ಹಾಗೆ ಸುಮ್ಮನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಗೆ ಸುಮ್ಮನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 25, 2011

ಬಿಡಿಸದ ಪ್ರೇಮಚಿತ್ರ


ಇಟೆಲಿಯ "ಸಿನಿಮಾ ಪ್ಯಾರಡಿಸೋ" ವನ್ನು ಮತ್ತೆ ಮತ್ತೆ ನೋಡುವುದರಲ್ಲೇ ಒಂದು ಸುಖವಿದೆ. ಅದರಲ್ಲಿ ಬರುವ ಥಿಯೇಟರಿನ ಪ್ರೊಜೆಕ್ಷನಿಸ್ಟ್ ಆಲ್ಫ್ರೆಡೋ, ಸಿನಿಮಾವೆಂಬ ವಿಸ್ಮಯದ ನೆರಳು ಬೆಳಕಿನಾಟವನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಕರಗಿ ಹೋಗುವ ಟೋಟೋ, ಇವರಿಬ್ಬರೂ ನಮ್ಮೆಲ್ಲರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಆಲ್ಫ್ರೆಡೋ ಒಂದು ಸನ್ನಿವೇಶದಲ್ಲಿ  ಅಮರ ಪ್ರೇಮಿಗಳಾದ ಟೋಟೋ ಹಾಗೂ ನಾಯಕಿ ಒಂದಾಗಬೇಕಾದ ಕ್ಷಣವನ್ನು ತಪ್ಪಿಸುವ ಸನ್ನಿವೇಶವಿದೆ.. ಪ್ರೀತಿಯ ಮತ್ತಿನಲ್ಲಿ ಗುರಿಯನ್ನು ಮರೆಯುವ ಹಂತಕ್ಕೆ ಬಂದಿದ್ದ ಟೋಟೋಗೆ ವೃದ್ಧ ಆಲ್ಫ್ರೆಡೋ ನಿಜವಾದ ಗುರುವಾಗುತ್ತಾನೆ. ಗುರಿಯನ್ನು ಗುರುತಿಸಿ ಕೊಡುತ್ತಾನೆ. ಟೋಟೋಗೆ ಆ ಕ್ಷಣದಲ್ಲಿ ತನ್ನ ಪ್ರೇಯಸಿಯ ಭೇಟಿಯನ್ನು ಸಾಧ್ಯವಾಗಿಸದೇ ಹೋದ ಆಲ್ಫ್ರೆಡೋ ಬಗ್ಗೆ ಸಿಟ್ಟು, ಅಸಹನೆ...ಎಷ್ಟೇ ಹತಾಶೆ ಅನುಭವಿಸಿದರೂ ಆ ನೋವು ಆತನಿಗೆ ಗುರಿಯನ್ನು ದಿಟ್ಟಿಸಿ ನೋಡಲು ಸಹಕರಿಸುತ್ತದೆ. ಟೋಟೋಗದು ಅವನ ಮುಪ್ಪಿನ ಸಮಯದಲ್ಲಿ ಗೊತ್ತಾಗುತ್ತದೆ.
------------------------------
ಬಿಟ್ಟೂ ಬಿಡದೇ ಕಾಡುವ ಅವಳ ಮುಂಗುರುಳು, ಅದ್ಯಾವುದೋ ಅಪರ ಘಳಿಗೆಯಲ್ಲೂ ಮಾಸದೇ ಉಳಿದ ನಗು, ಮೊಬೈಲಿನ ಡ್ರಾಫ್ಟ್ ಬಾಕ್ಸಿನಲ್ಲಿ ಬಾಕಿ ಉಳಿದ ಸಿಹಿ ಸಂಕಟದ ಪುಟಾಣಿ ಸಾಲು. ಬಿಡದೇ ಸುರಿಯೋ ಜಡಿಮಳೆ, ರೈಡ್ಗಾಗೇ ಕಾದು ಕುಳಿತಂತೆ ಖಾಲಿಯಾಗಿರೋ ಜಂಟಿ ರಸ್ತೆ..ಉಫ್...ಸಾಕಪ್ಪಾ ಸಾಕು...ನೆನೆದಷ್ಟೂ ನೆನೆಯುತ್ತೇವೆ, ಕಾಡಿಸಿ ಕೊಲ್ಲಲ್ಪಡುತ್ತೇವೆ. ನಮಗೂ ಒಬ್ಬ ಆಲ್ಫ್ರೆಡೋ ಬೇಕು..
ಬಿಲ್ಕುಲ್ ಬೇಕೇ ಬೇಕು. ಅವನು ನಮ್ಮನ್ನು ದೇವದಾಸನನ್ನಾಗುವುದನ್ನು ತಪ್ಪಿಸುತ್ತಾನೆ, ವಿರಹಿಯಾಗಿಯೇ ಉಳಿಯುತ್ತಾ ಸವಿ ನೆನಪಿನಲ್ಲಿ ಅನೇಕಾರು ವರ್ಷಗಳ ನಂತರ ಪ್ರೀತಿಸಿದ ಮೊದಲ ಹುಡುಗಿಯನ್ನು ಬೆಂಬತ್ತುವಂತೆ ಮಾಡುತ್ತಾನೆ. ಅವಳನ್ನು ಮೊದಲ ಬಾರಿಗೆ ಚುಂಬಿಸಿದ ಸುಖದ ಘಳಿಗೆ, ಅವಳ ಮುಂಗುರುಳನ್ನು ಉಂಗುರವಾಗಿಸಿದ ಕ್ಷಣ, ಅವಳ ಹೆಜ್ಜೆ ಮೇಲೆ ಮೊತ್ತಮೊದಲು ಹೆಜ್ಜೆಯಿಟ್ಟ ಹುರುಪು ಎಲ್ಲವೂ ನಮ್ಮ ನೆನಪಿನ ಪರಿಧಿಯಲ್ಲೇ ಹೆಪ್ಪುಗಟ್ಟಿ ಬಿಡುವಂತೆ ಮಾಡಿಬಿಡುತ್ತಾನೆ ನಮಗೆ ಗೊತ್ತೇ ಆಗದಂತೆ. ಟೋಟೋಗೆ ಬೆನ್ನಿಗಿದ್ದು ಹೇಗೆ ಪೊರೆದನೋ ಹಾಗೆ; ಒಂದು ಒಳ್ಳೆಯ, ಸಾತ್ವಿಕ, ಆರೋಗ್ಯಕರ ಸುಳ್ಳನ್ನು ಸತ್ಯವಾಗಿಸುವ ಮೂಲಕ. ನಮ್ಮನ್ನು ಹಾಗೂ ನಮ್ಮ ಪ್ರೇಯಸಿಯನ್ನು ದೂರ ಮಾಡಿ, ಬದುಕಿಗೊಂದು ಮೋಕ್ಷ ಕರುಣಿಸುತ್ತಾನೆ. ಅದರಿಂದಾಗಿ ಆ ತಿರುವಿನ ನಂತರದ ದಾರಿಗೆ ಒಂದು ವಿಸ್ಮಯವೇ ಒದಗಿ ಬಂದಿರುತ್ತದೆ.
ನಮ್ಮ ಯೌವನದ ಪ್ರಣಯದ ಕ್ಷಣಗಳು ಜೀವನ ಸಾರ್ಥಕ್ಯದ ಮಹಾ ತ್ಯಾಗದ ಘಳಿಗೆಗಳು ಅಂತ ಕೊನೆಯವರೆಗೂ ಅನ್ನಿಸುವುದಕ್ಕಿಂತ ಹೆಚ್ಚಾಗಿ ಅಂತಹದೊಂದು ಸನ್ನಿವೇಶ ದಿವ್ಯವಾಗಿತ್ತು ಎನ್ನುವುದೇ ಅಳಿಸಲಾಗದ ಅಕ್ಷರ ಸ್ಪಂದನೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಸಾಧ್ಯವಾಗಿಸುವವನು ಅವನೊಬ್ಬನೇ--ಆಲ್ಫ್ರೆಡೋ. ಅವನಿಗೆ ನಮ್ಮ ಮೇಲಿರುವ ಪ್ರೀತಿ ಹೇಳಿಸುವ ಸುಳ್ಳು ಬೇಕು. ಅದರಿಂದಾಗೇ ಸಿನಿಮಾ ಪ್ರೋಜೆಕ್ಟರ್ನ ಕಿಂಡಿಯ ಮೂಲಕ ಪರದೆಯ ಮೇಲೆ ಹಾಯುವ ಬೆಳಕಿನ ಕಿರಣಗಳಲ್ಲಿ ನಮ್ಮ ಬಿಡಿ ಬಿಡಿ ಸ್ಥಬ್ದ ಚಿತ್ರಗಳಿಗೆ ಜೀವ, ಚಲನೆ ಬಂದು ಕೂರುತ್ತದೆ. ಬತ್ತಿದ ಜೀವ ಸೆಲೆ ಮತ್ತೆ ಪುಟಿದುಕೊಂಡಂತೆ, ಚಿಕ್ಕ ಮಕ್ಕಳಂತೆಯೇ ಗಾಳಿಪಟ ಹಿಡಿದು ಓಡುತ್ತೇವೆ. ಮುಸ್ಸಂಜೆಯ ಗದ್ದೆ ಬದುವಿನಲ್ಲಿ.
------------
ನೋಡ ನೋಡುತ್ತಲೇ ಮಳೆಗಾಲ. ಬೆನ್ನತ್ತುತ್ತೆ ಚಳಿಗಾಲ. ಹೊದ್ದು ಮಲಗಿದರೆ ತೂರಿಕೊಳ್ಳುತ್ತೆ ಬೇಸಿಗೆಗಾಲ. ಕಾವು ಏರುವಷ್ಟರಲ್ಲಿ ಮತ್ತೆ ಮಳೆಗಾಲ...ಮಳೆಯಷ್ಟೇ ದಟ್ಟ ದರಿದ್ರ ನೆನಪೂ ಕೂಡಾ. ಅವಳೇ ಸಿಕ್ಕದಿದ್ದ ಮೇಲೆ ನೆನಪುಗಳೇ ಎಲ್ಲಾ ತಾನೇ. ಬೇಡ ಬೇಡ ಎಂದು ಬಚ್ಚಿಟ್ಟ ಆಕೆಯ ನೆನಪಿನ ಚಿಪ್ಪು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಒಡೆದು ಬಿಡುತ್ತದೆ. ಆಗ ನಮ್ಮಲ್ಲಿ ಎಲ್ಲವೂ ಇರುತ್ತದೆ. ಒಂದು ಕಾಲದಲ್ಲಿ ನಮ್ಮಲ್ಲಿ ಇಲ್ಲ ಅಂತಂದುಕೊಂಡಿದ್ದು...30 ಸೆಕೆಂಡಿನ ಟಿವಿ ಆಡ್ನಂತೆ. ಆದರೆ ಆಕೆಯಿಲ್ಲ. ಅದೆಷ್ಟೋ ವರ್ಷಗಳ ನಂತರ ನೆನಪು ವಾಸ್ತವವಾಗಿ ಬಿಡುತ್ತದೆ. ಬೆಚ್ಚಿಬೀಳುವಂತಾಗುವುದು ಆಗಲೇ. ಹುಚ್ಚೇ ಹಿಡಿದಂತಾಗುತ್ತದೆ. ಬೇಕಿದ್ದೋ ಬೇಡದೆಯೋ ಎಲ್ಲಾ ಜಂಜಡಗಳಿಂದ ಮುಕ್ತವಾಗಿ ಓಡುತ್ತೇವೆ. ಬೆತ್ತಲೆ ಓಡಿದಂತೆ. ಇಷ್ಟರವರೆಗೆ ಮಾಡಿಕೊಂಡಿದ್ದು ಹೊಂದಾಣಿಕೆ ಎನ್ನುವ ನಿಟ್ಟುಸಿರಿನೊಂದಿಗೆ. ಮತ್ತೊಮ್ಮೆ ಅಸಹ್ಯದೊಂದಿಗೆ...ಅದೇ ಹಳೇ ಗೆಳತಿಯ, ಪ್ರೇಯಸಿಯ ಮುಖವನ್ನು, ವಿಳಾಸಗಳನ್ನು ಅರಸುತ್ತಾ. ಒಂದೇ ಒಂದು ಕಿರುನಗೆಗೆ, ಒಂದೇ ಒಂದು ಬಿಸಿಯುಸಿರಿಗೆ, ಒಂದೇ ಒಂದು ಅಪ್ಪುಗೆಗೆ. ನಮ್ಮದಲ್ಲದ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದ ಮುದಿ ತಲ್ಲಣಗಳಿಗೆ...
ಅದೆಷ್ಟೋ ಕನಸುಗಳನ್ನು, ಕನವರಿಕೆಗಳನ್ನು ಹಾಗೆಯೇ ಬಿಟ್ಟು ಬಂದ್ದೇವೆ ನಾವು. ಮತ್ತೆ ಅವೆಲ್ಲವನ್ನೂ ಹೆಕ್ಕಿಕೊಳ್ಳಬೇಕು ಕಾಲನ ತೆಕ್ಕೆಯಿಂದ. ನೆಮ್ಮದಿಯ ಗೂಡು ಕಟ್ಟಲು ಆಕೆಯೂ ಜೊತೆಗಿರುತ್ತಾಳೆಯೇ ಎನ್ನುವುದಷ್ಟೇ ಪ್ರಶ್ನೆ...ನೆನಪು ಮೆರವಣಿಗೆಯಲ್ಲ. ನಲಿವಿದೆ ಅಂತ ಭಾವಿಸೋ ನೋವಿನ ಸಂತೆ ಅಥವಾ ನೋವೆಂದು ಭಾವಿಸುವ ನಲಿವಿನ ಸಂತೆ. ಕತ್ತಲಲ್ಲಿ ಬಣ್ಣ ಬಣ್ಣದ ಚಿತ್ರಗಳನ್ನು ವ್ಯಕ್ತಿಗಳಿಗೆ ರೂಪ ಕೊಡುತ್ತಾ ನಲಿವು ಕೊಡುತ್ತಾ ಮತ್ತೆ ಕೆಲವೇ ಕ್ಷಣಗಳಿಗೆ ಇರುವ ಬಣ್ಣಗಳನ್ನೆಲ್ಲಾ ಕರಗಿಸಿಕೊಂಡು ಬಿಳಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುವ ಸಿನಿಮಾ ಥಿಯೇಟರಿನ ಸ್ಕ್ರೀನಿನಂತೆ. ಅಂತಹ ಹುಚ್ಚುಗಳನ್ನು ಸಾಕಾರಗೊಳಿಸಿಕೊಳ್ಳಲು ನಮಗೆ ಎಲ್ಲವೂ ಬೇಕು.

ಇಷ್ಟೆಲ್ಲಾ ಸಾಕ್ಷತ್ಕಾರವಾಗಲಾದರೂ ನಮಗೊಬ್ಬ ಆಲ್ಫ್ರೆಡೋ ಸಿಕ್ಕಬೇಕು! ನಾವೂ ಟೋಟೋನಂತೆ ಇಷ್ಟದ ಬಗೆಗೊಂದು ಹುಚ್ಚನ್ನಿಟ್ಟುಕೊಂಡು ಓಡಬೇಕು. ಯಾರದೋ ನೆನಪಿನ ಮುಡಿಯಲ್ಲಿ ನೇತಾಡುವ ಸಂಪಿಗೆ ನಮ್ಮದಾಗುವ ಸಮಯಕ್ಕೆ ಹಂಗಿಲ್ಲ...

ಭಾನುವಾರ, ಮಾರ್ಚ್ 20, 2011

ಗೆಳತಿಯೊಬ್ಬಳ ಒಂಟಿ ಮಾತು

ರಾತ್ರಿಯಾಗುತ್ತದೆ. ಕಂಪ್ಯೂಟರಿನ ಪರದೆಯ ಹಾಗೆ ಮನಸ್ಸಲ್ಲಿ ಬಣ್ಣ ಬಣ್ಣದ ವಾಲ್  ಪೇಪರುಗಳು . ಅದರಲ್ಲಿರುವುದು ಅವನ ಚಿತ್ರವೇ? ಗೊತ್ತಿಲ್ಲ. ನೆನಪಿನ ಕೊಂಡಿಗೆ ಅವನ ಹಂಗ್ಯಾಕೆ ಎಂದು ಅನೇಕ ಬಾರಿ ಅಂದುಕೊಂಡದ್ದಿದೆ. ಆದರೆ ಅವನ ಹಂಗಿಲ್ಲದೇ ನೆನಪಾದರೂ ಎಲ್ಲಿ ಮುಂದೆ ಸಾಗುತ್ತದೆ. ಕೃಷ್ಣನನ್ನು ಕುರುಕ್ಷೇತ್ರ ಯುದ್ಧದ ನಡುವೆಯೂ ಪೊರೆದದ್ದು ರಾಧೆಯ ನೆನಪಲ್ಲದೆ ಮತ್ತಿನ್ನೇನು?

ಹೇಳಬೇಕು ಅಂದುಕೊಂಡಿದ್ದೆ ಅವನಿಗೆ ಹಲವಾರು ಬಾರಿ. ಮೊನ್ನೆ ಮೊನ್ನೆ ಮದುವೆ ಮನೆಯಲ್ಲಿ ಸಿಕ್ಕಾಗಲೂ. ಅಳುಕು. ತಿರಸ್ಕರಿಸುತ್ತಾನೆ ಎನ್ನುವುದಕ್ಕಲ್ಲ. ತಿರಸ್ಕರಿಸಿದರೂ ಸಹಿಸಿಕೊಂಡೇನು. ಆದರೆ ಹೀಗೆ ಬರೀ ಶಬ್ದಗಳಲ್ಲಿ ನನ್ನ ಇಷ್ಟಾನಿಷ್ಟಗಳನ್ನು ಹೇಳುತ್ತಾ ಹೋದ ಹಾಗೆ ನನ್ನೆಲ್ಲಾ ಭಾವನೆಗಳು ಬಿಜಿನೆಸ್ ಪ್ರಪೋಜಲ್ನಂತೆ ಕಾಣುತ್ತವೆ. ನನಗೆ ಅವನ ಬಗ್ಗೆ ಇರುವ ಭಾವನೆಗಳನ್ನೆಲ್ಲಾ ಹೇಳಿಕೊಂಡರೆ ನನ್ನಲ್ಲೇನು ಉಳಿಯಿತು ಬಚ್ಚಿಟ್ಟುಕೊಳ್ಳುವುದಕ್ಕೆ. ಬಚ್ಚಿಟ್ಟುಕೊಳ್ಳುವುದರಲ್ಲೂ ಸುರೀಳಿತ ಸುಖವಿದೆ ಎನ್ನುವುದೂ ಗೊತ್ತಾಗಿದ್ದೂ ಇವತ್ತೇ. ಹಿಂದೆಲ್ಲಾ ಕಾಕಿ ಹಪ್ಪಳವೋ, ಸಂಡಿಗೆಯೋ ಕಾಯಲು ಹೇಳಿದಾಗ ಕದ್ದುಕೊಂಡು ಹೋಗಿ ತಿನ್ನುವಾಗ ಆಗುತ್ತಿದ್ದ ಭಯದ ಚೂರುಪಾರೂ ಈಗಲೂ ಆಗುತ್ತದೆ. ಹೇಳಿಬಿಟ್ಟರೆ ಆ ಭಯ ಇಮ್ಮಡಿಯಾಗಬಹುದು.

ಆತ ಹಾಗೆಯೇ ಇರಲಿ. ಆತನಿಗೆ ನಾನೂ ಆತನನ್ನು ಇಷ್ಟಪಡುತ್ತಿದ್ದೇನೆ ಎನ್ನುವ ಸಣ್ಣ ಅನುಮಾನವಿದೆ. ಅದು ಹಾಗೆಯೇ ಇರಲಿ. ಯಾಕಾದರೂ ಹೇಳಬೇಕು. ಹೀಗೇ ಬದುಕಬಹುದಲ್ಲ. ಹೇಳಿಕೊಳ್ಳದೇ ಇರುವುದರಲ್ಲಿ ಇರುವ ಸುಖ ಹೇಳಿಕೊಳ್ಳುವುದರಲ್ಲೇನಿದೆ? ಹೇಳಿದರೆ ಹೇಳಿಕೆ ಬೇಡಿಕೆಯಾಗುತ್ತದೆ. ಬೇಡಿಕೆ ಹುಕುಂ ಆಗುತ್ತದೆ. ಮತ್ತೆ ಬರುವುದು ಬಗರ್ ಹುಕುಂ...ಮತ್ತೆ ಹೂಂ ಅನ್ನುವಲ್ಲೆಲ್ಲಾ ಊಹೂಂ ಎನ್ನುತ್ತಾ ಕೂರಬೇಕು..ಊಹೂಂಗಳೆಲ್ಲಾ ಹೂಂಗಳಾಗುತ್ತವೆ. ಇಷ್ಟ ಬಲು ಕಷ್ಟ.

ಮೊಬೈಲಿಗೆ ಕಾಲ್ ಮಾಡಿದಾಗಲೆಲ್ಲಾ ಸಾವಿರಕ್ಕಾಗುವಷ್ಟು ಮಾತು ಆತನದ್ದು. ಎದುರು ಸಿಕ್ಕಾಗ ಮಾತೇ ಆಡುವುದಿಲ್ಲ. ನನ್ನ ಕಣ್ಣನ್ನೇ ನೋಡುತ್ತಾ ಆಹ್ಲಾದಕರ ದೃಶ್ಯವೊಂದನ್ನು ಮನದಲ್ಲಿ ಸಂಯೋಜಿಸುತ್ತಿರಬೇಕು. ಆತನ ತುಟಿಯಂಚು ನಕ್ಕಾಗ ಉಬ್ಬುತ್ತಾ ಉದ್ದವಾಗುವುದನ್ನೇ ನೋಡುವುದೇ ಒಂದು ಆನಂದ. ಮೊನ್ನೆ ಭೇಟಿಯಾಗಿದ್ದಾಗ ಆತ ಮಾಡಿದ್ದನ್ನು ನೋಡಬೇಕಿತ್ತು. ನಾನು ನಿತ್ಯದ ಅಪೂರ್ವ ಫಳಿಗೆಯ ದಿನಚರಿ ಒಪ್ಪಿಸುತ್ತಿದ್ದಾಗಲೇ ಆತ ಹಾಗೇ ಸುಮ್ಮನೆ ನನ್ನ ಕೈ ಹಿಡಿದುಕೊಂಡ. ನೈಲ್ ಪಾಲಿಶ್ ಹಾಕದೇ ಇದ್ದ ಉಗುರುಗಳನ್ನು ಮುಟ್ಟುತ್ತಾ ಸಾಗಿದ. ಸ್ಪರ್ಶದಲ್ಲೊಂದು ಪುಳಕವಿದೆ, ಉನ್ಮಾದವಿದೆ ಎಂದು ಗೊತ್ತಾದ ದಿನವದು. ಪ್ರತೀ ಸಲ ಸಿಕ್ಕಾಗ ಆತ ಇನ್ಯಾವುದೋ ರೀತಿಯಲ್ಲಿ ಸ್ಪರ್ಶಿಸುತ್ತಾ ಭೇಟಿಗಳನ್ನು ಮತ್ತಷ್ಟು ಬೇಗ ಸಾಧ್ಯವಾಗಲಿ ಎನ್ನುವಂತೆ ಮಾಡುತ್ತಾನೆ. ಹಿಂದೊಮ್ಮೆ ಕುತ್ತಿಗೆಯ ಹಿಂದಿನ ಬೆನ್ನ ಭಾಗವನ್ನಷ್ಟೇ ಸ್ಪರ್ಶಿಸಿ ನಗುತ್ತಾ ಎದ್ದುಹೋಗಿದ್ದ. ಮತ್ತೆ ಆಸಾಮಿಯದ್ದೂ ವಾರವಾದರೂ ಪತ್ತೆಯಿಲ್ಲ. ಎದುರು ಸಿಕ್ಕಾಗ ಮಾತಿಗಿಂತ ಆತನ ಮೌನದ ಜೊತೆಗಿನ ಇಂತಹ ತುಂಟತನಗಳೇ ನನ್ನನ್ನು ಬೆಳೆಸುತ್ತವೆ. ಸಣ್ಣ ಹೆಜ್ಜೆ, ಸಣ್ಣ ವಿಷಯ ಎಷ್ಟು ಖುಷಿಯ ಕ್ಷಣಗಳಲ್ಲಾ ಎನಿಸುತ್ತದೆ.

"ತಿಂಗಳ ರಾತ್ರಿ ತೊರೆಯ ಸಮೀಪ, ಉರಿದಿದೆ ಯಾವುದೋ ದೀಪ" ಎನ್ನುವ ಕವಿತೆಯ ಸಾಲು ಆತನಿಗೆ ಬಹಳ ಇಷ್ಟ..ಆ ಸಾಲುಗಳನ್ನು ಕೇಳುತ್ತಿದ್ದ ಹಾಗೇ ಆತ ಮೈ ಮರೆಯುತ್ತಾನೆ. ಉಲ್ಲಾಸದಿಂದ ಬದುಕಿನ ಬಗ್ಗೆ ಹೊಸ ಕನಸುಗಳನ್ನು ಹೆಣೆದುಕೊಳ್ಳುತ್ತಾನೆ. ಅಂತಹ ನೆನಪುಗಳನ್ನು ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಸಾಧ್ಯವಾಗುವ ಸಮಯ, ನಿಮಿಷಗಳಲ್ಲೇ ಜಗತ್ತು ನಿಂತು ಬಿಡಬೇಕು ಅಂತ ಅನಿಸುತ್ತದಂತೆ ಆತನಿಗೆ. ಯಾಕೆ ಅನ್ನೋದು ಯಥಾ ಪ್ರಕಾರ ನನ್ನ ಪ್ರಶ್ನೆ. ಪ್ರಶ್ನೆಗಳನ್ನು ಹೆಣಿಯುತ್ತಾ ಉತ್ತರಗಳನ್ನೇ ಬಯಸುತ್ತಾ ಕೂತರೆ ನೆಮ್ಮದಿ ಸುಡುತ್ತದೆ ಎಂದ...ಅರ್ಥವಾಗಲಿಲ್ಲ...ಅವನಿಗದು ಅರ್ಥವಾಗಿ ನೀನು ಉದ್ಧಾರವಾದ ಹಾಗೇ ಅಂತ ರಕ್ಕಸ ನಗೆ ಬೀರಿದ...ಬೇಕಿತ್ತಾ ನಂಗೆ..ನಿಗೂಢವಾಗಿದ್ದಾಗಲೇ ವಿಸ್ಮಯ ಉಳಿದುಕೊಳ್ಳೋದು. ಪ್ರೀತಿ ಅರಳೋ ಸಮಯದಲ್ಲಿ ಅದೇ ಪಂಚಾಮೃತ. ಅದವನಿಗೆ ಚೆನ್ನಾಗಿ ಗೊತ್ತಿತ್ತು..

ಭಾವೋದ್ವೇಗದ ಚಕ್ರವ್ಯೂಹದಲ್ಲಿ ಸಿಕ್ಕುಬಿದ್ದವನಂತೆ ಮೆಸೇಜು ಮಾಡುತ್ತಿದ್ದ ಪ್ರತೀ ದಿನ..ದಿನಗಟ್ಲೆ, ವಾರಗಟ್ಲೆ..ಎಲ್ಲೋ ಮೆಸೇಜು ಮಾಡೋದು ತಪ್ಪಿಸಿದ ಅಂತಂದ್ರೆ ಮುಗೀತು ಕತೆ...ಮತ್ತೆ ವಾರಗಟ್ಲೆ ಪರಿಚಯವೇ ಇಲ್ಲದವರಂತೆ ಇದ್ದು ಬಿಡುತ್ತಿದ್ದ...ಮೊದ ಮೊದಲು ಜಗಳ ಕಾಯುತ್ತಿದ್ದೆ. ನಿನ್ನ ನೆನಪು ಕಾಡುತ್ತದೆ, ನಿನ್ನ ಮುಖ ಕಣ್ಣೆದುರಿನಿಂದ ಜಾರುವುದಿಲ್ಲ. ಕಡೇ ಪಕ್ಷ ಹಾಯ್ ಅಂತಾದ್ರೂ ಮೆಸೇಜು ಮಾಡೋ ಅಂದಿದ್ದಕ್ಕೆ "ಎಲ್ಲವೂ ಹಚ್ಚಿಕೊಂಡಾಗ ಮಾತ್ರ ಹುಚ್ಚಾಗುತ್ತದೆ. ಹುಚ್ಚು ಯಾವತ್ತೂ ಆರೋಗ್ಯಕರವಾಗಿರಬೇಕು" ಅಂತ ಹೇಳಿ ಪಕ್ಕದ ಗಾಡಿಯಲ್ಲಿ ಕೆಂಡದ ಮಧ್ಯೆ ಕಾಯುತ್ತಿದ್ದ ಜೋಳದ ಬೆನ್ನತ್ತಿ ಹೋಗಿದ್ದ..

ಈಗಲೂ ನೆನಪಿದೆ.
ಅವನಿಗೆ ಆ ತಿಂಗಳು ಮೊದಲ ಸಂಬ್ಳ..ವಿಪರೀತ ಖುಷಿ ಖುಷಿಯಾಗಿದ್ದ..ಮೊದಲ ಸಂಬಳ, ಮೊದಲ ತುತ್ತು, ಮೊದಲ ಸ್ವರ ಎಲ್ಲವೂ ಅಮೂಲ್ಯ ಎನ್ನುವಾಗಲೇ ನಾನು ತಮಾಷೆಗೆ ತಟಕ್ಕನೆ ಮೊದಲ ಮುತ್ತು? ಎನ್ನುವುದನ್ನು ಮುಗ್ಧವಾಗಿ ಪ್ರಶ್ನಾರ್ಥಕವಾಗಿ ಕೇಳಿ ಮರುಕ್ಷಣವೇ ಪ್ರಬುದ್ಧೆಯಂತೆ ನಾಲಿಗೆ ಕಚ್ಚಿಕೊಂಡೆ.. ಆತನಿಗೆ ಅದ್ಯಾವ ಸೂಚನೆಯನ್ನು ನೀಡಿತೋ...ಮುಖವನ್ನು ಹತ್ತಿರ ಹತ್ತಿರಕ್ಕೆ ತಂದ...ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ....

....

....

ಇನ್ನೂ ಕಾಯುತ್ತಿದ್ದೇನೆ.

ಗುರುವಾರ, ಏಪ್ರಿಲ್ 1, 2010

ಬೆಂಗಳೂರೆಂದರೆ,,,,,,,,


ಬೆಂಗಳೂರೆಂದರೆ........

ಕುಡಿದು ಬಿಟ್ಟ ಬೈಟೂ ಕಾಫಿ, ಸಂಜೆಯ ಹೊತ್ತಿಗೆ ಹೆಚ್ಚಾಗಿ ಸುರಿಯುವ ಮಳೆ, ಪಿಡ್ಜಾ ಹಟ್ಟಿನ ಮುಂದುಗಡೆ ಹೋಂ ಡೆಲಿವರಿಗೆ ನಿಂತ ಹೀರೋ ಹೋಂಡಾ, ಪಲ್ಸರ್ಗಳು, ತಿಂಗಳಾಂತ್ಯದಲ್ಲೋ ವಾರಾಂತ್ಯದಲ್ಲೋ ಧಿಡೀರ್ ಹುರುಪುಗೊಂಡು ಕಾರ್ಯಾಚರಣೆಗೆ ಇಳಿಯುವ ಜ್ಞಾನೋದಯಗೊಂಡ ಬುದ್ಧಂತಹ ಟ್ರಾಫಿಕ್ಕು ಪೋಲೀಸರು, ಕೆಂಪು ಬಣ್ಣದ ಸಿಗ್ನಲ್ಲು ಬಿದ್ದಾಗ ನಿಂತ ಹೋಂಡಾ ಆಕ್ಟಿವಾದ ಹ್ಯಾಂಡಲನ್ನು ಏಕಾಗ್ರತೆಯಿಂದ ಹಿಡಿದು ಡ್ರೈವಿಂಗ್ ಸೀಟಿನಲ್ಲಿ ಕೂತ ಅಮ್ಮನ ಕತೆ ಕೇಳುತ್ತಿರುವ ಮುದ್ದು ಪುಟಾಣಿ, ಸತ್ತ ಮೀನನ್ನು ಚರಂಡಿಗೆ ಎಸೆಯುತ್ತಿರುವ ತ್ಯಾಗರಾಜನಗರದ ಅಕ್ವೇರಿಯಂ ಅಂಗಡಿಯ ಮಾಲೀಕ, ಜಗಮಗಿಸುವ
ಪಾರ್ಟಿ-ಮದುವೆ ಹಾಲ್, ದ್ವಾರದಲ್ಲೇ ಇಂಥೋರು ವೆಡ್ಸ್ ಇಂಥೋರನ್ನ ಅನ್ನೋ ಹೂವಿನ ಕಟೌಟ್, ಮೆಟ್ರೋಗೆ ಕಟ್ಟುತ್ತಿರುವ ಕಂಬ, ಸೇತುವೆ ಮೇಲೆ ಕುಳಿತ ವೆಲ್ಡರಿನ ಹಣೆಯಿಂದ ನೆಲ ಸೇರುತ್ತಿರುವ ಬೆವರಿನ ಹನಿ, ಸಿಟಿ ರೈಲ್ವೆ ಸ್ಟೇಶನ್ನಿನ ಅಂಡರ್ಪಾಸಿನ ಮೆಟ್ಟಿಲಿಳಿಯುವಾಗ ಪಕ್ಕದಲ್ಲೇ ನಡೆಯುತ್ತಾ "ಇನ್ನೂರು ಬರ್ತೀಯಾ" ಎಂದು ಕಿವಿ ಹತ್ತಿರ ಉಸುರಿದ ಹುಡುಗಿ, ಉತ್ತರ ಸಿಕ್ಕದೇ ಮುಂದಿನವನತ್ತ ಅದೇ ವೇಗದಲ್ಲಿ ನಡೆಯುವ ಆಕೆಯ ಹೆಜ್ಜೆಗಳು, "ಡಬ್ಬಾ ತರಹಾ ಇದೆ ಸಾರ್ ಸಿನ್ಮಾ. ಮಲ್ಕೊಳಿ ಮನೆಗ್ಹೋಗಿ" ಎನ್ನುತ್ತಾ ಬೈಕು ಪಾರ್ಕು ಮಾಡುವಾಗ ಬುದ್ದಿಮಾತು ಹೇಳುವ ಥಿಯೇಟರಿನ ವಾಚ್ಮನ್ನು, ಆಫ್ ಮಾಡಿದ ಬೈಕು ಸಿಗ್ನಲ್ಲು ಬಿದ್ದಾಗ ಹೊಡೆದ ಕಿಕ್ಕಿಗೆ ಸ್ಟಾರ್ಟ್ ಆಗದೇ ಇದ್ದೋರೆಲ್ಲಾ ಸಿಟ್ಟಿನಲ್ಲಿ, ರಣೋತ್ಸಾಹದಲ್ಲಿ ಹೊಡೆಯುತ್ತಿರುವ ವೆರೈಟಿ ಹಾರ್ನುಗಳು, ಮೆಜೆಸ್ಟಿಕ್ಕಿನ ಕಲ್ಲುಬೆಂಚಿನಲ್ಲಿ ತನ್ನ ಹುಡುಗ ಮಾಡುತ್ತಿರುವ ಚೇಷ್ಟೆಗಳಿಗೆ ಹುಸಿಮುನಿಸು ತೋರಿಸುತ್ತಾ, ಅಕ್ಕ ಪಕ್ಕದವರ ಪರಿವೆಯೇ ಇರದೇ ಜೋರಾಗಿ ಗದರುತ್ತಾ ನಗುತ್ತಿರುವ ಹುಡುಗಿ, ತಡೆಹಿಡಿದ ಮೂತ್ರವನ್ನು ವಿಸರ್ಜಿಸಲು ಬೇರ್ಯಾವುದೇ ಸೂಕ್ತ ಮಾರ್ಗ ಕಾಣದೇ ಮೂಗು ಹಿಡಿಯುತ್ತಾ, ಕಾಲಿನ ಪ್ಯಾಂಟನ್ನು ಎತ್ತಿಹಿಡಿಯುತ್ತಾ ಮೆಜೆಸ್ಟಿಕ್ಕಿನ ಜಗತ್ಪ್ರಸಿದ್ಧ ಸುವಾಸನೆ ಭರಿತ ಸಾರ್ವಜನಿಕ ಮೂತ್ರಾಲಯ ಹೊಕ್ಕ ಎಂಜಿನಿಯರಿಂಗ್ ಸ್ಟೂಡೆಂಟು, ಉತ್ತರ ಪ್ರದೇಶದ ಮೀಸೆ ಚಿಗುರದ ಹುಡುಗ ಫುಟ್ಪಾತಲ್ಲಿ ನಿಂತು ನೀಡುತ್ತಿರುವ ಪಾನಿಪುರಿಯನ್ನು ಚಪ್ಪರಿಸಿ ತಿನ್ನುತ್ತಿರುವ ಹರೆಯದ ಹುಡುಗಿ, ಅವಳನ್ನೇ ತದೇಕಚಿತ್ತದಿಂದ ಬಿಎಂಟಿಸಿ ಬಸ್ಸೊಳಗಿನ ರಶ್ಶನ್ನೂ ಲೆಕ್ಕಿಸದೇ ನೋಡುತ್ತಾ ತನ್ನ ಸುತ್ತ ವೃಂದಾವನ ಕಟ್ಟಿಕೊಳ್ಳುತ್ತಿರುವ ಹುಡುಗ, ತಮ್ಮತಮ್ಮೊಳಗೆ ಕನ್ನಡದಲ್ಲೇ ವ್ಯವಹರಿಸುತ್ತಾ ಬಂದ ಗಿರಾಕಿಗಳ ಮುಂದೆ ಮಾತ್ರ "ವಾಟ್ ಡು ಯು ವಾಂಟ್ ಸರ್" ಎನ್ನುತ್ತಿರುವ ಪಿಜ್ಜಾ ಕೌಂಟರಿನವರು, ಸಿಗ್ನಲ್ಲು ಬೀಳದಿದ್ದರೂ ತಟಕ್ಕನೆ ಕೆಜಿ ರೋಡು ದಾಟಲು ಹರಸಾಹಸ ಪಡುತ್ತಾ ವೇಗವಾಗಿ ಬರುವ ವಾಹನಗಳ ಬ್ರೇಕಿನ ಸದ್ದಿಗೆ ಹೆದರಿ ಮತ್ತೆ ರಸ್ತೆ ಪಕ್ಕಕ್ಕೆ ಬಂದು ನಿಲ್ಲುವ ಮಂದಿ, ಸೆಂಟ್ರಲ್ ಕಾಲೇಜಿನ ಕಂಪೌಡು ಹಾರಿ ಶಾರ್ಟ್ ಕಟ್ಟಿನಲ್ಲಿ ಲೇಟಾದ ಕ್ಲಾಸು ತಲುಪಲು ಹೊರಟ ಗುಜರಾತಿ, ಪಿಕ್ಪಾಕೇಟ್ ಆದ ಮೊಬೈಲಿನ ಬಗ್ಗೆ ಕಂಪ್ಲೇಂಟು ಕೊಡಲು ಜಯನಗರ ಸ್ಟೇಶನ್ನಿನ ಒಳಹೊಕ್ಕು ಪೋಲೀಸರನ್ನು ಕಂಡರೆ ನೆನಪಾಗುವ ಸಾಯಿಕುಮಾರ್ ಸಿನಿಮಾಗಳು, ಭಯಂಕರ ಭಯಂಕರ ಡೈಲಾಗುಗಳು, ಫುಟ್ಪಾತಿನಲ್ಲಿ ತೆಗೆದುಕೊಂಡ ಸಿನಿಮಾ ಡಿವಿಡಿ ಹೀರೋ ಇನ್ನೇನು ಮುತ್ತುಕೊಟ್ಟೇ ಬಿಡುತ್ತಾನೆ ಎನ್ನುವ ದೃಶ್ಯದಲ್ಲೇ ಸಿನಿಮಾದ ಕೊನೆಯ ದೃಶ್ಯದಂತೆ ನಿಂತುಹೋಗಿರುವ ದುರದೃಷ್ಟದ ಘಳಿಗೆ,  ಎರಡೆರಡು ಸಾರಿ ಪ್ರಯತ್ನಪಟ್ಟರೂ ಕಾರ್ಡು ಡಿಟೆಕ್ಟು ಮಾಡದ ಎಟಿಎಂ ಮೆಶಿನ್ನು, ಮಾರ್ಕೆಟ್ಟಿನಲ್ಲಿ ಭವಿಷ್ಯವೇ ಕೈಕೊಟ್ಟ ವ್ಯಕ್ತಿಯಿಂದ ಭವಿಷ್ಯ ಕೇಳುತ್ತಿರುವ ಬಡ ಹೆಂಗಸು, ಅದ್ಯಾವುದೋ ಘಳಿಗೆಯಲ್ಲಿ ಪೈಪು ಒಡೆದು ನದಿಯಂತೆ ಹರಿಯುತ್ತಿರುವ ಕಾವೇರಿ ನೀರು, ಕೈ ಕೋಳ ಹಾಕಿ ಹರೆಯದ ಹುಡುಗನೊಬ್ಬನನ್ನ ಚಿಕ್ಕಪೇಟೆಯ ದರ್ಗಾದ ಎದುರಿನ ಜನ ದಟ್ಟಣೆಯಲ್ಲಿ ಒಯ್ಯುತ್ತಿರುವ ಪೋಲೀಸ್ ಪೇದೆ, ಎಸ್ಪಿ ರೋಡಲ್ಲಿ 7 ರೂಪಾಯಿಗೆ ಸಿಗುವ ಬ್ಲ್ಯಾಂಕು ಡಿವಿಡಿ, ನಿಂತ ಬೈಕಿಗೆ ರಭಸದಿಂದ ಬಂದು ಗುದ್ದಿದ ಬಸ್ಸು, ಹಾರಿ ಮುಂದಿದ್ದ ಕಾರಿನ ಮೇಲೆ ಬಿದ್ದ ಟೈ ಹಾಕಿಕೊಂಡ ಮಧ್ಯವಯಸ್ಕ, ಹಿಂದೆ ಮುಂದೆ ನಡೆಯಲು ತಿರುಗಲೂ ಸಾಧ್ಯವಾಗದ ಬೆಳಿಗ್ಗಿನ-ಸಂಜೆಯ ಬಿಎಂಟಿಸಿಯಲ್ಲಿ ಮುಂದಕ್ಕೆ ಹೋಗಲಿಕ್ಕೆ ದಾರಿ ಬಿಡದಿದ್ದಕ್ಕೆ ತಾವು ತಾವೇ ಲಾಯರುಗಳೆಂಬಂತೆ ವಾದ ಮಾಡುತ್ತಾ, ಜಗಳ ಕಾಯುತ್ತಾ ಸುತ್ತಲಿನವರನ್ನು ಸಿಂಪತಿ, ಹೂಂಕಾರ, ಠೇಂಕಾರಗಳಿಗೆ ಎಳೆಯಲು ಯತ್ನಿಸುತ್ತಾ ಬಿಎಂಟಿಸಿಯಲ್ಲೇ ಕ್ರಾಂತಿ ಮಾಡಲು ಹೊರಟವರು, ಹೇ ಅವನೇ ಕಣೋ ಕೊತ್ವಾಲನ ರೈಟ್ ಹ್ಯಾಂಡು ಆಗಿದ್ದವ-ಶೆಟ್ಟಿ ಎನ್ನುತ್ತಾ ಕೌಂಟರಿನಲ್ಲಿರುವ ಬೋಳುತಲೆಯ ಕನ್ನಡಕದ ಆಸಾಮಿಯನ್ನು ಕ್ಯಾಂಟೀನಿನಲ್ಲಿ ತೋರಿಸುತ್ತಿರುವ ಕಾಲೇಜು ಹುಡುಗರು, "ಮಗಾ ಅವ್ಳ ಮನೆ ಹತ್ರ ಹೋಗಿದ್ಯಾ, ಏನಂದ್ಳೋ" ಎನ್ನುತ್ತಾ ಗೆಳೆಯನೊಬ್ಬನನ್ನು ಥೇಟು ಲೂಸು ಮಾದನ ಸಿನಿಮಾದ ದೃಶ್ಯದಂತೆ ಕೇಳುತ್ತಿರುವ ಹೈಸ್ಕೂಲು ಹುಡುಗ, ಕ್ರಿಕೆಟ್ ಆಡಿ ಕೊಳೆಯಾದ ಅವನ ಸಮವಸ್ತ್ರ, ಒಂದೆರಡು ಗಂಟೆ ಗಿಜಿಗುಡುವ ಮೆಜೆಸ್ಟಿಕ್ಕಿನಲ್ಲಿ ಸುಮ್ಮನೆ ಕೂತರೆ ಜೀವನ ನಶ್ವರ, ಕ್ಷಣಿಕ ಎನ್ನುವ ಸತ್ಯ ಗೊತ್ತಾಗಿ ಗಾಬರಿಯಿಂದ ಸನ್ಯಾಸಿಗಳಾಗುತ್ತೇವೋ ಎನ್ನುವ ಭಯದಿಂದ ಸಿಕ್ಕ ಬಸ್ಸು ಹತ್ತಿಬಿಡುವ ಧಾವಂತ, ಆನಂದ ರಾವ್ ಸರ್ಕಲ್ಲಿನ ಫ್ಲೈ ಓವರಿನಲ್ಲಿ ಟ್ರಾಫಿಕ್ ಜಾಮಾಗಿ ಅಟೇನ್ಶನ್ನಲ್ಲಿ ಅಡ್ಡಾ ದಿಡ್ಡಿ ನಿಂತ ಬಸ್ಸು, ಕಾರು, ಪ್ರವಾಸಕ್ಕೆ ಹೊರಟ ಟೆಂಪೋ ಟ್ರ್ಯಾಕ್ಸು, ದೊಡ್ಡ ನೀಲಿ ಡ್ರಮ್ಮು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಿಟ್ಟ ರಾಮನವಮಿಯ ಪಾನಕ ಫುಲ್ರಶ್ಶಿನ ಮಧ್ಯೆ ಅರೆ ಕಾಸಿನ ಮಜ್ಜಿಗೆ, ಪದ್ಮನಾಭನಗರದ ಬಸ್ಸ್ಟ್ಯಾಂಡಿನಲ್ಲಿ ಸಂಜೆ ಆರೂವರೆ ಹೊತ್ತಿಗೆ ತಪ್ಪಿಸದೇ ಬೇಟಿಯಾಗುವ ಎಂಟುಮಂದಿ ತಾತಂದಿರು, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಪೇರಿಸಿಟ್ಟ ಮುದ್ದೆ, ಮಧ್ಯಾಹ್ನಗಳಲ್ಲಿ ಗಾಂಧೀನಗರದಲ್ಲಿ ಸಾಲಾಗಿ ಊಟಕ್ಕೆ ಬಂದು ನಿಲ್ಲುವ ಆಟೋರಿಕ್ಷಾದವರು, ರಿಕ್ಷಾದ ಮುಂದೆ ಹಿಂದೆ ಅಂಟಿಹೋದ ರಾಜ್ಕುಮಾರು, ಶಂಕರ್ನಾಗು..ಕನ್ನಡಿಯಲ್ಲಿ ಬರೆದಿಟ್ಟ ತಂದೆ ತಾಯಿ ಆಶೀರ್ವಾದ, ನಾರಿ ಮುನಿದರೆ ಮಾರಿ, ಎರಡು ಕಾರು ಬಸ್ಸುಗಳ ಮಧ್ಯೆ ಇರುವ ಹೊದ್ದು ಹಾಸಲಾಗುವಷ್ಟೇ ಇರುವ ಜಾಗದಲ್ಲಿ ಬೈಕು ನುಗ್ಗಿಸುತ್ತಾ ತುಂಬಾ ಮುಂದೆ ಬಂದೆ ಎಂದು ಖುಷಿಯಾಗಿ ಬೀಗಿ ಗತ್ತಿನಿಂದ ಹಿಂದಕ್ಕೆ ನೋಡುತ್ತಿರುವ ಬೈಕಿನವ, ಗಾಜಿನ ಕಟ್ಟಡಗಳ ಮೇಲೆ ಭಯಕ್ಕೋ ಭಕ್ತಿಗೋ ಕನ್ನಡದ ಧ್ವಜ, ರಾಜ್ಕುಮಾರು, ಇತ್ತೀಚೆಗೆ ವಿಷ್ಣುವರ್ಧನ್ನು, ಬೆಳಿಗ್ಗೆಗೆ ಮುಗಿದು ಹೋದ ಕರಗ, ಉಳಿದು ಹೋದ ಬಣ್ಣದ ಬಲೂನು, ಪ್ರಸಾದದ ಹೂ, ನಿಂತಲ್ಲೆಲ್ಲಾ ಕಸ ಲೋಡು ಮಾಡುತ್ತಾ ಅದೆಲ್ಲಾ ಓವರ್ ಲೋಡಾಗಿ ಕಸದ ವಾಹನ ಚಲಿಸುವಾಗ ಒಂದೋ ಎರಡೋ ಪರ್ಸೆಂಟು ಗಾಳಿಗೆ ಹಾರುತ್ತಾ ತನ್ನೆಲ್ಲಾ ಘಮಗಳನ್ನು ಹರಡುತ್ತಿರುವ ಬೆಳಿಗ್ಗಿನ ಹೊತ್ತು, ಹರಿದು ಹೋದ ಪೋಸ್ಟರಿನಲ್ಲಿ ನಿಂತು ನಗುತ್ತಿರುವ ನಾಯಕ, ಜಾಸ್ತಿ ವಾಹನಗಳು ಚಲಿಸಿದಾಗ ಸಣ್ಣಗೆ ನಡುಗುವ ಮಾರ್ಕೆಟ್ಟಿನ ಫ್ಲೈಓವರ್ರು, ದೇವೇಗೌಡ ಪೆಟ್ರೋಲ್ ಬಂಕಿನ ಸಿಗ್ನಲ್ಲಿನಲ್ಲಿ ಹೂ, ಹರಿವೆ ಸೊಪ್ಪನ್ನು ಮಾರುತ್ತಿರುವ ಹೈಸ್ಕೂಲು ಹುಡುಗಿಯ ಕಣ್ಣಲ್ಲಿ ಮಿನುಗುತ್ತಿರುವ ಸಂಜೆಯ ಉತ್ಸಾಹ......

ಹೀಗೆ.........

ಬೆಂಗಳೂರೆಂದರೆ ಪೂರ್ಣ ವಿರಾಮವಿಲ್ಲದ, ವಾಕ್ಯವಾಗಲು ಒದ್ದಾಡುವ ಕಾಮಾಗಳಿಂದಲೇ ತುಂಬುತ್ತಾ ಹೋಗುವ ಚಿತ್ರ ಪಟ....ಬಣ್ಣ ಬಣ್ಣದ ಗಾಳಿಪಟ....ಸೂತ್ರ ಹಿಡಿದು ನಿಯಂತ್ರಿಸುತ್ತಾ, ಸಣ್ಣವರಾಗುತ್ತಾ, ಸೂತ್ರ ಹರಿದಾಗ ಅಷ್ಟು ಹೊತ್ತು ಆಡಿದ ಆಟವನ್ನು ನೆನೆಯುತ್ತಾ ಬಿದ್ದ ಗಾಳಿಪಟವನ್ನು ಹುಡುಕುವುದು..ಸಿಗದಿದ್ದರೆ ಒಂದಿಷ್ಟು ಪರ್ಸಂಟೇಜು ದುಃಖಿಸುತ್ತಾ ಮತ್ತೊಂದಷ್ಟು ಪರ್ಸಂಟೇಜು ಆಶೋತ್ತರಗಳೊಂದಿಗೆ ಗೋಂದು, ಬಣ್ಣದ ಪೇಪರು, ಹಿಡಿಸುಡಿ ಕಡ್ಡಿ ಹಿಡಿದು ಮತ್ತೊಂದು ಗಾಳಿಪಟಕ್ಕೆ ರೆಡಿಯಾಗುವುದು.....

ಬೆಂಗಳೂರೆಂದರೆ ಹಾಗೇ......... 


ಚಿತ್ರ ಕೃಪೆ: ಬಾಲು ಮಂದರ್ತಿ 

ಶನಿವಾರ, ಮಾರ್ಚ್ 27, 2010

ಅಡಿಕೆ ತೋಟಗಳಿಗೆ ಅಡರಿದೆ ಮುಪ್ಪು




ತೋಟದೊಡೆಯನೇ ಅಡಿಕೆ ಹೆಕ್ಕುವವನು, ಅಡಿಕೆ ಹೊರುವವನು. ರಟ್ಟೆಯಲ್ಲಿ ತಾಕತ್ತಿದ್ದರೆ ಮರದಿಂದ ಅಡಿಕೆ ಇಳಿಸುವವನು" ಎನ್ನುವಲ್ಲಿಗೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರ ಪರಿಸ್ಥಿತಿ ಬಂದು ನಿಂತಿದೆ(ಉಳಿದ ಭಾಗದ ಕೃಷಿಕರದ್ದೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ). "ದುಡ್ಡು ಕೇಳಿದಷ್ಟು ಕೊಡುವ. ಮಜಲಿನದ್ದು, ಬಾಕಿಮಾರಿನ ತೋಟದ ಅಡಿಕೆ ಇಳಿಸಿ ಕೊಡು. ಅಡಿಕೆ ಹೆಕ್ಲಿಕ್ಕೆ ಮುಂದಿನ ವಾರ ಒಂದು ದಿನ ಇಬ್ಬರು ಬರ್ತಾರಂತೆ. ಅಷ್ಟರೊಳಗೆ ಮುಗಿಸಿಕೊಡು ಮಾರಾಯ" ಎಂದು ಪರಿಚಯವಿರುವ ಕೆಲಸಗಾರರಿಗೆ ದಮ್ಮಯ್ಯ ಗುಡ್ಡೆ ಬಿದ್ದರೂ ಕೆಲಸಕ್ಕೆ ಜನ ಸಿಗುತ್ತಿಲ್ಲ. ನಾಳೆಯಿಂದ ನಾಲ್ಕು ದಿನ ನಿರಂತರವಾಗಿ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿದ ಕೆಲಸದವರು ಆ ನಾಲ್ಕು ದಿನ ಕಳೆದು ವಾರವಾದರೂ ಪತ್ತೆಯಿಲ್ಲ. ಮೊಬೈಲಿಗೆ ಕಾಲ್ ಮಾಡಿದರೆ ರಿಂಗ್ ಮಾತ್ರ ಆಗುತ್ತದೆ. ರಿಸೀವ್ ಮಾಡುವವರಿಲ್ಲ.


"ನಿಮ್ಮಲ್ಲಿ ಕೆಲಸಕ್ಕೆ ಜನ ಸಿಗ್ತಾರಾ??" ಎನ್ನುವುದು ಪರಸ್ಪರ ಭೇಟಿಯಾಗುವ ಅಡಿಕೆ ಕೃಷಿಕರೆಲ್ಲರ ಮೊದಲ ಮುಖ್ಯ ಪ್ರಶ್ನೆ. ಮದುವೆ ಇರಲಿ, ಸಾರ್ವಜನಿಕ ಗಣೇಶೋತ್ಸವವಿರಲಿ, ತಾಲೂಕು ಪಂಚಾಯಿತಿ ಮೀಟಿಂಗ್ ಇರಲಿ, ರಶ್ಶಾದ ಖಾಸಗಿ ಬಸ್ಸಲ್ಲಿ ಪರಸ್ಪರರು ಸಿಕ್ಕಲಿ ಇದಂತೂ ನಿತ್ಯದ ಸುಪ್ರಭಾತ.

ಒಂದು ಕಾಲದಲ್ಲಿ ಅಂದರೆ ಹತ್ತೋ ಹದಿನೈದು ವರ್ಷಗಳ ಹಿಂದೆ ಎರಡೋ ಮೂರೋ ಎಕರೆಯಲ್ಲಿ ಅಡಿಕೆ ಸಸಿ ನೆಟ್ಟು ಅದನ್ನು ತನ್ನದೇ ಮಗುವೇನೋ ಎಂಬಂತೆ ಬೆಳೆಸಿದ ಅಡಿಕೆ ಕೃಷಿಕ ಇವತ್ತು ಕೆಲಸದವರಿಲ್ಲದೇ ಪೂರ್ತಿ
ಕಂಗಾಲು. ಜೊತೆಗೆ ಅವನ ತೋಟವೀಗ ಹತ್ತು ಎಕರೆಯಷ್ಟು ವಿಸ್ತಾರ ಬೇರೆ. ಪ್ರಾರಂಭದ ದಿನಗಳಲ್ಲಿ ತೋಟ ಮಾಡಬೇಕು ಎನ್ನುವ ಹುರುಪಿತ್ತು. ಸ್ವತಃ ಅಡಿಕೆ ಮರಕ್ಕೆ ಹತ್ತಿ ಅಡಿಕೆ ಇಳಿಸುವ ತಾಕತ್ತಿತ್ತು. ಮೊದಲೆರಡು ವರ್ಷಗಳಲ್ಲಿ ಬಂದ ಹಿಡಿ ಪಾವು ಲಾಭದಲ್ಲಿ ಹೆಂಡತಿಯ ಕೊರಳು ಖಾಲಿ ಖಾಲಿ ಕಾಣುವುದನ್ನು ಕಂಡು ಲಕ್ಷ್ಮಣ ಆಚಾರಿ ಹತ್ರ ಸಿಂಪಲ್ಲಾದ ಚಿನ್ನದ ಚೈನು ಮಾಡಿಸಬೇಕು ಎಂದುಕೊಂಡಿದ್ದ ತನ್ನ ಯೋಜನೆಯನ್ನೇ ಮುಂದೂಡಿ ಹೊಸದಾಗಿ ಬಂದ ಸ್ಪಿಂಕ್ಲರ್ ಹಾಕಿಸಿದರೆ ಕಡೇ ಪಕ್ಷ ಬೇಸಿಗೆಯಲ್ಲಿ ನೀರು ಸರಿಯಾಗಿ ಗಿಡಗಳಿಗೆ ಸಿಗುತ್ತದೆ ಎನ್ನುವಂತಹ ಅಭಿವೃದ್ಧಿ ಯೋಜನೆಗಳಿದ್ದವು. ಇದೆಲ್ಲದರ ಜೊತೆಗೆ ಮನೆಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಸಾಗುತ್ತಿತ್ತು. ಮಗನ ಆಸೆ ಪೂರೈಸಲಿ ಎನ್ನುವ ಏಕೈಕ ಉದ್ದೇಶದಿಂದ ತನ್ನ ಹಣಕಾಸಿನ ಇತಿಮಿತಿಗೆ ದುಬಾರಿಯಾದ ಮಗನ ಇಷ್ಟದ ಕೋರ್ಸಿಗೆ ಸೇರಿಸಿದ್ದ ಆತ. ಅದಕ್ಕೆ ತೆಗೆದ ಸಾಲವನ್ನು ಮುಂದಿನ ಕೆಲವಾರು ವರ್ಷಗಳಲ್ಲಿ ತೀರಿಸಿಕೊಂಡರಾಯಿತು ಎನ್ನುವ ದೂರಾಲೋಚನೆ ಆತನದ್ದು. ಇದೆಲ್ಲದರ ಮಧ್ಯೆ ಬೆಳೆದ ಮಗಳಿಗೆ ಮದುವೆ ಮಾಡಿರುತ್ತಾನೆ. ತೋಟವನ್ನು ಸಲಹುತ್ತಾ, ಸಂಬಂಧಿಗಳಿಗೆ ಬೇಜಾರಾಗಬಾರದು, ಸಂಬಂಧಗಳು ಉಳಿಯಬೇಕು ಎನ್ನುವ ಕಾಳಜಿಯಿಂದ  ಎಪ್ರೀಲ್ ಮೇಯ ಮದುವೆ ಸೀಜನ್ನಿನಲ್ಲಿ ಒಂದೇ ದಿನ ಮೂರು ಮೂರು ಮದುವೆ ಅಟೆಂಡು ಮಾಡುತ್ತಾ, ಮತ್ತೊಂದಕ್ಕೆ ಹೆಂಡತಿಯನ್ನು ಕಳಿಸಿ ಅಬ್ಬಾ ಅಂತೂ ಈ ವರ್ಷದ ಮದುವೆ ಕೋಟಾ ಮುಗಿಯಿತು ಎಂದು ಉಸಿರೆಳೆದುಕೊಂಡಿರುತ್ತಾನೆ.


"ನಿಮಗೇನು ಬಿಡೋ ಮಾರಾಯ. ಅಡಿಕೆ ತೋಟ ಇದೆ. ಮರದಲ್ಲಿ ಅಡಿಕೆ ಬೆಳೆಯುತ್ತದೆ. ಇಳಿಸಿ ಮಾರಿದರಾಯ್ತು. ಜೀವನ ಆರಾಮು" ಎನ್ನುವ ಉಡಾಫೆಯ ಮಾತುಗಳೇ ಸಂಬಂಧಿಕರದ್ದು. ಅವರಿಗಂತೂ "ತೋಟ ಮಾಡಿಕೊಂಡು ಇವನೊಬ್ಬ ಆರಾಮವಾಗಿ ದಿನದೂಡುತ್ತಿದ್ದಾನೆ. ನಮ್ಮಂತೆ ನಗರದಲ್ಲಿ ಒದ್ದಾಡುತ್ತಿಲ್ಲವಲ್ಲ" ಎನ್ನುವ ಭ್ರಮೆ. ಇನ್ನು ಊರಲ್ಲಿರುವ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಕಂಡು "ನಮಗೆ ಊರಲ್ಲಿ ಉಂಟು" ಎಂದು ನಗರದಲ್ಲಿ ತಮ್ಮ ಪ್ರೆಸ್ಟೀಜು ಹೆಚ್ಚಿಸಲು ಮಾತಾಡುವವರಿಗೇನು ಕಮ್ಮಿ ಇಲ್ಲ. ಇವರ್ಯಾರಿಗೂ ಅಡಿಕೆ ತೋಟವನ್ನು ಸಂಭಾಳಿಸುವುದು ಮೊದಲಿನಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರಿಗೆಲ್ಲಾ ವರ್ಷಕ್ಕೊಮ್ಮೆ ಊರಿಗೆ ಬರುವಾಗ ಅಡಿಕೆ ತೋಟ ಅಡ್ಡಾಡಲು ಪಾರ್ಕಿನಂತೆ ಕಾಣುತ್ತದೆಯೇ ಹೊರತು ತೋಟದ ಜ್ವಲಂತ ಸಮಸ್ಯೆಗಳು ಬೇಕಿಲ್ಲ. ನಿಭಾಯಿಸುವವ ಅದನ್ನು ಹೇಳಲು ಹೊರಟರೂ ಅವರಿಗೆ ಕೇಳಲು ಆಸಕ್ತಿ ಇಲ್ಲ. ಇದೆಲ್ಲ ಸಾವಿರದೊಂಬೈನೂರ ಐವತ್ತನಾಲ್ಕನೇ ಇಸವಿಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾದ ಅವ್ಯಾಹತ ಗೋಳಿನ ದೃಶ್ಯದಂತೆ ಕಾಣುವ ಮಟ್ಟಿಗಿನ ಸಿನಿಕತೆ ಅವರಲ್ಲಿ ತುಂಬಿ ತುಳುಕಾಡುತ್ತಿದೆ. ಅದನ್ನು ನಗರದ ವಾತಾವರಣ ಹುಟ್ಟು ಹಾಕಿದೆ. 

ಬೆಳಿಗ್ಗೆ, ಮಧ್ಯಾಹ್ನ, ಸಂಜೆ ತೋಟ ತೋಟ ಎಂದು ಓಡಾಡುತ್ತಿದ್ದಂತಹ ಜೀವಗಳಿಗಿವತ್ತು ವಯಸ್ಸಾಗಿದೆ. ಅಡಿಕೆ ರೇಟು ಪಾತಾಳದಲ್ಲಿ ನೇತಾಡಲು ಶುರು ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಗ ಬೆಂಗ್ಳೂರು, ಮಂಗ್ಳೂರು ಸೇರಿಕೊಂಡು ಕೆಲಸ ಮಾಡಲು ಶುರು ಮಾಡಿ ಒಂದೆರಡು ವರ್ಷವಾಗಿದೆ. ಅವನಿಗೆ ತೋಟದಲ್ಲಿ ದೊಡ್ಡ ಮಟ್ಟಿನ ಇಂಟರೆಸ್ಟ್ ಇಲ್ಲ. ಹಾಕಿದ ಕಾಸೇ ಹುಟ್ಟದಿರುವ ಸನ್ನಿವೇಶವಿರುವಾಗ ಅಪ್ಪನೂ ಮಗನಿಗೆ ಒತ್ತಾಯ ಮಾಡುತ್ತಿಲ್ಲ. ಕೆಲಸಕ್ಕೆ ಜನ ಮೊದಲಿನಂತೆ ಸಿಗುತ್ತಿಲ್ಲ ಎನ್ನುವುದೇ ದೊಡ್ಡ ತಲೆನೋವು. ತಾನೇ ಕೆಲಸ ಮಾಡುವ ಎಂದರೆ ವಯಸ್ಸು ಕೇಳುತ್ತಿಲ್ಲ. ಯಾರಿಗೆ ಬೇಕು ಅಡಿಕೆ ಕೃಷಿ ಎನ್ನುವಂತಾಗಿದೆ. ಮೊದಲಿನಂತೆ ಈಗಿನ ಕೆಲಸಗಾರರು ಇಲ್ಲ. ಮಂಗ್ಳೂರು ಬೆಂಗ್ಳೂರು ಟ್ರೈನು ಶುರುವಾದ ಮೇಲೆ ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಡುಗರು, ಬೆಂಗ್ಳೂರಲ್ಲಿ ಮೇಸ್ತ್ರಿ ಕೆಲಸಕ್ಕೆ ಹೆಲ್ಪರ್ಗಳಾಗಿ ಸೇರಿಕೊಳ್ಳುವ ಸಂಖ್ಯೆ ಜಾಸ್ತಿಯಾಗಿದೆ. ಅವರಿಗೆ ಶೀಘ್ರವಾಗಿ "ನಗರದಲ್ಲಿ ಮೇಸ್ತ್ರಿ"ಗಳಾಗುವ ಹಂಬಲ. ಮತ್ತೆ ಕೆಲವರು ನಗರದಲ್ಲಿ ಒದ್ದಾಡಿ ಕೆಲಸ ಹುಡುಕಿಕೊಂಡಿದ್ದಾರೆ. ಊರಲ್ಲಿ ತೋಟದ ಕೆಲಸಕ್ಕೆ ಹೋದರೆ ಜೀವನ ಪರ್ಯಂತ ತಮ್ಮ ಅಪ್ಪ-ಅಮ್ಮಂದಿರಂತೆ ಹೊಟ್ಟೆಗಷ್ಟೇ ಮಾತ್ರ ದುಡಿಯುವ ಪರಿಸ್ಥಿತಿ ಮುಂದುವರಿಯುವುದು ಅವರಿಗೆಲ್ಲಾ ಬೇಕಾಗಿಲ್ಲ. ಬೆಂಗ್ಳೂರಲ್ಲಿ ತಿಂಗಳುಗಟ್ಟಲೆ ದುಡಿದರೆ ಉಳಿಸಬಹುದು ಎನ್ನುವ ಯೋಚನೆಯಿಂದ ಟ್ರೈನು ಹತ್ತುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಗ್ರೇಡಿಂಗ್ ಸಿಸ್ಟಂ ಊರಿಗೆ ಬಂದಾಗಲೆಲ್ಲಾ ಚಲಾವಣೆಯಾಗುತ್ತದೆ ಎನ್ನುವ ತೀರ್ಮಾನಗಳಿವೆ
. "ಇಲ್ಲಿಗಿಂತ ಕಾಲು ವಾಶಿ ಜಾಸ್ತಿ ದುಡಿದರೂ, ಬೆಂಗ್ಳೂರಲ್ಲಿ ಕೈಯಲ್ಲಿ ದುಡ್ಡು ಉಳೀಲಿಕ್ಕೆ ಉಂಟಾ. ಇವರಿಗೆಲ್ಲ ಮರ್ಲ್(ಹುಚ್ಚು)" ಎಂದು ಊರ ಹಿರಿಯರು ಗೊಣಗುತ್ತಿರುತ್ತಾರೆ. ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂದು ಜಡ್ಜ್ಮೆಂಟು ಪಾಸು ಮಾಡುವುದರಲ್ಲಿ ಹೆಚ್ಚಿನವರಿಗೆ ಆಸಕ್ತಿಯೇ ಉಳಿದಿಲ್ಲ. "ಎಲ್ಲಾ ನಮ್ಮ ಕರ್ಮ" ಎಂದು ಗೊಣಗುತ್ತಾರಷ್ಟೇ.

ಇನ್ನು ಖಾಯಮ್ಮಾಗಿ ಅಡಿಕೆ ಸುಲಿಯಲು ಬರುತ್ತಿದ್ದವರೂ ಸಹ ಕಳೆದ ವರ್ಷದಿಂದ ನಿಯಮಿತವಾಗಿ ಕೈ ಕೊಡಲು ಪ್ರಾರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ರಾಯಿಯ ಅಡಿಕೆ ಸುಲಿಯುವ ಹುಡುಗರು ದೂರದ ಸುಬ್ರಮಣ್ಯಕ್ಕೆ ಹೋಗಿ ಒಂದೆರಡು ವಾರ ನಿಂತು ಅಡಿಕೆ ಸುಲಿದು ಕೊಟ್ಟು ಬಂದಿದ್ದಾರೆ. ಹಾಗೆ ಹೋಗಿದ್ದರಿಂದ ಊರಲ್ಲಿ ಅವರು ಖಾಯಮ್ಮಾಗಿ ಅಡಿಕೆ ಸುಲಿಯುತ್ತಿದ್ದ ಮನೆಗಳ ಅಡಿಕೆ ಸುಲಿಯುವವರಿಲ್ಲದೇ ಬಾಕಿಯಾಗಿದೆ. ಕೆಲಸಗಾರರಿಗೆ ಯಾವ ಪರಿ ತತ್ವಾರವೆಂದರೆ ಕೆಲವರಂತೂ ಕಳೆದ ವರ್ಷ ಅಡಿಕೆ ಸುಲಿಯಲು ಜನ ಸಿಕ್ಕದೇ ಆ ಅಡಿಕೆಯನ್ನು ಈ ವರ್ಷ ಸುಲಿಯಲು ಜನರನ್ನು ಹೊಂದಿಸಿಕೊಳ್ಳುವಷ್ಟರಲ್ಲೇ ಸುಸ್ತಾಗಿದ್ದಾರೆ. ದೂರದ ಸುಬ್ರಮಣ್ಯಕ್ಕೆ ರಾಯಿಯಿಂದ ಅಡಿಕೆ ಸುಲಿಯಲು ಜನ ಹೋಗಲು ಕಾರಣ ಸಹ ಕೆಲಸಗಾರರ ಕೊರತೆಯೇ. ಅಡಿಕೆ ಸುಲಿಯಲು, ಅಡಿಕೆ ತೆಗೆಯಲು ಗೊತ್ತಿರುವುದು ಸಹ ತುಂಬಾ ಕಡಿಮೆ ಮಂದಿಗೇನೇ. ಅವರೆಲ್ಲಾ ಹೆಚ್ಚು ಕಡಿಮೆ ಹತ್ತು ವರ್ಷದಿಂದ ಅದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. 


ಅವರನ್ನು ಬಿಟ್ಟರೆ ಯುವಕರಲ್ಲಿ ಬಹುತೇಕರು ಈ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಡಿಕೆ ಸಂಬಂಧಿ ವೃತ್ತಿಗಿಂತ ಕಡಿಮೆ ದೈಹಿಕ ಶ್ರಮ ಹಾಗೂ ಹೆಚ್ಚು ಆಕರ್ಷಕವಾದ ಸ್ವಲ್ಪ ಅಧಿಕ ಸಂಬಳವನ್ನು ಕೊಡುವ ಕೆಲಸಗಳು ಹಲವಾರು ಕಣ್ಣೆದುರಿಗಿವೆ. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ, ಬಿಸಿಲಿನಲ್ಲಿ, ಕೆಸರಿನಲ್ಲಿ ಕೆಲಸ ಮಾಡುವ ಜರೂರತ್ತಿಲ್ಲ. ಟಿಪ್ಟಾಪಾಗಿ ಡ್ರೆಸ್ ಮಾಡಿಕೊಂಡು ಬಸ್ ಹತ್ತಿದರಾಯಿತು. ಹೇಗೆ ಅಡಿಕೆ ಕೃಷಿಕರು ತಮ್ಮ ಮಕ್ಕಳಿಗೆ ತೋಟದ ಉಸಾಬರಿ ಬೇಡ, ಚೆನ್ನಾಗಿ ಓದಿ ಕೆಲಸ ಹಿಡಿಯಲಿ ಎಂದು ಆಶಿಸುತ್ತಿದ್ದಾರೋ ಅದೇ ರೀತಿಯ ಆಸೆ ಕೆಲಸಗಾರರ ಕುಟುಂಬಗಳಲ್ಲೂ ಹೆಚ್ಚಾಗಿ ಕಾಣುತ್ತಿದೆ. ಜಾಗತೀಕರಣದಿಂದಾಗಿ ಮೊಬೈಲ್ ಮೂಲಕ ಹಳ್ಳಿಗಳಲ್ಲೂ ಸಾಧ್ಯವಾದ ಸಂಪರ್ಕ ಕ್ರಾಂತಿ, ಎರಡು ಸಾವಿರದ ಆಸುಪಾಸಿನಲ್ಲಿ ಸಿಗುವ ಡಿಟಿಹೆಚ್, ಕಡಿಮೆ ದರದಲ್ಲಿ ಕೈಗಟಕುವ ಎಲೆಕ್ಟ್ರಾನಿಕ್ ಉಪಕರಣಗಳು, ಡಿಸ್ಕೌಂಟಿನಲ್ಲಿ ಸಿಗುವ ಥರವೇಹಾರಿ ಬಟ್ಟೆಗಳು ಇತ್ಯಾದಿಗಳು ಸೇರಿ ಕೆಲಸಗಾರ ಕುಟುಂಬಗಳಿಗೆ ಮೊದಲಿಗಿಂತ ನೆಮ್ಮದಿಯ ನಿಟ್ಟುಸಿರು ಬಿಡಲು ಸಹಕರಿಸಿವೆ. ಇದೆಲ್ಲದರಿಂದಾಗಿ ಅಡಿಕೆ ಸುಲಿಯುವ, ತೋಟದ ಕೆಲಸಗಾರನಿಗೆ ಮಗ ತನಗಿಂತ ಅರೆಪಾವು ನೆಮ್ಮದಿಯ ಕೆಲಸ ಮಾಡಲಿ ಎನ್ನುವ ಆಸೆ ಇರುತ್ತದೆ. ಹಾಗಿದ್ದಾಗ ಮಗ ಗ್ಯಾರೇಜಿನಲ್ಲಿ ಕೆಲಸಕ್ಕೆ ಹೋದರೂ ಮುಪ್ಪಾದ ಅಪ್ಪನಿಗೆ ಸಂತೋಷವೇ. ಫ್ಯಾಶನೆಬಲ್   ಆಗಿ, ಕಂಫರ್ಟ್ ಜೋನ್ ನಲ್ಲಿ ಬದುಕುವುದು ಒಂದು ಕಾಲದಲ್ಲಿ ಮೇಲ್ವರ್ಗಕ್ಕೆ ಮಾತ್ರ ಸೀಮೀತವಾಗಿತ್ತು. ನಂತರ ಮಧ್ಯಮ ವರ್ಗಕ್ಕೆ ಬಂತು. ಇತ್ತೀಚೆಗಂತೂ ಅದು ದಕ್ಷಿಣ ಕನ್ನಡದ ಕೆಳ ಮಧ್ಯಮ ಹಾಗೂ ದುಡಿಯುವ ವರ್ಗದಲ್ಲಿ ಢಾಳಾಗಿ ಕಾಣಿಸುತ್ತಿದೆ.

ತೋಟದ ಕೆಲಸಕ್ಕೆ ಜನರನ್ನು ಒಟ್ಟು ಮಾಡುವುದಂತೂ ಕನಸಿನ ಮಾತೇ. ಹಟ್ಟಿಯ ಗೊಬ್ಬರ ಹೊರುವ ಕೆಲಸ ಅಂದ್ರೆ ಸಾಕು ಕೆಲಸಕ್ಕೆ ಬರುವವರೂ ದಿಢೀರ್ ಕಣ್ಮರೆಯಾಗುತ್ತಾರೆ. ಒಂದು ವೇಳೆ ನಿಮ್ಮ ಮನೆಗೆ ಖಾಯಮ್ಮಾಗಿ ಕೆಲಸಕ್ಕೆ ಬರುವವರು ತಪ್ಪಿಸಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗಿ ಮೆತ್ತಗೆ ಅಸಮಾಧಾನ ಹೊರಹಾಕಿದಿರೋ ನಿಮ್ಮ ಕತೆ ಮುಗಿದಂತೆಯೇ. ಅವರೆಲ್ಲಾ ಶಾಶ್ವತವಾಗಿ ನಿಮ್ಮ ತೋಟದ ಕಡೆ ಮುಖವೇ ಹಾಕುವುದಿಲ್ಲ. ಅವರಿಗಂತೂ ಕೆಲಸಕ್ಕೆ ಕರಿಯುವವರ ಕ್ಯೂ ಇದೆ. ಅಲ್ಲಿಗೆ ನಿಮ್ಮ ತೋಟದ ಕೆಲಸ ಪಡ್ಚಾ. ನೀವೂ ಪಡ್ಚಾ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಅಡಿಕೆ ತೋಟ ಹೊಂದಿರುವವರು ಕೆಲಸಗಾರರ ಜೊತೆ ವ್ಯವಹರಿಸುವಾಗ, ಮಾತನಾಡುವಾಗ ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯಿಂದ ವರ್ತಿಸುತ್ತಿದ್ದಾರೆ.

ಮಾತಿನಲ್ಲಿ ಕೃತಿಯಲ್ಲಿ ಯಡವಟ್ಟಾದರೆ ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಯಾವ ದೇವರೂ, ದೈವವೂ ಕಾಪಾಡುವುದಿಲ್ಲ. ಈಗಿರುವ ಕೆಲಸಗಾರರ ಕೊರತೆ, ಅವರಿಗಾಗಿ ಕಾದುಕುಳಿತುಕೊಳ್ಳುವ ಉಸಾಬರಿ ತಪ್ಪಿಸಲು ಪಡ್ರೆ ಸಮೀಪದ ಸಮಾನ ಪಂಗಡದ ಅದೇ ಊರಿನ ಕೆಲವು ಅಡಿಕೆ ತೋಟದವರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸ್ವಸಹಾಯ ಗುಂಪುಗಳಂತೆ ಪಡ್ರೆಯ ಈ ಗುಂಪು ಕೆಲಸ ಮಾಡುತ್ತದೆ. ವಾರದಲ್ಲಿ ಒಂದೋ ಎರಡೋ ದಿನ ಆ ಗುಂಪಿನಲ್ಲಿರುವವರ ಮನೆಯಲ್ಲಿ ಕೆಲಸ ಮಾಡುವುದು. ಆ ಗುಂಪಿನಲ್ಲಿರುವ ಯಾರೇ ಕರೆದರೂ ಅವರಲ್ಲಿ ತೋಟದ ಕೆಲಸಕ್ಕೆ ಹೋಗಬೇಕು. ಅವರವರೇ ಗೊಬ್ಬರ ಹೊರುವುದರಿಂದ ಹಿಡಿದು ಅಡಿಕೆ ಕೊಯ್ಯುವವರೆಗೆ ಕೆಲಸ ಮಾಡುತ್ತಾರೆ. ಅಡಿಕೆ ಸುಲಿಯುತ್ತಾರೆ, ಮಳೆ ಸೂಚನೆ ಸಿಕ್ಕರೆ ಸಾಕು ಅಡಿಕೆ ರಾಶಿ ಮಾಡಲು ಓಡಿಬರುತ್ತಾರೆ. ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಇಲ್ಲ. ಆವತ್ತು ಕೆಲಸ ಮಾಡಿದ್ದಕ್ಕೆ ಅಲ್ಲೊಂದು ಗಡದ್ದು ಹಬ್ಬದ ಊಟ. ಹೀಗೆ ನಮ್ಮ ನಮ್ಮ ತೋಟದ ಕೆಲಸಗಳನ್ನು ನಾವೇ ಮಾಡಿದರೆ ಮಾತ್ರ ಊಟಕ್ಕುಂಟಷ್ಟೇ ಎನ್ನುವಲ್ಲಿಗೆ ಸಮಸ್ಯೆ ಬಂದು ನಿಂತಿದೆ.

ಕೆಲಸದವರನ್ನು ನಂಬಿಕೊಂಡು ಕೃಷಿ ಮಾಡುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕೆ ಬೆಂಕಿ ಬಿದ್ದು ಕಾಲವಾಗಿದೆ. ಈಗಿರುವುದಂತೂ ಆದೇ ಆತ್ಮವಿಶ್ವಾಸದ ಬೂದಿ. ಅದನ್ನು ತೋಟದ ಮಾಲೀಕರೇ ಅಡಿಕೆ ಮರದ ಬುಡಕ್ಕೆ ಹಾಕಿದರೆ ಸ್ವಲ್ಪ ಹೆಚ್ಚು ದಿನ ಅಡಿಕೆ ಮರ ಬದುಕಬಹುದು. ಆದರೆ ಅದಕ್ಕೆ ತಕ್ಕ ಫಲ ನೀಡುತ್ತದೆ ಎನ್ನುವ ಗ್ಯಾರೆಂಟಿ ಇಲ್ಲ! ಅಡಿಕೆ ಕೃಷಿ ನಮ್ಮ ಕಾಲಕ್ಕಾಯಿತು ಎಂದು ಹಿರಿಯರು ಸ್ವಗತದಲ್ಲಿ ಮಾತಾಡಲು ಶುರುಮಾಡಿ ವರ್ಷಗಳೇ ಕಳೆದಿವೆ. ಆದರೂ ಆ ಹಿರಿ ಜೀವಗಳು ಪ್ರತೀ ವರ್ಷದ ಬಜೆಟ್ ನೋಡುವುದನ್ನು ಬಿಟ್ಟಿಲ್ಲ. ಅಲ್ಲೇನಾದರೂ ಪರ್ಯಾಯ ಕೃಷಿಗೆ ಉಪಯುಕ್ತವಾಗುವಂತಹ ಸವಲತ್ತುಗಳಿವೆಯಾ ಎಂದು ತಡಕಾಡುತ್ತಾ "ಎಂತ ಕರ್ಮ. ಎಲ್ಲಾ ಪಕ್ಷಗಳೂ ಒಂದೇ. ಎಲ್ಲರದ್ದೂ ಕಣ್ಣೊರೆಸುವ ತಂತ್ರ" ಎನ್ನುತ್ತಾ ಉಸಿರೆಳೆದುಕೊಳ್ಳುತ್ತಾರೆ.

ಗೋಪಾಲಕೃಷ್ಣ ಕುಂಟಿನಿ ಅವರ "ದೀಪದ ಕೆಳಗೆ ಕತ್ತಲು" ಎನ್ನುವ ಕತೆಯಲ್ಲಿ ಸಂಕಪ್ಪಯ್ಯ ಎನ್ನುವ ಪಾತ್ರವೊಂದು ಬರುತ್ತದೆ. ಸಂಕಪ್ಪಯ್ಯ ಕಷ್ಟಪಟ್ಟು ಮಾಡಿದ ತೋಟ ಹೊಸದಾಗಿ ನಿರ್ಮಿಸಲ್ಪಡುವ
ಅಣೆಕಟ್ಟಿನಿಂದಾಗಿ ಮುಳುಗುವ ಹಂತಕ್ಕೆ ಬಂದಿರುತ್ತದೆ. ಅದ್ದರಿಂದ ಊರು ಬಿಡುವ ಮೊದಲು ಸಂಕಪ್ಪಯ್ಯನ ಮಗ ತೋಟದ ಅಡಿಕೆ ಮರಗಳನ್ನು ಕಡಿಯಲು ಫೀಟಿಗೆ ಇಂತಿಷ್ಟು ಎಂದು ಕಂಟ್ರ್ಯಾಕ್ಟು ಕೊಡುತ್ತಾನೆ. ಇದನ್ನೆಲ್ಲಾ ಈಜಿ ಚೇರಿನ ಮೇಲೆ ಕುಳಿತು ವೃದ್ಧ ಸಂಕಪ್ಪಯ್ಯ ಕೇಳಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕೆಲವು ಕಡೆ ಅಡಿಕೆ ಮರ ಕಡಿದು ರಬ್ಬರು ಹಾಕುತ್ತಿದ್ದಾರೆ. 

ಸಂಕಪ್ಪಯ್ಯನಂತಹ ವೃದ್ಧರು ದಕ್ಷಿಣ ಕನ್ನಡದಲ್ಲಿ ಸಾವಿರಾರು ಮಂದಿ ಈಜಿ ಚೇರಿನಲ್ಲಿ ಒಂಟಿಯಾಗಿ ಕುಳಿತಿದ್ದಾರೆ. ಅವರ ಕಣ್ಣ ಮುಂದೆ ಅವರೇ ಬೆಳೆಸಿದ ತೋಟ ಮೌನದಿಂದಿದೆ.



ಚಿತ್ರ ಕೃಪೆ: ಮಹೇಶ್ ಪಿ ಕುಂಬ್ಳೆ 

 

ಬುಧವಾರ, ಮಾರ್ಚ್ 24, 2010

ನಗರದ ನಿಟ್ಟುಸಿರುಗಳ ನಡುವೆ ಒಂದು ಸಂಜೆ

ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ...
ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ ಆಫೀಸಿನ ಕ್ಯಾಬುಗಳನ್ನು ಏರುವವರಿಗೆ ಹುಣ್ಣಿಮೆಯಿದ್ದರೂ, ಅಮಾವಾಸ್ಯೆ ಇದ್ದರೂ ತಲೆಕೆಡಿಸಿಕೊಳ್ಳುವ ಉಮೇದಿಲ್ಲ. ನಿದ್ದೆ ಕಣ್ಣಲ್ಲಿ ಕರಗುವುದಷ್ಟೇ ಗೊತ್ತು. ಕ್ಯಾಬಿನ ಕಿಟಕಿಯಿಂದ ಹೊರಕ್ಕೆ ಇಣುಕಿ ನೋಡುತ್ತಾ ಕುಳಿತುಕೊಳ್ಳುವುದರಲ್ಲಿ ಹೆಚ್ಚು ಆಸ್ಥೆಯಿಲ್ಲ. ಪ್ರತೀ ನೂರು ಮೀಟರಿಗೆ ಒಂದಕ್ಕೊಂದು ಅಪ್ಪಿಕೊಂಡಂತೆ ಇರುವ ನಿಯಾನು ದೀಪ, ಟ್ಯೂಬ್ಲೈಟುಗಳ ಮಧ್ಯೆ ನಗರದಲ್ಲಿರುವ ಚಂದ್ರ ಡೆಡ್ ಇನ್ವೆಸ್ಟ್ಮೆಂಟ್. ಅನಗತ್ಯ ಎನರ್ಜಿ
ವೇಸ್ಟು....ಸುಮ್ಮನೆ ಮಧ್ಯಾಹ್ನಗಳಲ್ಲಿ ಕಾರ್ಪೋರೇಷನ್ನಿನ ಆಫ್ ಮಾಡದ ಲೈಟುಗಳಂತೆ ಬೆಳಗುತ್ತಿರುವವ ಎನ್ನುವ ಭಾವನೆಯೇ ಆತನ ಬಗ್ಗೆ....

ಸದ್ಯಕ್ಕೆ ನಮಗೆಲ್ಲಾ ಚಂದ್ರನಿಲ್ಲದ ರಾತ್ರಿ, ನಿರ್ಜನ, ಏಕಾಂತ ಪ್ರದೇಶಗಳಲ್ಲಿ ಹುಟ್ಟುವ ಚಡಪಡಿಕೆ, ಕಾತರವನ್ನು ನಗರ ಉಳಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಚಂದ್ರ ನಗರಗಳಲ್ಲಿ ಅಪ್ರಸ್ತುತ. ಆತನ ಗೈರು ಹಾಜರಿಯೂ ನಮಗೆಲ್ಲಾ ಒಪ್ಪಿತವಾಗುವ ವಿಷಯವೇ.

ನಮ್ಮ ನಗರದ ಅಪಾರ್ಟ್ಮೆಂಟಿನ
ಬಾಲ್ಕನಿ, ಮನೆಯ ಮಹಡಿಗಳಿಂದ ಕಾಣಲು ಹೊರಡುವ ಚಂದ್ರನಿಗೆ ಬೆಳಕಿನ ಸರಪಳಿ. ಯಾಕೆಂದರೆ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ. ನಿತ್ಯದ ಸುಸ್ಥಿತಿಗೆ ನಮಗೆಲ್ಲಾ ಬೆಳಗಿನ ಸೂರ್ಯೋದಯ ಬೇಕು. ಟ್ರಾಫಿಕ್ಕು ಜಾಮು ಬೇಕು. ಜೊತೆಗೆ ಉಪಹಾರ ದರ್ಶಿನಿಯ ಬೈಟೂ ಕಾಫಿ. ಅಭ್ಯಾಸವಿದ್ದರೆ ಸೇದಲು ಚೋಟುದ್ದದ ಸಿಗರೇಟು. ಏಕಾಂತದ ರಾತ್ರಿ, ನಿಶ್ಯಬ್ದವಾಗಿರುವ ಸಂಜೆ, ರಾತ್ರಿ ಯಾರಿಗೂ ಬೇಡ. ಬೆಳಕಿಗೆ ಇರುವ ಅಗಾಧ ಮಾರ್ಕೆಟ್ಟು ಕತ್ತೆಲೆಗಿಲ್ಲ. ಬೆಳಕು ಇವತ್ತು ಬೆರಗಲ್ಲವೋ ಅಣ್ಣಾ...ಅದು ಕೇವಲ ಬೆಸ್ಕಾಂನ ಮಧ್ಯೆ ಮಧ್ಯೆ ಬಂದು ಹೋಗುವ ಲೋಡ್ಶೆಡ್ಡಿಂಗು, ಪವರ್ಕಟ್ಟು.

ರಾತ್ರಿಯಾಯಿತೆಂದರೆ ಸಾಕು ಜಗತ್ತಿಗೆ ನಿದ್ದೆಯ ನಾಟಕ. ಹೇಳಿಕೊಳ್ಳಲು ಆಯಾಸದ ಸಬೂಬು. ಚಳಿಗೆ ನಡೆಯುತ್ತಾ, ಒಂಟಿಯಾಗಿ ರಾತ್ರಿಗಳಲ್ಲಿ ಸುಮ್ಮನೆ ಕೂತುಕೊಳ್ಳಿ ಅಂತ ನೀವು ಹೇಳಿದರೆ ಹೇಗೆ ಸ್ವಾಮಿ ಎಂದು ದಬಾಯಿಸಲು ಸಾವಿರ ನಾಲಿಗೆಗಳಿವೆ. ನಮ್ಮದೇನಿದ್ದರೂ ಗಂಟೆಗೆ 24 ಡಾಲರು ದುಡಿಯುವವರ ದಂಡು. ತಪ್ಪದೇ ರಾತ್ರೆ ಇಡೀ ಕಂಪ್ಯೂಟರ್ ಮುಂದೆ ಸೈನ್ ಇನ್ ಆಗಿದ್ದರೆ ಮಾತ್ರ ಕೆಲಸ, ಆಕರ್ಷಕ ಸಂಬಳ ಉಳಿಯುತ್ತದೆ. ಅಷ್ಟರಮಟ್ಟಿಗೆ ರಾತ್ರಿ, ಕೊನೇ ಕ್ಷಣದ ಆಕ್ಸಿಜನ್ ಇದ್ದಂತೆ ಇವತ್ತಿನ ಆಧುನಿಕ ಜಗತ್ತಿಗೆ. ರಾತ್ರಿಯ ತಂಪು, ತಂಗಾಳಿ ಎನ್ನುವುದೆಲ್ಲಾ ಕವಿಗಳ ಗಿಮಿಕ್ಕು ಎನ್ನುವ ಅಸಡ್ಡೆ. ನಗರದ ರಾತ್ರಿಗಳಲ್ಲಿ ಹೆಚ್ಚೆಂದರೆ ಜೀವಭಯ, ನಡುಕ......ಹೆಚ್ಚೆಂದರೆ ವೀಕೆಂಡುಗಳಲ್ಲಿ ಶಾಪಿಂಗು, ಔಟಿಂಗು ಹೋಗಿ ಹಿಂತಿರುಗುವಾಗ ಆಗುವ ಸ್ಟುಪಿಡ್ ಚಳಿ. ಅದಕ್ಕಾಗಿ ಮೆಗಾ ಮಾಲ್ಗಳಲ್ಲಿ ತೆಗೆದುಕೊಂಡ ಬ್ರ್ಯಾಂಡೆಡ್ ಜರ್ಕಿನ್ನು
, ಸ್ವೆಟರು ಹಾಕಿಕೊಳ್ಳುತ್ತಾ ಕಟ ಕಟ ಎಂದು ಹಲ್ಲು ಕಡಿಯುವುದು.... ಯಾರಿಗೆ ಬೇಕು ಸ್ವಾಮಿ ರಾತ್ರಿಯ ಉಸಾಬರಿ...ಸಿಗ್ನಲ್ನಲ್ಲಿ ನಿಂತಾಗ ಚಂದ್ರ ಇದ್ದಾನೋ ಇಲ್ಲವೋ ಎಂದು ಆಕಾಶದತ್ತ ತಲೆ ಹಾಕುವ ಉಸಾಬರಿ. ಸಿಗ್ನಲ್ಲಿನ ಕೆಂಪು ದೀಪ ಹಸಿರಿಗೆ ತಿರುಗಿದರೆ ಸಾಕು...ಮನೆ ತಲುಪಿ ಉಸ್ಸಪ್ಪಾ ಎಂದು ಹಾಸಿಗೆಗೆ ಒರಗಿದರೆ ಸಾಕು....ಇಷ್ಟೇ ಸಾಧ್ಯತೆಗಳಿರುವುದು ಬಹುಷಃ ನಗರದ ರಾತ್ರಿಗಳಿಗೆ.
******************

ಮೌನವಾಗಿರುವ ನಗರ ಯಾರಿಗೂ ಬೇಡ. ಅದಕ್ಕೇ ಮಧ್ಯರಾತ್ರಿ, ತಡರಾತ್ರಿಯವರೆಗೂ ಮೆಸೇಜು ಬಂದು ಬೀಳುತ್ತದೆ ಇನ್ಬಾಕ್ಸಿಗೆ. ಮಾತನಾಡದೇ ಮೌನವಾಗಿರುವಾಗ ದುಡ್ಡು ಹುಟ್ಟಿಸುವುದನ್ನು ಇನ್ನೂ ಅನ್ವೇಶಿಸಿಲ್ಲ ಅಷ್ಟೇ. ಆದ್ದರಿಂದ ನಗರದಲ್ಲಿ ಕೆಲಸ ಸಿಗದವರು, ಕೆಲಸ ಕಳಕೊಂಡವರು ಹೀಗೆ ತಾತ್ಕಾಲಿಕ ನಗರ ತಿರಸ್ಕೃತರು ಮಾತ್ರ ಮೌನಕ್ಕೆ ಒಗ್ಗುವ ಮಂದಿ. ಮೌನದಲ್ಲೇ ಸೋಲನ್ನು ಪರಾಮರ್ಶಿಸುವ
ಮಂದಿ....ಒಂದು ವೇಳೆ ಮಧ್ಯರಾತ್ರಿ ಆತ/ ಆಕೆ ಎಚ್ಚರವಿದ್ದಾರೆ ಎಂದಿಟ್ಟುಕೊಳ್ಳಿ. ಒಂದೋ ಆತ ಆಕೆಯೊಂದಿಗೆ ಮಾತನಾಡುತ್ತಿರುತ್ತಾನೆ. ಇಲ್ಲವೇ ಆಕೆ ಆತನೊಂದಿಗೆ ಮಾತನಾಡುತ್ತಿರುತ್ತಾಳೆ. ಅವರಿಬ್ಬರೂ ಮೌನವಾಗಿರುವುದು ಒಬ್ಬರಿಗೊಬ್ಬರು ಕೈಕೊಟ್ಟು ಗುಡ್ಬೈ ಹೇಳಿದಾಗ ಮಾತ್ರ. ಆ ರಾತ್ರಿಗಳಲ್ಲೂ ಚಂದ್ರನಿಗಿಂತ, ಮೌನಕ್ಕಿಂತ ಕಾಫಿ ಡೇಗಳು ಪ್ರತೀ ಭೇಟಿಗಳಲ್ಲಿ ಹುಟ್ಟಿಸಿದ ತೆಳು ಬೆಳಕಿನ ಕುಂಡಗಳು ಹೆಚ್ಚು ಆಪ್ಯಾಯಮಾನವಾಗಿದ್ದು ಕಾಣುತ್ತವೆ ಪರಸ್ಪರರಿಗೆ. ಇದು ನಗರದ ಭಾಷೆ.

ಸುಮ್ಮನೆ ಕೂತು ಆಕೆಯ ಬೆನ್ನಿಗೆ ಒರಗಿ ಕೈಯೊಳಗೆ ಕೈ ಬೆಸೆದು ಇಬ್ಬರೂ ಒಂದಕ್ಷರವೂ ಮಾತಾಡದೇ ಇದ್ದದ್ದು, ಹಾಸ್ಟೆಲ್ನಲ್ಲಿದ್ದಾಗ ಮಧ್ಯರಾತ್ರಿ ರೂಮು ಬಿಟ್ಟು ನಡೆಯುತ್ತಾ ಹಾಸ್ಟೆಲಿನ ಹಿಂದಿದ್ದ ಬಂಡೆ ಏರಿ ಕುಳಿತದ್ದು ಇವೆಲ್ಲಾ ಸಮಯವಿದ್ದರೆ ಸಂತೋಷವನ್ನಷ್ಟೇ ಕೊಡುತ್ತದೆ ಎನ್ನುವುದು ಗೊತ್ತಾಗಿಬಿಟ್ಟಿದೆ. ಹಿಂದೆಲ್ಲಾ ಹಾಗೆ ಸುಮ್ಮನೆ ನಡೆಯಲು ಹೊರಟಾಗ ಯಾವುದೇ ಅಪೇಕ್ಷೆಗಳಿರುತ್ತಿರಲಿಲ್ಲ. ಆದರೀಗ ಅಪೇಕ್ಷೆಗಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ. ಅಪೇಕ್ಷೆಯೇ ಗೆಲುವಿನ ಮೆಟ್ಟಿಲು ಎನ್ನುತ್ತಾ ಬಡಬಡಿಸುತ್ತಾರೆ ಮ್ಯಾನೇಜ್ಮೆಂಟ್ ಗುರುಗಳು. ಅವರ ಪ್ರಕಾರ ಎಲ್ಲಾ ಕ್ರಿಯೆಗಳಿಗೂ ಒಂದು ನಿರ್ದಿಷ್ಟ
ಉತ್ತರವಿರಲೇಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇರಬೇಕೆಂದೇನೂ ಇಲ್ಲ ಎಂದರೆ ಸಾಕು ಸನಾತನಿಗಳಾಗಿಬಿಡುತ್ತೇವೆ. ಬಳಸಿ ಬಿಸಾಡುವ "ಕಮಾಡಿಟಿ" ನಾವೇ ಆಗಿಬಿಡುತ್ತೇವೆ. ಆದ್ದರಿಂದ ಇಲ್ಲಿ ಮಾರ್ಕೆಟ್ ಇಲ್ಲದ ವಸ್ತುಗಳೆಲ್ಲಾ ಉಪಯೋಗಕ್ಕೆ ಬಾರದ ವಸ್ತುಗಳು.

ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ಶಬ್ದವೇ ಸದ್ಯಕ್ಕೆ ಕಾಯಕ ವಿರೋಧಿ. ಋಷಿಗಳು ನೂರಾರು ದಿನ ಕುಳಿತು ತಪಸ್ಸು ಮಾಡಿದರು ಎನ್ನುವುದು ನಮಗಿವತ್ತು ಕೇವಲ ಕತೆಯಲ್ಲ....ಅದೊಂದು ಹುಚ್ಚು ಕಲ್ಪನೆಯ ಪರಮಾವಧಿ. ಯಾಕೆಂದರೆ ಮೂರೂವರೆ ನಿಮಿಷದ ಸಿಗ್ನಲ್ಲು ದಾಟಿ ಈಚೆಗೆ ಬರುವಾಗ ಒಂದು ಯುಗವೇ ಕಳೆಯುವಂತಹ ವಾಸ್ತವವಿರುವಾಗ ಹೇಗೆ ನಂಬುವುದು ಹೇಳಿ...ಹೇಳಿ ಕೇಳಿ ನಾವು ವಾಸ್ತವದ ಶಿಶುಗಳು.....ಅದಕ್ಕಿರುವ ಹಲವು ಸಾಧ್ಯತೆಗಳು ಸಹ ಸುಮ್ಮನೆ ಕುಳಿತುಕೊಳ್ಳುವುದು ಎನ್ನುವ ವಿಚಾರವನ್ನು ಕೆಲಸ ಕದಿಯುವ ಪಟ್ಟಿಗೆ ಸೇರಿಸಿಬಿಟ್ಟಿದೆ. ನಗರದ ಮನೆಗಳಲ್ಲಿದ್ದಾಗ ರಾತ್ರಿ ಹನ್ನೊಂದರ ನಂತರ ಕಪ್ಪು ಆಕಾಶ ನೋಡಲು ಹೊರಕ್ಕಿಣುಕುವ ವಿಚಾರ ಬರುವುದೇ ಕಡಿಮೆ. ಅದರಿಂದೇನು ಉಪಯೋಗ ಮೊದ್ಲು ಹೇಳಿ ಅನ್ನುವುದು ಮೊದಲ ಮತ್ತು ಕೊನೆಯ ಪ್ರಶ್ನೆ. ಕುವೆಂಪು ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಕಂಪೌಂಡಿನಲ್ಲಿದ್ದ ಮರದ ಎದುರು ಕುರ್ಚಿ
ಹಾಕಿ ಕುಳಿತುಕೊಂಡು ಹಕ್ಕಿಗಳ ಗೂಡನ್ನು ವೀಕ್ಷಿಸುತ್ತಿದ್ದರು ಎನ್ನುವುದು ಕವಿಗಳಿಗೆ ಮಾತ್ರ ಸಾಧ್ಯವಾಗುವ ನಮ್ಮ ಸದ್ಯದ ವಾಸ್ತವ...ತೇಜಸ್ವಿ ಹಕ್ಕಿ ಫೋಟೋ ಕ್ಲಿಕ್ಕಿಸಲು ಗಂಟೆಗಳಷ್ಟು ಕಾಯುತ್ತಾ ಕುಳಿತಿರುತ್ತಿದ್ದರು, ಮೀನಿಗೆ ಗಾಳ ಹಾಕುತ್ತಾ ತದೇಕಚಿತ್ತದಿಂದ ಕಾಯುತ್ತಿದ್ದರು ಎನ್ನುವುದು ಮೂಡಿಗೆರೆಯಲ್ಲೋ, ತೀರ್ಥಹಳ್ಳಿಯಲ್ಲೋ, ದಿಡುಪೆಯಲ್ಲೋ ಮಾತ್ರ ಸಾಧ್ಯವಾಗುವ ನಗರದ ವಾಸ್ತವ...ಹೇಗಿದ್ದರೂ ನಮಗಂತೂ ವೀಕೆಂಡಿನ ಒಂದೋ ಎರಡೋ ದಿನಕ್ಕೆ ಆಯಾಸ ಕಳೆಯಲು ನಿದ್ದೆಯಿದೆ, ಉತ್ಸಾಹವಿದ್ದರೆ ವಂಡರ್ ಲಾ, ತಪ್ಪಿದರೆ ಮಲ್ಟಿಪ್ಲೆಕ್ಸಿನಲ್ಲಿ ಸಿನಿಮಾದ ಊಲಾಲಾ...ಇಲ್ಲವೇ ಝಗಮಗಿಸುವ ಮಾಲುಗಳ ಆಫರುಗಳಲ್ಲಿ ಯಾವುದು ಬೆಟರು ಅಂತ ಮಹಡಿ ಮಹಡಿ ಹತ್ತಿ ಜಾಲಾಡುವ ಕ್ರೀಡಾಕೂಟ...!!!
******************

ಇದೆಲ್ಲವನ್ನೂ ನಿತ್ಯ ನೈಮಿತ್ತಿಕದಂತೆ ಗಮನಿಸುತ್ತಾ ಪ್ರತಿ ಸಂಜೆ ನಿಯಾನು ಬಲ್ಬುಗಳು ಉರಿಯಲು ಶುರುವಾಗುತ್ತವೆ. ಚಂದ್ರನಿದ್ದರೂ ಆ ಕಣ್ಣುಕುಕ್ಕುವ ಬೆಳಕಲ್ಲಿ ಮಬ್ಬು ಮಬ್ಬು. ನಗರದ ಜಗತ್ತಿಗೆ ಚಂದ್ರ ಬಂದರೂ ಹೋದರೂ ದೊಡ್ಡ ವಿಷಯವೇ ಅಲ್ಲ. ಇಲ್ಲಿ ಬೆಳಕೂ ಸಹ ಕಂಪ್ಯೂಟರು ಕುಟ್ಟುವಷ್ಟೇ ಯಾಂತ್ರಿಕ, ಸಾರ್ವತ್ರಿಕ.....!!!

ಎಲ್ಲರ ಭಾವನಾತ್ಮಕ ನೆಲೆಗಳನ್ನು ನಿರ್ಲಿಪ್ತತೆಯ
ಮಗ್ಗುಲಿಗೆ ಹಾಕಿಬಿಡಲು ನಗರದ ಬೆಳಕು ಸಾಕು...ಮೌನವಾಗಿರದ ಪ್ರತಿ ಕ್ಷಣವೂ ಸಾಕು.....ಚಂದ್ರನಿರುವ ನಗರದ ರಾತ್ರಿಯೂ ಸಾಕು.

ಅದಕ್ಕೇ ಹೇಳಿದ್ದು-ನಗರದ ಉದ್ದುದ್ದ ಮಲಗಿದ ರಸ್ತೆಯಂತೆ ಬದುಕು ನೆರಳುಗಳಿಲ್ಲದ ಅಸ್ಥಿಪಂಜರ...!!!

ಶುಕ್ರವಾರ, ಫೆಬ್ರವರಿ 26, 2010

ಅಚಾನಕ್ಕಾಗಿ ದೇವರಂತೆ ಪ್ರತ್ಯಕ್ಷವಾಗಿಬಿಡಬೇಕು ಲೇಖಕ

ಓದುಗನಿಗೆ ಲೇಖಕ ಸುಲಭಕ್ಕೆ ಸಿಕ್ಕಬಾರದು.
ಯಾವುದೋ ಮದುವೆ ಸಮಾರಂಭದಲ್ಲಿ ಆಗಷ್ಟೇ ಪರಿಚಯವಾದ ವ್ಯಕ್ತಿಯ ಜೊತೆ ಶತಮಾನಗಳಷ್ಟು ಹಿಂದಿನ ಪರಿಚಯದಂತೆ ಮಾತನಾಡಲು ಶುರುಮಾಡಿಬಿಡುವಂತೆ ಲೇಖಕನ ಜೊತೆಗಿನ ಪರಿಚಯ ತಿರುಗಿಬಿಡಬಾರದು.

ಒಂದು ಕತೆಯೋ, ಪುಸ್ತಕವೋ ಓದಿದ ಕ್ಷಣಕ್ಕೆ ಕವಿ, ಕತೆಗಾರನ ವಿಳಾಸವೋ, ನಂಬರೋ ಈಗಂತೂ ಸುಲಭಕ್ಕೆ ಸಿಕ್ಕುಬಿಡುತ್ತದೆ. ಅಲ್ಲಿಗೆ ಓದುಗ ಹೊಗಳುಭಟನಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಅನಿವಾರ್ಯವಾಗಿ ಶುರುವಾಗುತ್ತದೆ. ಅಥವಾ ಲೇಖಕ ಅಂತಹದೊಂದು ಅನಿವಾರ್ಯತೆಯನ್ನು ಇವತ್ತಿನ ದಿನಮಾನದಲ್ಲಿ ಖಡಾಖಂಡಿತವಾಗಿ ನಿರೀಕ್ಷಿಸುತ್ತಿದ್ದಾನೆಯೇ? ಬೆಂಗಳೂರಿನಲ್ಲಿರುವ ಈ ಒಂದೂವರೆ ವರ್ಷದಲ್ಲಿ ಹಾಗನ್ನಿಸುತ್ತಿದೆ. ಯಾಕೋ..???

ನಮ್ಮಿಷ್ಟದ ಲೇಖಕ, ಕವಿ, ಕತೆಗಾರನ ಪರಿಚಯ ಮಾಡಿಕೊಳ್ಳಲೇಬಾರದು, ಪರಿಚಯವಿದ್ದರೂ ಆದಷ್ಟು ದೂರದಲ್ಲಿದ್ದು ಬಿಡಬೇಕು ಅಂತನ್ನಿಸುತ್ತದೆ. ಆತ ಭವಿಷ್ಯದಲ್ಲಿ ಸೊಗಸಾದ ಪದ್ಯ ಬರೆಯುತ್ತಾನೆ, ನನ್ನ ಬಾಲ್ಯವನ್ನು ಮತ್ತೆ ಹೆಣೆಯಲು, ನೆನೆಯಲು ಪೂರಕವಾಗುವಂತೆ ಅವನ ಬಾಲ್ಯವನ್ನು ಕಟ್ಟಿಕೊಡುವ ಕತೆಯೊಂದನ್ನು, ಅಥವಾ ನನಗೆ ಪರಿಚಯವಿರದ ವಾತಾವರಣವನ್ನು ಪರಿಚಯಿಸಿ ಕೊಡುತ್ತಾನೆ ಅಂತ ಕಾಯುತ್ತಾ ಕೂರಬೇಕು. ಮಳೆ, ವಿರಹ, ಪ್ರಿಯತಮೆಯ ಸಲ್ಲಾಪ, ಸಂಗೀತದಲ್ಲೇ ಕಳೆದು ಹೋಗಿರುವ ಜಯಂತ್ ಕಾಯ್ಕಿಣಿಯ ಹೊಸ ಕತೆಗೆ ಓದುಗ ಕಾದುಕೂತಂತೆ ಸನ್ನಿವೇಶ ಸೃಷ್ಟಿಯಾಗಿಬಿಡಬೇಕು. ದೇಶಕಾಲದಲ್ಲಿ ಪ್ರಿಂಟಾಗಿದ್ದ ಜಯಂತರ "ಚಾರ್ಮಿನಾರು" ನಂತರ ಹೊಸದ್ಯಾವ ಕತೆ ತೆರೆದುಕೊಳ್ಳುತ್ತದೆ ಎಂದು ವರ್ಷಗಳಿಂದ ಕಾದುಕುಳಿತಿದ್ದೇವಲ್ಲ ಹಾಗೇ ಇರಬೇಕು ಓದುಗ. ಅದೇ ಚಡಪಡಿಕೆ, ಅದೇ ಕಾತರ, ಅದೇ ನಿರೀಕ್ಷೆ. ಪರಿಚಯವಾಗಿಬಿಟ್ಟರೆ ಬಿಟ್ಟರೆ ಮುಗೀತು ಬಿಡಿ. ಹೊಸ ಕಥೆ ಯಾವಾಗ ಎಂದು ಜಯಂತ್ ಸಿಕ್ಕಾಗಲೆಲ್ಲಾ ಕೇಳಿ ಪ್ರಾಣ ತಿನ್ನುತ್ತೇವೆ. ಜೊತೆಗೆ ಹೊಸ ಕತೆ ಬರೆದಿಲ್ಲವಲ್ಲ ಎನ್ನುವ ಪಾಪಪ್ರಜ್ಙೆಯನ್ನೋ, ಧಿಡೀರ್ ಎಚ್ಚರವನ್ನೋ ಲೇಖಕಕನಲ್ಲಿ ಹುಟ್ಟುಹಾಕಿ ಭಯಂಕರ ಓದುಗರಾಗಿಬಿಡುತ್ತೇವೆ. ಅಲ್ಲಿಗೆ ನಮಗೂ ಸೋನಿ ಚಾನೆಲ್ಲಿನಲ್ಲಿ ಪ್ರಸಾರವಾಗುವ ಸಿಐಡಿ ಧಾರಾವಾಹಿಗೂ ಹೆಚ್ಚಿನ ವ್ಯತ್ಯಾಸ ಉಳಿದಿರುವುದಿಲ್ಲ.

ಲೇಖಕ ಓದುಗನಿಗೆ ಅಚಾನಕ್ಕಾಗಿ ಸಿಕ್ಕಿಬಿಡಬೇಕು, ಪ್ರತ್ಯಕ್ಷವಾಗಿಬಿಡಬೇಕು ದೇವರಂತೆ ಎನ್ನುವುದೇ ಇಲ್ಲಿನ ವಾದ. ಕತೆಯ ಮಧ್ಯದಲ್ಲೆಲ್ಲೋ ಅನಿರೀಕ್ಷಿತ ತಿರುವು ಗೋಚರಿಸಿದಾಗ "ಓ...ಮುಂದಿನ ಓದು ಇನ್ನೂ ಮಜಾ ಇದೆ" ಎಂದು ಆಸ್ಥೆಯಿಂದ ಉಳಿದ ಪುಟಗಳನ್ನು ಓದುತ್ತಾ ಕೂರುವಂತಹ ಕುತೂಹಲದಂತಿರಬೇಕು ಲೇಖಕನ ಅಚಾನಕ್ ಭೇಟಿ.

ಗಡಿಬಿಡಿಯ ಒಂಭತ್ತು ಗಂಟೆಯ ಹೊತ್ತಲ್ಲಿ ರಶ್ಶಾದ ಬಿಎಂಟಿಸಿಯಲ್ಲಿ ಒಂದೂವರೆ ಕಾಲಲ್ಲಿ ನಿಲ್ಲುತ್ತಾ ಮೆಜೆಸ್ಟಿಕ್ ಕಡೆಗೆ ಹೋಗಬೇಕಾದರೆ, ಬಸವನಗುಡಿ ಪೋಲೀಸ್ ಸ್ಟೇಶನ್ನಿಂದ ಗಾಂಧೀಬಜಾರಿನ ಕಡೆಗೆ ಹೋಗುವ ರಿಕ್ಷಾದ ಒಳಗಿರುವ ವ್ಯಕ್ತಿಯ ಕಂಡ ಕೂಡಲೇ "ಹೇ ಅದು ಕಿ.ರಂ ಅಲ್ವಾ" ಎಂದು ಮನಸ್ಸು ಗಟ್ಟಿಯಾಗಿ ಹೇಳಬೇಕು. ವಿಮರ್ಶೆ ನೆನಪಾಗಬೇಕು. ಕಾವ್ಯದ ಕುರಿತ ಅವರ ಮಾತುಗಳು ಥಟ್ ಅಂತ ಕಣ್ಣೆದುರು ಬಂದು ನಿಲ್ಲಬೇಕು.

ಎಸ್.ದಿವಾಕರ್ ಹೊಸ ಮಯೂರ ತಿರುವಿ ಹಾಕುತ್ತಾ ಸುಚಿತ್ರಾದ ಎದುರಿನ ಟೀ ಅಂಗಡಿ ಹತ್ರ ನಿಂತಿರಬೇಕಾದರೆ ಅವರನ್ನು ದೂರದಲ್ಲೇ ನಿಂತು ನೋಡಬೇಕು. ಅವರ ಒಂದಷ್ಟು ಉತ್ತಮ ಅನುವಾದಗಳು, ಕತೆಗಳು ನೆನಪಾಗುತ್ತಾ, ಮರೆತ ಮತ್ತೊಂದಷ್ಟನ್ನು ನೆನಪಿಸಬೇಕು. ಮರೆತು ಹೋದ ಅವರ ಕತೆಯೊಂದನ್ನು ಅದೇ ದಿನ ರೂಮಿಗೆ ಹೋದಾಗ ಹುಡುಕುತ್ತಾ ನಿದ್ದೆಯಿಲ್ಲದೇ ಕಳೆಯಬೇಕು. ಸಿಕ್ಕರೆ ಮತ್ತೊಮ್ಮೆ ಓದಿ ಖುಷಿಯಾಗಬೇಕು.

ಚಿಕ್ಕಲಸಂದ್ರ- ಉತ್ತರಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟರ ಹೊತ್ತಿಗೆ ಬಸ್ಸಿಳಿದು ರೂಂ ಕಡೆ ಹೊರಟಾಗ ಚಂದ್ರಶೇಖರ ಆಲೂರು ಟ್ರ್ಯಾಕ್ ಪ್ಯಾಂಟು ಹಾಕಿಕೊಂಡು ನಮ್ಮೆದುರೇ ಹಾದುಹೋದ ಹೊತ್ತಿನಲ್ಲಿ ನಮ್ಮೊಳಗೆ ಹುಟ್ಟುವ ಪುಳಕಕ್ಕೆ ಅಕ್ಷರಗಳ ಹಂಗಿಲ್ಲ. ಮಾತಿನ ಹಂಗಿಲ್ಲ. ಸ್ಮೃತಿಪಟಲದಲ್ಲಿ ವೆರೋನಿಕಾಳದ್ದೇ ಒಲಿದಂತೆ ಹಾಡುವ ಚಿತ್ರ.

ಈಗಂತೂ ಎಲ್ಲೆಡೆಯೂ ಲೇಖಕ ಸುಲಭಕ್ಕೆ ಸಿಕ್ಕುಬಿಡುತ್ತಾನೆ ಬಿಡಿ. ಬೆಂಗಳೂರಿನ ಪ್ರಶಸ್ತಿ, ಗೋಷ್ಠಿ, ಸೆಮಿನಾರು, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆಯ ನಿತ್ಯ ಗೊಂದಲಪುರಕ್ಕಿಂತ ಹೀಗೇ ಬೆಂಗಳೂರಿನ ಫುಟ್ಪಾತು, ಅನಾಮಿಕ ಅಂಗಡಿಯ ಮುಂಭಾಗ, ಯಾವುದೋ ನಾಟಕದ ಪ್ರದರ್ಶನದ ವೇಳೆ ಪ್ರೇಕ್ಷಕರ ನಡುವೆ ನಮ್ಮ ಪ್ರೀತಿಯ ಲೇಖಕ ಕಣ್ಣಿಗೆ ಕಾಣಿಸಿಕೊಂಡರೆ, ಓದುಗನಿಗೆ ಪ್ರಿಯತಮೆಯನ್ನೇ ಕಂಡಷ್ಟು ಪುಳಕವಾಗುತ್ತದೆ. ಆತನನ್ನು ಆ ಫಳಿಗೆಗಳಲ್ಲಿ ಓಡಿಹೋಗಿ ಮಾತಾಡಿಸೋಣ ಎನ್ನುವುದಕ್ಕಿಂತ ಸುಮ್ಮನೆ ನಿಂತು ನೋಡುವುದು, ಆತನ ಬರಹಗಳ ಮಳೆಯ ನೆನಪಲ್ಲಿ ನೆನೆಯುವುದೇ ಖುಷಿ. ಹಾಗೆ ಓದುಗ ಸುಮ್ಮನೆ ನಿಂತು ನೋಡುವ ಕ್ಷಣಗಳಲ್ಲೇ ಲೇಖಕನೊಬ್ಬನ ಬರಹದ ಶಕ್ತಿಯ ಸಾರ್ಥಕತೆಯೂ ಅಡಗಿದೆಯೇನೋ...ಯಾರಿಗೆ ಗೊತ್ತು. ಅದಕ್ಕೇ ಇರಬೇಕು ಅಕ್ಷರವೆಂಬ ಬಣ್ಣದ ಹುಡಿ ಒಮ್ಮೆ ಕೈ ತಾಕಿದರೆ ಸಾಕು, ಮೈಮನ ರಂಗೋಲಿಯಾಗುತ್ತದೆ.

ಕತೆಗಾರ ವ್ಯಾಸರು ಹೇಳುತ್ತಿದ್ದ ಥೇಟಾನುಥೇಟ್ "ಬೆಂಗಳೂರಿಗರ" ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಕಂಡುಬರುವ ಅದದೇ ರಿಪೀಟೆಡ್ ಹೊಗಳಿಕೆ, ಉತ್ತಮ, ಅತ್ಯುತ್ತಮ ಎಂದು ಹೇಳಲೇ ಬೇಕಾದ ಅನಿವಾರ್ಯತೆ ಹಾಗೂ ಪ್ರೇಕ್ಷಕನಾಗಿ ಹೋದರೆ ಇಂಥದ್ದನ್ನೆಲ್ಲಾ ಕೇಳಲೇಬೇಕಾದ ರಿಯಾಲಿಟಿ ಶೋಗಳ ಫಾರ್ಮ್ಯಾಟ್ ಗಿಂತ ಓದುಗನಿಗೆ ದಾರಿ ಮಧ್ಯೆ ಅಚಾನಕ್ಕಾಗಿ ಪ್ರತ್ಯಕ್ಷನಾಗಿ ಕಣ್ಮರೆಯಾಗುವ ಲೇಖಕನೇ ವಾಸಿ. ಕಡೇ ಪಕ್ಷ ಆತನ ಕತೆಯ, ಕವಿತೆಯ ಪುನರ್ ಮನನ, ಪುನರ್ ಓದು ಓದುಗನಿಗೆ ಸಾಧ್ಯ.

ಅಂತಹ ಅನಾಮಿಕ ಭೇಟಿಗಳನ್ನು, ಪ್ರತ್ಯಕ್ಷಗಳನ್ನು ಸಾಧ್ಯವಾಗಿಸುವ ಬೆಂಗಳೂರಿನ ಟ್ರಾಫಿಕ್ಕು, ಬಿಎಂಟಿಸಿ, ಫುಟ್ಪಾತು, ಅಂಗಡಿ ಮುಂಭಾಗ ಇತ್ಯಾದಿಗಳಿಗೆ ಮನದುಂಬಿ ನಮಸ್ಕಾರ.

ಮಂಗಳವಾರ, ಫೆಬ್ರವರಿ 16, 2010

ರಾಧೆಯ ಪ್ರೀತಿಯ ಕೃಷ್ಣನೂ ಜೊತೆಗೊಂದಿಷ್ಟು ಪ್ರಶ್ನೆಗಳೂ...

ಕೊಳಲ ತೊರೆದು ಹೋದ-ರಾಧೇ
ಮುರಳೀಧರ ಗೋಪಾಲಕೃಷ್ಣ
ಎಲ್ಲಿ ಇದ್ದೆಯೇ
ಎತ್ತ ಪೋದೆಯೇ
ಸಮಯದಿ ಕೃಷ್ಣನ ತಡೆಯದೇ ರಾಧೇ

ಎಂದು ದುಃಖಿಸುತ್ತಾ ನುಡಿಯುತ್ತಾರೆ ಸಖಿಯರು. ಕುಸಿದು ಕುಳಿತುಕೊಳ್ಳುತ್ತಾಳೆ ರಾಧೆ. ಕೃಷ್ಣನ ಈಗಿನ ಸುದೀರ್ಘ ಪಯಣ ತನ್ನನ್ನು ಆತನೊಂದಿಗೆ ಒಂದುಗೂಡಿಸುವುದಿಲ್ಲ ಎನ್ನುವುದು ರಾಧೆಗೆ ಬಹುಷಃ ಅರ್ಥವಾಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೊಳಲ ತೊರೆದು ಹೋದ ರಾಧಾ ಮಾಧವ ಆಕೆಯಲ್ಲೊಂದು ವಿಷಾದ ವಾಸ್ತವಗಳನ್ನು ಸೃಷ್ಟಿಸುತ್ತಾನೆ. ಕೃಷ್ಣ ಯಾಕೆ ರಾಧೆಯ ಅನುಪಸ್ಥಿತಿಯಲ್ಲಿ ಆಕೆಯನ್ನು ತೊರೆದು, ಆಕೆಗೆ ಯಾವುದೇ ಸೂಚನೆಗಳನ್ನು, ಸಮಾಧಾನಗಳನ್ನು ನೀಡದೇ ಹೊರಟ. ಅಕ್ರೂರ ಬಂದು "ಬನ್ನಿ ಮಧುರೆಗೆ ಬಿಲ್ಲ ಹಬ್ಬಕೆ ಹೋಗುವಾ" ಎನ್ನುವಾಗ ರಾಧೆ ಕೃಷ್ಣನ ಎದುರಿದ್ದರೆ ಆತ ಅಕ್ರೂರನ ಆಹ್ವಾನವನ್ನು ತಿರಸ್ಕರಿಸುತ್ತಿದ್ದನೇ? ಪ್ರೀತಿಯ ಎದುರು ಆಹ್ವಾನ ಕರ್ತವ್ಯವಾಗಿ ಬದಲಾಗುವುದು ತಪ್ಪುತ್ತಿತ್ತೇ?

ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ರಾಧೆಯ ಉಪಸ್ಥಿತಿ ತನ್ನನ್ನು ತಾನೇ ಮರೆಯುವಂತೆ ಮಾಡುತ್ತದೆ. ಮಗುವಿನಂತೆ ನಲಿಯುವುದನ್ನು ಕಲಿಸುತ್ತದೆ. ಸಡಗರ, ಸಂಭ್ರಮದ ವಾಸ್ತವದಲ್ಲಿ ಬದುಕುತ್ತಾ ಇರುವಂತೆ ಮಾಡುತ್ತದೆ.ನಿತ್ಯದಲ್ಲಿ ಆಕೆ ಕಾಣದೇ ಹೋದರೆ ಆತನಿಗೆ ಅದೆಂತಹುದೋ ಚಡಪಡಿಕೆ. ತನ್ನೊಳಗೆ ತುಂಬಿಕೊಂಡ ರಾಧೆಯ ಬಿಂಬ ಸ್ಪಷ್ಟ-ಅಸ್ಪಷ್ಟಗಳ ಅಲುಗಿನ ಮೇಲೆ ತೂಗುತ್ತಿರಬೇಕಾದರೆ ಕೃಷ್ಣನಿಗೆ ರಾಧೆಯನ್ನು ಭೇಟಿಯಾಗಿ ಕಣ್ತುಂಬಿಕೊಳ್ಳಬೇಕು. ಆ ಭೇಟಿಯಲ್ಲೇ ಕಳೆದು ಹೋಗಬೇಕು.

ಸಖಿರಿಗೆಲ್ಲ ಕೃಷ್ಣ ದೇವರಾಗಿ ಕಾಣುತ್ತಾನೆ. ಅವನ ದೈವತ್ವ ಕಾಣುತ್ತದೆ. ಆದರೆ ರಾಧೆಗೆ ಆತ ಕೇವಲ ಪ್ರೇಮಿ. ತನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವ ಗೆಳೆಯ. ಸಾದಾ ಸೀದಾ ನಮ್ಮಂತೆಯೇ ಇರುವ ಮನುಷ್ಯ. ಆದ್ದರಿಂದ ಆಕೆಗೆ ಕೃಷ್ಣನಲ್ಲಿರುವ ದೈವತ್ವ ಮುಖ್ಯವಾಗುವುದಿಲ್ಲ. ಆತ ಮುಖ್ಯವಾಗುತ್ತಾನೆ. ಆತನೊಳಗಿರುವ ಪ್ರೇಮಿ ಮುಖ್ಯವಾಗುತ್ತಾನೆ. ಅದೇ ಕಾರಣಕ್ಕೆ ಆಕೆಗೆ ಆತನ ಪಿಸುದನಿ ರೋಮಾಂಚನವನ್ನುಂಟು ಮಾಡುತ್ತದೆ. ಆತನಿಲ್ಲದೆ ವಾಸ್ತವ ವಿರಹವಾಗುತ್ತದೆ.

**************************************
ಮಾತೆತ್ತಿದರೆ ರಾಮ ದೈವತ್ವಕ್ಕಿಂತ ಹೆಚ್ಚು ಮಾನವೀಯ ವ್ಯಕ್ತಿತ್ವ ಎನ್ನುತ್ತೇವೆ. ಕೃಷ್ಣನಿಗೆ ಹೆಚ್ಚು ದೈವತ್ವದ ಅಂಶಗಳನ್ನು ಆರೋಪಿಸುತ್ತೇವೆ. ಕಪಟ ನಾಟಕ ಸೂತ್ರಧಾರಿ ಎಂದು ಲೇಬಲ್ ಅಂಟಿಸಿಬಿಡುತ್ತೇವೆ. ರಾಧೆಯ ವಿರಹ ದೊಡ್ಡದು ಎಂದು ಮರುಗುತ್ತೇವೆ, ಕೊಂಡಾಡುತ್ತೇವೆ. ಆದರೆ ರಾಧೆಯನ್ನು ಬಿಟ್ಟು ಮಧುರೆಯ ದಾರಿ ಹಿಡಿದ ಕೃಷ್ಣನ ಒಳಗಿನ ನೋವುಗಳನ್ನು ನಾವೆಂದಾದರೂ ಆಲೋಚಿಸಿದ್ದೇವೆಯೇ? ರಾಧೆಗಾಗಿ ತನ್ನ ಕೊಳಲನ್ನೇನೋ ಬಿಟ್ಟ. ಆತನ ಒಳಗೆ ಹುಟ್ಟಿಕೊಂಡ ರಾಧೆಯ ವಿರಹದ ಕಣ್ಣೀರನ್ನು ಯಾವಾಗ ಒರೆಸಿಕೊಂಡ? ಅದೆಷ್ಟು ನಿಟ್ಟುಸಿರುಗಳಿತ್ತೋ ಎನೋ ಅವನಲ್ಲಿ......ಆ ನೋವುಗಳನ್ನು ಆತ ರಾಮನಂತೆ ಎಲ್ಲೂ ಪ್ರದರ್ಶನಕ್ಕಿಡುವುದಿಲ್ಲ. ಅಥವಾ ಆತನ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುವುದಿಲ್ಲ. ನೋವನ್ನು ಏಕಾಂತದ ಹಾಡನ್ನಾಗಿ ಮಾಡಿಕೊಳ್ಳುತ್ತಾನೆ, ತನಗೆ ಮಾತ್ರ ಕೇಳಿಸಿಕೊಳ್ಳುವಂತೆ. ಪಾಂಡವರಿಗೆ ಬೇಕಾದವನಾಗುತ್ತಾ, ದೇವರಾಗುತ್ತಾ, ಕೌರವರಲ್ಲಿ ಅಸಹನೆ, ಭಯ ಎರಡನ್ನೂ ಹುಟ್ಟಿಸುತ್ತಾ ತನ್ನ ಖಾಸಗಿ ಮಾತುಗಳನ್ನು, ಮೌನವನ್ನು ಪ್ರೇಮಿಯಾಗಿ ಆತ ತನ್ನಲ್ಲೇ ಬಚ್ಚಿಡುತ್ತಾನೆ. ಅವನ ಅಕ್ಕ ಪಕ್ಕದಲ್ಲಿರುವ ಬಲರಾಮ, ಪಾಂಡವರು, ಕೌರವರು ಇವರ್ಯಾರಿಗೂ ಅದು ಮುಖ್ಯವಲ್ಲ.....ಕೆಲವೊಂದು ವಿಷಯಗಳು ಜಗತ್ತಿಗೆ ಅಮುಖ್ಯವಾಗುವ ಮೂಲಕವೇ ಏಕಾಂತಕ್ಕೆ ಹತ್ತಿರವಾಗುತ್ತವೆ ಎನ್ನುವುದರಲ್ಲಿ ಕೃಷ್ಣನ ವಿರಹದ ಪ್ರಕ್ರಿಯೆ ಇದೆ.

ಕೃಷ್ಣನೀಗ ಹೋಗಲೇಬೇಕಿದೆ. ಕುರುಕ್ಷೇತ್ರ ಯುದ್ಧಕ್ಕೊಂದು ವೇದಿಕೆ ಸಿದ್ಧ ಮಾಡಬೇಕಿದೆ. ಆತನಿಗೆ ಗೊತ್ತು. ಕೊಳಲು ಜೊತೆಗಿದ್ದರೆ ನೆನಪುಗಳ ಮೆರವಣಿಗೆ ಒತ್ತರಿಸಿಕೊಂಡು ಬರುತ್ತದೆ. ರಾಧೆಯೊಳಗೆ ಕಳೆದು ಹೋಗುತ್ತೇನೆ. ಅದಕ್ಕೇ ಆತ "ಹೊಳಲಿಗೆ ಕೊಳಲಿದು ತರವಲ್ಲ/ ಮಧುರೆಗೆ ಸವಿ ಸಲ್ಲ" ಎನ್ನುತ್ತಾ ತಾನು ಬಿಸುಟಿದ ವೃಂದಾವನದೊಳಗಿರುವ ಕೊಳಲನ್ನು ದಿಟ್ಟಿಸುತ್ತಾ ದೂರವಾಗುತ್ತಾನೆ."ಪೋಗದಿರಯ್ಯ ಪೋಗದಿರೈ ಮಾರಸುಂದರ/ ಗಿರಿಧರ ನೀ ಪೋಗದಿರಯ್ಯ" ಎನ್ನುವ ಗೋಪಿಕೆಯರ ವಿನಂತಿ, ಬಿನ್ನಹ ಎಲ್ಲವೂ ಅಕ್ರೂರ, ಬಲರಾಮರ ಜೊತೆಗೆ ಹೊರಟವನಿಗೆ ಕೇಳದೇ ಹೋಯಿತೇಕೇ? ಅಥವಾ ಕೇಳಿಯೂ ಕೇಳಿಸದಂತೆ ನಟಿಸಿದನೇ ಆತ. "ಪೋಗದಿರಯ್ಯಾ" ಎನ್ನುವ ಮಾತು ರಾಧೆಯ ಬಾಯಿಂದ ಹೊರಬಂದಿದ್ದರೆ ಕೃಷ್ಣ ಗೋಕುಲದಿಂದ ನಿರ್ಗಮಿಸದೇ ಉಳಿಯುತ್ತಿದ್ದನೇ? ಪಾಂಚಜನ್ಯ ಹಿಡಿಯುವ ಪ್ರಸಂಗ ಬರುತ್ತಿರಲಿಲ್ಲವೇ? ಅರ್ಜುನನಿಗೆ ವಿಶ್ವರೂಪ ದರ್ಶನದ ಅವಕಾಶ, ಮಾರ್ಗದರ್ಶನ ದಕ್ಕದೇ ಹೋಗುತ್ತಿತ್ತೇನೋ.

"ಎನ್ನೀ ಕೊಳಲಿದು ಕಾಡಿನ ಬಿದಿರು/ ಈ ಹುಲುಕಡ್ಡಿಗೆ ಎನಿತೋ ಚದುರು!" ಎಂದು ಪ್ರೀತಿಯಿಂದ ಪ್ರತೀ ಬಾರಿ ಕೊಳಲಿನ ಮೈದಡವಿ ಹರ್ಷಗೊಂಡಿದ್ದ ಕೃಷ್ಣನಿಗೇ ಸದ್ಯಕ್ಕೆ ಕೊಳಲು ಬೇಡ. ಕೊಳಲು ಹುಟ್ಟಿಸುವ ನೆನಪುಗಳು ಬೇಡ. ನೆನಪುಗಳ ಮೂಲಕ ತೆರೆದುಕೊಳ್ಳುವ ಬೃಂದಾವನವೂ ಬೇಡ. ಹಾಗಿದ್ದರೆ ಕೃಷ್ಣನಿಗೆ ರಾಧೆಯ ನೆನಪೂ ಬೇಡವಾಯಿತೇ?

"ಪೋ ರಾಧೆ ಬೇಗ ಪೋ ರಾಧೆ" ಎಂದು ಸಖಿಯರು ಅವಸರಿಸಿದರೂ ರಾಧೆಗೆ ಬಿಟ್ಟು ಹೋದ ಸಖನ ಬೆನ್ನತ್ತುವುದು ಬೇಕಿಲ್ಲ. ಆತನ ಪಯಣ ನಿಲ್ಲಿಸಿ ಗೋಗರೆದು ಕರೆ ತರಬೇಕೆನ್ನುವ ಬಯಕೆಯಿಲ್ಲ. " ಹಾ ತೊರೆದನೇ-ಕೊಳಲ ತೊರೆದನೇ" ಎನ್ನುವಲ್ಲಿ ಆಕೆಗೆ ಕೃಷ್ಣ ತನ್ನ ಸರ್ವಸ್ವವೇ ಆದ ಕೊಳಲನ್ನೂ, ತನ್ನನ್ನೂ ಬಿಟ್ಟುಹೋದ ದುಃಖವಿದೆ. ಅದರಿಂದ ಹೊರ ಹೊಮ್ಮದ ತನ್ನ-ಆತನ ಪ್ರೇಮದ ಉಸಿರಿನ ವೇದನೆಯ ಆತಂಕ ಅರ್ಥವಾದಂತಿದೆ. ಕೃಷ್ಣನಿಲ್ಲದ ರಾಧೆ ಪೂರ್ಣವಲ್ಲ ಎನ್ನುವ ಸತ್ಯ ಕೃಷ್ಣನಿಗೂ ಗೊತ್ತಿದೆ. ಅದಕ್ಕವನು ಕೊಳಲನ್ನೂ ಬಿಟ್ಟು ನಡೆದಿದ್ದಾನೆ. ಕೊಳಲೇ ಕೃಷ್ಣನಾಗುತ್ತಾ, ಕೃಷ್ಣನ ಜೊತೆ ನಲಿನಲಿದ, ಅಪ್ಪುಗೆಯಲಿ ಪರವಶವಾದ ದಿನಗಳನ್ನು ನೆನಪಿಸುತ್ತಾ ಕೃಷ್ಣನಂತೆಯೇ ರಾಧೆಯ ಬೊಗಸೆ ತುಂಬಿಕೊಳ್ಳುತ್ತದೆ. ರಾಧೆಯನ್ನೂ, ಕೊಳಲನ್ನೂ ಬಿಟ್ಟು ನಡೆದಿರುವುದರಿಂದ ಕೃಷ್ಣನೆಂಬ ನಿಷ್ಕಲ್ಮಶ ಪ್ರೇಮಿಯೂ ಒಂಟಿಯಾಗಿದ್ದಾನೆ. ಅಪೂರ್ಣವಾಗಿಯೇ ಉಳಿದುಕೊಳ್ಳುತ್ತಾನೆ. ಹಾಗೆ ಉಳಿದುಕೊಳ್ಳುವುದರಲ್ಲೇ ಆತನಿಗೆ ಹೆಚ್ಚು ಸುಖವಿದ್ದಂತೆ ತೋರುತ್ತದೆ. ಇಲ್ಲಿ ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ಪ್ರೀತಿ ದೊಡ್ಡದೇ ಅಥವಾ ಕೊಳಲನ್ನು ಬಿಟ್ಟು ಹೋಗುವ ಮೂಲಕ ರಾಧೆಗೆ ಸಮಾಧಾನ ಹೇಳಲು ಹೊರಟ ಕೃಷ್ಣನ ಪ್ರೀತಿಯ ಕಾಳಜಿ ಹೆಚ್ಚೇ?

ಆತ ಬಿಟ್ಟು ಹೋದ ಕೊಳಲೊಳಗಿರುವ ಆತನ ಉಸಿರಿನ ಬೆಚ್ಚನೆಯನ್ನು ತುಟಿಯ ಪ್ರಾಣರಸದಿಂದ ಹೀರುತ್ತಾ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ. ಕೊಳಲ ತೊರೆದು ಹೋದ ಎಂದು ಗೊತ್ತಾದ ಮರುಕ್ಷಣದಲ್ಲೇ ಆಕೆಯಲ್ಲಿ ಉಳಿಯುವುದು ಖಚಿತವಾಗಿ ಎರಡು ಪ್ರಶ್ನೆಗಳು

ನೆನೆದನೇ...ಎನ್ನ ನೆನೆದನೇ
ಮರಳನೇ....ಇನ್ನು ಮರಳನೇ

ಈ ಪ್ರಶ್ನೆಗಳಿಗೆ ಎರಡು ರೀತಿಯ ಉತ್ತರಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ...ಅದೆಲ್ಲಕ್ಕಿಂತ ಹೆಚ್ಚಾಗಿ ಮೌನವಾಗಿರುವುದಕ್ಕೂ ಅವಕಾಶವಿದೆ. ಅದಕ್ಕೇ ಇರಬೇಕು ರಾಧೆಗೆ ಸುದೀರ್ಘ ಮೌನವೂ ಪ್ರೀತಿಯಂತಹ ಸಹಜ ಭಾವ ಎಂದೆನಿಸುತ್ತದೆ.

ಯಾಕೆಂದರೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಅಂತಿಮವಲ್ಲ ಎನ್ನುವುದು ರಾಧೆಗೂ ಗೊತ್ತಿದೆ...!!

ಸೋಮವಾರ, ಡಿಸೆಂಬರ್ 7, 2009

ವಿರಹವೋ, ವಿಷಾದವೋ, ಬಿಡುಗಡೆಯ ಸಾಂತ್ವನವೋ - ಚಿಟ್ಟೆಯಂತೆ ಹಾರುತ್ತಿದೆಯಷ್ಟೇ

"ಚಿಟ್ಟೆ" ಗ್ರೀಟಿಂಗ್ ಕಾರ್ಡ್ಸ್ ಯಾರಿಗೆ ಗೊತ್ತಿಲ್ಲ ಹೇಳಿ.

ಹೂ ಭಾಷೆಯ, ಮುದ ನೀಡುವ, ಸೆಳೆಯುವ ಸಾಲುಗಳ ಅಕ್ಷರ ಮಾಲೆ "ಚಿಟ್ಟೆ" ಕನ್ನಡ ಶುಭಾಶಯ ಪತ್ರಗಳು. ಅದಕ್ಕಾಗಿ ನಾನು ಬರೆದ ಪುಟ್ಟ ಬರಹದ ಗುಚ್ಚ, ಆಕರ್ಷಕವಾಗಿ ವಿನ್ಯಾಸಗೊಂಡು ಮಾರುಕಟ್ಟೆಯಲ್ಲಿದೆ. ಆ ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ. ಇದು ವಿರಹವೋ, ವಿಷಾದವೋ, ಬಿಡುಗಡೆಯ ಸಾಂತ್ವನವೋ --ಒಬ್ಬೊಬ್ಬರಿಗೆ ಒಂದೊಂದು ತರಹ..!!!

ನೀ ಬಿಟ್ಟು ಹೋದ ಆ ರಾತ್ರಿ
ಗಿಜಿಗುಡುವ ಫುಟ್ಪಾತು

ಖಾಲಿ, ಖಾಲಿ

ನಡೆದಷ್ಟು ಮುಗಿಯದ

ನೋವು
ಮಂಜು ಮಂಜು ಕಣ್ಣುಗಳು

ಭಾವನೆಗಳೆಲ್ಲಾ

ಮೋಡವಾಗಿತ್ತೇನೋ
ಜಡಿ ಮಳೆ

ಅದರಲ್ಲಿ ತೋಯ್ದರೂ
ನನ್ನೊಳಗಿನ ನಿನ್ನ ಚಿತ್ರ ಒದ್ದೆಯಾಗಲಿಲ್ಲ
ಮಾಸಲಿಲ್ಲ

ಮರೆಯಲು ಯತ್ನಿಸಿದಷ್ಟು
ಕರ್ಪೂರದ ಹಾಗೆ
ನನ್ನೊಳಗೆ ಸುಡುತ್ತಿದ್ದೀಯಾ

ನನ್ನೊಳಗಿನ ಗುಬ್ಬಚ್ಚಿ ನೋವು
ಹಾಗೆಯೇ ಇರಲಿ
ಅದನ್ನೂ ಕಿತ್ತುಕೊಳ್ಳಬೇಡ ಪ್ಲೀಸ್

ನನಗದು ಬದುಕಲು ಕಲಿಸಿದೆ

ಗುರುವಾರ, ಸೆಪ್ಟೆಂಬರ್ 10, 2009

ದ.ರಾ. ಬೇಂದ್ರೆ ಕವನ ವಾಚಿಸುತ್ತಾರೆ ಕೇಳಿ

.ರಾ.ಬೇಂದ್ರೆ ಕುರಿತು ಗಿರೀಶ್ ಕಾರ್ನಾಡ್ ನಿರ್ಮಿಸಿದ ಸಾಕ್ಷ್ಯಚಿತ್ರ ಇವತ್ತಿಗೂ ನೆನಪಾದಾಗ ಪುಳಕವಾಗುತ್ತದೆ..

ಸಾಕ್ಷ್ಯಚಿತ್ರವೊಂದನ್ನು ಅದೆಷ್ಟು ಆತ್ಮೀಯವಾಗಿ ತೆರೆಯ ಮೇಲೆ ತೆರೆದಿಡಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ ಅವರ
ಪ್ರಯತ್ನ. ಕಪ್ಪು-ಬಿಳುಪಿನ ಬಣ್ಣಗಳಲ್ಲಿ ಕವಿಯ ಅತೀ ಚಿಕ್ಕ ವಿವರವನ್ನೂ ಕೂಡಾ ಅವರು ದಾಖಲಿಸುತ್ತಾರೆ (ಉದಾ:.ರಾ. ಬೇಂದ್ರೆ ಯಾವಾಗಲೂ ತಮ್ಮ ಕೋಣೆಯಲ್ಲಿ ಪುಸ್ತಕಗಳನ್ನು ಹರಡಿಕೊಂಡಿರುತ್ತಿದ್ದದ್ದು).

ಧಾರವಾಡದ
ಹಾದಿಗಳಲ್ಲಿ ಬೇಂದ್ರೆ ಸಾಗುತ್ತಿದ್ದರೆ
ನೋಡುಗನಿಗೆ ರೋಮಾಂಚನ. ವರ ನಡಿಗೆ, ಕೊಡೆ, ಮಳೆ, ಹಣ್ಣು ಮಾರುವವರ ಜೊತೆ ಒಡನಾಡುವ ರೀತಿ ಎಲ್ಲವನ್ನು ಯಾವುದೇ ಕ್ರತ್ರಿಮತೆ ಇಲ್ಲದೆ ಗಿರೀಶ್ ಕಾರ್ನಾಡ್ ದ್ರಶ್ಯದಲ್ಲಿ ದಾಖಲು ಮಾಡುತ್ತಾರೆ. ಸಾಕ್ಶ್ಯಚಿತ್ರದಲ್ಲಿರುವ ಕೆಲವೊಂದು ಶಾಟ್ ಗಳು ವಾರೆವ್ವಾ ಎನ್ನುವಂತಿವೆ. ಸಾಕ್ಶ್ಯಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇರುವವರು ಇದನ್ನು ತಪ್ಪದೇ ನೋಡಬೇಕು..



ಇದೆಲ್ಲಕ್ಕಿಂತ ಹೆಚ್ಚಾಗಿ ಸಾಕ್ಷ್ಯಚಿತ್ರದಲ್ಲಿ ನಮ್ಮೆಲ್ಲರನ್ನು ಪುಳಕಿತರನ್ನಾಗಿ ಮಾಡುವ ಅಂಶವೊಂದಿದೆ. ಸ್ವತಃ .ರಾ. ಬೇಂದ್ರೆ ಇಲ್ಲಿ ತಮ್ಮ " ವಿಶ್ವಮಾತೆಯ ಗರ್ಭ ಕಮಲಜಾತ..." ಕವನವನ್ನು ವಾಚನ ಮಾಡಿದ್ದಾರೆ.

ಈಗಂತೂ ಕವನ ವಾಚನವೇ ಅಪರೂಪ. ಇಂತಹ ಸಂದರ್ಭದಲ್ಲಿ ಬೇಂದ್ರೆಯಂತಹ ಕವಿಯ ಸಾಲುಗಳನ್ನು ಅವರ ಬಾಯಲ್ಲಿ ಕೇಳಿ
ಪಡೆದುಕೊಳ್ಳುವ ಸುಖಕ್ಕೆ ಸಾಟಿ ಯಾವುದಿದೆ ನೀವೇ ಹೇಳಿ.

ಕವನ ವಾಚನದ ದ್ರಶ್ಯ ತುಣುಕು ನಿಮಗಾಗಿ....(ಕೆಳಗಿನ ಕೊಂಡಿ ಕ್ಲಿಕ್ ಮಾಡಿ)

// ವಿಶ್ವಮಾತೆಯ
ಗರ್ಭ ಕಮಲಜಾತ ಪರಾಗ ಪರಮಾಣು ಕೀರ್ತಿ ನಾನು //



ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು |
ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು !


ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು !
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು !

ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು !
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು !

http://www.darabendre.org/ ನಲ್ಲಿ ಸಿಕ್ಕ ದ್ರಶ್ಯ ತುಣುಕಿದು.

ಶುಕ್ರವಾರ, ಮಾರ್ಚ್ 27, 2009

ಅಂಡರ್ ಪಾಸ್ ಬಯಲಾಟ

ವ್ಯಾನು ಬಂತು.
 
ಕೆಳಗಿಳಿದ ಪೋಲೀಸರು ಗಾಂಧೀನಗರದಿಂದ ಮೆಜೆಸ್ಟಿಕ್ಕಿಗೆ ಹೋಗುವ ಅಂಡರ್ ಪಾಸ್ ದಾರಿಯತ್ತ ನಡೆಯುತ್ತಿದ್ದಾರೆ. ಆ ದಾರಿಯಲ್ಲಿ ನೀಲಿ, ಕಪ್ಪು ಟರ್ಪಲ್ಲಿನ ಮೇಲೆ ಆಟಿಕೆ, ಗುಳಿಗೆ, ಸೊಳ್ಳೆ ಕೊಲ್ಲುವ ಎಲೆಕ್ಟ್ರಿಕ್ಕು ಬ್ಯಾಟು, ಇಪ್ಪತ್ತೈದು ರೂಪಾಯಿಗೆ ಶರ್ಟು, ಕಲರ್ ಕಲರ್ ಪ್ಲಾಸ್ಟಿಕ್ ಹೂವಿನ ಕುಂಡ ಮಾರುವವನು.......ಅನಾಮಿಕ ನಾಗರೀಕರ ದೊಡ್ಡ ಪಡೆಯಿದೆ.

ಪೋಲೀಸರು ಬರುತ್ತಿರುವುದನ್ನು ಕಂಡ ಕೂಡಲೇ ಅಂಡರ್ ಪಾಸಲ್ಲೇ ಇರುವ ಸಣ್ಣ ಕೋಣೆಯ ಬಾಗಿಲು ತೆಗೆಯಲು ಒದ್ದಾಡುತ್ತಿದ್ದಾನೆ ಮೀಸೆ ಚಿಗುರಿದ ಹುಡುಗ.  ಮತ್ತೊಬ್ಬ "ಬೇಗ ತೆಗಿ ಮಚ್ಚಾ" ಎಂದು ಕೂಗುತ್ತಿದ್ದಾನೆ. ಬಾಗಿಲು ತೆರೆಯುತ್ತದೆ. ಅವಸರದಿಂದ ಟರ್ಪಲ್ಲಿನ ಮೇಲೆ ಹಾಕಿರುವ ವಸ್ತುಗಳನ್ನೆಲ್ಲ ಒಂದೇ ಬಾರಿ ಎಳೆಯುತ್ತಿದ್ದಾರೆ ಅವರಿಬ್ಬರೂ.  ಹಾಗೆ ಎಳೆಯುವಾಗ ಒಂದೇ ಒಂದು ಆಟಿಕೆ, ಕಲರ್ ಕಲರ್ ಶರ್ಟು ಹೊರಗೆ ಬೀಳದಿರುವುದರ ಮೂಲಕ ಅವರ ಚಾಕಚಕ್ಯತೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗುವವರಿಗೆ, ಅಲ್ಲಿಂದ ಹಿಂದಿರುಗಿ ಗಾಂಧೀನಗರ, ನ್ಯಾಶನಲ್ ಮಾರ್ಕೆಟಿನ ಕಡೆಗೆ ಹೊಗುವವರಿಗೆ ಕಾಣಿಸುತ್ತದೆ. ಆ ನಿಯಮಿತ ಸಮಯದಲ್ಲಿ ಮತ್ತೆ ಕೆಲವರಿಗೆ ತಮ್ಮ ಟರ್ಪಲನ್ನು ಎತ್ತಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳ.

ವ್ಯಾನಿನಿಂದ ಇಳಿದ ಸಿಬ್ಬಂದಿಗೆ ಅಲ್ಲಿ ಅರೆ-ಬರೆ ಹರಡಿಕೊಂಡ ನಾಲ್ಕಾರು ಮಂದಿ ಗಂಟು ಮೂಟೆ ಕಟ್ಟುತ್ತಿರುವುದು ಕಣ್ಣಿಗೆ ಬಿದ್ದಿದೆ. ಅವರಿಗೆಲ್ಲ ವಾರ್ನ್ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ವಸ್ತುಗಳೊಂದಿಗೆ ಓಡಿ ಕೆಲವು ನಿಮಿಷಗಳಾಗಿದೆ. ಆಗಲೇ ಇಡೀ ಅಂಡರ್ ಪಾಸ್ ಟರ್ಪಲ್ಲಿನ ಮೇಲೆ ಮಾರುವ ಅಂಗಡಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಕಪಾಲಿ, ತ್ರಿಭುವನ್ ಸಿನಿಮಾ ಥಿಯೇಟರ್ಗಳು ಅದೇ ಸಮಯಕ್ಕೆ ಮ್ಯಾಟನಿ ಶೋ ಬಿಟ್ಟಿರುವುದರಿಂದ ಅಂಡರ್ಪಾಸಲ್ಲಿ ವ್ಯಾಪಾರ ಮಾಡುತ್ತಿದ್ದ ಜಾಗದಲ್ಲಿ ಜನ ತುಂಬುತ್ತಿದ್ದಾರೆ. ಟರ್ಪಲ್ಲಿನ ಅಂಗಡಿ ಹರಡಿಕೊಂಡ ಜಾಗದಲ್ಲಿ ಕಿಲೋ ಮೀಟರ್ ವೇಗದ ಅವಸರವಿರುವವರಂತೆ ಹೆಜ್ಜೆ ಹಾಕುವ ಜನರ ಕಾಲು, ಚಪ್ಪಲಿಯ ದೊರಗು ಶಬ್ದ ತುಂಬುತ್ತಿದೆ.
ಪೋಲೀಸರು ಮತ್ತೆ ವ್ಯಾನಿನ ಕಡೆ ನಡೆಯುತ್ತಿದ್ದಾರೆ.

ಮೆಲ್ಲಗೆ ಅಂಡರ್ ಪಾಸಿನ ರೂಮಿನ ಅರೆ ಮುಚ್ಚಿದ ಬಾಗಿಲು ತೆರೆದುಕೊಳ್ಳುತ್ತದೆ. 
ಟರ್ಪಲ್ಲಿನ ಅಂಗಡಿ ಮಂದಿ ಮತ್ತೆ ಯಥಾ ಸ್ಥಳದತ್ತ ಹಿಂದಿರುಗುತ್ತಿದ್ದಾರೆ. ಅಂಡರ್ ಪಾಸ್ ಒಳಹೋಗುವ ಮೆಟ್ಟಿಲ ಹತ್ತಿರ ಟರ್ಪಲಿನ ಮೇಲೆ ಐದು- ಹತ್ತು ರುಪಾಯಿಗೆ ಬೆರಕೆ ವಸ್ತುಗಳನ್ನು ಮಾರುವ ಒಬ್ಬನನ್ನು ಪೋಲೀಸ್ ಪೇದೆ ಹಿಡಿದಿದ್ದಾನೆ. ಅವನ ಪಕ್ಕದವನತ್ತ ಗುರ್ರ್ ಎನ್ನುತ್ತಿದ್ದಾನೆ. ನಾಲ್ಕೈದು ಅಂಗಡಿ ಹಾಕುವಷ್ಟು ದೂರದಲ್ಲಿ ವ್ಯಕ್ತಿಯೊಬ್ಬ ಪ್ರತೀ ಟರ್ಪಲು ಹಾಸಿದ ಅಂಗಡಿಯವನಿಂದ ಹತ್ಹತ್ತು ರುಪಾಯಿ ವಸೂಲು ಮಾಡುತ್ತಿದ್ದಾನೆ. ಎಲ್ಲರಿಂದ ವಂತಿಗೆ ಸಂಗ್ರಹಿಸಿ ಅವನು ಪೋಲೀಸ್ ಪೇದೆಯತ್ತ ನಡೆಯುತ್ತಿದ್ದಾನೆ. ನಿತ್ಯ ನಡೆದುಕೊಂಡು ಹೋಗುವವರಿಗೆ ಅದು ಹಳಸಲು ಇಮೇಜು. ಅದಾಗ ತಾನೇ ಬೆಂಗಳೂರಿಗೆ ಬಂದ ಹಳ್ಳಿ ಹುಡುಗನಿಗೆ ಇದನ್ನೆಲ್ಲಾ ತೋರಿಸುತ್ತಾನೆ ಗೆಳೆಯ. ತನ್ನೂರಿನ ಬಯಲಾಟದ ಸಂದರ್ಭದಲ್ಲಿ ಕಂಡ ಇದಕ್ಕಿಂತ ಹೊರತಾದ ಬಣ್ಣ ಬಣ್ಣದ ಇಮೇಜು ನೆನಪಿಗೆ ಬರುತ್ತದೆ.

ತನ್ನ ಜೊತೆಗಿರುವ ಗೆಳೆಯ ಇದನ್ನೆಲ್ಲಾ ಸಿನಿಮಾದ ಸನ್ನಿವೇಶ ಎಂದು ವಿವರಿಸುತ್ತಾ ಮೆಜೆಸ್ಟಿಕ್ ತಲುಪಲು ಅಂಡರ್ ಪಾಸಿನ ಮೆಟ್ಟಿಲು ಹತ್ತುತ್ತಾನೆ. ಹತ್ತುವಾಗ ಮತ್ತೆ ತುಂಬಿರುವ ಅಂಡರ್ ಪಾಸಿನ ಜಗಲಿ, ಅದರಲ್ಲಿ ಅದಮ್ಯ ಗುರಿ ಇರುವವರಂತೆ ವೇಗವಾಗಿ ನಡೆಯುವವರ ಜೊತೆ ಚೌಕಾಸಿ ವ್ಯಾಪಾರ ಮಾಡುವ ಪರ್ಟಲ್ಲಿನ ಅಂಗಡಿಯ ಅನಾಮಿಕ ನಾಗರೀಕರನ್ನು ಕಂಡಾಗ ತನ್ನ ಬದುಕಿನ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ಬೆಂಗಳೂರಿನಂತಹ ನಗರದೊಳಗೆ ಬದುಕಬೇಕು ಅಂತ ಅನ್ನಿಸುತ್ತದೆ!!!

 

ಮಂಗಳವಾರ, ಮಾರ್ಚ್ 10, 2009

ನೂಪುರ ಭ್ರಮರಿಗೀಗ ಎರಡು ವರ್ಷ


ನೂಪುರ ಭ್ರಮರಿಗೀಗ ಎರಡು ವರ್ಷದ ಸಂಭ್ರಮ.

ನರ್ತನ ಜಗತ್ತಿಗೆ ಮೀಸಲಾದ ಪತ್ರಿಕೆ ಇದು. ಹೆಜ್ಜೆ-ಗೆಜ್ಜೆ, ಭಾವ-ಭಂಗಿಗಳ ಬಗ್ಗೆ ಚರ್ಚಿಸುತ್ತಾ ಬೆಳೆದು ಬಂದ ಖಾಸಗಿ ಪ್ರಸಾರದ ಪತ್ರಿಕೆ ನೂಪುರ ಭ್ರಮರಿ. ಎರಡು ವರ್ಷಗಳ ಹಿಂದೆ ಜೆರಾಕ್ಸ್ ಪ್ರತಿಯಾಗಿ ಪ್ರಾರಂಭವಾದ ಪತ್ರಿಕೆ ಇವತ್ತು ಮುದ್ರಣದ ಹಂತಕ್ಕೆ ಬಂದು ಗೆಜ್ಜೆ ಕಟ್ಟಿ ಕುಣಿತ ಮುಂದುವರಿಸಿದೆ. ಸ್ವಂತದ್ದೊಂದು ವೆಬ್ಸೈಟನ್ನೂ ಹೊಂದಿದೆ.

ನೂಪುರ ಭ್ರಮರಿಯನ್ನು ಹೊರತರುವಲ್ಲಿ ಎದ್ದು ಕಾಣುವುದು ಸಂಪಾದಕಿ ಮನೋರಮಾ ಬಿ.ಎನ್ ಅವರ ನೃತ್ಯ ಪ್ರೀತಿ. ಜೊತೆಗೆ ಪತ್ರಿಕೋದ್ಯಮ ಉಪನ್ಯಾಸಕಿಯಾಗಿರುವುದರಿಂದ ಬರಹವನ್ನು ನೃತ್ಯ ಪ್ರಸಾರಕ್ಕೆ ಆಯ್ದುಕೊಂಡಿದ್ದಾರೆ. 
ಈ ಪತ್ರಿಕೆಯ ಹಿಂದೆ ಲಾಭಕ್ಕಿಂತ ಹೆಚ್ಚಾಗಿ ಅಕ್ಕರೆಯಿದೆ. ಭಿನ್ನವಾಗಿ ಪತ್ರಿಕೆಯೊಂದನ್ನು ಮಾಡಬೇಕು ಎನ್ನುವ ಕಳಕಳಿಯಿದೆ. 
ಚಂದಾದಾರರು ಹಾಗೂ ಸ್ವಂತ ಖರ್ಚಿನಿಂದ ಪತ್ರಿಕೆ ನಡೆಸುತ್ತಿದ್ದಾರೆ.
ನೂಪುರದಂತಹ ಪುಟ್ಟ ಪ್ರಯತ್ನಗಳ ಹಿಂದೆ ಅದಮ್ಯ ಕನಸುಗಳಿರುತ್ತವೆ. ಈ ಪ್ರಯತ್ನವನ್ನು ಮುಂದುವರಿಸಲು ನಾವೂ ಅವರ ಬೆನ್ನಿಗಿರೋಣ, ಪ್ರೋತ್ಸಾಹ ತುಂಬೋಣ.  ಚಂದಾದಾರರಾಗುವ ಮೂಲಕ ಗೆಜ್ಜೆಯ ಜೊತೆ ನಮ್ಮದೊಂದು ಹೆಜ್ಜೆಯಿರಲಿ.

ಇದು ನೂಪುರ ಭ್ರಮರಿಯ ವೆಬ್ ಸೈಟ್ ಕೊಂಡಿ:

ಇ-ಮೈಲ್ ವಿಳಾಸ:
feedback@noopurabhramari.com
editor@noopurabhramari.com

ಮೊಬೈಲ್: 9964140927

 

ಭಾನುವಾರ, ಮಾರ್ಚ್ 8, 2009

ಸಿನಿಮಾ ರೀಲಿನಂತೆ ಸನ್ನಿವೇಶ ಬದಲಾಗಿದೆ!

ಇಂದು "ವಿಶ್ವ ಮಹಿಳಾ ದಿನ".ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದ ಪುಟ್ಟ ಬರಹ ಇಲ್ಲಿದೆ.

"ನೀನು ಓದಿ ಏನ್ಮಾಡೋದಿದೆ?
ನರೇಶ ಮುಂದಕ್ಕೆ ಓದಿದರೆ ನಾಳೆ ನಮ್ಮ ಸಹಾಯಕ್ಕಾಗುತ್ತಾನೆ. 
ನೀನು ಮನೆಕೆಲಸ ಚೆನ್ನಾಗಿ ಕಲಿತರೆ ಸಾಕು"

ಹದಿನೈದು ವರ್ಷಗಳ ಹಿಂದಿನ ಬಹುತೇಕ ಸಿನಿಮಾಗಳಲ್ಲಿ ಅಪ್ಪ ತನ್ನ ಮಗಳಿಗೆ ಹೇಳುತ್ತಿದ್ದ ಡೈಲಾಗುಗಳ ಪೈಕಿ ಇದೂ ಒಂದು. ದರ್ಪ, ಅಹಂಕಾರ, ಅಸಹಾಯಕತೆಯೂ ಅಲ್ಲಿ ಕಾಣುತ್ತಿತ್ತು. "ಗಂಡು"ಗಲಿಗಳ ಸಮಾಜಮುಖಿ ನಿಲುವುಗಳು ಹಾಗಿದ್ದವು. ಗಂಡು-ಹೆಣ್ಣಿನ ನಡುವೆ ದೊಡ್ಡದೊಂದು ಕಂದಕ ಕಾಣುತ್ತಿತ್ತು. ಗಂಡಿಗೆ ಅವಕಾಶದ ಆಕಾಶ ತೆರೆದು ಕೂತಿತ್ತು. ಹೆಣ್ಣಿಗೆ ಒಲೆ ಮೇಲೆ ಬೇಯಲು ಇಟ್ಟ ಅನ್ನ ಕಾಯುತ್ತಿತ್ತು.

ಈ ಕಂದಕಕ್ಕೆ ಸೇತುವೆ ಕಟ್ಟುವ ಕೆಲಸ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. 

ಹೆಣ್ಣು ಮಗು ಹುಟ್ಟಿದರೆ ತಂದೆ-ತಾಯಿ ಅಕ್ಕರೆಯಿಂದ, ಸಂತಸದಿಂದ "ಖುಷಿ" ಎಂದು ಹೆಸರಿಡುವ ಕಾಲ ಇದು.
ಹೆಣ್ಣಿನ ಬೊಗಸೆಯಲ್ಲಿ ಭರವಸೆ, ಪ್ರೀತಿ ಜಾಸ್ತಿಯಾಗುತ್ತಿರುವ ಕಾಲ ಇದು. ಸನ್ನಿವೇಶಗಳು ಸಿನಿಮಾದ ರೀಲಿನ ಸೀನಿನಂತೆ ಬದಲಾಗಿವೆ. ಇವತ್ತಿನ ಸಿನಿಮಾ ರೀಲಲ್ಲಿ ಕಾಣುತ್ತಿರುವ ದೃಶ್ಯಗಳ ತುಣುಕುಗಳಲ್ಲಿ
ವಿಶಾಲಾಕ್ಷಿ ಬಿಎಂಟಿಸಿಯಲ್ಲಿ ಕಂಡಕ್ಟರ್ ಕೆಲಸವನ್ನು ದಿನನಿತ್ಯ ಶ್ರದ್ಧೆಯಿಂದ ಮಾಡುತ್ತಿದ್ದಾಳೆ. ವಿಮಾನ ಓಡಿಸುವುದನ್ನು ರೆನಿಟಾ ಕಲಿತುಕೊಂಡಿದ್ದಾಳೆ. ನಳಿನಿ ಪೆಟ್ರೋಲ್ ಬಂಕಿನಲ್ಲಿ ಗಂಡಸರಷ್ಟೇ ಆಸ್ಥೆಯಿಂದ ದುಡಿಯುತ್ತಾಳೆ. ಸಾಫ್ಟ್ವೇರ್ ನೌಕರಿಗೆ ಹೋಗುವ ಹೆಡ್ಮಾಸ್ಟರ್ ಹಿರೇಮಠರ ಮಗಳಿಗೆ ಕೈ ತುಂಬಾ ಸಂಬಳವಿದೆ. ಹೆಣ್ಣಿನ ಬದುಕಿನ ಸಿನಿಮಾ ರಂಗು ತುಂಬಿಕೊಂಡಿದೆ. 

ಗಂಡು-ಹೆಣ್ಣಿನ ನಡುವಿನ ತಾರತಮ್ಯ ಇವತ್ತು ನಿನ್ನೆಯದಲ್ಲ. ಜೊತೆಗೆ ಆ  ಬಗ್ಗೆ ಗಂಭೀರ ಚರ್ಚೆಗಳು ಸಹ ನಡೆದಿದ್ದವು. ಆದರೆ ಈ ತಾರತಮ್ಯವನ್ನು ಬಹುತೇಕ ನೀಗಿಸುವಲ್ಲಿ ಯಶಸ್ವಿಯಾದದ್ದು ಜಾಗತೀಕರಣ ಹುಟ್ಟಿಸಿದ ಅವಕಾಶಗಳ ಸಂತೆ.
ಜಾಗತೀಕರಣಕ್ಕೆ ಗಂಡು-ಹೆಣ್ಣು ಎನ್ನುವ ತಾರತಮ್ಯದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಮಾಡುವ ಕೆಲಸದ ಅಂತಿಮ ಫಲಿತಾಂಶದ ಬಗ್ಗೆ ಮಾತ್ರ ಅದಕ್ಕೆ ಒಲವಿತ್ತು. ವಿ ನೀಡ್ ರಿಜಲ್ಟ್, ಗುಡ್ ಸರ್ವಿಸ್ ಎಂದಷ್ಟೇ ಹೇಳಿತು ಅದು.
ಜಾಗತೀಕರಣ ಹುಟ್ಟಿಸಿದ ಅವಕಾಶವೇ ಇಲ್ಲದೇ ಹೋಗಿದ್ದಿದ್ದರೆ ವೇಶ್ಯೆಯೊಬ್ಬಳ ಮಗಳು ಬಿಪಿಒ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುವುದು ಹೀಗೆ ಸಾಧ್ಯವಾಗುತ್ತಿತ್ತು? ಏನೇನೂ ಗೊತ್ತಿಲ್ಲದ ಕೆಳ ಮಧ್ಯಮ ವರ್ಗದ ಹುಡುಗಿಯೊಬ್ಬಳಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ವರ್ಷ ಪೂರ್ತಿ ಕೆಲಸ ಹೇಗೆ ಸಿಗುತ್ತಿತ್ತು?
ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ಲಕ್ಷಗಳಲ್ಲಿ ಸಂಬಳ ತೆಗೆದುಕೊಳ್ಳಲಿಕ್ಕೆ, ಹಳ್ಳಿಯಲ್ಲಿದ್ದ ಮಹಿಳೆಯರಿಗೆ ನೂರರ ಹತ್ತಾರು ನೋಟು ಕೂಡಿಡುವುದಕ್ಕೆ ನಾಂದಿಯಾದದ್ದು ಕೂಡಾ ಇದೇ.


ಇವತ್ತಿನ ಯುವಕ-ಯುವತಿಯರನ್ನು ಮಾತನಾಡಿಸಿ ನೋಡಿ. ಅವರ್ಯಾರೂ ಗಂಡು-ಹೆಣ್ಣಿನ ನಡುವೆ ಅಡ್ಡ ಗೋಡೆ ಕಟ್ಟಿ ದೀಪವಿಡುವುದಿಲ್ಲ. ಇಬ್ಬರಿಗೂ ಸಮಾನರು, ಇಂದಿನ ವೇಗದ ಜಗತ್ತಿನಲ್ಲಿ ಗಂಡು-ಹೆಣ್ಣು ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಭೆಗೇ ಮನ್ನಣೆ ಎಂದೇ ಮಾತನಾಡುತ್ತಿದ್ದಾರೆ. 
ಹೆಣ್ಣು ಅಡಿಗೆ ಕೋಣೆಗೆ ಮಾತ್ರ ಎಂಬುದು ಹೆಚ್ಚುಕಮ್ಮಿ ಮುಗಿದ ಅಧ್ಯಾಯ. ಆ ಚ್ಯೂಯಿಂಗಮ್ ಎಪಿಸೋಡನ್ನು ಮತ್ತೆ ಕೆದಕಿ ಪ್ರಸಾರ ಮಾಡುವ ಅವಶ್ಯಕತೆ ಈಗಿಲ್ಲ ಎನ್ನುತ್ತಿದ್ದಾರೆ. ಅಡಿಗೆ ಕೆಲಸಕ್ಕೆ ಒಬ್ಬ ಅಡಿಗೆಯವನನ್ನು ಇಟ್ಟುಕೊಂಡರಾಯಿತು, ಹೋಟೆಲಿನಿಂದ ಕೆಲವು ದಿನ ಊಟ ತಂದರಾಯಿತು. ಕೇವಲ ಅಡಿಗೆಗೋಸ್ಕರ ಚೆನ್ನಾಗಿ ಓದಿರುವ ಹೆಂಡತಿ ಕೆಲಸಕ್ಕೆ ಹೋಗಬಾರದು ಅನ್ನುವುದು ಲಾಜಿಕ್ಕೇ ಇಲ್ಲದ ಮಾತು ಎನ್ನುವುದು ತರುಣ ಮದುಮಕ್ಕಳ, ಮದುವೆಯಾಗಲು ಬಾಕಿ ಇರುವವರ ಮಾತು. ಕಾರಣ ಸ್ಪಷ್ಟ. ಹೆಣ್ಣು ತನ್ನಷ್ಟೇ ಅಥವಾ ತನಗಿಂತ ಹೆಚ್ಚು ದುಡಿಯಬಲ್ಲಳು ಅನ್ನುವುದು ಗಂಡಿಗೆ ಅರ್ಥವಾಗಿಬಿಟ್ಟಿದೆ. ಹೆಣ್ಣು ಗಂಡಿನ ಆಸರೆಗಾಗಿ ಹಪಹಪಿಸುವ, ಮಾನಸಿಕವಾಗಿ ನರಳುವ ಕಾಲ ಅಸುನೀಗಿರುವುದರಿಂದ ದುಡಿಮೆ ಗಂಡಿಗೆ ಮಾತ್ರ ಸೀಮಿತವಾಗಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಹೆಣ್ಣನ್ನು ದುಡಿಯಲು ಕಳಿಸುವುದು ತಾನು ಆಕೆಯ ಸ್ವಾತಂತ್ರ್ಯವನ್ನು ಗೌರವಿಸುವ ಮನಃಸ್ಥಿತಿ ಎನ್ನುವ ಹಂತಕ್ಕೆ ತಲುಪಿದೆ. ಮುಂದೆ ಇದು ಗಂಡಿನ ಪ್ರೆಸ್ಟೀಜಿನ ಪ್ರಶ್ನೆಯಾಗಿ ಬದಲಾಗುವ ಕಾಲವೂ ದೂರವಿಲ್ಲ!!!

ಭಾನುವಾರ, ಜನವರಿ 4, 2009

ಅಪಾರ ಅರ್ಥ

ಬಸ್ಸಲ್ಲಿ ಓಡಾಡುವಾಗ, ಊರೂರು ಸುತ್ತುವಾಗ ವಿ-ಚಿತ್ರ ಹೆಸರು, ವಿವರಣೆಗಳುಳ್ಳ ನಾಮಫಲಕಗಳು, ಗೋಡೆ ಬರಹಗಳು ಕಣ್ಣಿಗೆ ಬೀಳುತ್ತವೆ. ಭಾಷೆಯ ವ್ಯತ್ಯಾಸ, ಅನಗತ್ಯ ಶಬ್ದ ಸೇರ್ಪಡೆಯ ಕಾರಣಗಳಿಂದಾಗಿ ಇಂತಹ ಬರಹಗಳನ್ನು ಓದುತ್ತಿದ್ದ ಹಾಗೆ ನಮ್ಮೊಳಗೊಂದು ಕಾಮಿಡಿ ಟೈಂಮ್ ಎಪಿಸೋಡು ಶುರುವಾಗುತ್ತದೆ. ಅಪಾರ ಅರ್ಥಗಳ ಜೊತೆ ಅಪಾರ್ಥಕ್ಕೂ ಕಾರಣವಾಗುತ್ತವೆ. ಸೀರಿಯಸ್ಸಾಗಿ ಯೋಚಿಸಲು ಕೂಡ ದಾರಿ ತೋರಿಸುತ್ತವೆ!!

ಆಚೀಚೆ ಓಡಾಡುತ್ತಿದ್ದಾಗ ನನಗೆ ಓದಲು ಸಿಕ್ಕ ಅಪೂರ್ವ ಸಾಲುಗಳು..!



1. ತುಮಕೂರು ಜಿಲ್ಲೆಯ ಹೊಳವನಹಳ್ಳಿಯಲ್ಲಿ ಸಿಕ್ಕ ಫೋಟೋ ಇದು.
ಮಠ ಸಹ ಖಾಸಗಿ ಸ್ವತ್ತು ಅಂತ ಘಂಟಾಘೋಷವಾಗಿ ಪ್ರಕಟಿಸಿದ್ದು ಬಹುಷಃ ಇದೇ ಮೊದಲಿರಬೇಕು. ರಿಯಲ್ ಎಸ್ಟೇಟ್ ಸಿಟಿ ಬೆಂಗಳೂರಿಗೆ ತುಮಕೂರು ಹತ್ತಿರವಿರುವುದರಿಂದ ಅತಿಕ್ರಮ ಪ್ರವೇಶದ ಭಯ ಮಠದ ಮಾಲೀಕನನ್ನು ಕಾಡಿರಬೇಕು! ಅಥವಾ ಮಠಕ್ಕೆ ಹಿಂದಿನ ಬಾಗಿಲಿನಿಂದ ಪ್ರವೇಶವಿಲ್ಲ ಎನ್ನುವುದು ಈ ಬೋರ್ಡಿನ ಉದ್ದೇಶವಿರಬಹುದೇನೋ!!

2. ತ್ಯಾಗರಾಜ ನಗರದ ಹೋಟೆಲೊಂದರ ಹೆಸರು:

ಕೋಳಿ ಮನೆ -ವೆಜ್ ಅಂಡ್ ನಾನ್ ವೆಜ್
ವೆಜ್ ಕೋಳಿ ಸಹ ಸಿಗುತ್ತೆ ಅಂತ ಗೊತ್ತಾಗಿದ್ದು ಬೆಂಗಳೂರಿಗೆ ಬಂದ ಮೇಲೇನೇ!!


3.ಕಾವೇರಿ ಭವನದ ಪಕ್ಕದ ಕಂಪೌಂಡುಗಳಲ್ಲಿದ್ದ ಕರವೇಯ ವಿಶ್ವ ಕನ್ನಡಿಗರ ಸಮಾವೇಶದ ಗೋಡೆ ಬರಹ:

ಕನ್ನಡ ನಾಡನ್ನು, ಚಿನ್ನದ ಬೀಡನ್ನು ಕಟ್ಟೇ ಕಟ್ಟುತ್ತೇವೆ.
ಹಾಗಾದರೆ ಈಗಿರುವ ಕನ್ನಡ ನಾಡು ಗುಂಪಿಗೆ ಸೇರದ ಪದವೇ?

4. ತುಮಕೂರಿನ ಊರ್ಡಿಗೆರೆಯಲ್ಲಿ ಹಾದು ಹೋಗುತ್ತಿದ್ದಾಗ ಕಾಣಿಸಿದ್ದು:

ನಾಗೇಶ್ ಮಾಂಸಾಹಾರಿ ಹಿಂದೂ ಮಿಲಿಟ್ರಿ ಹೋಟೆಲ್
ಹೋಟೆಲ್ ಬೋರ್ಡಿನಲ್ಲೂ ಇದೆ ನೋಡಿ ಧರ್ಮದ ಡಿವೈಡರು!

ಬುಧವಾರ, ಡಿಸೆಂಬರ್ 3, 2008

ಭಯೋತ್ಪಾದನೆ ವಿರುದ್ಧ ಸಮರಕ್ಕೂ ಸಿದ್ಧ

ಮುಂಬೈ ಘಟನೆಯಿಂದ ಇಡೀ ದೇಶ ಮತ್ತೆ ನಲುಗಿದೆ.

"ನಮ್ಮ ದೇಶ ಕೆಟ್ಟು ಕೆರ ಹಿಡಿದಿದೆ. ಯಾವತ್ತೂ ಬದಲಾಗೋಲ್ಲ" ಅಂತೆಲ್ಲಾ ಮಾತಾಡುತ್ತಿದ್ದ ವಿದ್ಯಾವಂತರು, ಯುವಕರು "ನಾವೇನಾದರು ಅಲ್ಪ-ಸ್ವಲ್ಪ ಕೊಡುಗೆಯನ್ನಾದರೂ ಕೊಡಬೇಕು. ಇಲ್ಲಾಂದ್ರೆ ಈ ದೇಶ ನಮ್ಮ ಮೊಮ್ಮಕ್ಕಳ ಕಾಲಕ್ಕೂ ಬದಲಾಗೋಲ್ಲ" ಅಂತ ನಿರ್ಧರಿಸಿದಂತಿದಂತಿದೆ. ಒಂದಾಗಿ ದೇಶವನ್ನು ಬದಲಾಯಿಸೋಣ ಬನ್ನಿ ಎಂದು ಪರಸ್ಪರರನ್ನು ಕರೆಯುತ್ತಿದ್ದಾರೆ. "ವಿ ನೀಡ್ ಚೇಂಜ್" ಎನ್ನುತ್ತಿದೆ, ಇಡೀ ದೇಶ. ಜಾತಿ-ಮತಗಳಿಗಿಂತ ನಾನು ಭಾರತೀಯ ಎನ್ನುವುದೇ ಮುಖ್ಯವಾಗುತ್ತಿದೆ ಇಲ್ಲಿ. "ರಾಜಕಾರಣಿಗಳಿಗೆ ನೋ ಎಂಟ್ರಿ" ಇದು ಎಲ್ಲೆಡೆಯೂ ಪ್ರತಿಧ್ವನಿಸುತ್ತಿರುವ ಆಕ್ರೋಶ.

ಮುಂಬೈಯಲ್ಲಿ ನಡೆದ ಭಯೋತ್ಪಾದಕ ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ, ಮಡಿದ ಮಂದಿಗೆ ನಮನ ಸಲ್ಲಿಸುವ ಪುಟ್ಟ ಸಮಾರಂಭ ಕಬ್ಬನ್ ಪಾರ್ಕ್ ಪಕ್ಕದ ಗಾಂಧಿ ಪ್ರತಿಮೆ ಎದುರು ನಡೆಯಿತು. ಆ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ
.























(ಚಿತ್ರಗಳು:ಗೌತಮ್)




ಗುರುವಾರ, ಸೆಪ್ಟೆಂಬರ್ 18, 2008

ಇವತ್ತು ಕಾಯೋದು ಒಂದರ್ಥದಲ್ಲಿ ಶಾಪ!

ಇವತ್ತು ಕಾಯೋದು ಒಂದರ್ಥದಲ್ಲಿ ಶಾಪ!

ಆಕೆ ಬರುತ್ತಾಳೆ ಅಂತ ಆತ ಕಾಯುತ್ತಾ ಕೂರುವುದು, ಆತ ಬರುತ್ತಾನೆ ಎಂದು ಆಕೆ ಮಲ್ಲಿಗೆ ಮೊಗ್ಗು ಕಟ್ಟುತ್ತಾ ಕನವರಿಸುವುದು ಈಗಂತೂ ನೆನಪು ಮಾತ್ರ.

ದುಶ್ಯಂತನ ದಾರಿ ಕಾದ ಶಾಕುಂತಲೆ, ರಾಮನಿಗಾಗಿ ಕಾಯುತ್ತಾ ಹಣ್ಣಾದ ಶಬರಿ ಎಲ್ಲರೂ ಮರೆತು ಹೋಗುವಷ್ಟು ನಾವು ಬೆಳೆದಿದ್ದೇವೆ. ಕಾಯುತ್ತಾ ಕಾಯುತ್ತಾ ಮಾಗುವುದು, ಬಾಗುವುದು. ಸಿಟ್ಟು, ಸೆಡವು ಎಲ್ಲವನ್ನು ಉಳಿಸಿಕೊಳ್ಳುತ್ತಾ, ಕಳೆದುಕೊಳ್ಳುತ್ತಾ ದಿನದೂಡುವುದು ಎನ್ನುವುದರಲ್ಲಿ ನಮಗೆ ಹೆಚ್ಚು ಆಸಕ್ತಿ ಉಳಿದಂತಿಲ್ಲ.

ಇದನ್ನೆಲ್ಲ ಇಲ್ಲಿ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ಯಾವುದೋ ನಂಬರಿಗೆ ಮೆಸೇಜು ಫಾರ್ವರ್ಡ್ ಮಾಡುತ್ತಿದ್ದ. "ಮೆಸೇಜ್ ಸೆಂಟ್" ಅಂತ ಮೊಬೈಲ್ ತೋರಿಸಿತು. ಆಗಲೇ ಡೆಲಿವರ್ಡ್ ಅಂತ ತೋರಿಸಲೇ ಇಲ್ಲ. ಪೆಂಡಿಂಗ್ ಅನ್ನುವ ಸೂಚನೆ ಮೊಬೈಲ್ ಪರದೆ ಮೇಲಿತ್ತು.

ಆತ ಕೂತಲ್ಲೇ ಚಡಪಡಿಸಿದ. ನಿಂತಲ್ಲೇ ಅಡ್ಡಾಡಿದ. ಮತ್ತೆ ಮೊಬೈಲು ನೋಡಿಕೊಂಡ...ಆಗಲೂ ಪೆಂಡಿಂಗ್ ಅನ್ನುವ ಸೂಚನೆಯೇ. ಮತ್ತೆ ಅಸ್ವಸ್ಥನಂತೆ ಒದ್ದಾಡಿದ.

ಕೂಡಲೇ ಅದೇ ಮೆಸೇಜನ್ನು ಚಕಚಕನೆ ಎಡಿಟ್ ಮಾಡಿ ಮತ್ತದೇ ನಂಬರಿಗೆ ಕಳಿಸಿದ!

ಗುರುವಾರ, ಜೂನ್ 19, 2008

ಯುವರ್ ಆನರ್....


ಸಿಎಸ್ಪಿ ಮತ್ತೆ ಕಿರುತೆರೆಯ ಕಟಕಟೆಗೆ ಬಂದು ನಿಂತಿದ್ದಾರೆ. ಇನ್ನೇನಿದ್ದರೂ ಅವ್ರ ವಾದ ಕೇಳೋದಷ್ಟೇ ನಮ್ಮ ಕೆಲಸ. ಅವ್ರಿಗಂತೂ "ಮ"ಕಾರದ ಬಗ್ಗೆ ಮರೆಯದ ಮಮಕಾರ. ಅದಕ್ಕವರು ಈ ಸಲ ಎರಡೆರಡು ಬಾರಿ "ಮುಕ್ತ..ಮುಕ್ತ" ಎನ್ನುತ್ತಿದ್ದಾರೆ.


ಮಧ್ಯಮ ವರ್ಗದ ಬವಣೆಯ ಬದುಕು, ಸಂಘರ್ಷ ಮತ್ತೆ ತೆರೆದುಕೊಂಡಿದೆ. ಒಂದರ್ಥದಲ್ಲಿ ಇದು ನಮಗೆಲ್ಲಾ ಖುಷಿಯ ವಿಷಯ, ಮೈ ಲಾರ್ಡ್ . ಒಂದು ಕುಟುಂಬವನ್ನು ಮೂಲವಾಗಿಟ್ಟುಕೊಂಡು ವ್ಯವಸ್ಥೆಯೊಳಗೆ ಇಣುಕಿ ನೋಡುವ ಟಿಎನ್ಎಸ್ ಒಳನೋಟ ನಮ್ಮನ್ನೆಲ್ಲಾ ಚಿಂತನೆಗೆ ಹಚ್ಚುತ್ತದೆ. ಮಾಯಾಮೃಗ, ಮನ್ವಂತರ, ಮುಕ್ತ ಇದಕ್ಕೆ ಸಾಕ್ಷಿ.

"ಮುಕ್ತ"ದಲ್ಲಿ ಅವ್ರ ಪದ್ಯದ ತೆರಪಿಯನ್ನು ಯಾರಾದರೂ ಮರೆಯುವುದುಂಟಾ, ಯುವರ್ ಆನರ್. ಯಾವುದೇ ಕೋರ್ಟ್ ಸೀನ್ ಬರಲಿ, ಅಲ್ಲೊಂದು ಚೆಂದದ ಕನ್ನಡ ಪದ್ಯದ ಸಾಲು ಇರಲೇಬೇಕು. ಇದರಿಂದಾಗಿ ಕೆಲವಾರು ಕವಿತೆಗಳು ಜನಮನ ಸೇರಿದವು. ಇದನ್ನೆಲ್ಲಾ ಸ್ವಾಗತಿಸುತ್ತಾ ನನ್ನದೊಂದು ತಕರಾರು, ಯುವರ್ ಆನರ್.

ಪಾಯಿಂಟ್ ನಂ1.

ಟಿಎನ್ಎಸ್ ಧಾರಾವಾಹಿಗಳಲ್ಲಿ ಮುಖ್ಯಪಾತ್ರದ ಅಲಿಖಿತ ಡೈಲಾಗ್ ಯಾವತ್ತಿಗೂ ಒಂದೇ-"ಪ್ಲೀಸ್, ನನಗೆ 'ಹಿಂಸೆ' ಆಗುತ್ತೆ". ಮನ್ವಂತರದ ಮಂದಾಕಿನಿ, ಮುಕ್ತದ ನಂದಿನಿ ಎಲ್ಲರ ಹೋಳು ಒಂದೇ. ಇದೊಂಥರಾ ಅಂಟು ರೋಗ. "ಭೂಮಿಕಾ" ನಿರ್ಮಾಣ ಮಾಡುತ್ತಿರುವ ಇತರ ಧಾರಾವಾಹಿಗಳ ಹಣೆಬಹವೂ ಇದೇ. ಮಧ್ಯಮ ವರ್ಗಕ್ಕೂ, ಹಿಂಸೆ ಎಂಬ ಎರಡಕ್ಷರದ ಭಯಂಕರ ಶಬ್ದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ, ಯುವರ್ ಆನರ್?

ಪಾಯಿಂಟ್ ನಂ2.

ಧಾರಾವಾಹಿಗಳನ್ನು 400 ಎಪಿಸೋಡ್ ಒಳಗೆ ಮುಗಿಸೋದು ಸೀತಾರಾಂ ಪಾಲಿಸಿ. "ಮುಕ್ತ" ಇದಕ್ಕೆ ಅಪವಾದ. TRP, ಚಾನೆಲ್ ಒತ್ತಡಕ್ಕೆ ಸೀತಾರಾಂ ಬಲಿಯಾದರು. ವೀಕ್ಷಕರೂ ಟಿಎನ್ಎಸ್ ಕೂಡಾ ಚ್ಯೂಯಿಂಗಮ್ ನಿರ್ದೇಶಕರ ಸಾಲಿಗೆ ಸೇರಿಹೋದರಾ? ಅಂತ ಅನುಮಾನ ಪಟ್ಟುಕೊಂಡರು. ಈ ಬಾರಿ ಪ್ರಸಾರವಾಗುತ್ತಿರುವುದು "ಮುಕ್ತ..ಮುಕ್ತ"!!. ಕೂಡಿಸಿದರೂ, ಗುಣಿಸಿದರೂ ಮುಗಿದು ಹೋದ ಮುಕ್ತಕ್ಕಿಂತ ಒಂದು ಕೈ ಹೆಚ್ಚೇ ಆಗುವ ಸಾಧ್ಯತೆಗಳಿವೆ!!

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು "ಮುಕ್ತ..ಮುಕ್ತ" ಧಾರಾವಾಹಿಯನ್ನು ಬೋರ್ ಹೊಡೆಸದಂತೆ ನಿರ್ದೇಶಿಸಲು ಹಾಗೂ ಹಿಂಸೆಯ 'ತಲೆಹರಟೆ'ಯನ್ನು ಕಡಿಮೆಗೊಳಿಸಲು ಸಿಎಸ್ಪಿಗೆ ತಾಕೀತು ಮಾಡಬೇಕಾಗಿ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಯುವರ್ ಆನರ್!!

ಕೊನೆ ಹನಿ:

"ಮುಕ್ತ..ಮುಕ್ತ", ಮುಕ್ತ ಧಾರಾವಾಹಿಯ ಸೀಕ್ವೆಲ್. ಟಿಎನ್ಎಸ್ ನಿರ್ದೇಶನವಿರುವುದರಿಂದ ವೀಕ್ಷಕ ಮಹಾಶಯ ಬಚಾವ್. ಇದರಿಂದ ಸ್ಫೂರ್ತಿ ಪಡೆದು, ಉಳಿದವರೆಲ್ಲಾ ಸೀಕ್ವೆಲ್ಗಳಿಗೆ ಕೈ ಹಾಕಿದರೆ ವೀಕ್ಷಕರ ಮಂತ್ರ-ತಂತ್ರಗಳಿಗಂತೂ ಅಗ್ನಿ ಪರೀಕ್ಷೆ ಗ್ಯಾರೆಂಟಿ!