ಶನಿವಾರ, ಅಕ್ಟೋಬರ್ 1, 2011

ಅನಾ"ಮತ್ತು"ಗಳು....

ಕುಣಿಯುತ್ತಿಲ್ಲ ನವಿಲು
ಹಣತೆ ಕಿಡಿಗೆ ಕೀಟಗಳ ಮುತ್ತು
ಮತ್ತು
ವರ್ಷಕ್ಕೆ ಒಂದೇ ಆಶಾಢ, ಒಂದೇ ಶ್ರಾವಣ.


ಚಿಗುರುವ ಎಲೆಗಳಲಿ ಮುದಿ ಮಾಯೆ
ಕಣ್ಣೀರ ಹನಿಗಳಲಿ ರೆಪ್ಪೆ ಬಯಲು
ಕಟ್ಟಡಗಳು ಏರುತ್ತಾ ನೆಮ್ಮದಿ ಸಾವು.
ಹೆಣೆದ ಜೇಡರ ಬಲೆಯಂತೆ ವಿದ್ಯುತ್ ತಂತಿ
ಮತ್ತು
ತಿಂಗಳಿಗೊಂದೇ ಸಂಬ್ಳ, ಒಂದೇ ನೌಕ್ರಿ.


ಇಟ್ಟ ಕಣ್ಣಲ್ಲಿ ನೆಟ್ಟ ನೋಟದಲಿ
ಸರ್ಕಾರಿ ಬಸ್ಸಿನ ಕನ್ನಡಿ ಹೊಳಪು
ದರ್ಶಿನಿಯ ಬೈಟೂ ಕಾಫಿ
ಟೂ ಬಿಟ್ಟ ಮಗಳು
ಶಾಪಿಂಗಿನಲ್ಲೇ ಕಳೆದು ಕೂಡಿಸಿ ಗುಣಿಸಿದ
ಸಮಯ ಡಿಸ್ಕೌಂಟ್ ಫ್ರೀ..
ಫೋಟೋಶಾಪಿನಲ್ಲೇ ಹೂ ಅರಳಿ
ಘಮ್, ಘಮ್
ದರಿದ್ರ ಕರೆಂಟು..
ಲ್ಯಾಪ್ಟಾಪ್ ಬೆಳಕಲ್ಲೇ ಉಣ್ಣಬೇಕು


ಬರಲಿ ಮತ್ತೊಂದು ಚತುರ್ಥಿ, ದೀಪಾವಳಿ
ಮೆತ್ತಲು ಬೇಕು ದೇಸಿ ಪೌಡರು
ಟೆರೇಸಿನ ಮೇಲೇ ಮಾದರಿ ಕೃಷಿ: ಒಂದು ಚಿಂತನೆ
...ಮರೆತೇ ಹೋಗಿತ್ತು
ಇಂಟರ್ನೆಟ್ಟು ಕಟ್ಟಾಗಿದೆ, ಬಿಲ್ಲು ಪಾವತಿಯಾಗಿಲ್ಲ.
ಗೂಗಲ್, ಫೇಸ್ಬುಕ್, ಆರ್ಕುಟ್ 
ಸಾಕಷ್ಟು ಪರಿಚಯಗಳನ್ನು ಅಪ್ರೂವ್
ಮಾಡಬೇಕು.
ದರಿದ್ರದ್ದು ಫ್ಲೈಓವರ್ ಕೂಡಾ ಜಾಮು.


ಬನ್ನಿ ಸ್ವಲ್ಪ ದಿನ ರೆಸಾರ್ಟಿಗೆ 
ಪ್ರಕೃತಿ ಚಿಕಿತ್ಸೆಯ ನೆಮ್ಮದಿ
ಎರಡೇ ದಿನ
ಫ್ರೀ ಪ್ಯಾಕೇಜ್ ಬೇರೆ.
ಅಪ್ಪ-ಅಮ್ಮನನ್ನೂ ನೋಡಿದ ಹಾಗಾಯ್ತು
ಬನ್ನಿ, ಬನ್ನಿ..