ. ಇಡೀ ಚಿತ್ರವನ್ನು ಸಹ್ಯಗೊಳಿಸಿರುವುದು ರಾಧಿಕಾ ಪಂಡಿತ್ ಅಭಿನಯ..ದ್ವಿತೀಯಾರ್ಧದಲ್ಲಿ ಆಕೆ ಇಡೀ ಚಿತ್ರವನ್ನು ಆವರಿಸಿಕೊಂಡು ಬಿಡುತ್ತಾಳೆ.. ಗೀತಾಳ ಸಿಟ್ಟು, ಅಸಹಾಯಕತೆ, ಪಾಪಪ್ರಜ್ಞೆ ಎಲ್ಲವನ್ನೂ ಶಶಾಂಕ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ...ಆಕೆಯ ಪ್ರತೀ ನಡಿಗೆ, ಚಲನೆ, ನೋಟ, ಮಾತಿನ ಧಾಟಿ ಎಲ್ಲದರಲ್ಲೂ ಪಾತ್ರದ ಬೇಗುದಿಯಿದೆ....ನಾಯಕನನ್ನು ಬಿಟ್ಟು ಹೋಗಿ ಆಕೆ ವಾಪಾಸ್ ಬಂದಾಗ ಸೃಷ್ಟಿಯಾಗುವ ಮುಜುಗರ, ಅವಮಾನ, ಹಿಂಸೆ, ಅಕ್ಕರೆ, ಅಸಹಾಯಕತೆಯ ವಾತಾವರಣ ಎಲ್ಲವನ್ನೂ ವ್ಯವಸ್ಥಿತವಾಗೇ ನಿಭಾಯಿಸಿದ್ದಾರೆ.

ನಾಯಕಿಯ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಕಮರ್ಶಿಯಲ್ ಸೂಕ್ಷ್ಮಗಳನ್ನೊಳಗೊಂಡು ಕಟ್ಟಿಕೊಡುವ ಶಶಾಂಕ್ ಇತರೇ ಪಾತ್ರಗಳ ಇರುವಿಕೆಯನ್ನು ಪೇಲವ ಮಾಡಿಬಿಡುತ್ತಾರೆ ಕೆಲವೊಮ್ಮೆ...ಚಿಕ್ಕಪುಟ್ಟ ಪಾತ್ರಗಳನ್ನು ಮೇಲ್ಮೈಯಲ್ಲೇ ಅವಸರದಲ್ಲಿ ಚಿತ್ರಿಸಿ ಓಡುತ್ತಾರೆ. ಬೈಕನ್ನು ಸಿನಿಮಾದ ಚಿತ್ರಕತೆಯ ಟೂಲ್ ಆಗಿ ಬಳಸಿಕೊಂಡಂತೆ ನಾಯಕನ ಗೆಳೆಯರನ್ನು ನಿರೂಪಿಸುವಲ್ಲಿ ಇನ್ನಷ್ಟು ತಯಾರಿಗಳು ಬೇಕಿತ್ತು. ಚಿಕ್ಕ ಪಾತ್ರಕ್ಕೂ ನಾಯಕನಂತೆಯೇ ಸ್ವತಂತ್ರ ವ್ಯಕ್ತಿತ್ವವಿದೆ ಎನ್ನುತ್ತಾ ಪಾತ್ರಗಳನ್ನು ಕಟ್ಟುತ್ತಾ ಹೋದಾಗಲೇ ಚಿತ್ರಕತೆ, ಸಿನಿಮಾ ಇನ್ನಷ್ಟು ಗಟ್ಟಿಯಾಗೋದು...

ಕೃಷ್ಣನ್ ಲವ್ ಸ್ಟೋರಿಯ ಕಾಮಿಡಿ ದೃಶ್ಯಗಳಲ್ಲಿ ಲವಲವಿಕೆ ಕಾಣವುದಿಲ್ಲ. ಕಾಸಿಲ್ಲದ ನಾಯಕನ ಎದುರು ಪಿಜ್ಜಾ ಕಾರ್ನರ್, ಕಾಫಿ ಡೇ ಇದೆ. ನಾಯಕನ ಪರಿಸ್ಥಿತಿಯನ್ನು ನೋಡಿ ವೆಂಕಟ್ರಮಣಾ ಗೋವಿಂದಾ, ಗೋವಿಂದಾ ಎನ್ನಲು ಶರಣ್ ಇದ್ದಾರಷ್ಟೇ....ಮೊಗ್ಗಿನ ಮನಸಿನಲ್ಲಿ ಶರಣ್ನನ್ನು ನಾಯಕರು ಹೇಳುವ ಕತೆಯ ಭಾಗವಾಗಿ ಮಾಡುವ ಮೂಲಕ ಹಾಸ್ಯವನ್ನು ನಿರೂಪಿಸುವ ತಂತ್ರವೇ ಆಕರ್ಷಕವಾಗಿ ಕಂಡಿತ್ತು ಪ್ರೇಕ್ಷಕನಿಗೆ. ಹಾಗಿದ್ದಾಗ ಮಾತ್ರ ಸಾಮಾನ್ಯವಾದ ಕಾಮಿಡಿ ಟ್ರ್ಯಾಕ್ ಕೂಡಾ ನೋಡಿಸಿಕೊಂಡು ಹೋಗುತ್ತದೆ. ನಗೆಯುಕ್ಕಿಸಲು ಒದ್ದಾಡಬೇಕಾದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ ಎನ್ನುವುದನ್ನು ನಿರ್ದೇಶಕ ಅರಿಯದೇ ಹೋದರೆ ಪ್ರೇಕ್ಷಕನೂ ವೆಂಕಟ್ರಮಣಾ ಗೋವಿಂದ ಅನ್ನುತ್ತಾನಷ್ಟೇ..

ಪೋಷಕ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಶಶಾಂಕ್ರಲ್ಲೊಂದು ಮೋಡಿಯಿದೆ. ಅಪ್ಪನ ಸಂವೇದನೆಯನ್ನು ತುಂಬಾ ಆಸ್ಥೆಯಿಂದ ಕಟ್ಟಿಕೊಡುತ್ತಾರವರು. ಮೊಗ್ಗಿನ ಮನಸ್ಸಿನ ನಂತರ ಕೃಷ್ಣನ್ ಲವ್ ಸ್ಟೋರಿಯಲ್ಲೂ ಇದು ಪ್ರೂವ್ ಆಗಿದೆ. ಪ್ರೀತಿಯಿಂದ ಮೋಸ ಹೋದ ನಾಯಕ ಪ್ರೀತಿಯ ಉರಿಕೆಂಡವನ್ನು ಮನಸ್ಸಲ್ಲಿಟ್ಟುಕೊಂಡು ನರಳುತ್ತಾ, ಕೊನೆಗೆ ಬಾರಿಗೆ ಹೋಗಿ ಕುಡಿಯುತ್ತಾ ಕೂತಿರಬೇಕಾದರೆ ಎದುರುಗಡೆ ಆತನ ಅಪ್ಪನೂ ಕೂತಿರುವ ದೃಶ್ಯವೇ ಸಾಕು ಸಾಮಾನ್ಯನನ್ನು ತಟ್ಟಿಬಿಡುತ್ತದೆ. ಇತರ ಪಾತ್ರಗಳ ಬಗ್ಗೆ ಅಂತಹ ಆಸ್ಥೆ ಮುಂದಿನ ಚಿತ್ರಗಳಲ್ಲಿ ಇನ್ನಷ್ಟು ಹೆಚ್ಚಾದರೆ ಒಳ್ಳೇದು.

ಇಡೀ ಸಿನಿಮಾದಲ್ಲಿ ಭಯಂಕರ ಕಿರಿಕಿರಿ ಉಂಟುಮಾಡುವುದು ಅಜೇಯ್ ರಾವ್ ಅಭಿನಯ...ಅಸಹಾಯಕ ಸನ್ನಿವೇಶಗಳಲ್ಲಿ ಅವರ ಅಸಹಾಯಕತೆಯೇ ಎದ್ದು ಕಾಣುತ್ತದೆ!...ನಾಯಕನ ಬೇಗುದಿಯನ್ನು, ಚಿರ ವ್ಯಾಮೋಹಿಯಾಗಿ ಬದುಕುವ ಕ್ಷಣಗಳನ್ನು ಜೀವಂತವಾಗಿ ಹಿಡಿದಿಡಲು ಅವರಿಗೆ ಸಾಧ್ಯವಾಗಿಲ್ಲ...ಮತ್ತೊಬ್ಬ ನಟ ಪ್ರದೀಪ್ ಎದುರು ನಟಿಸುವಾಗಲಂತೂ ಇದು ಕಣ್ಣೆದುರು ಕನ್ನಡಿ!.. ಅಜೇಯ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕು...ದ್ವಿತೀಯಾರ್ಧವನ್ನು ರಾಧಿಕಾ ಪಂಡಿತ್ ಆವರಿಸಿಕೊಂಡು ಬಿಡುತ್ತಾರಾದ್ದರಿಂದ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ಸಿಕ್ಕಿದೆ. ಅಚ್ಯುತ್ರಾವ್, ಉಮಾಶ್ರಿ ಎಂದಿನಂತೆ ವಂಡರ್ಫುಲ್. ಸ್ವಯಂವರ ಮಂಜು ಅಣ್ಣನಾಗಿ, ಸಿಡುಕನಾಗಿ, ಕುಡುಕನಾಗಿ ಅಭಿನಯದಲ್ಲಿ ಗುರುತಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವುದು ಪ್ರದೀಪ್. ಇತ್ತೀಚೆಗಷ್ಟೇ ಸ್ಟಿಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದ "ನವಿಲಾದವರು" ಎನ್ನುವ ಸಿನಿಮಾದಲ್ಲಿ ಆಪ್ತವಾಗಿ ಅಭಿನಯಿಸಿದ್ದ ಪ್ರದೀಪ್, ಕೃಷ್ಣನ್ ಲವ್ ಸ್ಟೋರಿಯ ಮೂಲಕ ಮತ್ತೊಮ್ಮೆ ಭವಿಷ್ಯದ ಭರವಸೆಯ ಸೋಲೋ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ..... 

ಹಾಡುಗಳ ಚಿತ್ರೀಕರಣ, ವಿನ್ಯಾಸ ಎಲ್ಲವೂ ಮುದ ನೀಡುತ್ತದೆ... ಜಯಂತ್ ಕಾಯ್ಕಿಣಿ ಬರೆದ ಸಂತೆಯಲ್ಲಿ ನಿಂತರೂನೂ ನೋಡು ನೀನು ನನ್ನನ್ನೇ ಪ್ರೇಮೋತ್ಸವಕ್ಕೆ ನಂದಾ ದೀಪವಾದರೆ, ಮೋಸ ಮಾಡಲೆಂದು ಸದ್ಯದ ವಿರಹ ಗೀತೆ. ನೀನಾಡದ ಮಾತು ನನ್ನಲಿದೆ ಮಾಧುರ್ಯಕ್ಕೆ ಇಷ್ಟವಾಗುತ್ತದೆ. ಹಚ್ಚಿಕೊಂಡಷ್ಟು ಪ್ರೇಮಿಗಳಿಗೆ ಬದುಕು ಕಷ್ಟವಾಗುತ್ತದೆ!.. ಮುಸ್ಸಂಜೆ ಮಾತಿನ ನಂತರ ವಿ.ಶ್ರೀಧರ್ ಕೃಷ್ಣನ್ ಲವ್ ಸ್ಟೋರಿಯಲ್ಲಿ ಸಂಭ್ರಮದ ರಾಗವನ್ನು ಸರಾಗವಾಗಿಸಿದ್ದಾರೆ. ಕೃಷ್ಣರ ಕ್ಯಾಮರಾ ಕೆಲಸ ಮತ್ತೆ ಸೆಳೆಯುತ್ತದೆ..ಸನ್ನಿವೇಶಗಳನ್ನು ಬೆಳಕು, ನೆರಳಿನ ನೆರಳಲ್ಲಿ ಕಟ್ಟಿಕೊಡುವಾಗಿನ ಕುಸುರಿ ಚಿತ್ರದ ಫ್ರೇಮುಗಳತ್ತ ಪ್ರೇಕ್ಷಕನಿಗೆ ಲವ್ ಅಟ್ ಫಸ್ಟ್ ಸೈಟ್!

ಕೃಷ್ಣನ್ ಲವ್ ಸ್ಟೋರಿ ಒಮ್ಮೆ ನೋಡೋದಿಕ್ಕೆ ಓಕೆ. ಮತ್ತೊಮ್ಮೆಗೂ ಓಕೆ ಅಂತ್ಹೇಳಿ ಪ್ರೇಕ್ಷಕ ಹೋಗುತ್ತಾನಾದರೆ ಅದಕ್ಕೆ ಕಾರಣ ರಾಧಿಕಾ ಪಂಡಿತ್, ಶಶಾಂಕ್ ಮತ್ತು ಹಾಡುಗಳು!!!!

ಸೋಮವಾರ, ಏಪ್ರಿಲ್ 26, 2010

ಬಾಬಾ ರಾಂಚೋಡದಾಸನ ದೇಹ, ಡೆಡ್ ಪೋಯೆಟ್ಸ್ ಸೊಸೈಟಿಯ ಜೀವ, ಲೆಕ್ಕವಿಲ್ಲದಷ್ಟು ರೂಪಾಂತರ



ಚಿತ್ರಕತೆಯ ಬರವಣಿಗೆ ದೃಶ್ಯ ಲೆಕ್ಕಾಚಾರದ ಬರವಣಿಗೆಯೇ. ಅಲ್ಲಿ ಬರಹಗಾರನಿಗೆ ಪ್ರತೀ ಪಾತ್ರದ ಪೂರ್ವಾಪರಗಳು ಗೊತ್ತಿರಬೇಕು. ಆ ಪಾತ್ರದ ಬಿಡಿ ಬಿಡಿ ವಿವರಗಳು ಕೂಡಾ ಸ್ಪಷ್ಟವಿರಬೇಕು. ಆತನೋ/ಆಕೆಯೋ ಮೊದಲ ದಿನ ಶಾಲೆಗೆ ಹೋಗಿದ್ದಾಗ ಇದ್ದಿದ್ದ ದುಗುಡ, ಹಿಂಜರಿಕೆ, ಮೊದಲ ಬರ್ತ್ ಡೇ ಸಂಭ್ರಮ ಎಲ್ಲವೂ ನೆನಪಿರಬೇಕು.ಅದನ್ನಾತ ಚಿತ್ರಕತೆಯಲ್ಲಿ ಸೇರಿಸದೇ ಹೋಗಬಹುದು. ಆದರೂ ತನ್ನ ಪಾತ್ರಗಳ ಪ್ರತಿ ಹೆಜ್ಜೆಯೂ ಸ್ಪಷ್ಟವಿರಬೇಕು. ಹಾಗಿದ್ದಾಗ ಮಾತ್ರ ಪಾತ್ರ, ಸನ್ನಿವೇಶ ಹೆಚ್ಚು ಪರಿಣಾಮಕಾರಿಯಾಗಿ ಬರೆಯಲ್ಪಡುತ್ತದೆ.

ಚಿತ್ರಕತೆಯೊಂದನ್ನು ಬರೆಯುವ ಹೊತ್ತಿಗೆ ಬರಹಗಾರನನ್ನು ಪ್ರಭಾವಿಸುವ ಅಂಶಗಳು ಹಲವಾರು. ಆತ ನೋಡಿದ ವಿಶ್ವದ ಯಾವುದೋ ಭಾಷೆಯ ಚಲನಚಿತ್ರ, ಓದಿದ ಕಾದಂಬರಿಯ ಪಾತ್ರವೊಂದರ ಗುಣ, ಅವಗುಣ, ಸ್ನೇಹಿತನ ಮದುವೆಯಲ್ಲಿ ಕಂಡ ದಬಾಯಿಸುವ ಹುಡುಗಿ ಕೂಡಾ ಪಾತ್ರವೊಂದನ್ನು, ಸನ್ನಿವೇಶವನ್ನು ಸೃಷ್ಟಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಎಲ್ಲಾ ಅಂಶಗಳು ಚಿತ್ರಕತೆಯೊಳಗೆ ಸೇರಿಕೊಳ್ಳುತ್ತಾ ಹೋಗುತ್ತದೆ. ಅದೇ ಪಾತ್ರವನ್ನು, ಸನ್ನಿವೇಶವನ್ನು ಬೆಳೆಸಬಹುದು. ಆ ಮೂಲಕ ಪಾತ್ರ, ಸನ್ನಿವೇಶ ಮತ್ತಷ್ಟು ಗಟ್ಟಿಯಾಗುವ ಸಂದರ್ಭಗಳು ಜಾಸ್ತಿ. ಇಂತಹ ಗಮನಿಸುವಿಕೆ ಹಾಗೂ ಅಳವಡಿಸುವಿಕೆ ಚಿತ್ರಕತೆಯೊಂದನ್ನು ಬರೆಯುವ ಸಂದರ್ಭದಲ್ಲಿ ಬರಹಗಾರನಿಗೆ ಹೆಚ್ಚು ಸಹಕಾರಿ. ಅಂತಹದೊಂದು ಸಾಧ್ಯತೆಯನ್ನು ಚಿತ್ರಕತೆಯಲ್ಲಿ ಮಿಳಿತಗೊಳಿಸಲು ಬರಹಗಾರ ಪ್ರತೀ ಬಾರಿ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ತರಹದ ರೂಪಾಂತರ ನಾವು ನೋಡುವ ಹೆಚ್ಚಿನ ಸಿನಿಮಾಗಳ ಚಿತ್ರಕತೆಯಲ್ಲಿ ಕಂಡುಬರುತ್ತದೆ. ಅದೇ ಕಾರಣಕ್ಕೆ ಯೋಗರಾಜ ಭಟ್ಟರ ಮನಸಾರೆಯಲ್ಲಿ "ಶ್ವಶಾಂಕ್ ರಿಡಂಪ್ಶನ್"ನ ರೆಡ್ ಮತ್ತು ಬ್ರೂಕ್ ಛಾಯೆ ಕಾಣುವುದು. ಆದ್ದರಿಂದಲೇ ಗಾಳಿಪಟದಲ್ಲಿ ಡೈಸಿ ಬೋಪಣ್ಣನ ಪಾತ್ರವನ್ನು ನೋಡಿದಾಗ ಶೋಲೆಯ ಜಯಾ ಬಾಧುರಿ ಪದೇ ಪದೇ ನೆನಪಾಗುವುದು. ಮಜಾ ಎಂದರೆ ಸಿನಿಮಾ ನೋಡುತ್ತಿರುವಾಗ ಕೆಲವೊಮ್ಮೆ ಇದು ನಮ್ಮ ಗಮನಕ್ಕೇ ಬರುವುದಿಲ್ಲ. ಇಲ್ಲೇ ಚಿತ್ರಕತೆಯನ್ನು ಬರೆದ ಬರಹಗಾರನ ಯಶಸ್ಸಿರುವುದು. ಯಾಕೆಂದರೆ ಆತ ಅಂತಹದೊಂದು ರೂಪಾಂತರವನ್ನು ಅಥವಾ ಹೊಂದಾಣಿಕೆಯನ್ನು ನಾಜೂಕಾಗಿ ಭಿನ್ನ ಸನ್ನಿವೇಶ, ವಾತಾವರಣದಲ್ಲಿ ಕೂರಿಸಿರುತ್ತಾನೆ. 


ಇತ್ತೀಚೆಗೆ ಬಂದ "ಥ್ರೀ ಈಡಿಯೇಟ್ಸ್" ಸಿನಿಮಾವನ್ನೇ ಬೇಕಿದ್ದರೆ ತೆಗೆದುಕೊಳ್ಳಿ. ಬಾಬಾ ರಾಂಚೋಡ್ ದಾಸ್  ಮೋಡಿಗೆ ಇಡೀ ದೇಶವೇ ಜಹಾಪನಾ ತುಸ್ಸೀ ಗ್ರೇಟ್ ಹೋ ಎಂದು ಸಲಾಮು ಹೊಡೆದದ್ದೇ ಹೊಡೆದದ್ದು. ಎಲ್ಲರಿಗೂ ಗೊತ್ತಿರುವಂತೆ ಥ್ರೀ ಈಡಿಯೆಟ್ಸ್ ಚೇತನ್ ಭಗತ್ ಬರೆದ "ಫೈವ್ ಪಾಯಿಂಟ್ ಸಮ್ವನ್" ಇಂಗ್ಲೀಷ್ ಕಾದಂಬರಿಯನ್ನು ಬಳಸಿಕೊಂಡಿದೆ. ಆದರೆ ನಿರ್ದೇಶಕ  ರಾಜ್ ಕುಮಾರ್ ಹಿರಾನಿ ಚಲನಚಿತ್ರದ ದೃಶ್ಯ ಅನುಕೂಲಕ್ಕೆ ತಕ್ಕ ಹಾಗೆ ಮೂಲ ಕಾದಂಬರಿಯ ಕಥಾ ಹಂದರದಲ್ಲಿ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಹೊಸ ಪಾತ್ರಗಳು ಬಂದಿವೆ. ಸನ್ನಿವೇಶಗಳು ಬದಲಾಗಿವೆ. ಮತ್ತೊಂದಷ್ಟು ಸೇರಿಕೊಂಡಿವೆ. ಆದರೂ ಬಾಬಾ ರಾಂಚೋಡ್ ದಾಸನನ್ನು  ನೋಡುತ್ತಿದ್ದ ಹಾಗೆ, "ಸಕ್ಸಸ್ ನ  ಹಿಂದೆ ಓಡಬೇಡಿ. ಎಕ್ಸಲೆನ್ಸ್ ಮುಖ್ಯ" ಎನ್ನುವಾಗಲೆಲ್ಲಾ ಹಾಗೂ ಅದನ್ನು ಸಾಧಿಸಲು ಆತ ಹೊರಡುವ ಸಂದರ್ಭಗಳನ್ನು ನೋಡುತ್ತಿದ್ದಂತೆ 1989ರಲ್ಲಿ ತೆರೆಕಂಡ ಪೀಟರ್ ವೇರ್ ನಿರ್ದೇಶನ ದ "ಡೆಡ್ ಪೋಯೆಟ್ಸ್ ಸೊಸೈಟಿ"ಯ ಇಂಗ್ಲೀಷ್ ಸಾಹಿತ್ಯದ ಮೇಷ್ಟ್ರು ಜಾನ್ ಕೀಟಿಂಗ್  ನೆನಪಾಗುತ್ತಾನೆ.  ಆತನೂ ಹಾಗೆಯೇ. ಕವಿತೆ ಬದುಕನ್ನು ಫ್ರಫುಲ್ಲವಾಗಿಡುತ್ತದೆ, ಎಲ್ಲಾ ನೋವುಗಳಿಗೆ ಬೊಗಸೆ ಹಿಡಿಯುತ್ತದೆ ಎಂದು ನಂಬಿಕೊಂಡವ. ಕವಿತೆಯನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಮಾಡಲು ಪ್ರಯತ್ನ ಪಡುವವ. ಅದೇ ಕಾರಣಕ್ಕೆ ಆತ ಫುಟ್ಬಾಲಿನ ಜೊತೆ, ಶಾಲೆಯ ಹೊರಾಂಗಣದಲ್ಲಿ ಸ್ವಚ್ಛಂದವಾಗಿ ಹುಡುಗರನ್ನು ಬಿಟ್ಟು ಕವಿತೆಯನ್ನು ಆಸ್ವಾದಿಸುವುದನ್ನು ಕಲಿಸುತ್ತಾನೆ. "ಡೆಡ್ ಪೋಯೆಟ್ಸ್ ಸೊಸೈಟಿ"ಯಲ್ಲಿ ಬರುವ ಈ ಇಂಗ್ಲೀಷ್ ಮೇಷ್ಟ್ರ ರೂಪಾಂತರವೇ ನಮ್ಮ ರಾಂಚೋಡ್ದಾಸ್(ಆಮೀರ್ ಖಾನ್). ರಾಂಚೋ ಪಾತ್ರದ ನಡೆ-ನಡವಳಿಕೆ "ಫೈವ್ ಪಾಯಿಂಟ್ ಸಮ್ವನ್" ಕಾದಂಬರಿಯಲ್ಲಿರುವ ರೆಯಾನ್ನಂತೆಯೇ ಇದ್ದರೂ ಸಹ, ಆತ ಬದುಕನ್ನು, ಎದುರಾಗುವ ಪ್ರತೀ ಕೆಲಸವನ್ನು ಆಸ್ವಾದಿಸುವುದನ್ನು ಕಲಿಸಲು ಬಳಸಿಕೊಳ್ಳುವ ಫಿಲಾಸಫಿಯ ಹಿಂದಿರುವುದು ಇಂಗ್ಲೀಷ್ ಮೇಷ್ಟ್ರು ಕೀಟಿಂಗೇ. ಮೂಲ ಕಾದಂಬರಿಯಲ್ಲಿ ಬರುವ ರೆಯಾನ್(ಸಿನಿಮಾದಲ್ಲಿ ರಾಂಚೋ) ಪಾತ್ರಕ್ಕೊಂದು ಸರಿಯಾದ ಪಾತ್ರ ಚೌಕಟ್ಟೇ ಇಲ್ಲ. ಜನಪ್ರೀಯ ಇಂಗ್ಲೀಷ್ ಸಾಹಿತ್ಯದ ಮೂಲಕ ತಲುಪಬೇಕಿರುವ ಮೇಲ್ಮಧ್ಯಮ ವರ್ಗದ ಇಷ್ಟಾನುಸಾರದ ಟೈಂಪಾಸ್ ರೀಡಿಂಗಿಗೆ ಬೇಕಾದಷ್ಟೇ ಉದ್ದೇಶಗಳನ್ನಿಟ್ಟುಕೊಂಡು ಚೇತನ್ ಭಗತ್ ಇಡೀ ಕಾದಂಬರಿಯನ್ನು ಬರೆದಂತೆ ಅನ್ನಿಸುತ್ತದೆ. ಹಾಗಾಗಿ ರಾಂಚೋಗೆ ಒಂದು ಬಲವಾದ "ಮುಖ್ಯ ಪಾತ್ರಕ್ಕಿರುವ ಗುರಿ"ಯನ್ನು(ಚಿತ್ರಕತೆಯ ಬರವಣಿಗೆಯಲ್ಲಿ ಬಹುಮುಖ್ಯ ಅಂಶ) ನೀಡುವಲ್ಲಿ ಕೀಟಿಂಗ್ ಪಾತ್ರ ರಾಜ್ ಕುಮಾರ್ ಹಿರಾನಿ ಮತ್ತವರ ತಂಡಕ್ಕೆ ಸಹಾಯಕ್ಕೆ ಬಂದಿದೆ. ಗಮನಿಸಬೇಕಾದ ಇನ್ನೊಂದು ವಿಷಯವಿದೆ. ರಾಂಚೋನಷ್ಟೇ ಯಂತ್ರಗಳ ಮೇಲೆ ಹುಚ್ಚು ಪ್ರೀತಿಯನ್ನಿಟ್ಟುಕೊಂಡಿರುವ ಜೋಯ್ ಲೋಬೋ, ಡೆಡ್ ಪೋಯೆಟ್ ಸೊಸೈಟಿಯ ನೀಲ್ ಪೆರ್ರಿಯ ಪಾತ್ರದಂತೆ ಅಸಹಾಯನಾಗಿ, ಅವಸರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಜಾಯ್ ಲೋಬೋ ಮತ್ತು ನೀಲ್ ಪೆರ್ರಿಯ ನಡೆ-ನಡವಳಿಕೆ ಒಂದೇ ರೀತಿಯಾದದ್ದು.


ಇಂತಹ ಅಳವಡಿಕೆಗಳನ್ನು ರಿಮೇಕು ಅಥವಾ ಯಥಾವತ್ತು ನಕಲು ಎಂದು  ನೇರವಾಗಿ ಆಪಾದಿಸಲಾಗುವುದಿಲ್ಲ. ಯಾಕೆಂದರೆ ಮೇಲೆ ಉದಾಹರಿಸಿದ ಎಲ್ಲಾ ಸಿನಿಮಾ ಅಳವಡಿಕೆಗಳು ಒಟ್ಟಾರೆಯಾಗಿ ಚಿತ್ರಕತಾ ಬರಹಗಾರನನ್ನು ಬಹಳಷ್ಟು ಪ್ರಭಾವಿಸಿದ ಸಿನಿಮಾ, ಕಾದಂಬರಿಯ ಯಾವುದೋ ಒಂದು ಪಾತ್ರ ಇವೆಲ್ಲವನ್ನೂ ಮಿಳಿತಗೊಳಿಸಿಕೊಂಡಿವೆ. ಒಟ್ಟು ಸಿನಿಮಾದ ಹೂರಣವನ್ನೋ, ಪಾತ್ರದ ಅಪರಿಮಿತ ಆತ್ಮವಿಶ್ವಾಸವನ್ನೋ ಬಳಸಿಕೊಂಡರೆ ತಪ್ಪಲ್ಲವಲ್ಲ. ಪಾಂಡವರ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ "ಹಬ್ಬ"  ಎನ್ನುವ ಸಿನಿಮಾ ಬಂದದ್ದು ನೆನಪಿದೆ ತಾನೇ. ಅದೇ ರೀತಿ ಪಾಂಚಾಲಿಯ ದೃಷ್ಟಾಂತವನ್ನು ಅಳವಡಿಸಿಕೊಂಡು ದಿನೇಶ್ ಬಾಬು ಕನ್ನಡದಲ್ಲಿ "ಪಾಂಚಾಲಿ" ಎನ್ನುವ ಸಿನಿಮಾ ಮಾಡಿರುವುದನ್ನೂ ಇದೇ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬಹುದು. ಜೂನ್ನಲ್ಲಿ ಬಿಡುಗಡೆಗೆ ಕಾಯುತ್ತಿರುವ ಮಣಿರತ್ನಂರ "ರಾವಣ"ದಲ್ಲೂ ರಾಮಾಯಣದ್ದೇ ಅಳವಡಿಕೆ ಇದೆ...ಆದರೆ ಇಲ್ಲೆಲ್ಲಾ ಗಮನಿಸಬೇಕಾದ ಮತ್ತೊಂದು ಅಂಶವಿದೆ...ಮೂಲ ಕತೆಯನ್ನು ಭಿನ್ನ ಕಥಾ ಆಯಾಮದೊಂದಿಗೆ ಬೆಳೆಸುತ್ತಾ ಹೋದ ಹಾಗೆ ಹೊಸದೊಂದು ಚಿತ್ರಕತೆ ಹುಟ್ಟುತ್ತಾ ಹೋಗುತ್ತದೆ... ಮಜಾ ಇರೋದು ಇಲ್ಲೇ..ಹೀಗೆ ಪುರಾಣದ್ದೋ, ಕಾದಂಬರಿಯದ್ದೋ ಒಂದು ಪಾತ್ರವನ್ನು ಆಯಾ ಲೇಖಕ ನಿರ್ಮಿಸಿದ ವಾತಾವರಣವನ್ನು ಮೀರಿ ಭಿನ್ನ ಸನ್ನಿವೇಶ, ಸಂದರ್ಭದಲ್ಲಿ ಯೋಚಿಸುತ್ತಾ ಹೊರಟರೆ ಸಿನಿಮಾಕ್ಕಾಗುವ ಚಿತ್ರಕತೆ ಬರವಣಿಗೆಗೆ ಕೂರಬಹುದು. ಚೀನೀ ಸಿನಿಮಾ "ಸಂಸಾರ"ವನ್ನೇ ಬೇಕಿದ್ದರೆ ಗಮನಿಸಿ... ಬುದ್ಧನ ಸಂಸಾರ ತ್ಯಜಿಸುವ ನಿರ್ಧಾರವನ್ನೇ ಪ್ರಶ್ನಿಸುವ, ಆ ಮೂಲಕ ಬುದ್ಧ ಹೆಣ್ಣೊಬ್ಬಳನ್ನು ಅತಂತ್ರಕ್ಕೆ ದೂಡುವುದನ್ನು ಒಂದು ವೇಳೆ ಯಶೋಧರೆ ದಿಟ್ಟತನದಿಂದ ಪ್ರಶ್ನಿಸಿದರೆ ಹೇಗಿರುತ್ತದೆ ಎನ್ನುವ ನೆಲೆಗಟ್ಟಿನಲ್ಲಿ ಬೌದ್ಧ ಭಿಕ್ಷುವಿನ ಕತೆಯ ಹಿನ್ನೆಲೆಯಲ್ಲಿ ಚಿತ್ರಕತೆಗಾರ ಹೆಣೆಯುತ್ತಾ ಹೋದಾಗ ಸೃಷ್ಟಿಯಾಗುವ ಸಮಸ್ಯೆ ಹಾಗೂ ಅದನ್ನು ಪರಿಹರಿಸಿಕೊಳ್ಳಲು ಪಾತ್ರಗಳು ಹುಡುಕುವ ದಾರಿಗಳೇ ಚಿತ್ರಕತೆಯ ಬರವಣಿಗೆಯ "ಸೆಟಪ್-ಕನ್ಫ್ರಂಟೇಶನ್-ರಿಜಲ್ಯೂಶನ್" ಎನ್ನುವ ಚಿತ್ರಕತೆಯ ಮೂಲ ಸೂತ್ರವಾಗುತ್ತದೆ(ಪ್ರತಿ ಸಿನಿಮಾದ ಚಿತ್ರಕತೆಯು ಕ್ರಮವಾಗಿ ಈ ಮೂರು ಅಂಶಗಳನ್ನು ಹೊಂದಿರುತ್ತದೆ).


ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಒಪ್ಪುತ್ತೇವೆ ತಾನೇ. ಬಿ.ಆರ್ ಅಂಬೇಡ್ಕರ್ ರಾಮನ ಬಗೆಗೊಂದು ಲೇಖನ ಬರೆದಿದ್ದಾರೆ(ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ "ದೇವರನ್ನು ಕುರಿತು ಒಂದು ಹಿನ್ನೋಟ" ಪುಸ್ತಕದಲ್ಲಿದೆ). ಅದೇ ರಾಮ ಸೀತೆಯನ್ನು ಜೀವಿತಾವಧಿಯಲ್ಲಿ ನಡೆಸಿಕೊಂಡ ರೀತಿ ಸರಿಯೇ ಎನ್ನುವುದು ಆ ಬರವಣಿಗೆಯ ಮೂಲ ತಿರುಳು. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಾನವೀಯ ನೆಲೆಯಲ್ಲಿ ರಾಮನ ನೆಲೆಗಟ್ಟು ಎಷ್ಟರಮಟ್ಟಿಗೆ ಅಭದ್ರವಾದದ್ದು, ಸ್ವಾರ್ಥದಿಂದ ಕೂಡಿದ್ದು ಎನ್ನುವುದನ್ನು ಅಂಬೇಡ್ಕರ್ ಬರೆಯುತ್ತಾ ಹೋಗುತ್ತಾರೆ. ರಾಮನ ಬಗ್ಗೆ ಇರುವ ಈ ಜಿಜ್ಙಾಸೆಯೇ ಸಿನಿಮಾ ಚಿತ್ರಕಥೆಯ ಬರವಣಿಗೆಗೆ ಸಹಾಯಕ. ಇದೇ ವಿಷಯವನ್ನು ಇವತ್ತಿನ ಸಂದರ್ಭದ ಪಾತ್ರಗಳಿಗೆ ಅಳವಡಿಸಿದರೆ ಒಂದು ಸಿನಿಮಾದ ಚಿತ್ರಕತೆ ಖಂಡಿತಾ ಸಾಧ್ಯವಾಗುತ್ತದೆ. ಇದೇ ಗೊಂದಲಗಳಿಗೆ, ವೈರುಧ್ಯಗಳಿಗೆ ಇನ್ನಷ್ಟು ಸನ್ನಿವೇಶಗಳನ್ನು ಸೇರಿಸುತ್ತಾ ಹೋದಾಗ ಚಿತ್ರಕತೆಗೊಂದು ಸೂಕ್ತ ಚೌಕಟ್ಟು ನಿರ್ಮಾಣವಾಗುತ್ತದೆ. ತರ್ಕ, ಸಮಸ್ಯೆ, ಪರಿಹಾರ ಇವೆಲ್ಲಾ ಚಿತ್ರಕತೆಯ ಬರವಣಿಗೆಯ ಅಗತ್ಯಗಳು.



ಮುಗಿಸುವ ಮುನ್ನ:

"ಸಕ್ಸೆಸ್ ಕೇ ಪೀಛೆ ಮತ್ ಭಾಗೋ, ಲೈಫ್ ಕಾ ಮಜಾ ಲೂಟ್ ಲೋ" ಎಂದು ರಾಂಚೋ ಹೇಳುವಾಗಲೆಲ್ಲಾ ಡೆಡ್ ಪೋಯೆಟ್ ಸೊಸೈಟಿಯ "I went to the woods because i wanted to live deliberately, i wanted to live deep and suck out all the morrow of life, to put to rout all that was not life and not when i had come to die discover that i had not lived " ಎನ್ನುವ ಸಾಲುಗಳೇ ಮತ್ತೆ ಮತ್ತೆ ನೆನಪಾಗುತ್ತವೆ. ಶಾಲೆಯಿಂದ ಹೊರಹಾಕಲ್ಪಟ್ಟ ಕೀಟಿಂಗ್ ತರಗತಿಯಿಂದ ಹೊರ ನಡೆಯುವಾಗ ಶಾಲಾ ಮುಖ್ಯಸ್ಥನ ಮಾತನ್ನು ಧಿಕ್ಕರಿಸಿ "ಕ್ಯಾಪ್ಟನ್ ಓ ಮೈ ಕ್ಯಾಪ್ಟನ್" ಎನ್ನುತ್ತಾ ವಿದ್ಯಾರ್ಥಿಗಳೆಲ್ಲಾ  ಒಬ್ಬೊಬ್ಬರೇ ಡೆಸ್ಕಿನ ಮೇಲೇರುವ ಸನ್ನಿವೇಶದ ಅಳವಡಿಕೆಯೇ ಥ್ರೀ ಈಡಿಯೆಟ್ಸ್ ನಲ್ಲಿ  ಕೆಲಸ ಸಿಕ್ಕ ಖುಷಿಯಲ್ಲಿ ಕಾರಿಡಾರಿನಲ್ಲೇ ಫರ್ಹಾನ್, ರಾಜು ಪ್ಯಾಂಟು ಬಿಚ್ಚಿ "ಜಹಾಪನಾ ತುಸ್ಸೀ ಗ್ರೇಟ್ ಹೋ" ಎನ್ನುತ್ತಾ ರಾಂಚೋಗೆ ಸಲಾಮು ಹೊಡೆಯುವ ಅಪೂರ್ವ ಸನ್ನಿವೇಶವಾಗಿದೆ. ಇನ್ನೊಮ್ಮೆ ಡೆಡ್ ಪೋಯೆಟ್ಸ್ ಸೊಸೈಟಿಯನ್ನೋ, ಥ್ರೀ ಈಡಿಯೆಟ್ಸ್ ಸಿನಿಮಾವನ್ನೋ ನೋಡುವಾಗ ಇದನ್ನೆಲ್ಲಾ ಹಾಗೇ ಸುಮ್ಮನೆ ಗಮನಿಸಿ.

("ಸಾಂಗತ್ಯ"ದ ಪ್ರಥಮ ಮುದ್ರಿತ  ಸಂಚಿಕೆಯಲ್ಲಿ ಪ್ರಕಟಗೊಂಡ ಬರಹ)

ಮಂಗಳವಾರ, ಸೆಪ್ಟೆಂಬರ್ 8, 2009

ಕನ್ನಡದ ಗುಲಾಬಿಗೆ ರಾಷ್ಟ್ರಪ್ರಶಸ್ತಿ

|| ನಿನ್ನೆಯಷ್ಟೇ 2007ನೇ ಸಾಲಿನ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ. ಉಮಾಶ್ರೀ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಕಾಸರವಳ್ಳಿಯವರ "ಗುಲಾಬಿ ಟಾಕೀಸು" ಅತ್ಯುತ್ತಮ ಕನ್ನಡ ಚಿತ್ರವೆಂದು ಆಯ್ಕೆಯಾಗಿದೆ. ಕಾಂಚೀವರಂನಲ್ಲಿನ ಅಭಿನಯಕ್ಕೆ ಪ್ರಕಾಶ್ ರೈ ಅತ್ಯುತ್ತಮ ನಟ ಎಂದು ಪುರಸ್ಕ್ರತರಾಗಿದ್ದಾರೆ. ಮೂವರಿಗೂ ಅಭಿನಂದನೆಗಳು. ||


ವಳು ಕನಸಿನ ಗುಲಾಬಿ. ಪ್ರತೀ ದಿನ ಸಾಯಂಕಾಲ ಸಿನಿಮಾ ನೋಡುವ ಹುಚ್ಚು. ಮೂಲಕ ಹೊಸ ಕನಸುಗಳನ್ನು ಕಾಣುವ
ಬಯಕೆ ಆಕೆಗೆ. ಕನಸುಗಳ ಮೂಲಕ ತನ್ನ ಸೀಮಿತ ಪರಿಧಿಯನ್ನು ಮೀರಿ ಮುನ್ನಡೆಯುವ ಆಸೆ. ಬಹುಷಃ ಅಂಶವೇ ಆಕೆಯನ್ನು ಪ್ರಫುಲ್ಲವಾಗಿಡುವುದು.

ಆಕೆ ನೋಡುವ ಸಿನಿಮಾದ ಬಿಡಿಬಿಡಿ ಚಿತ್ರಗಳಂತೆ ಬದುಕೂ ಹರಿದು ಹಂಚಿಹೋಗಿದೆ, ಹೋಗುತ್ತಿದೆ. ಹೆರಿಗೆ ಮಾಡಿಸಿದ ಸಲುವಾಗಿ
ಬರುವ ಟಿವಿ ಪ್ರಾರಂಭದಲ್ಲಿ ಅವಳಲ್ಲೊಂದು ಅಪೂರ್ವ ಘಳಿಗೆಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ನಂತರದ ದಿನಗಳಲ್ಲಿ ಪಲ್ಲಟಗಳ ನಡುವೆ ಪಟಪಟಿಸುತ್ತದೆ. ಇದು ಗುಲಾಬಿ ಎಂಬ ಸೂಲಗಿತ್ತಿಯ "ಗುಲಾಬಿ ಟಾಕೀಸು"....

ಕನ್ನಡ ಸಿನಿಮಾದ ಗುಲಾಬಿ ಉಮಾಶ್ರೀಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗುಲಾಬಿ ಟಾಕೀಸು" ವೈದೇಹಿ ಅವರ ಕಥೆ ಆಧಾರಿತ ಸಿನಿಮಾ(ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಇಲ್ಲಿ ಕತೆ ಮಾರ್ಪಾಡಾಗಿದೆ). ಅದರಲ್ಲಿನ
ಮುಖ್ಯಪಾತ್ರವೇ ಗುಲಾಬಿಯದ್ದು.
ಉಮಾಶ್ರೀಯ ವೃತ್ತಿ ಜೀವನದ ಮೈಲಿಗಲ್ಲು ಗುಲಾಬಿ ಪಾತ್ರ. ಪಾತ್ರದ ಆಳ-ಅಗಲಗಳನ್ನು ತನ್ನ ಅಭಿನಯದಿಂದಲೇ ಹಿಗ್ಗಿಸಿದ್ದಾರೆ
ಆಕೆ. ಉಮಾಶ್ರೀಯದ್ದು ರಂಗಭೂಮಿಯ ಹಿನ್ನೆಲೆ. ಸಿನಿಮಾ ರಂಗಭೂಮಿ ಎರಡೂ ಭಿನ್ನ ಗುಣಗಳನ್ನು ಹೊಂದಿರುವ ಮಾಧ್ಯಮಗಳು.

ಬಹುಷಃ ರಂಗಭೂಮಿ ಉಮಾಶ್ರೀಯನ್ನು ಬಳಸಿಕೊಂಡಷ್ಟು ಸಶಕ್ತವಾಗಿ ಕನ್ನಡ ಸಿನಿಮಾ ತನ್ನ ಮಾಧ್ಯಮದಲ್ಲಿ ಬಳಸಿಕೊಂಡಿರಲಿಲ್ಲ. ಒಡಲಾಳ, ಹರಕೆಯ ಕುರಿ ನಾಟಕಗಳು ಆಕೆಯ ರಂಗಭೂಮಿಯ ಸಶಕ್ತ ಅಭಿವ್ಯಕ್ತಿಗಳು. ಕನ್ನಡ ಸಿನಿಮಾದಲ್ಲಿ ಉಮಾಶ್ರೀ ಅಂದರೆ
ಸಾಕು ಎನ್ನೆಸ್ ರಾವ್ ಕಾಂಬಿನೇಶನ್ನಿನ ಕಿಲಕಿಲದಂತಹ ಪಾತ್ರದ ಜೊತೆಗೆ ಜೋತು ಬೀಳುವ ಪಾತ್ರಗಳಂತಹವೇ ಹೆಚ್ಚು ಕಾಣುವುದು. ಇದೇ ಅತಿರೇಕದ ನಟನೆಗೆ ಉಮಾಶ್ರೀ ಮುಂದಿನ ದಿನಗಳಲ್ಲಿ ಬ್ರ್ಯಾಂಡ್ ಆಗಿದ್ದೂ ಉಂಟು. ಸಂಗ್ಯಾಬಾಳ್ಯ, ಮಣಿ ಸಿನಿಮಾಗಳಂತಹ ಬೆರಳೆಣಿಕೆಯ ಸಿನಿಮಾಗಳಷ್ಟೇ ಆಕೆಗೆ ವೈವಿಧ್ಯಮಯವಾದ ಪಾತ್ರಗಳನ್ನು ನೀಡಿದ್ದು. ಉಮಾಶ್ರೀಯ ಒಳಗಿದ್ದ ನಟಿ ಸಿನಿಮಾದಲ್ಲಿ ಪ್ರಖರವಾಗಿ ಕಾಣಿಸಿಕೊಂಡದ್ದು- ಕಾಸರವಳ್ಳಿಯವರ ಗುಲಾಬಿ ಟಾಕೀಸಿನಲ್ಲಿಯೇ.

ಗುಲಾಬಿಯ ಪಾತ್ರ ಸಿನಿಮಾದ ವಿವಿಧ ಹಂತಗಳಲ್ಲಿ ಸಂಕೀರ್ಣವಾಗುತ್ತಾ ಹೋಗುವ ಪರಿ ಪ್ರೇಕ್ಷಕನಿಗೆ ದಕ್ಕುವುದಕ್ಕೆ
ಸಾಧ್ಯವಾಗುವುದು ಉಮಾಶ್ರೀಯ ಅಭಿನಯದಲ್ಲಿ. ಅವಳಲ್ಲಿರುವ ಸ್ವಗತಗಳು, ಗಂಡನ ಎರಡನೇ ಹೆಂಡತಿಯ ಮಗ ಅದ್ದುವಿನೆಡೆಗಿರುವ ಪ್ರೀತಿ, ನೇತ್ರುವಿನ ಜೊತೆಗಿನ ಗೆಳೆತನ, ಟಿವಿ ಬಂದ ನಂತರ ಬದಲಾಗುವ ಸಂಬಂಧಗಳ ವ್ಯಾಪ್ತಿಯನ್ನು ಆಕೆ ಅರ್ಥೈಸಿಕೊಳ್ಳುವಲ್ಲಿ ಆಕೆ ಪಡುವ ಪಾಡನ್ನು, ಗುಲಾಬಿಯ ಸಂದಿಗ್ಧವನ್ನು ಉಮಾಶ್ರೀ ತೆರೆಮೇಲೆ ಬಿಚ್ಚಿಡುತ್ತಾರೆ. "ಮೊದಲಾದರೆ ವಾರಗಟ್ಟಲೆ ಸಿನಿಮಾ ನೋಡುತ್ತಿದ್ದೆ. ಬೇರೆ ಬೇರೆ ಕನಸುಗಳು ಬೀಳುತ್ತಿದ್ದವು. ಮನೆಯಲ್ಲೀಗ ಟಿವಿಯಿದೆ. ದಿನವೂ ಬೇರೆ ಬೇರೆ ಸಿನಿಮಾ ನೋಡುತ್ತೇನೆ. ಆದರೆ ಬೀಳುತ್ತಿರುವುದು ಒಂದೇ ಕನಸು" ಎನ್ನುವಾಗ ಉಮಾಶ್ರೀಯ ಮುಖದಲ್ಲಿನ ಒತ್ತಡ, ಕಣ್ಣಲ್ಲಿ ಕರಗುತ್ತಿರುವ ನೋವು ಪ್ರೇಕ್ಷಕನಿಗೆ ದಾಟುತ್ತದೆ.

ಉಮಾಶ್ರೀಯ ನಟನೆಯ ತೀವ್ರತೆಯ ಸನ್ನಿವೇಶಗಳು "ಗುಲಾಬಿ ಟಾಕೀಸು" ಸಿನಿಮಾದ ಹಲವೆಡೆ ಕಾಣುತ್ತದೆ. ಉಮಾಶ್ರೀಯ
ಅಭಿನಯಕ್ಕೊಂದು ಸಲಾಮು ಹೇಳಲು ಗುಲಾಬಿಯನ್ನು ಮನೆಯಿಂದ ಹೊರಕ್ಕೆ ಹಾಕುವ ಸನ್ನಿವೇಶವೊಂದೇ ಸಾಕು. ಸನ್ನಿವೇಶದಲ್ಲಿ ಗುಲಾಬಿಯ ಪ್ರತಿಭಟನೆಯ ಪರಿಯನ್ನೊಮ್ಮೆ ನೀವು ನೋಡಬೇಕು. ಪಾತ್ರೆಗಳನ್ನು ಮನೆಯಿಂದ ಹೊರಹಾಕುತ್ತಿರುವಾಗ ಅದನ್ನೆಲ್ಲಾ ಹೆಕ್ಕಿ ಮತ್ತೆ ಒಳಗಿಡಲು ಪ್ರಯತ್ನಿಸುವುದು, ಕಬ್ಬಿಣದ ಪೆಟ್ಟಿಗೆಯ ಮೇಲೆ ಜಗ್ಗದಂತೆ ಕೂರುವ ಪರಿಯನ್ನು ನೋಡಿದಾಗ ಉಮಾಶ್ರಿಯೊಳಗಿರುವ ಗುಲಾಬಿ ಅರ್ಥವಾಗುತ್ತಾ ಹೋಗುತ್ತಾಳೆ.


ಗುಲಾಬಿಯಂತಹ ಪಾತ್ರವನ್ನು ಉಮಾಶ್ರೀಯ ಮೂಲಕ ತೆರೆಗೆ ತಂದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು
ಸಲ್ಲಲೇಬೇಕು.....

ಮತ್ತಷ್ಟು ಒಳ್ಳೆಯ ಗುಲಾಬಿಗಳನ್ನು ಉಮಾಶ್ರೀ ಮುಂದೆಯೂ ಕಟ್ಟಿಕೊಡಲಿ.

||ಕಾಂಚೀವರಂ ಸಿನಿಮಾ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೊಮ್ಮೆ ಬರೆದಿದ್ದೆ.
ಓದಿಲ್ಲವಾದಲ್ಲಿ
ಕೆಳಗಿನ ಕೊಂಡಿ ಕ್ಲಿಕ್ ಮಾಡಿ. ||

ಗುರುವಾರ, ಆಗಸ್ಟ್ 27, 2009

ಬೇಯುವ ವಿಷಾದಗಳ ಹೊಸ್ತಿಲಲ್ಲಿ ಸ್ವಗತವೆಂಬ ಮೌನರಾಗ


ಳೆದು ಹೋಗುವುದನ್ನು ಹುಡುಕುವ ಸಿನಿಮಾಗಳು ವಿಶ್ವದ ಹಲವು ಭಾಷೆಗಳಲ್ಲಿ ಬಂದಿವೆ
. ಕಳೆದು ಹೋದ ಪ್ರೇಮಿ, ಗೆಳೆಯ, ಅಮ್ಮ, ಶೂ...ಹೀಗೆ ಪಟ್ಟಿ ಬೆಳೆಯುತ್ತದೆ.ಆದರೆ ಮನುಷ್ಯನೊಬ್ಬ ತನ್ನನ್ನೇ ದಿನ ನಿತ್ಯದಲ್ಲಿ ಕಳೆದುಕೊಂಡರೆ? ಕಳೆದು ಹೋಗಿದ್ದೇನೆ ಎಂದು ಅರಿವಾಗದೆ ಬದುಕುತ್ತಿದ್ದರೆ??--40 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ "ದಿ ಬ್ಯಾಂಡ್ಸ್ ವಿಸಿಟ್" ಎನ್ನುವ ಇಸ್ರೇಲಿ ಸಿನಿಮಾ ಚರ್ಚಿಸುವುದು ಇದೇ ವಿಷಯವನ್ನೇ.



ಈಜಿಪ್ಟಿನ ಅಲೆಗ್ಸಾಂಡ್ರಿಯಾ ಸೆರೆಮೋನಿಯಲ್ ಪೋಲಿಸ್ ಆರ್ಕೆಸ್ಟ್ರಾ, ಇಸ್ರೇಲಿನ ಅರಬ್ ಕಲ್ಚರ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡಲು ಬಂದಿಳಿಯುತ್ತದೆ. ಆದರೆ ವಿಳಾಸ ತಪ್ಪಿ ಅನಾಮಿಕ ಊರಿನಲ್ಲಿ ನಿಂತುಬಿಡುತ್ತದೆ. ದಿಕ್ಕು ತೋಚದೆ ಪಕ್ಕದ ರೆಸ್ಟೋರೆಂಟಿನಲ್ಲಿ ಆಶ್ರಯ ಬೇಡುತ್ತದೆ.ಅಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಬಸ್ಸಿಗೆ ಹೊರಡುತ್ತದೆ. ಇದು ಕತೆ. ಹೀಗೆ ಆರ್ಕೆಸ್ಟ್ರಾ ಗುಂಪಿನ 8 ಮಂದಿ,ಅತಿ ಮುಖ್ಯವಾಗಿ ತೌಫೀಕ್ ಪರಿಚಯವೇ ಇಲ್ಲದ ಊರೊಳಗೆ ತನ್ನನ್ನು ಕಂಡುಕೊಳ್ಳುವ ಕತೆಯಿದು.


ಇರಾನ್ ಕೊಲಿರಿನ್ ನಿರ್ದೇಶನದ ಮೊದಲ ಸಿನಿಮಾ. ಕತೆಯೂ ಈತನದ್ದೇ. 2007ರಲ್ಲಿ ಈ ಸಿನಿಮಾ ನಿರ್ಮಾಣವಾಯಿತು. ಮೌನವನ್ನು ಬಳಸಿ ವ್ಯಕ್ತಿಯ ಮನವನ್ನು ತೆರೆದಿಡುವ ತಂತ್ರ ಇಲ್ಲಿದೆ. ಹಾಸ್ಯಪ್ರಜ್ಞೆಯನ್ನು ಜೊತೆಗಿಟ್ಟುಕೊಂಡು ಕತೆ ಹೇಳುತ್ತಾನೆ ಕೊಲಿರಿನ್.




ಆರ್ಕೆಸ್ಟ್ರಾದ ನಾಯಕ ತೌಫೀಕ್ ನ ಒಳಗೊಂದು ನೋವಿನ ಕಡಲಿದೆ. ಸಾವಿರ ಸ್ವಗತಗಳಿವೆ. ತನ್ನ ಮಗನ ಬಗ್ಗೆ ಕಠೋರವಾಗಿದ್ದರಿಂದ ಹೆಂಡತಿ ಕೊರಗಿ ಸತ್ತಳು ಎಂಬ ಪಾಪಪ್ರಜ್ಞೆಯಿದೆ. ಸಾಂಪ್ರದಾಯಿಕ ಸಂಗೀತ ಯುವಜನರಿಂದ ಕಡೆಗಣಿಸಲ್ಪಡುತ್ತಿರುವುದಕ್ಕೆ ಬೇಜಾರಿದೆ. ಇದೆಲ್ಲವನ್ನು ಮರೆಮಾಚಲು ಆತನಿಗೆ ಬ್ಯಾಂಡ್ ಟ್ರೂಪ್ ಬೇಕೇ ಬೇಕು. ಪ್ರಯಾಣ, ಏಕಾಂತ ಎಲ್ಲದರೊಳಗೆ ಬೇಯುತ್ತಾನೆ ಆತ. ಇವರಿಗೆ ಆಶ್ರಯ ನೀಡುವ ರೆಸ್ಟೋರೆಂಟಿನ ಮಾಲಕಿ "ದಿನಾ"ಳದ್ದು ಇದೇ ತರಹದ ಕತೆ. ಜೊತೆಗಿದ್ದ ಪ್ರಿಯತಮ ಈಗಿಲ್ಲ. ರೆಸ್ಟೋರೆಂಟಿನ ಎದುರಿನ ಲೈಟು ಕಂಬಗಳ ಸುಂದರ ರಸ್ತೆಯಂತೆ ಆಕೆಯದ್ದೂ ಒಂದು ಬದುಕು. ಆದರೆ ಆ ರಸ್ತೆ ಯಾವಾಗಲೂ ನಿರ್ಜನ, ನಿರ್ಜೀವ.



ಈ ಸಿನಿಮಾ ಹೇಗೆ ಹುಟ್ಟಿಕೊಂಡಿತು, ಇಂತಹದೊಂದು ಸರಳ, ಪರಿಣಾಮಕಾರಿ ಸಿನಿಮಾದ ವಸ್ತು ಹೇಗೆ ಸಾಧ್ಯವಾಯಿತು ಅನ್ನುವುದನ್ನು ನಿರ್ದೇಶಕ ಕೊಲಿರಿನ್ ಮಾತಲ್ಲೇ ಕೇಳಬೇಕು.



"ಇಸ್ರೇಲಿನಲ್ಲಿ 80ರ ದಶಕದಲ್ಲಿ ಈಜಿಪ್ಟ್ ಸಿನಿಮಾಗಳ ಕ್ರೇಜ್ದ್ದ ಕಾಲ..ಆಗ ನಾನಿನ್ನೂ ಬಾಲಕ. ನನ್ನಂತೆ ಬಹುತೇಕರಿಗೆ ಒಮರ್ ಶರೀಫ್ ಸಿನಿಮಾಗಳೆಂದರೆ ಪಂಚಪ್ರಾಣ. ಇದ್ದಿದ್ದು ಒಂದೇ ಟಿವಿ ಚಾನೆಲ್. ಪ್ರತೀ ಶುಕ್ರವಾರ ಸಂಜೆಯ ಹೊತ್ತಿಗೆ ಅದೇ ಮನರಂಜನೆ. ಸಿನಿಮಾ ಮುಗಿದ ಮೇಲೆ ಕೆಲವೊಮ್ಮೆ ಅರ್ಧಗಂಟೆ "ಇಸ್ರೇಲ್ ಬ್ರಾಡ್ಕಾಸ್ಟಿಂಗ್ ಆರ್ಕೆಸ್ಟ್ರಾ"(ಐಬಿಎ)ದ ಸಂಗೀತ ಕಾರ್ಯಕ್ರಮವಿರುತ್ತಿತ್ತು. ಶಾಸ್ತ್ರೀಯ ಅರೇಬಿಕ್ ಸಂಗೀತವದು. ಟಿವಿ ಖಾಸಗೀಕರಣಕ್ಕೆ ತುತ್ತಾದ ಮೇಲೆ ನಮ್ಮಲ್ಲಿ ನೂರಾರು ಚಾನೆಲ್ ಗಳು ಬಂದವು. ಎಂ ಟಿವಿ ಬಂತು. ಬಿಬಿಸಿ ಬಂತು. 30 ಸೆಕೆಂಡಿನ ಜಾಹೀರಾತುಗಳು ರಾರಾಜಿಸಿದವು. ಇದರ ಮಧ್ಯೆ ಶಾಶ್ವತವಾಗಿ ಕಳೆದು ಹೋದದ್ದು ಮಾತ್ರ ಶಾಸ್ತ್ರೀಯ ಅರೇಬಿಕ್ ಸಂಗೀತ ನುಡಿಸುತ್ತಿದ್ದ ಆರ್ಕೆಸ್ಟ್ರಾ.



ಇರಾನ್ ಕೊಲಿರಿನ್



ಆದರೆ ಇವತ್ತು....

ಇವತ್ತು ನನ್ನ ಮತ್ತು ಗೆಳೆಯನ ಮಗ ಜಗಮಗಿಸುವ ಮೆಕ್ಡೊನಾಲ್ಡ್ ಬೋರ್ಡುಗಳ ಕೆಳಗೆ ಭೇಟಿಯಾಗುತ್ತಾರೆ. ಅದು ಅವರಿಗೆ "ಕಂರ್ಟ್" ಕೊಡುತ್ತಿದೆ" ಎಂದು ಬದಲಾದ ಮನಸ್ಥಿತಿಯೊಳಗೆ ಕಳೆದು ಹೋದದ್ದನ್ನು, ತನ್ನ ಮಕ್ಕಳು ಕಳೆದುಕೊಂಡ ಅಪೂರ್ವ ಕ್ಷಣಗಳನ್ನು ನೆನೆಸಿಕೊಳ್ಳುತ್ತಾನೆ ಕೊಲಿರಿನ್. ಇದೇ ಬೇಗುದಿ ಸಿನಿಮಾದಲ್ಲಿರುವ ತೌಫೀಕ್ ಗೂ ಇದೆ. ಅತೀ ವೇಗದ ಸಾಂಸ್ಕ್ರತಿಕ ಪಲ್ಲಟದ ಬಗ್ಗೆ ಗಾಬರಿಯಿದೆ. ದಿನಾ ಜೊತೆ ಹೋಟೆಲಿನಲ್ಲಿ ಕುಳಿತಾಗ ಆತ ಹಂಚಿಕೊಳ್ಳುವುದು ಇದನ್ನೇ. ಅದಕ್ಕೇ ಆತನಿಗೆ ಖಾಲಿದ್ ಅಧಃಪತನಕ್ಕಿಳಿದ, ಶಿಸ್ತಿಲ್ಲದ ವ್ಯಕ್ತಿಯಂತೆ ಕಾಣುತ್ತಾನೆ. ಟಿವಿ ಖಾಸಗಿಕರಣಕ್ಕೆ ಒಳಗಾದ ಮೇಲೆ ಇಸ್ರೇಲಿನಲ್ಲಿ ಹುಟ್ಟಿಕೊಂಡ ಯುವಜನತೆಯ ಪ್ರತಿನಿಧಿ ಆತ..



ಆದರೆ ಇದೆಲ್ಲದರ ಮಧ್ಯೆ ತೌಫೀಕ್ ವೇಗವಾದ ಸಾಂಸ್ಕ್ರತಿಕ ಪಲ್ಲಟಕ್ಕೆ ಹೊಂದಿಕೊಲ್ಲುವುದು ಅಸಾಧ್ಯವಾಗುತ್ತದೆ. ಗೊಂದಲ, ಅಸಹಾಯಕತೆ ಮಧ್ಯೆ ತನ್ನನ್ನು ಕಂಡುಕೊಳ್ಳುವಲ್ಲಿ ಆತ ಸೋಲುತ್ತಾನೆ. ದಿನಾ ಜೊತೆಗೊಂದು ಸಂವಾದ ಸಾಧ್ಯವಾದ ಮೇಲಷ್ಟೇ ಆತನಿಗೆ ಖಾಲಿದ್(ಅಂದರೆ ಹೊಸ ತಲೆಮಾರು)ಅರ್ಥವಾಗುತ್ತಾನೆ. ದಿನಾ, ತೌಫೀಕ್ ರ ಪರಿಚಯ ಇಬ್ಬರ ವಾಸ್ತವವನ್ನು ಬದಲಾಯಿಸುತ್ತದೆ. ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದ ವಿಷಾದ ರಾಗಗಳನ್ನು ಬಿಚ್ಚಿಡುತ್ತಾರೆ.ಎಲ್ಲೋ ಒಂದೆಡೆ ದುಖಃವನ್ನು ಬಸಿದು ನಿರಾಳವಾಗುವ ಹಾಗೆ. ಬಹುಷಃ ಈ ನಿರಾಳತೆಯೇ ತೌಫೀಕ್ ನಿಗೆ ಚೈತನ್ಯಪೂರ್ಣವಾಗಿ ಸುತ್ತಲಿನ ಜನರನ್ನು ನೋಡಲು ಕಲಿಸುತ್ತದೆ. ತಾನು ಬ್ಯಾಂಡ್ ಟ್ರೂಪಿನಿಂದ ಗೇಟ್ ಪಾಸ್ ಕೊಡಬೇಕಿದ್ದ ಚೆಲ್ಲು ಹುಡುಗ ಖಾಲಿದ್ ಇಷ್ಟವಾಗಲು ಶುರುವಾಗುತ್ತಾನೆ. ಖಾಲಿದ್ ಕೇವಲ "ಮಗನಷ್ಟೇ ಅಲ್ಲ.. ಬದಲಾಗಿ ತನ್ನ ಹಾಗು ಯುವ ತಲೆಮಾರಿನ ಸೇತುವೆಗೆ ಕೊಂಡಿಯಾಗುತ್ತಾನೆ. . ಬದುಕಿನ ಲಯವನ್ನು ಆತ ಮತ್ತೆ ಪತ್ತೆ ಹಚ್ಚಿದ್ದಾನೆ. ಅದೇ ಕಾರಣಕ್ಕೆ ಆತ ಕೊನೆಯಲ್ಲಿ ಖಾಲಿದ್ ವಯೋಲಿನ್ ನುಡಿಸುವಾಗ ತನ್ಮಯತೆಯಿಂದ ಆನಂದಿಸುತ್ತಾನೆ.



ಇವರ ನಡುವೆ ಸಿನಿಮಾದಲ್ಲೊಂದು ಪುಟ್ಟ ಪಾತ್ರವಿದೆ. ಆತ ಯುವಕ. ಹಗಲು-ರಾತ್ರಿ ಎಡೆಬಿಡದೆ ತನ್ನ ಪ್ರಿಯತಮೆಯ ಫೋನಿಗೆ ಬೂತಿನ ಬುಡದಲ್ಲೇ ಕಾಯುತ್ತಿರುತ್ತಾನೆ. ಬೇರೆ ಯಾರಾದರು ಅಲ್ಲಿ ಫೋನು ಮಾಡಲು ಬಂದರೆ ಆತನಿಗೆ ಕಿರಿಕಿರಿ. ಆಕೆ ಫೋನು ಮಾಡಿಯೇ ಮಾಡುತ್ತಾಳೆ ಅನ್ನುವ ಕಾತರ, ಇನ್ನೂ ಮಾಡಿಲ್ಲವಲ್ಲ ಎನ್ನುವ ಸುಮಧುರ ವೇದನೆ ಅವನಲ್ಲಿದೆ.





ಇಡೀ ಚಿತ್ರವನ್ನು ಸಂಯಮದಿಂದ, ನಿಶ್ಯಬ್ದದ ಜೊತೆಗೆ ಹೆಣೆಯುತ್ತಾ ಹೋಗುತ್ತಾನೆ ನಿರ್ದೇಶಕ. ತೌಫಿಕ್ ಪಾತ್ರದ ಸಸನ್ ಗಬಾಯ್ ಅಭಿನಯವನ್ನು ಮಿಡ್ ಶಾಟ್ ಗಳಲ್ಲಿ ನೋಡುವುದೇ ಅಪೂರ್ವ ಘಳಿಗೆ. ಮಿಡ್ ಶಾಟ್ ಗಳನ್ನು ಬಳಸಿ ತೌಫೀಕ್ ನ ನೋವನ್ನು ನಮಗೆ ದಾಟಿಸುವಲ್ಲಿ ಕೊಲಿರಿನ್ ಸಫಲನಾಗುತ್ತಾನೆ. ಮುಖದ ನೆರಿಗೆ, ಹುಬ್ಬಿನ ಚಲನೆ, ಕಣ್ಣು ಬತ್ತುವುದು, ಮತ್ತೆ ಅರಳುವುದು-ಇದೆಲ್ಲ ಸಿನಿಮಾಕ್ಕೆ ಶಕ್ತಿ. ಉಳಿದ ಬ್ಯಾಂಡಿನ ಮಂದಿ ಕೂಡಾ ಅಭಿನಯದಲ್ಲಿ ಪೈಪೋಟಿ ನೀಡುತ್ತಿರುತ್ತಾರೆ. ದಿನಾ ಪಾತ್ರದಲ್ಲಿ ರೊನಿತ್ ಎಲ್ಕಾಬೆಟ್ಸ್ ಳನ್ನು ಮರೆಯಲು ಸಾಧ್ಯವಾಗುವುದಿಲ್ಲ.



ಮೌನವನ್ನು ಸ್ವಗತದ ಜಾಗದಲ್ಲಿ ಬಳಸುತ್ತಾ ಬದುಕನ್ನು ಪುನರ್ ಕಟ್ಟಿಕೊಳ್ಳುವ ತಂತ್ರ ಚಿತ್ರಕತೆಯ ಮುಖ್ಯ ಭಾಗ. ನಿರ್ಜನವಾಗಿ ಬಿದ್ದುಕೊಂಡಿರುವ ರಸ್ತೆ, ರೆಸ್ಟೋರೆಂಟ್, ರಾತ್ರಿಯ ಜೊತೆಗೊಂದು ನಡಿಗೆ, ಬೋಳು ಬೆಂಚು ಇದೆಲ್ಲಾ ದ್ರಶ್ಯದ ಮೂಲಕ ಸಿನಿಮಾದಲ್ಲಿ ಕಾಣುವಾಗ ಕತೆಗೊಂದು ಅನುಭೂತಿ ಸಿದ್ಧಿಸುತ್ತದೆ.



ರಾತ್ರಿಯ ನೀರವತೆಯಲ್ಲಿ ಬೆಂಚೊಂದರ ಮೇಲೆ ಕುಳಿತು ದಿನಾ-ತೌಫೀಕ್ ಮಾತನಾಡುವ ದ್ರಶ್ಯ ವಿನ್ಯಾಸ ಆಪ್ತ. ಪರಸ್ಪರರನ್ನು ಅರಿಯುವ ಪ್ರಯತ್ನದಲ್ಲಿ ತೌಫೀಕ್ ಗೆ ಸಂಗೀತದಷ್ಟೇ ಖುಷಿ ಸಿಗುತ್ತದೆ. ಅದನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳಲು ದಿನಾ ಕೂಡಾ ಪ್ರಯತ್ನಿಸುತ್ತಾಳೆ.



ಹರಳುಗಟ್ಟಿದ ವಿಷಾದಗಳನ್ನು ಒಡೆಯುತ್ತಾ ಕಣವಾಗಿ ಕರಗಿಸಿ ಸಿನಿಮಾ ಕೊನೆಯಾಗುವಾಗ, ತಾವು ಕಳೆದುಕೊಂಡಿದ್ದೇನು ಎನ್ನುವ ಪ್ರಜ್ಞೆ ಮತ್ತು ಅದನ್ನು ಪುನರ್ ತುಂಬಿಕೊಳ್ಳುವ ಅವಕಾಶ ತೌಫೀಕ್, ದಿನಾಳಿಗೆ ಪ್ರಾಪ್ತವಾಗುತ್ತದೆ.

ಕಾಯುತ್ತಿರುವ ಪ್ರೇಮಿಗೆ ಕೊನೆಗೂ ಪ್ರಿಯತಮೆಯಿಂದ ಕರೆ ಬರುತ್ತದೆ...


----------------------------------------------------------------------------------------

2007ರಲ್ಲಿ ಇಸ್ರೇಲ್ ನಿಂದ ಸಿನಿಮಾ ಆಸ್ಕರ್ ಅತ್ಯುತ್ತಮ ವಿದೇಶಿ ವಿಭಾಗಕ್ಕೆ ಸ್ಪರ್ಧಿಸಲು ಪೈಪೋಟಿ ನಡೆಸಿತ್ತು. ಆದರೆ ಶೇ.50ರಷ್ಟು ಸಂಭಾಷಣೆ ಇಂಗ್ಲೀಷಿನಲ್ಲಿದ್ದುದರಿಂದ "Beaufort" ಸಿನಿಮಾ ಆಯ್ಕೆಯಾಯಿತು. ಇರಾನ್ ಕೊಲಿರಿನ್ ಈಗ "ದಿ ಪಾತ್ ವೇಸ್ ಇನ್ ಡೆಸರ್ಟ್" ಸಿನಿಮಾ ತಯಾರಿಯಲ್ಲಿ ನಿರತನಾಗಿದ್ದಾನೆ.
----------------------------------------------------------------------------------------

ಬುಧವಾರ, ಏಪ್ರಿಲ್ 22, 2009

ಇರಾನಿನಲ್ಲಿ ಸಿನಿಮಾ ಸುಲಭದ ಮಾತಲ್ಲ


ಧಾರ್ಮಿಕತೆಯ ಹಿಡಿತ ಇರಾನಿನಲ್ಲಿ ಚಿತ್ರಗಳನ್ನೂ ಬಿಟ್ಟಿಲ್ಲ. ಪಾಶ್ಚಾತ್ಯ ಸಿನಿಮಾಗಳು ಇಲ್ಲಿ ಯಾವತ್ತಿಗೂ ಬ್ಯಾನ್.
ಕುಡಿತ, ಪ್ರೇಮಿಗಳ ಸರಸ-ಸಲ್ಲಾಪ, ಕಡಿಮೆ ಬಟ್ಟೆ ಧರಿಸಿದ ಮಹಿಳೆ ಎಲ್ಲದಕ್ಕೂ ಇಲ್ಲಿ ಕತ್ತರಿ. ಪ್ರದರ್ಶನಕ್ಕೆ ಅಯೋಗ್ಯ.

ವರ್ಷದಲ್ಲಿ 8ರಿಂದ 10 ಹಾಲಿವುಡ್ ಸಿನಿಮಾಗಳು ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡರೇನೇ ಹೆಚ್ಚು. ಇಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಆಡಿಸಿದ ಸಮಕಾಲೀನ ಹಾಲಿವುಡ್ ಕ್ಲಾಸಿಕ್ ಸಿನಿಮಾಗಳು ಮಾತ್ರ ಟಿವಿಯಲ್ಲಿ ಪ್ರದರ್ಶನ ಕಾಣುತ್ತವೆ. 

ಬಹುತೇಕ ಭಾರತದಂತೆಯೇ ಅಲ್ಲಿ ಕೂಡಾ ಕಮರ್ಷಿಯಲ್ ಮತ್ತು ಕಲಾತ್ಮಕ ಎನ್ನುವ ಎರಡು ಪಂಗಡಗಳಿವೆ. ಸರ್ಕಾರ ಸಿನಿಮಾ ನಿರ್ಮಾಣದ ಮೇಲೆ ಕಣ್ಣಿಟ್ಟೇ ಇರುತ್ತದೆ.

ಇರಾನಿನ 53 ಮಿಲಿಯನ್ ಜನರ ಭಾಷೆ ಪರ್ಶಿಯನ್. ಹಾಗಾಗಿ ಇದೇ ಅಧಿಕ ಭಾಷೆಯಲ್ಲಿ ಚಿತ್ರಗಳು ತಯಾರಾಗುತ್ತವೆ.

ವರ್ಷಕ್ಕೆ ಹೆಚ್ಚುಕಮ್ಮಿ 130 ಚಿತ್ರಗಳು ತಯಾರಾಗುತ್ತವೆ. ಕಾಮಿಡಿ, ರೊಮ್ಯಾಂಟಿಕ್ ಮೆಲೋಡ್ರಾಮಾ ಮತ್ತು ಕೌಟುಂಬಿಕ ಕಾಮಿಡಿ ಚಿತ್ರಗಳೇ ಹೆಚ್ಚು.

ಕಮರ್ಶಿಯಲ್ ಸಿನಿಮಾಗಳಿಗೆ 25 ವರ್ಷದೊಳಗಿನವರು ಮುಖ್ಯ ಟಾರ್ಗೆಟ್. ಸ್ಥಳೀಯ ಪ್ರೇಕ್ಷಕರೇ ಆಧಾರ. ಮೊಹಮ್ಮದ್ ಅಲಿ ಫರ್ದೀನ್ ಅಲ್ಲಿನ ಪ್ರಸಿದ್ಧ ಕಮರ್ಶಿಯಲ್ ಹೀರೋ ಆಗಿದ್ದಾತ.

ಕಲಾತ್ಮಕ ಸಿನಿಮಾಗಳು ಹೆಚ್ಚಾಗಿ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಆದರೆ ಕೆಲವಾರು ಸಿನಿಮಾಗಳು ಹೌಸ್ಫುಲ್ ಪ್ರದರ್ಶನ ಕಂಡ ಉದಾಹರಣೆಗಳಿವೆ.

ನಮ್ಮಲ್ಲಿರುವಂತೆ ಅಲ್ಲಿಯೂ ಪೈರಸಿ ಹುಲುಸಾಗಿಯೇ ಬೆಳೆದಿದೆ. ಆದ್ದರಿಂದ ಕಲಾತ್ಮಕ ಸಿನಿಮಾಗಳ ಪೈರೇಟೆಡ್ ಡಿವಿಡಿಗಳು ಸುಲಭಾಗಿ ಸಿಗುತ್ತವೆ.

ಅರಬ್ ಮತ್ತು ಭಾರತೀಯ ಸಿನಿಮಾಗಳೆಡೆಗೆ ಇರಾನಿಯರಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ ಈ ಎರಡೂ ದೇಶಗಳ ಒಂದೇ ಒಂದು ಸಿನಿಮಾ ಕೂಡಾ ಪ್ರದರ್ಶನ ಕಂಡಿಲ್ಲ.


ಇರಾನಿಗೆ ಸಿನಿಮಾ ಬಂದದ್ದು:

ಪರ್ಶಿಯನ್ನರ ದೃಶ್ಯ ಮಾಧ್ಯಮಕ್ಕೆ ಸುದೀರ್ಫ ಇತಿಹಾಸವಿದೆ. ಕ್ರಿ.ಪೂ 500ರಿಂದ ದೃಶ್ಯ ಅಭಿವ್ಯಕ್ತಿ ಪ್ರಾರಂಭವಾಯಿತು ಎನ್ನುವುದಕ್ಕೆ ದಾಖಲೆಗಳಿವೆ. ದೃಶ್ಯ ಕಲೆ, ಆಲಂಕಾರಿಕ ಕಲೆ, ಸಾಹಿತ್ಯ, ಕಟ್ಟಡ ನಿರ್ಮಾಣ, ನೃತ್ಯ, ಸಂಗೀತ ಎಲ್ಲದರಲ್ಲೂ ಪರ್ಶಿಯನ್ನರು ಛಾಪು 
ಮೂಡಿಸಿದವರು.

20ನೇ ಶತಮಾನದಲ್ಲಿ ಸಿನಿಮಾ ಪರ್ಶಿಯನ್ನರಿಗೆ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತ ದಾರಿಯಾಗಿ ಕಂಡಿತು.
ಪಲ್ಹವಿ ಸಾಮ್ರಾಜ್ಯಕ್ಕಿಂತ ಮೊದಲು ಪರ್ಶಿಯಾವನ್ನು ಆಳಿದ್ದ ಮುಜಫರ್ ಅಲ್ ದಿನ್ ಶಾ 1900ರಲ್ಲಿ ಪ್ಯಾರೀಸ್ಗೆ ಭೇಟಿಕೊಟ್ಟಾಗ ಕ್ಯಾಮರಾವೊಂದನ್ನು ತಂದರು. ಇದೇ ಇರಾನಿನ ಸಿನಿಮಾ ನಿರ್ಮಾಣಕ್ಕೆ ಪ್ರಾರಂಭಿಕ ಹೆಜ್ಜೆಯಾಯಿತು. 2001ರಲ್ಲಿ ಇರಾನ್ ಸಿನಿಮಾ ನೂರು ವರ್ಷಗಳ ಸಂಭ್ರಮವನ್ನು ಆಚರಿಸಿತು.

ಚೀನಾ ಮತ್ತು ಇರಾನ್ ತೊಂಭತ್ತರ ದಶಕದಿಂದೀಚೆಗೆ ವಿಶ್ವ ಕಂಡ "ಮಾನವೀಯ ಸ್ಪಂದನೆಗಳ ಚಿತ್ರಗಳ ಗೂಡು" ಎನ್ನುತ್ತಾರೆ ಹಲವಾರು ಚಿತ್ರ ವಿಮರ್ಶಕರು.

ಭಾನುವಾರ, ಏಪ್ರಿಲ್ 12, 2009

ಫಸ್ಟ್ ಹಾಫ್ ಮುಗಿದಿದೆ



ಜಿದ್ ಮಜಿದಿಯ ಫಸ್ಟ್ ಹಾಫ್ ಮುಗಿದಿದೆ. ಎಪ್ರಿಲ್ 17ಕ್ಕೆ ಭರ್ತಿ ಐವತ್ತು ವರ್ಷ.
 
ಮಜಿದಿ ಹೆಸರು ಗೊತ್ತಿಲ್ವಾ?
ಕೊನೆ ಪಕ್ಷ "ಚಿಲ್ಡ್ರನ್ ಆಫ್ ಹೆವನ್" ಸಿನಿಮಾ ನೆನಪಿದೆಯಾ? 
ಬಡ ಕುಟುಂಬದ ಅಣ್ಣನೊಬ್ಬ ತನ್ನ ತಂಗಿಗೆ ಶೂ ಕೊಡಿಸಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಕತೆ ಹೊಂದಿದ್ದ ಸಿನಿಮಾ-"ಚಿಲ್ಡ್ರನ್ ಆಫ್ ಹೆವನ್". ಇದನ್ನು ನಿರ್ದೇಶಿಸಿದ್ದು ಮಜಿದ್ ಮಜಿದಿ. 1998ರಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯ ಮೆಟ್ಟಿಲೇರಿದ್ದ ಇರಾನಿ ಸಿನಿಮಾವಿದು. ನಿನ್ನೆ ಮೊನ್ನೆಯಷ್ಟೇ ವಿಶ್ವದ ವಿವಿಧ ಭಾಷೆಯ ಸಿನಿಮಾ ನೋಡಲು ಪ್ರಾರಂಭಿಸಿದವರಿಗೆ ಹೆಚ್ಚಿನವರು ಈ ಸಿನಿಮಾವನ್ನು ನೋಡಲು ಮರೆಯದಿರಿ ಎನ್ನುತ್ತಾರೆ.

ಇವತ್ತು ಇರಾನ್ ಸಿನಿಮಾ ಅಂದ ತಕ್ಷಣ ಅಬ್ಬಾಸ್ ಕಿಯಾರಸ್ತೋಮಿ, ಮೊಹ್ಸೀನ್ ಮಕ್ಮಲ್ಬಫ್, ಜಾಫರ್ ಪನಾಹಿ ಜೊತೆಗೆ ನೆನಪಾಗುವ ಹೆಸರು ಮಜಿದ್ ಮಜಿದಿಯದ್ದು. ಹೊಸ ಅಲೆಯ ಇರಾನಿ ಸಿನಿಮಾ ನಿರ್ಮಾಣದಲ್ಲಿ ಇವರದ್ದು ವಿಶ್ವಕ್ಕೆ ಪರಿಚಿತ ಹೆಸರು.
ದರಿಯಸ್ ಮೆಹ್ರ್ಜುಯಿ 1969ರಲ್ಲಿ "ದಿ ಕೌ" ಸಿನಿಮಾ ನಿರ್ದೇಶಿಸುವುದರೊಂದಿಗೆ ಹೊಸ ಅಲೆಯ ಚಿತ್ರಗಳು ಇರಾನಿನಲ್ಲಿ ಪ್ರಾರಂಭವಾದವು.  ಇಂದು ಇರಾನಿನಲ್ಲಿ ಈ ರೀತಿಯ ಸಿನಿಮಾ  ನಿರ್ದೇಶಿಸುವವರ ಪಟ್ಟಿ ದೊಡ್ಡದಿದೆ. ಹೊಸ ಅಲೆಯ ಇರಾನಿ ಸಿನಿಮಾಗಳು ಯುರೋಪಿನ ಕಲಾತ್ಮಕ ಸಿನಿಮಾಗಳನ್ನು, ಮುಖ್ಯವಾಗಿ "ಇಟಾಲಿಯನ್ ನಿಯೋರಿಯಲಿಜಂ" ಗುಣಗಳನ್ನು ಹಂಚಿಕೊಂಡಿವೆ. 

ಮಜಿದಿಯ ಫಸ್ಟ್ ಹಾಫ್ ಮುಗಿದಿದೆ ಅನ್ನುವುದಕ್ಕಿಂತ ಮತ್ತೊಂದು ಫಸ್ಟ್ ಹಾಫ್ ಪ್ರಾರಂಭವಾಗುತ್ತಿದೆಯಲ್ಲ ಎಂದು ಖುಷಿಯಾಗುತ್ತದೆ.
ಮಜಿದ್ ಮಜಿದಿಗೆ ಪ್ರೀತಿಯಿಂದ "ಹ್ಯಾಪಿ ಬರ್ತ್ ಡೇ"  ಹೇಳೋಣ ಬನ್ನಿ .....

(ಮಜಿದಿಯ ಸಿನಿಮಾ ಮತ್ತು ಬದುಕಿನ ಕುರಿತ ಬರಹಗಳು ಕೆಳಗಿವೆ.ಓದಿ ಬಿಡಿ)

ಮಜಿದಿಗೆ 50: "ಚಿತ್ರ-ಕತೆ"


ಜಿದಿಯ ಸಿನಿಮಾ ಜಗತ್ತಿನ ಪಾತ್ರಗಳು ಹೆಚ್ಚು ಮಾನವೀಯವಾಗಿ ಸ್ಪಂದಿಸುವಂತಹದ್ದು. ಅವರೆಲ್ಲಾ ಬಹುತೇಕ ನಮ್ಮ ಪಕ್ಕದ ಮನೆ, ಬೀದಿಯವರೇ. "ಕಲರ್ ಆಫ್ ಪ್ಯಾರಡೈಸ್"ನಲ್ಲಿ ಬರುವ ದೈಹಿಕವಾಗಿ ವಿಕಲಾಂಗ ಕಣ್ಣು ಕಾಣದ ಮಗ ಮೊಹಮ್ಮದ್, ಮಾನಸಿಕವಾಗಿ ವಿಕಲಾಂಗನಾಗುತ್ತಾ ಹೋಗುವ ಅಪ್ಪ ಇಬ್ಬರೂ ನಮ್ಮದೇ ಜಗತ್ತಿನ ಪಾತ್ರಗಳಾಗುತ್ತವೆ. "ಬರನ್" ಸಿನಿಮಾದಲ್ಲಿ ಹುಡುಗಿಯ ಚಪ್ಪಲಿ ಹೆಜ್ಜೆಗುರುತಲ್ಲಿ ನೀರು ತುಂಬಿಕೊಳ್ಳುವಾಗ ತದೇಕಚಿತ್ತದಿಂದ ನೋಡುವ ಲತೀಫ್ನ ನಿಷ್ಕಲ್ಮಷ ಪ್ರೀತಿ ಕೂಡ 
ನಮ್ಮ ಜಗತ್ತಿನ ಒಂದು ಭಾಗವೇ
.
 
ಅಲ್ಲೊಂದು ಅಸಹಾಯಕತೆಯಿದೆ. ಬಡತನದ ಬವಣೆಯಿದ್ದರೂ ಅದರೊಳಗೆ ಬೇಯುತ್ತಾ ಮೆದುವಾಗುವ ಸಹನೆಯಿದೆ. ವಾಸ್ತವದಲ್ಲಿ ಬದುಕುವ ಹುಮ್ಮಸ್ಸು ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣುತ್ತದೆ. ಒಂದು ಕುಟುಂಬದ ಅಪ್ಪನೋ, ಅಣ್ಣನೋ ಚಿಕ್ಕ ಚಿಕ್ಕ ಸಂತೋಷಗಳನ್ನು ಗಳಿಸಿಕೊಳ್ಳುವಲ್ಲಿ, ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಾನಸಿಕ ತುಮುಲಗಳು, ಬದುಕಿನ ಸಣ್ಣ ಸಣ್ಣ ವೈರುಧ್ಯಗಳು ಮಜಿದಿಗೆ ಮಹತ್ವದ್ದಾಗಿ ಕಾಣುತ್ತದೆ.  ಮಜಿದಿಯ ಸಿನಿಮಾಗಳಲ್ಲಿ ಜನಸಾಮಾನ್ಯನ ದಿನನಿತ್ಯದ ಬದುಕಿನ ಕಾವ್ಯ ಮತ್ತು ವಾಸ್ತವ ಒಟ್ಟಿಗೆ ಚಿತ್ರಿತವಾಗುತ್ತಾ ಹೋಗುತ್ತದೆ. ಮಾನವೀಯ ಸ್ಪಂದನೆ ಮನುಷ್ಯನ ಮೂಲಭೂತ ಕ್ರಿಯೆಯಾಗಿರುವುದರ ಜೊತೆಗೆ ಸಾರ್ವತ್ರಿಕವಾಗಿರುವುದರಿಂದ ಜನಸಾಮಾನ್ಯನ ಸಾಂಸ್ಕೃತಿಕ ಸಂಫರ್ಷಳು ಸಹ ಸೂಕ್ಷ್ಮವಾಗಿ ದಾಖಲಾಗುತ್ತವೆ. ಕೊಲ್ಲುವ ಕ್ರಿಯೆ ಹೆಚ್ಚು ಜೀವಂತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಿನಿಮಾಗಳು ಹೆಚ್ಚು ಅರ್ಥಪೂರ್ಣ. ಇರಾನ್ ಕವಿಗಳಾದ ಹಫೀಸ್, ಸಾದಿ, ರೂಮಿ ಕಾವ್ಯ ಮಾನವೀಯತೆಯನ್ನು ಎತ್ತಿ ಹಿಡಿದಿತ್ತು. ಸಿನಿಮಾಗಳಲ್ಲಿರುವ ಮಾನವೀಯ ನೆಲೆಗಳಿಗೆ 
ಇದೇ ಮೂಲ ಎನ್ನುತ್ತಾರೆ ಮಜಿದಿ.
 
ಮಜಿದ್ ಮಜಿದಿಯ ಸಿನಿಮಾಗಳಲ್ಲಿನ ಮುಸ್ಲಿಂ ಹೆಣ್ಣು ಪಾತ್ರಗಳಿಗೆ ಹೆಚ್ಚು ಜೀವಂತಿಕೆಯಿದೆ. "ದಿ ಫಾದರ್" ಚಿತ್ರದಲ್ಲಿ ಬರುವ ತಾಯಿಯ ಪಾತ್ರ ತನ್ನ ಮಕ್ಕಳಿಗಾಗಿ ಮಾಡಿಕೊಳ್ಳುವ ಎರಡನೇ ಮದುವೆ, "ಬರನ್" ಚಿತ್ರದಲ್ಲಿ ಹುಡುಗಿ ಹುಡುಗನಂತೆ ವೇಷ ಧರಿಸಿ ದುಡಿಯುವ ಕತೆ, ವ್ಯಕ್ತಿತ್ವ ಎಲ್ಲದರಲ್ಲೂ ಡೈನಮಿಕ್ ಅಂಶಗಳು ಕಾಣುತ್ತವೆ. ಆದರೆ ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಮುಸ್ಲಿಂ ಮಹಿಳೆಯರನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಹೀನ ಎಂದು ಚಿತ್ರಿಸುವುದಲ್ಲಿ ಪೂರ್ವಾಗ್ರಹಗಳಿವೆ, ದುರುದ್ದೇಶಗಳಿವೆ ಎನ್ನುವ ತಕರಾರು ಮಜಿದಿಯದ್ದು.

"ನನ್ನ ಸಿನಿಮಾಗಳಲ್ಲಿ ಭೂತ ಮತ್ತು ಭವಿಷ್ಯದ ಮಧ್ಯೆ ಸೇತುವೆ ಕಟ್ಟಲು ಪ್ರಯತ್ನಿಸುತ್ತಿರುತ್ತೇನೆ. ನಾನು ನಿನ್ನೆ ಬದುಕಿದ, ಕಲಿತ ಅನುಭವಗಳಿಂದ ಸತ್ಯ ಮತ್ತು ವಾಸ್ತವದ ಕಡೆಗೆ ಚಲಿಸುತ್ತಿರುತ್ತೇನೆ. ನನ್ನ ಸಿನಿಮಾ ಮೇಕಿಂಗ್ ಎಲ್ಲರೂ ಬೆರೆತು ಚಿತ್ರೀಕರಿಸುವ ರೀತಿಯದ್ದು" ಎನ್ನುತ್ತಾರೆ ಮಜಿದ್ ಮಜಿದಿ. ನೈಜವಾಗಿ ಸಿನಿಮಾದ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಮಜಿದಿಗೆ ಕಾಳಜಿ ಜಾಸ್ತಿ. ಅದಕ್ಕಾಗಿಯೇ ಕ್ಯಾಮರಾವನ್ನು ಗುಪ್ತವಾಗಿ ಇಟ್ಟು ಚಿತ್ರೀಕರಿಸುತ್ತಾರೆ.

ಜನರ ನಿತ್ಯಜೀವನವನ್ನು ಯಾವುದೇ ಕೃತಕತೆಯಿಲ್ಲದೇ ಸೆರೆ ಹಿಡಿಯಲು ಇದು ಸಹಕಾರಿ ಎನ್ನುವ ಅಭಿಪ್ರಾಯ ಅವರದ್ದು.  "ಚಿಲ್ಡ್ರನ್ ಆಫ್ ಹೆವನ್" ಚಿತ್ರದಲ್ಲಿ ಶೂ ಹಾಕಿಕೊಂಡು ಅಲಿ, ಜಾರಾ ಓಣಿಯೊಳಗಿನಿಂದ ಓಡಿ ಶಾಲೆಗೆ ಹೋಗುವ ದೃಶ್ಯವಿದೆಯಲ್ಲ ಅದನ್ನು ಗುಪ್ತ ಸ್ಥಳದಲ್ಲಿ ಕ್ಯಾಮರಾವನ್ನು ಇಟ್ಟು ಚಿತ್ರೀಕರಿಸಿದ್ದು. ಶೂಟಿಂಗ್ ನಡೆಯುತ್ತಿದೆ ಅಂತ ಸುತ್ತಮುತ್ತಲಿನ ಜನರಿಗೆ ಗೊತ್ತಿರುವುದಿಲ್ಲ. ಸಿನಿಮಾದ ಮುಖ್ಯ ಪಾತ್ರಗಳಿಗೆ ಸಹ ಕೆಲವೊಮ್ಮೆ ಯಾವ ಕಡೆಯಿಂದ ಚಿತ್ರಿಸುತ್ತಾರೆ ಎನ್ನುವ ಮಾಹಿತಿಯಿರುವುದಿಲ್ಲ. ಇದು ಸಿನಿಮಾವನ್ನು ಮತ್ತಷ್ಟು ನಿಖರವಾಗಿಸುತ್ತದೆ.
"ಮಕ್ಕಳು ಮತ್ತು ಅಪ್ರಾಪ್ತ ವಯಸ್ಸಿನ ನಟರು ಯಾವುದೇ ರೀತಿಯ ಪೂರ್ವ ನಿರ್ಧರಿತ ನಟನೆಗೆ ಮೊರೆ ಹೋಗುವುದಿಲ್ಲ. ಆದ್ದರಿಂದ ಮುಗ್ಧ ಪ್ರಪಂಚ ಕ್ಯಾಮರಾ ಮುಂದೆ ನೈಜವಾಗಿ, ನಿಖರವಾಗಿ ಸೃಷ್ಟಿಯಾಗುತ್ತದೆ". ಇದು ಮಜಿದಿಯ ಅನಿಸಿಕೆ. "ಬರನ್", "ಚಿಲ್ಡ್ರನ್ ಆಫ್ ಹೆವನ್" ಇದಕ್ಕೆ ಉದಾಹರಣೆ.  ಇವೆಲ್ಲಾ ಮಜಿದಿಯ ಸಿನಿಮಾ ನಿರ್ಮಾಣದ ಹಿಂದಿರುವ ಶೃದ್ಧೆಗೆ ಸಾಕ್ಷಿ.
 

"ಸಿನಿಮಾ ನಿರ್ಮಾಣದಲ್ಲಿ ಅಡೆತಡೆಗಳು ಇದ್ದೇ ಇವೆ... ಆದರೆ ಬಲಹೀನ ಸಿನಿಮಾ ಸೃಷ್ಟಿಸಲು ಯಾವುದೇ ರಿಯಾಯಿತಿಗಳಿಲ್ಲ" ಎನ್ನುವುದು ಮಜಿದಿ ನಂಬಿಕೊಂಡು ಬಂದ ಸಿದ್ಧಾಂತ. ಬದುಕಿನ ಬವಣೆಗಳ ನಡುವೆ ಮಸುಕಾಗದ ಜೀವನ ಪ್ರೀತಿಯ ಬಣ್ಣವನ್ನು ತೆರೆಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಎಲ್ಲರೂ ಹಪಹಪಿಸುತ್ತಾರೆ. "ಚಿಲ್ಡ್ರನ್ ಆಫ್ ಹೆವನ್" ಕೊನೆಯಲ್ಲಿ ಅಲಿ ಗುಳ್ಳೆಗಳೆದ್ದ ಕಾಲನ್ನು ನೀರಿನ ಕೊಳದಲ್ಲಿ ಅದ್ದುತ್ತಾನಲ್ಲ, ಆಗ ಮೀನುಗಳು ಆತನ ಪಾದದ ಬಳಿ ಹರಿದಾಡುತ್ತಾ ಮುತ್ತನ್ನಿಡುತ್ತವಲ್ಲ ಅಂತಹ ಸಾಂತ್ವನ ಎಲ್ಲರಿಗೂ ಬೇಕಾಗಿದೆ. ಆದ್ದರಿಂದ ಪ್ರತೀ ಸಿನಿಮಾ ನಿರ್ದೇಶಿಸಲು ಹೊರಟಾಗಲೂ ಜಗತ್ತು ಮಜಿದಿಯತ್ತ ಕೌತುಕದ ಕಣ್ಣನ್ನು ತೆರೆದಿರುತ್ತದೆ.

ಮಜಿದಿಗೆ 50: ಬದುಕಿನ "ಕತೆ"

1959ರಲ್ಲಿ ಇರಾನ್ ರಾಜಧಾನಿ ಟೆಹ್ರಾನ್ ಮಧ್ಯಮ ವರ್ಗದಲ್ಲಿ ಮಜಿದ್ ಮಜಿದಿ ಹುಟ್ಟಿದ್ದು. ತನ್ನ ಹದಿನಾಲ್ಕನೇ ವಯಸ್ಸಿಗೆ ಹವ್ಯಾಸಿ ನಾಟಕ ಕಂಪೆನಿಗಳಲ್ಲಿ ನಟಿಸಲು ಪ್ರಾರಂಭಿಸಿದ್ದ ಬಾಲಕ ಮಜಿದಿ. ನಂತರದ ದಿನಗಳಲ್ಲಿ ಟೆಹ್ರಾನ್ನಲ್ಲಿರುವ "ಇನ್ಟ್ಸಿಟ್ಯೂಟ್ ಆಫ್ ಡ್ರಾಮಾಟಿಕ್ ಆರ್ಟ್ಸ್"ನಲ್ಲಿ ಕಲಿಕೆ ಮುಂದುವರಿಕೆ. 1979ರಲ್ಲಿ ನಡೆದ "ಇರಾನ್ ಕ್ರಾಂತಿ" ಮಜಿದ್ ಮಜಿದಿಯ ಜೀವನವನ್ನೇ ಬದಲಿಸಿತು (ಶಾ ಮೊಹಮ್ಮದ್ ರೆಜಾ ಪಲ್ಹವಿಯ ರಾಜಪ್ರಭುತ್ವವನ್ನು ಮುರಿದು ಮುಸ್ಲಿಂ ಪ್ರಜಾಪ್ರಭುತ್ವ ಸ್ಥಾಪನೆಗೆ ಕ್ರಾಂತಿ ನಾಂದಿಯಾತು. ಇದರ ನೇತೃತ್ವ ವಹಿಸಿದ್ದು ಆಯೋತೊಲ್ಲ ಖೊಮೇನಿ).

ಸಿನಿಮಾವನ್ನು ಇಷ್ಟ ಪಡುತ್ತಿದ್ದ ಮಜಿದಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲು ಪ್ರಾರಂಭವಾಯಿತು. 1081ರಿಂದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ, 1985ರಲ್ಲಿ ಮೊಹ್ಸೀನ್ ಮಕ್ಮಲ್ಬಫ್ ನಿರ್ದೇಶನದ ಮೊದಲ ಚಿತ್ರ "ಬಾಯ್ಕಾಟ್"ನಲ್ಲಿ ನಾಯಕನಾಗಿ ನಟಿಸುವುದರೊಂದಿಗೆ ಹೆಸರು, ಅವಕಾಶ ಎರಡೂ ಸಿಕ್ಕಿತು.  ಮಕ್ಮಲ್ಬಫ್ ನ ಜೀವನಕ್ಕೆ ಹತ್ತಿರವಾಗಿದ್ದ 
ಈ ಕತೆಯಲ್ಲಿ ಇರಾನ್ ಕ್ರಾಂತಿ ಪೂರ್ವ ವಾತಾವರಣದಲ್ಲಿ ಕಥಾ ನಾಯಕ ತನ್ನ ಕಮ್ಯುನಿಷ್ಟ್ ನಿಲುವು
ಗಳಿಂದಾಗಿ ಮರಣದಂಡನೆಗೆ ಗುರಿಯಾಗುತ್ತಾನೆ.

 
ಈ ಸಿನಿಮಾ ನಂತರ ಕೆಲವು ಸಿನಿಮಾಗಳಲ್ಲಿ ಮಜಿದಿಯ ನಟನೆ ಮುಂದುವರಿಯಿತು. ಕ್ರಮೇಣ ಕಿರುಚಿತ್ರಗಳತ್ತ ಆಸಕ್ತಿ ಹೊರಳಿತು. 
1993ರಲ್ಲಿ "ಬದುಕ್" ಸಿನಿಮಾದ ಮೂಲಕ ಮಜಿದ್ ಮಜಿದಿಯ ನಿರ್ದೇಶನದ  ಬದುಕು ಶುರುವಾಯಿತು. ಮಕ್ಕಳ ಜೀತದ ಕಥೆ ಹೊಂದಿದ್ದ ಈ ಸಿನಿಮಾ ಇರಾನಿನಲ್ಲೇ ಬ್ಯಾನ್ ಆಗುವ ಭೀತಿಯಿತ್ತು ಎಂದು ಮಜಿದಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಂತರ ಮಜಿದಿಯ ಚಿತ್ರಯಾತ್ರೆ ನಿರಾತಂಕವಾಗಿ ಸಾಗಿತು. "ದಿ ಫಾದರ್", "ಚಿಲ್ಡ್ರನ್ ಆಫ್ ಹೆವನ್", "ಕಲರ್ ಆಫ್ ಪ್ಯಾರಡೈಸ್", "ಬರನ್", "ದಿ ವಿಲ್ಲೋ ಟ್ರೀ" ಸಿನಿಮಾಗಳನ್ನು ನಿರ್ದೇಶಿಸಿದರು. ಇತ್ತೀಚೆಗೆ ನಿರ್ದೇಶಿಸಿದ ಸಿನಿಮಾ "ದಿ ಸಾಂಗ್ ಆಫ್ ಸ್ಪ್ಯಾರೋಸ್". ಇದರ ಜೊತೆ 4 ಕಿರುಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ನಟನಾಗಿ ಅಭಿನಯಿಸಿದ ಚಿತ್ರಗಳು 13. ಚಿತ್ರ ಬರಹಗಾರನಾಗಿ 15 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. 2008ರ ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನಾ ಸರ್ಕಾರ ಬೀಜಿಂಗ್ ನಗರವನ್ನು ಪರಿಚಯಿಸುವ ಡಾಕ್ಯುಮೆಂಟರಿ ನಿರ್ಮಾಣಕ್ಕೆ ವಿಶ್ವದ 5 ಸಿನಿಮಾ ನಿರ್ದೇಶಕರನ್ನು ಆಹ್ವಾನಿಸಿತ್ತು. ಅದರಲ್ಲಿ ಮಜಿದ್ ಮಜಿದಿ ಸಹ ಒಬ್ಬರು. ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು ಮಜಿದಿ ಸಿನಿಮಾಗಳಿಗೆ ಬಂದಿವೆ.

ಭಾನುವಾರ, ಏಪ್ರಿಲ್ 5, 2009

ಬದುಕಿನ ಫುಟ್ಪಾತಿನಲ್ಲಿ ಭರವಸೆಯ ರಂಗೋಲಿ



ಚಿತ್ರ: "ದಿ ವೈಟ್ ಬಲೂನ್" 
                     ಭಾಷೆ: ಪರ್ಶಿಯನ್                        
ನಿರ್ದೇಶಕ: ಜಾಫರ್ ಪನಾಹಿ
ಅವಧಿ: 85 ನಿಮಿಷ

ರಾನ್ ಸಿನಿಮಾ ಅಂದ ತಕ್ಷಣ ಈಗಿನವರಿಗೆ ನೆನಪಾಗುವ ಹೆಸರುಗಳು ಮುಖ್ಯವಾಗಿ ಮೂರು. ಮೊಹ್ಸೀನ್ ಮಕ್ಮಲ್ಬಫ್, ಮಜಿದ್ ಮಜಿದಿ ಮತ್ತು ಜಾಫರ್ ಪನಾಹಿ. ಇವರೆಲ್ಲ ಹೊಸ ಅಲೆಯ ಇರಾನಿ ಸಿನಿಮಾ ನಿರ್ದೇಶನದ ಮೂಲಕ ಜಗತ್ತಿಗೆ ಹೆಚ್ಚು ಪರಿಚಿತರಾದವರು. 
ದರಿಯಸ್ ಮೆಹ್ರ್ಜುಯಿ 1969ರಲ್ಲಿ "ದಿ ಕೌ" ಸಿನಿಮಾ ನಿರ್ದೇಶಿಸುವುದರೊಂದಿಗೆ ಹೊಸ ಅಲೆಯ ಚಿತ್ರಗಳು ಇರಾನಿನಲ್ಲಿ ಪ್ರಾರಂಭವಾದವು.  ಈ ರೀತಿಯ ಸಿನಿಮಾ ನಿರ್ದೇಶಿಸುವವರ ಪಟ್ಟಿ ದೊಡ್ಡದಿದೆ. ನಿರ್ದೇಶಕ ಅಬ್ಬಾಸ್ ಕಿಯಾರೊಸ್ತಮಿ ಕೂಡಾ ದೊಡ್ಡ ಹೆಸರು. ಇವರೆಲ್ಲರ ನಿರ್ದೇಶನದ ಸಿನಿಮಾಗಳು ಜಗತ್ತಿಗೆ ಹೆಚ್ಚು ಪರಿಚಿತ.

ಇರಾನಿ ಸಿನಿಮಾಗಳೆಂದರೆ ಬದುಕಿನ ಸ್ಪಂದನೆಗಳ ಭಾವಕೋಶ.
ಅಸಹಾಯಕ ಅಪ್ಪ, ಕನಸು ಕಂಗಳ ಮುದ್ದು ಪುಟಾಣಿಗಳು....
ಜೊತೆ ಬಿಡಲೊಲ್ಲದ ಬಡತನ, ಅನಕ್ಷರತೆ, ಧಾರ್ಮಿಕ ಕಟ್ಟಳೆಗಳು. ಇದೆಲ್ಲಾ ಒಟ್ಟಿಗಿದ್ದರೂ ಅವರ ಸಿನಿಮಾ ಜಗತ್ತಿನ ಪಾತ್ರಗಳಿಗೆ ಬದುಕಲು ಕಲಿಯುವ ಉತ್ಸಾಹವಿದೆ. ಬದುಕಿನ ಸಣ್ಣ ಸಣ್ಣ ಖುಷಿಗಳೆಡೆಗೆ ಬೊಗಸೆ ತುಂಬುವಷ್ಟು ಅಕ್ಕರೆಯಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರತಿ ಕ್ಷಣವನ್ನು ಆನಂದಿಸುವ, ಅದರೊಳಗೆ ಕರಗಿ ಒಂದಾಗಿ ವಾಸ್ತವವನ್ನು ಎದುರಿಸುವ ಛಲವಿದೆ. ಜಾಫರ್ ಪನಾಹಿ ನಿರ್ದೇಶನದ "ದಿ ವೈಟ್ ಬಲೂನ್" ಇಂತಹ ಸಂವೇದನೆಗಳನ್ನು ಒಳಗೊಂಡ ಸಿನಿಮಾ.

ಜಾಫರ್ ಪನಾಹಿ ಸಿನಿಮಾ ನಿರ್ದೇಶನದ ಜೊತೆ ಸ್ಕ್ರಿಪ್ಟ್ ಬರಹಗಾರನಾಗಿ, ಸಂಕಲನಕಾರನಾಗಿ ಛಾಪು ಮೂಡಿಸಿದಾತ. ಇರಾನಿ ಹೆಣ್ಮಕ್ಕಳ ಬವಣೆಯ ಕುರಿತು ಈತ ನಿರ್ದೇಶಿಸಿದ "ದಿ ಸರ್ಕಲ್" ಮತ್ತು "ಕ್ರಿಮ್ಸನ್ ಗೋಲ್ಡ್" ಚಲನಚಿತ್ರಗಳು ಇರಾನ್ ದೇಶದಲ್ಲೇ ಬ್ಯಾನ್ ಆಗಿವೆ. ಆತ ನಿರ್ದೇಶಿಸಿದ ಮೊದಲ ಸಿನಿಮಾ-"ದಿ ವೈಟ್ ಬಲೂನ್". ಈ ಸಿನಿಮಾ ನಿರ್ಮಾಣವಾದದ್ದು 1995ರಲ್ಲಿ. ದಿ ಗಾರ್ಡಿಯನ್ ಪತ್ರಿಕೆ ಹೆಸರಿಸಿದ ವಿಶ್ವದ 50 ಅತ್ಯುತ್ತಮ ಕೌಟುಂಬಿಕ ಸಿನಿಮಾಗಳಲ್ಲಿ "ದಿ  ವೈಟ್ ಬಲೂನ್" ಹೆಸರೂ ಸೇರಿದೆ.

ಏಳು ವರ್ಷದ ಪುಟಾಣಿ ರಜಿಯಾ ಹೊಸ ವರ್ಷಕ್ಕೆ ಗೋಲ್ಡ್ ಫಿಶ್ ತರಲು ಮಾರ್ಕೆಟಿಗೆ ಹೋಗುವುದು ಸಿನಿಮಾದ ಕತೆ.
ಮನೆಯಲ್ಲಿ ಎದುರಿನ ಕೊಳದಲ್ಲಿ ಮೀನುಗಳಿದ್ದರೂ ರಜಿಯಾಗೆ ಅದರಲ್ಲಿ ಅಷ್ಟು ಆಸಕ್ತಿ ಇಲ್ಲ. ದಪ್ಪಗೆ ಇರುವ ಗೋಲ್ಡ್ ಫಿಶ್ ನೀರಲ್ಲಿ ಚಲಿಸುವಾಗ ಡ್ಯಾನ್ಸ್ ಮಾಡಿದಂತೆ ಕಾಣುವುದರಿಂದ ರಜಿಯಾಗೆ ಅದೇ ಇಷ್ಟ. ಹೊಸ ವರ್ಷಕ್ಕೆ ಅದೇ ಬೇಕು ಅನ್ನುವ ಹಟ. ಅದಕ್ಕಾಗಿ ಅಮ್ಮನಿಗೆ ಬೆಣ್ಣೆ ಹಚ್ಚುವ ಕೆಲಸ. ಮೀನು 100 ಟೊಮನ್ನಷ್ಟು ದುಬಾರಿ ಅಂತ ತಿಳಿದಾಗ ಅಮ್ಮ ಹಣ ಕೊಡಲು ಒಪ್ಪುವುದಿಲ್ಲ. ರಜಿಯಾಳಿಗೆ ಗೋಲ್ಡ್ ಫಿಶ್ ಬೇಕೇ ಬೇಕು. ಅಮ್ಮನನ್ನು ಮನವೊಲಿಸುವ ಚಾಣಾಕ್ಷತೆಯೆಲ್ಲಾ ಖಾಲಿಯಾಗುವ ಹೊತ್ತಿಗೆ ಆಕೆಯ ಕಣ್ಣಲ್ಲಿ ಹನಿ ನೀರ ತೊರೆ. ಆಗ ಸಹಾಯಕ್ಕೆ ಬರುವುದು ಆಕೆಯ ಅಣ್ಣ ಅಲಿ. ಆತ ಅಮ್ಮನನ್ನು ಮನವೊಲಿಸಿ ಹಣ ಪಡೆಯುತ್ತಾನೆ. ತಂಗಿಯ ಮೊಗದಲ್ಲಿ ನಿರ್ಮಲ ನಗೆಯ ಕಡಲು.

ನಿರ್ದೇಶಕ ಜಾಫರ್ ಪನಾಹಿ

ಹಾಗೆ ಅಮ್ಮನಿಂದ 500 ಟೊಮನ್ ನೋಟನ್ನು ಪಡೆದು ಮೀನು ತರಲು ಓಡುವ ರಜಿಯಾ ದಾರಿಯಲ್ಲಿ ಹಣವನ್ನು ಕಳೆದುಕೊಳ್ಳುತ್ತಾಳೆ. ಹುಡುಕುತ್ತಾ ಮತ್ತೆ ಹಿಂದಕ್ಕೆ ಹೋದಾಗ ಅಂಗಡಿಯೊಂದರ ನೆಲಮಾಳಿಗೆಯಲ್ಲಿ ನೋಟು ಬಿದ್ದಿರುವುದು ಕಿಟಕಿಯಾಕಾರದ ಕಬ್ಬಿಣದ ಸರಳಿನ ಸಂದಿಯಿಂದ ಕಾಣುತ್ತದೆ. ಅಂಗಡಿಯಾತ ಹೊಸ ವರ್ಷಕ್ಕೆ ಊರಿಗೆ ಹೋಗಿರುವುದರಿಂದ ಹಿಂದಿರುಗುವುದು ಒಂದು ವಾರದ ನಂತರವೇ ಎನ್ನುತ್ತಾನೆ ಪಕ್ಕದ ಅಂಗಡಿಯ ಟೈಲರ್.
ರಜಿಯಾಳ ಮುಖ ಬಾಡುತ್ತದೆ. ಅಸಹಾಯಕತೆ ಕಾಡುತ್ತದೆ. 

ದಾರಿ ಕಾಣದೆ ಅಂಗಡಿಯ ಮುಂದೆ ರಜಿಯಾ ಕುಳಿತಿರುವಾಗ ಸೈನಿಕನೊಬ್ಬ ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಆತನಿಗೆ ಇಬ್ಬರು ತಂಗಿಯಂದಿರು. ಆಕೆಯ ಜೊತೆ ಅಕ್ಕರೆಯಿಂದ ಮಾತಾಡುತ್ತಾ ಹೋಗುತ್ತಾನೆ. ರಜಿಯಾಳ 
ಕಣ್ಣೆದುರು ದುಡ್ಡಿದ್ದರೂ ಕೈಗೆ ಸಿಕ್ಕದ ಆಸೆಪಟ್ಟ ಮೀನು, ಮನೆಗೆ ಹೋಗಲು ದುಡ್ಡಿಲ್ಲದಿದ್ದರೂ ರಜಿಯಾಳಲ್ಲಿ ತನ್ನ ಪ್ರೀತಿಯ ಐದು ವರ್ಷದ ಪುಟ್ಟ ತಂಗಿಯನ್ನು ಕಂಡುಕೊಳ್ಳುವ ಸೈನಿಕನ ಸಮಾಧಾನದಲ್ಲಿ, ಅಸಹಾಯಕತೆಯಲ್ಲೇ ಬದುಕುವ ದಾರಿ ಹುಡುಕುವ ಕಾತರವಿದೆ. ಸಿನಿಮಾದ ಮಹತ್ವದ ಸನ್ನಿವೇಶವಿದು.
ಕೊನೆಗೆ ಆಕೆಯನ್ನು ಹುಡುಕುತ್ತಾ ಬರುವ ಅಣ್ಣ ಅಲಿಯ ಜೊತೆ ಸೇರಿ ಹಣವನ್ನು ತೆಗೆಯಲು ಹರಸಾಹಸ ಪಡುತ್ತಾಳೆ ರಜಿಯಾ.
ನಾನಾ ಕಸರತ್ತುಗಳ ನಂತರ ಬಲೂನು ಮಾರುವ ಹುಡುಗನ ಕೋಲಿಗೆ ಚ್ಯೂಯಿಂಗಮ್ ಅಂಟಿಸಿ ನೋಟನ್ನು ಹೊರ ತೆಗೆಯುವಲ್ಲಿ ಕೊನೆಗೂ ಯಶಸ್ವಿಯಾಗುತ್ತಾರೆ ಅಣ್ಣ-ತಂಗಿ.

ರಜಿಯಾಳ ಪುಟ್ಟ ಆಸೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ದೊಡ್ಡವರಾಗುತ್ತಾ ನಾವೇ ಬತ್ತಿಸಿಕೊಂಡ ಸಣ್ಣ ಪುಟ್ಟ ಸಂತೋಷಗಳ ಚಿಲುಮೆಗೆ ಜೀವ ಬಂದಂತಾಗುತ್ತದೆ.

ಭಾನುವಾರ, ಮಾರ್ಚ್ 22, 2009

"ಸಾವಿನ ಹೊಸ್ತಿಲಲ್ಲಿ ನಿಂತು ನಕ್ಕವರ ಕತೆ"



ಚಿತ್ರ: ಲೈಫ್ ಈಸ್ ಬ್ಯೂಟಿಫುಲ್
ಭಾಷೆ: ಇಟಾಲಿಯನ್
ನಿರ್ದೇಶಕರಾಬರ್ಟೋ ಬೆನಿನಿ
ಅವಧಿ: 116 ನಿಮಿಷ

"ಲೈಫ್ ಈಸ್ ಬ್ಯೂಟಿಫುಲ್" 1998ರಲ್ಲಿ ಬಿಡುಗಡೆಯಾದ ಇಟಾಲಿಯನ್ ಸಿನಿಮಾ. ಕಲ್ಪನೆಯೊಳಗೆ ನಿರ್ಮಿಸು ಪ್ರೀತಿಯ ಜಗತ್ತು ಈ ಸಿನಿಮಾದ ಜೀವಾಳ.

ನಾಯಕ ಗಿಡೋ ಯಹೂದಿ. ವೃತ್ತಿಯಲ್ಲಿ ವೈಟರ್. ಅಸಾಧಾರಣ ಹಾಸ್ಯಪ್ರಜ್ಞೆ, ಲವಲವಿಕೆಯ ವ್ಯಕ್ತಿತ್ವ ಆತನದ್ದು. ಸುಂದರಿ ದೋರಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಜೋಶ್ವಾ ಎನ್ನುವ ಪುಟ್ಟ ಮಗನ ಜೊತೆ ಈತನದ್ದು ಸುಖೀ ಸಂಸಾರ.

ಈ ನೆಮ್ಮದಿಯನ್ನು ಕಲಕಿಬಿಡುವುದು ಎರಡನೇ ಮಹಾಯುದ್ಧದ ಕರಿನೆರಳು. ಹಿಟ್ಲರ್ ಜ್ಯೂ (ಯಹೂದಿ)ಗಳನ್ನು ಬಂಧಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಹೊತ್ತಿಗೇನೇ, ಗಿಡೋ ಯಹೂದಿ ಎನ್ನುವ ಕಾರಣಕ್ಕಾಗಿ ಆತನ ಜೊತೆ ಮಗ ಹಾಗೂ ಅಂಕಲ್ನನ್ನು ಬಂಧಿಸಿ ಕಾನ್ಸಂಟ್ರೇಶನ್ ಕ್ಯಾಂಪಿಗೆ ತಳ್ಳುತ್ತಾರೆ. ಹೆಂಡತಿ ಇಷ್ಟಪಟ್ಟು ಆತನಿಗೆ ಅಲ್ಲಿಯೂ ಜೊತೆಯಾಗುತ್ತಾಳೆ. ಅಲ್ಲಿ ಆತ ನಾಜಿಗಳ ಕೈಯಿಂದ ತನ್ನ ಮಗ ಮತ್ತು ಹೆಂಡತಿಯನ್ನು ಪಾರು ಮಾಡಲು ಹೋರಾಡುವ ಕತೆ "ಲೈಫ್ ಈಸ್ ಬ್ಯೂಟಿಫುಲ್" ಸಿನಿಮಾದ್ದು.

ಗಿಡೋ ಎನ್ನುವ ಪಾತ್ರವೇ ಅತ್ಯಂತ ಸಮರ್ಥವಾಗಿ ಚಿತ್ರಿತಗೊಂಡಿದೆ. ಸಿನಿಮಾದಲ್ಲಿ ಗಿಡೋ ನಗಿಸುತ್ತಾ, ನಗುತ್ತಾ ಸನ್ನಿವೇಶಗಳನ್ನು ಎದುರಿಸುತ್ತಾನೆ. ಆತನ ಹಾಸ್ಯಪ್ರಜ್ಞೆ ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗೂ ಬತ್ತುವುದಿಲ್ಲ. ಪುಟ್ಟ ಮಗ ಜೋಶ್ವಾನಿಗೆ ತಾವಿಬ್ಬರೂ ಬದುಕುತ್ತಿರುವ ಕಾನ್ಸಂಟ್ರೇಶನ್ ಕ್ಯಾಂಪಿನ ಕ್ರೂರತೆಯನ್ನು ಆತ ಹೇಳುವುದಿಲ್ಲ. "ಈ ಕ್ಯಾಂಪಿನ ಒಳಗಡೆ ನಾವೆಲ್ಲಾ ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿದ್ದೇವೆ. ಸಾವಿರ ಅಂಕ ಕೂಡಿಟ್ಟರೆ ಗೆಲ್ಲುತ್ತೇವೆ. ಮೊದಲ ಬಹುಮಾನ ನಿನ್ನಿಷ್ಟದ ಟ್ಯಾಂಕರ್" ಎಂದು ಆಸೆ ಹುಟ್ಟಿಸುತ್ತಾನೆ. ಮಗನಿಗದು ಸುಂದರ ಆಟವಾಗಿ ಕಾಣುತ್ತದೆ. ಮುಗ್ಧ ಮಗುವಿನ ಮನಸ್ಸು, ಬಾಲ್ಯ, ಕನಸು ವಾಸ್ತವದ ಸತ್ಯದ ಮಧ್ಯೆ ಕಳೆದು ಹೋಗಬಾರದು ಎನ್ನುವ ಅಪ್ಪನ ಕಾಳಜಿ ಎದ್ದು ಕಾಣುತ್ತದೆ.

ಈ ಆಟದ ನೆಪದಲ್ಲೇ ಮಗನನ್ನು ಸೈನಿಕರ ಕೈಗೆ ಸಿಗದಂತೆ ಬಚ್ಚಿಡುತ್ತಾನೆ ಗಿಡೋ. ನಿರ್ದಯ ವಾಸ್ತವ ಎದುರಿಗಿದ್ದರೂ ಸ್ಪರ್ಧೆ ಎನ್ನುವ ಕಲ್ಪನೆಯೊಳಗೆ ಮಗನ ಸಂವೇದನೆಗಳನ್ನು ಗಿಡೋ ಜೀವಂತವಾಗಿಡುತ್ತಾನೆ. ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗಡೆ ಅವನು ಕೂಡಾ ಜೀವಂತವಾಗಿರಲು ಪ್ರಯತ್ನಿಸುವುದು ತಾನು ಸೃಷ್ಟಿಸಿದ ಸ್ಪರ್ಧೆಯ ಜಗತ್ತಿನಿಂದಾಗಿಯೇ.

ಆತ ಕೊನೆವರೆಗೂ ಉಳಿಸಿಕೊಳ್ಳುವ ನಗು, ಲವಲವಿಕೆ, ಸ್ಥಿಮಿತ ಮನಸ್ಥಿತಿ ನಮ್ಮನ್ನು ಸೆಳೆಯುತ್ತದೆ. ಗಿಡೋ ಮಗನೆದುರು ಮಾಡುವ ಮಾರ್ಚ್ ಫಾಸ್ಟ್, ಅದನ್ನು ಬಚ್ಚಿಟ್ಟುಕೊಂಡ ಡಬ್ಬಿಯೊಳಗಿನಿಂದ ನೋಡುವ ಮಗ ಸಿನಿಮಾವಾಗಿ ಕಾಡಲು ಈ ಒಂದು ಸನ್ನಿವೇಶ ಸಾಕು. ಲವಲವಿಕೆಯೊಂದಿಗೆ ಪ್ರಾರಂಭವಾಗುವ ಸಿನಿಮಾ ಕಾನ್ಸಂಟ್ರೇಶನ್ ಕ್ಯಾಂಪಿನೊಳಗಿದ್ದರೂ, ಲವಲವಿಕೆಯನ್ನು ಕಳೆದುಕೊಳ್ಳುವುದಿಲ್ಲ.
 
ಇಟೆಲಿಯ ಪ್ರಖ್ಯಾತ ಹಾಸ್ಯನಟ ರಾಬರ್ಟೋ  ಬೆನಿನಿ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ಐತಿಹಾಸಿಕ ಘಟನೆಯೊಂದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೇಳುವ ಕತೆಯಲ್ಲಿ, ಕಾನ್ಸಂಟ್ರೇಶನ್ ಕ್ಯಾಂಪು ಕತೆಯ ಭಾಗವಾಗಿ ಬರುತ್ತದೆಯೇ ಹೊರತು ಇತಿಹಾಸದ ಅಂಕಿ-ಅಂಶಗಳ ಪಾಠಶಾಲೆಯಾಗುವುದಿಲ್ಲ. ಬಹುಶಃ ಇಲ್ಲೇ ನಿರ್ದೇಶಕನ ಗೆಲುವಿರುವುದು. ಚಿತ್ರಕತೆ, ಸಂಗೀತ, ಪಾತ್ರವರ್ಗದಲ್ಲಿ ಅಚ್ಚುಕಟ್ಟಿದೆ.  

ಲೈಫ್ ಈಸ್ ಬ್ಯೂಟಿಫುಲ್  ತಯಾರದದ್ದು 1997ರಲ್ಲಿ. ವಿವಿದೆಡೆ 52 ಪ್ರಶಸ್ತಿಗಳನ್ನು ಈ ಸಿನಿಮಾ ಚಾಚಿಕೊಂಡಿದೆ.  ಅತ್ಯುತ್ತಮ ನಟ(ರಾಬರ್ಟೋ  ಬೆನಿನಿ), ಅತ್ಯುತ್ತಮ ವಿದೇಶಿ ಸಿನಿಮಾ(ಇಟಲಿ), ಅತ್ಯುತ್ತಮ ಸಂಗೀತ(ನಿಕೋಲಾ ಪಯೋವನಿ) ಸೇರಿ ಒಟ್ಟು ಮೂರು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  

(ಕನ್ನಡ ಪ್ರಭದ "ಹೋಂ ಥಿಯೇಟರ್" ಅಂಕಣಕ್ಕೆ ಬರೆದ ಬರಹ. ಇದಕ್ಕೆ ಅಸಂಬದ್ಧ ಹೆಡ್ಡಿಂಗು ಕೊಟ್ಟಿದ್ದೆ. ಈಗಿರುವ ಆಕರ್ಷಕ ಶೀರ್ಷಿಕೆ ಕೊಟ್ಟವರು ಉದಯ ಮರಕಿಣಿ ಸರ್.)